ಮಕ್ಕಳಿಗೆ ನೀತಿ ಕಥೆ: ನಿಮ್ಮ ಸ್ನೇಹಿತರನ್ನು ಜಾಣ್ಮೆಯಿಂದ ಆಯ್ಕೆ ಮಾಡಿ
ಒಂದಾನೊಂದು ಊರಿನಲ್ಲಿ ಒಂದು ವಿಶಾಲವಾದ ಮೈದಾನದಲ್ಲಿ ಒಂದು ದೊಡ್ಡ ಆಲದ ಮರವಿತ್ತು. ಪ್ರತಿ ದಿನ ಈ ಮರದ ಬುಡದಲ್ಲಿ ಹತ್ತಾರು ದನ ಕಾಯುವ ಹುಡುಗರು ಆಟವಾಡುತ್ತಿದ್ದರು. ಆಟದ ನೆಪದಲ್ಲಿ ಮರವನ್ನು ಕಲ್ಲಿನಿಂದ ಕುಟ್ಟುತ್ತಿದ್ದರು, ಟೊಂಗೆಗಳನ್ನು ಕಡಿಯುತ್ತಿದ್ದರು. ತೊಗಟೆಗಳನ್ನು ಕೆತ್ತುತ್ತಿದ್ದರು. ಹೀಗೆ ಹಿಂಸೆಗೊಳಗಾದ ಮರಕ್ಕೆ ತನಗಾದ ಪರಿಸ್ಥಿತಿ ಕಂಡು ಅಳು ಬಂದಿತು.
'ನನ್ನ ನೆರವಿಗೆ ಯಾರು ಬರುವುದಿಲ್ಲವೇ?' ಎಂದು ಗೋಳಾಡ ತೊಡಗಿತು. ಅದೇ ಮರದ ತುದಿಯಲ್ಲಿ ಗೂಡು ಕಟ್ಟಿಕೊಂಡಿದ್ದ ನೀಲ ಹಾಗೂ ಬೋಳ ಎಂಬ ಎರಡು ಕಾಗೆಗಳಿಗೆ ಮರದ ಆರ್ತನಾದ ಕೇಳಿಸಿತು. ಮರದ ಮುಂದೆ ಬಂದ ಕಾಗೆಗಳು, 'ಎಲೈ ಮಿತ್ರನೆ ಏಕೆ ಅಳುತ್ತಿರುವೆ? ನಿನಗೆ ಬಂದಿರೋ ಕಷ್ಟವೇನು? ನಾವು ಏನಾದರೂ ಸಹಾಯ ಮಾಡುವೆವು? 'ಎಂದವು.
ಕಾಗೆಗಳ ಮಾತಿನಿಂದ ಖುಷಿಯಾದ ಆಲದ ಮರ, ತನಗಾದ ಕಷ್ಟವನ್ನು ಚಾಚೂ ತಪ್ಪದೇ ವಿವರಿಸಿತು. ನೀನು ಚಿಂತೆ ಮಾಡಬೇಡ ಇರು ಬರುತ್ತೇವೇ ಎಂದು ಎರಡು ಕಾಗೆಗಳು 'ಕಾ..ಕಾ.. ' ಎನ್ನುತ್ತಾ ಹಾರಿ ಹೋದವು.
ಮರವಿದ್ದ ಜಾಗದಿಂದ ಸ್ಮಶಾನವೊಂದರ ಬಳಿ ಬಂದ ಕಾಗೆಗಳು ಅಲ್ಲಲ್ಲಿ ಬಿದ್ದಿದ್ದ ಮೂಳೆಗಳನ್ನು ತಂದು ಆಲದ ಮರ ತುಂಬಾ ನೇತು ಹಾಕಿದೆವು.
ಮರುದಿನ ಮರದ ಬಳಿ ಬಂದ ದನ ಕಾಯುವ ಹುಡುಗರು ಮರದ ರೆಂಬೆ-ಕೊಂಬೆಗಳಲ್ಲಿ ಜೋತು ಬಿದ್ದಿದ್ದ ಎಲುಬುಗಳನ್ನು ಕಂಡು ಗಾಬರಿಗೊಂಡು ಅಲ್ಲಿಂದ ಓಟ ಕಿತ್ತರು. ಈ ಘಟನೆ ನಂತರ ಮರದ ಬಗ್ಗೆ ಭಯ ಉಂಟಾಗಿ ಯಾರೂ ಹತ್ತಿರ ಸುಳಿಯುತ್ತಿರಲಿಲ್ಲ.

ಮುಂದಿನ ಒಂದು ಋತುವಿನ ತನಕ ಮರದ ತುಂಬಾ ಹಸಿರೆಲೆ ತುಂಬಿ ಕೊಂಡವು, ಸುಂದರವಾಗಿ ಮರ ಕಾಣ ತೊಡಗಿತು. ಇದೇ ವೇಳೆ ನೀಲ ಕಾಗೆ ಗೂಡಿನಲ್ಲಿ ಮೊಟ್ಟೆ ಇಟ್ಟಿತು. ಒಂದು ದಿನ ಆಹಾರಕ್ಕಾಗಿ ಎರಡು ಕಾಗೆಗಳು ಹೊರಗೆ ಹೋಗುವ ಪರಿಸ್ಥಿತಿ ಬಂದಿತು. ಆಗ ಮರದ ಬಳಿ ಬಂದ ನೀಲ, 'ನಾನು ಹಾಗೂ ಬಾಳಾ ಆಹಾರ ಅರಸಿ ಹೊರಗೆ ಹೋಗುತ್ತಿದ್ದೇವೆ. ಗೂಡಿನಲ್ಲಿ ಮೊಟ್ಟೆಗಳಿವೆ. ಜೋಪಾನ, ಹತ್ತಿರದಲ್ಲೇ ವಿಷಕಾರಿ ಹಾವೊಂದು ಸುಳಿಯುತ್ತಿದೆ' ಎಂದು ಮನವಿ ಮಾಡಿಕೊಂದವು. ಇದಕ್ಕೆ ಒಪ್ಪಿದ ಮರ, ಹೋಗಿ ಬನ್ನಿ ಎಂದು ಕಳಿಸಿಕೊಟ್ಟಿತು.
ಹಾವಿನ ಸ್ನೇಹ ಮಾಡಿದ ನಾಶವಾದ ಮರ
ನೀಲ ಹಾಗೂ ಬಾಳಾ ಹಾರಿ ಹೋಗಿದ್ದನ್ನು ನೋಡಿದ ಹಾವು, ಸರಸರನೇ ಮರದ ಬಳಿ ಬಂದು, 'ನಾನು ನಿನ್ನ ಮಿತ್ರನಾಗ ಬಯಸಿದ್ದೇನೆ, ನನಗೆ ಅನೇಕ ದಿನಗಳಿಂದ ಆಹಾರ ಸಿಕ್ಕಿಲ್ಲ, ನನಗೆ ತುಂಬಾ ಹಸಿವಾಗಿದೆ. ಮರದ ಮೇಲಿರುವ ಮೊಟ್ಟೆಗಳನ್ನು ತಿನ್ನಲು ಬಿಡು' ಎಂದಿತು.
ಇದಕ್ಕೆ ಒಪ್ಪದ ಮರ ಮೌನವಾಗಿತ್ತು. ಮಾತು ಮುಂದುವರೆಸಿದ ಹಾವು, 'ನೀನು ಕಾಗೆಗಳ ಮಿತ್ರ ಎಂಬುದು ಗೊತ್ತು. ನನ್ನ ಶಕ್ತಿಗೂ ಕಾಗೆಗಳ ಶಕ್ತಿಗೂ ಎಲ್ಲಿಯ ಹೋಲಿಕೆ. ಹಾವಿದೆ ಎಂದರೆ ಮರದ ಬಳಿ ಯಾರೂ ಸುಳಿಯೋಲ್ಲ ತಿಳಿದಿರಲಿ, ನಿನ್ನನ್ನು ನಾನು ರಕ್ಷಿಸುತ್ತೇನೆ' ಎಂದು ಮಾತಿನಲ್ಲಿ ಮರಳು ಮಾಡಿತು.
ಹಾವಿನ ಮಾತಿಗೆ ಒಪ್ಪಿ ಕಾಗೆ ತತ್ತಿಗಳನ್ನು ತಿನ್ನಲು ಮರವು ಅನುಮತಿ ನೀಡಿ, ಹಾವಿನ ಸ್ನೇಹ ಬೆಳೆಸಿತು.
ಮರಳಿ ಬಂದ ಕಾಗೆಗಳಿಗೆ ಆಘಾತ
ಗೂಡಿಗೆ ಮರಳಿದ ಕಾಗೆಗಳಿಗೆ ಮೊಟ್ಟೆ ಇಲ್ಲದಿರುವುದು ಕಂಡು ಆಘಾತವಾಯಿತು. ಗೆಳೆಯ ಎಂದು ನಂಬಿದ್ದ ಮರವು ಹಾವಿನ ಸ್ನೇಹ ಮಾಡಿರುವುದು ತಿಳಿಯಿತು. ನಂಬಿಕೆ ದ್ರೋಹ ಮಾಡಿದ್ದು ತಿಳಿದು ದುಃಖಿಸಿದವು. ಮರದ ಬಗ್ಗೆ ತಿರಸ್ಕಾರ ಮೂಡಿ, ಕೃತಘ್ನ ಮರವನ್ನು ತೊರೆಯಲು ನಿರ್ಧರಿಸಿದವು. ಮರಕ್ಕೆ ಈ ಬಗ್ಗೆ ಏನೂ ತಿಳಿಸದೆ ಅಲ್ಲಿಂದ ದೂರ ಹಾರಿದವು.
ನಂತರ ಹಾವಿನ ಜೊತೆ ಗೆಳೆತನ ಗಟ್ಟಿ ಮಾಡಿಕೊಂಡ ಮರವು, ಮರದಲ್ಲೆ ವಾಸಿಸಲು ಹಾವಿಗೆ ಸ್ಥಳ ನೀಡಿತು. ಮರಕ್ಕೆ ಮಾತುಕೊಟ್ಟಂತೆ ಮರದ ಬಳಿ ಯಾರೂ ಸುಳಿಯದಂತೆ ಮಾಡಲು ಹಾವು ನಿರ್ಧರಿಸಿತು. ಮರದ ನೆರಳಿನಲ್ಲಿ ಸುಮ್ಮನೆ ಕುಳಿತವರನ್ನು ಕಚ್ಚ ತೊಡಗಿತು. ಸಾವು ನೋವು ಹೆಚ್ಚಾಗಿ, ಊರಿನ ಮುಖಂಡರಿಗೆ ದೂರು ಹೋಯಿತು.
ಹಾವು ಮರ ಏರುವುದರಿಂದ ಹಿಡಿಯುವುದು ಕಷ್ಟ, ಸುತ್ತಲು ಇರುವ ಪೊದೆ, ಒಣಗಿದ ಹುಲ್ಲಿನ ರಾಶಿಗೆ ಬೆಂಕಿ ಹಾಕಿ ಕೊಲ್ಲೋಣ ಎಂದು ಎಲ್ಲರೂ ನಿರ್ಧರಿಸಿದರು. ಅದರಂತೆ, ದುಷ್ಟ ಹಾವು ಕೂಡಾ ಬೆಂಕಿಗೆ ಬಿದ್ದು ಪ್ರಾಣ ಬಿಟ್ಟಿತು.
ಆದರೆ ಬೆಂಕಿ ಜ್ವಾಲೆ ಹೆಚ್ಚಾಗ ತೊಡಗಿತು. ಹಾವು ಸತ್ತದ್ದನ್ನು ಖಚಿತಪಡಿಸಿಕೊಂಡ ಗ್ರಾಮಸ್ಥರು ಮರದ ಬಗ್ಗೆ ಯೋಚಿಸದೆ ಅಲ್ಲಿಂದ ಹೊರಟರು. ಹಾವು ಕೊಲ್ಲಲು ಹಾಕಿದ್ದ ಬೆಂಕಿ ನಿಧಾನವಾಗಿ ಮರಕ್ಕೂ ತಗುಲಿ, ಮರವು ಕೂಡಾ ಸುಟ್ಟು ಹೋಯಿತು. ದುಷ್ಟ ಹಾವಿನ ಸಹವಾಸ ಮಾಡಿದ್ದಕ್ಕಾಗಿ ಮರ ಕೂಡಾ ಸಾಯಬೇಕಾಯಿತು.
ನೀತಿ ಪಾಠ: ದುಷ್ಟರಿಂದ ದೂರ ಇರಿ, ನಿಮ್ಮ ಸ್ನೇಹಿತರನ್ನು ಹುಷಾರಾಗಿ ಜಾಣ್ಮೆಯಿಂದ ಆಯ್ಕೆ ಮಾಡಿ.












Click it and Unblock the Notifications