ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಿವು

By Staff
|
Google Oneindia Kannada News


ನಾನು ಅಂದು ಮನೆಗೆ ಬಂದಾಗ 2 ಗಂಟೆ ಆಗಿತ್ತು. ಬಟ್ಟೆ ಬದಲಿಸಿ ಊಟ ಮಾಡಿದೆ. ಅಂದು ಏನು ಕೆಲಸಗಳೂ ಇರಲಿಲ್ಲ. ಅಂದರೆ ತೋಟ ಹೊಲಗದ್ದೆ ಕಡೆ ನೋಡಿಕೊಳ್ಳೊ ಕೆಲಸ. ಈ ಕೆಲಸಕ್ಕೆ ಅಂದು ಅಲ್ಲೆಲ್ಲ ಸಾಕಷ್ಟು ಮಂದಿಯಿದ್ದರು. ನಾನಗಂದು ವಿರಾಮ ಅನ್ನಿಸಿತ್ತು.

ಸ್ವಲ್ಪ ಬರೆಯುವುದಿತ್ತು ಬರೆಯುವ ಮನಸಿಲ್ಲ ಏಕೆಂದರೆ, ಇತ್ತೀಚಿನ ದಿನಗಳಲ್ಲಿ ಮಧ್ಯಾಹ್ನ ಸುತ್ತಾಡಿ ರೂಢಿಯಾಗಿದೆ. ಆದರೂ ಕಾಲ ಹರಣ ಮಾಡಬಾರದು ಮುತ್ತು ಒಡೆದರೆ ಹೋಯಿತು ಎಂಬ ಕಟ್ಟು ಪಾಡಿಗೆ ಅಥವಾ ಜಗನುಡಿಗೆ ತಗ್ಗಿ ಕೂತೆ. ಒಂದು ಹಾಳೆ ಬರೆದಿದ್ದೇನೆ ಅಷ್ಟರಲ್ಲೇ ಬಂದಳು ಕಣ್ಣನ್ನು ಒತ್ತಾಯವಾಗಿ ಮುಚ್ಚುತ್ತ ಓಡುವ ಪೆನ್ನನ್ನು ಅಲ್ಲಲ್ಲೆ ನಿಲ್ಲಿಸಿ. ಪೆನ್ನನ್ನು ತಪ್ಪುದಾರಿಗೊಯುತ್ತ ಅಮುಕುತ್ತ ಬರುತ್ತಿದ್ದಳು, ಇವಳಾರೆಂದು ಹೇಳಲಿಲ್ಲವೆ; ಅವಳೆ ನಿದ್ರಾದೇವಿ.

ನನ್ನ ಅಡಪಗಳನ್ನು ಅಲ್ಲೆ ಬಿಟ್ಟೆ. ಮಂಚವು ಖಾಲಿ ಇತ್ತು ನೀ ಎನ್ನ ಅಪ್ಪು ಎನ್ನುವಂತಿತ್ತು. ಹೋಗಿ ಮಲಗಿಕೊಂಡದ್ದು ಒಂದು ಗೊತ್ತು 4ಗಂಟೆಗೆ ಯಾರೊ ತಟ್ಟಿದಂತೆ ಭಾಸವಾಗಿ ಎದ್ದೆ. ಯಾರು ಇಲ್ಲ ಧಡಕ್ಕನೆ ಎದ್ದೆ ಸ್ವಲ್ಪ ಹೊತ್ತು ಅಲ್ಲೆ ಕೂತೆ. ಮನಸ್ಸಿನಲ್ಲಿ ಏನೋ ಒಂದು ತರ ಸೆಳೆತ ಯೋಚನೆ ನಿಂತಂತೆ ಆವರಿಸಿತ್ತು. ತಲೆ ಬಾಚುವುದಕ್ಕೆ ಕನಡಿ ಮುಂದೆ ನಿಂತಾಗ ನನ್ನ ಕಣ್ಗಳನೋಡಿ ನನಗೆ ಆಶ್ಚರ್ಯವಾಗಿತ್ತು. ಕಾರಣ ನನ್ನ ಕಣ್ಣ ನಿದ್ದೆಯಿಂದ ಎದ್ದ ಕಣ್ಗಳಂತೆ ಕಾಣದೆ ತನ್ಮಯತೆಯಿಂದ ಯೋಚನೆಹೊತ್ತ ಕಣ್ಗಾಳಾಗಿದ್ದವು.

ಬಾಯಾರಿಕೆಗೆಯಾಗಿತ್ತು ಮನದಲ್ಲೇನೊ ಕಳವಳ ಏನಾದರು ಆಗಬಾರದ್ದು ಆದೀತೆ ಎಂದುಕೊಂಡು ನೀರು ಕುಡಿಯಲು ಹೋದೆ. ನೀರು ದಾಹವನ್ನು ಹಿಂಗಿಸಿದಂತೆ ಕಾಣಲಿಲ್ಲ ಬೇಸಿಗೆಯಾದುದರಿಂದ ಬೆಲ್ಲದ ನೀರನ್ನು ಮಾಡಿಟ್ಟಿದ್ದರು (ಪಾನಕ). ಅದನೊಂದು ಕಪ್ಪು ಕುಡಿದು ಹೊರಗೆ ಬಂದು ಕೂತೆ ಅಷ್ಟರಲ್ಲೆ ಹೊರಗಡೆ ಗದ್ದಲ ಅಂದರೆ ಅಳುವಿನ ಕೂಗಾಟದ ನಡುವೆ ನಮ್ಮಳ್ಳಿಯ ಸಂಸ್ಕೃತ ಪದಗಳು ಉರುಳುತ್ತಿದ್ದವು. ಏಕೆ ಎಲ್ಲಿ ಏನು ಎಂಬುದ ತಿಳಿಯುವ ಕಾತುರ, ಹಾಗೆ ಹೋದೆ.

ಆ ಕೂಗಾಟ ನಮ್ಮ ಮನೆಯಿಂದ ದೂರವಿದ್ದ ಮನೆಗಳಿಂದ ಬರುತ್ತಿತ್ತು. ಅಲ್ಲಿ ಬೇರೆ ಜಾತಿ ಜನ ಇದ್ದಾರೆ. ಜಾತಿ ಅನ್ನೋದಕ್ಕಿಂತ ನಮಗಿಂತ ವಿಭಿನ್ನ ಸಂಸ್ಕೃತಿಯನ್ನು ಬೆಳೆಸಿಕೊಂಡಿರುವ ಜನ ಅನ್ನಬಹುದು. ಅವರೆ ಗಾಣಿಗರು. ಇಂದು ಗಾಣಗಳು ಸದ್ದಿಲ್ಲದ ಗೂಡುಗಳಾಗಿವೆ. ಎಣ್ಣೆ ಬೀಜ ಕೊಂಡು ಪೇಟೆಯಲ್ಲಿನ ಸಾಹುಕಾರಿ ಗಾಣಗಳಿಗೆ (ಯಂತ್ರಚಾಲಿತ ಗಾಣಗಳಿಗೆ) ಮಾರಿ ಎಣ್ಣೆತರುತ್ತಾರೆ. ಎಣ್ಣೆಯನ್ನು ಎಂಟಾಣಿ, ನಾಲ್ಕಾಣಿ ಮೇಲಿಟ್ಟು ಮಾರಿ ಅಥವಾ ಎಣ್ಣೇಗೆ ಬೀಜಕ್ಕೆ ಸಾಟಿ ಮಾಡುತ್ತಾರೆ. ಇದರಲ್ಲೆ ಇವರಿಗೆ ಸ್ವಲ್ಪ ಲಾಭ. ಈ ಕೆಲಸ ಮನೆಬಾಗಲಲ್ಲಿ ನಡೆಯೋ ಕೆಲಸ ಅಲ್ಲ ದಿನಕ್ಕೆ 5ರಿಂದ 6 ಹಳ್ಳಿ ಬೆಳಿಗ್ಗೆಯಿಂದ ಸಂಜೆ ತನಕ ಸುತ್ತಿ ಬಂದರೆ ಅಂದಿನ ದಿನಕ್ಕೆ ಕೂಳು ಹಾಗು ನಾಲ್ಕಾಣೆ ಉಳಿಸಬಹುದು. ಇಲ್ಲಾಂದರೆ ಪಾಳು ಗೋಡೇನೆ ಕಿತ್ತುಕೊಂಡು ತಿನ್ನಬೇಕಾಗುತ್ತದೆ.

ಈ ಬದುಕಿಗೆ ಒಗ್ಗಿಕೊಂಡು ಅವರದೇ ಆದ ಕಟ್ಟುಪಾಡಿನಲ್ಲಿ ಬದುಕುತ್ತಿರುವ ಜನಗಳ ಮಧ್ಯದ ಗೂಡಿನಿಂದ ಈ ಸದ್ದು ಕೂಗಾಟ ರಂಪ ಹೊರಡುತ್ತಿತ್ತು. ನನಗೂ ಅಲ್ಲೇನಾಗಿರಬಹುದು ಎಂದು ತಿಳಿಯುವ ಕುತೂಹಲದಿಂದ ಚಪ್ಪಲಿ ಎಳೆದುಕೊಂಡು ಹೊರಟೆ. ಅಲ್ಲಿ ಕೃಶದೇಹದ ಯುವಕನೊಬ್ಬ ಸ್ವರ್ಗದ ಬಾಗಿಲು ತಟ್ಟುವನಂತಿದ್ದ ಅವನ ತಲೆಯ ಬಳಿಯಲ್ಲಿ 17-18ರ ಹುಡುಗಿಅಲ್ಲ ಹೆಂಗಸು ರೋಧನ ಮಾಡುತ್ತಿದ್ದಳು. ಹಣೆಯ ಮೇಲೆ ಬೆವರ ಹನಿ ಸಾಲು ನಿಂತಿದ್ದವು. ಅವು ಮುತ್ತಿನಂತೆ ಜೋಡಿಸಿರುವಂತೆ ಕಂಡರೂ ಅವಳ ಬದುಕನ್ನೆ ಅರ್ಥೈಸುತ್ತಿದ್ದವು.

ಬೆವರ ಹನಿಗಳು ಕಣ್ಣೀರಿನೊಂದಿಗೆ ಧರೆಗೆ ಧಾರೆಯಾಗುತ್ತಿದ್ದವು. ಆ ಬೆವರ ಹನಿಗಳು ಅವಳ ಬದುಕು ಮತ್ತು ಸಮಾಜದ ಗೌರವವನ್ನು ಹತ್ತಿಕ್ಕುವಂತೆ ತೋರುತ್ತಿದ್ದವು. ಬೆವರ ಹನಿಗಳು ಹಣೆಯ ಮೇಲೆ ಹೆಣ್ಣಿನ ಸೌಭಾಗ್ಯವಾದ ಕುಂಕುಮದ ಮಧ್ಯೆ ಕುದಿಯುವ ನೀರಿನ ಬುಗ್ಗೆಗಳಂತೆ ಕಾಣುತ್ತಿದ್ದವು. ಆ ಬೆವರನ್ನು ವರಸಿಕೊಳ್ಳುವುದು ಉಳಿಸಿಕೊಳ್ಳುವುದು ಅವಳ ಬದುಕಿನ ಅಳಿವು ಉಳಿವು ಎಂಬಂತಾಗಿದೆ. ಅಳಿಸಿದರೆ ಬೆವರು ಜೊತೆಗೆ ಸೌಭಾಗ್ಯ ಕಳೆದುಕೊಂಡಂತೆ, ಇಲ್ಲದಿದ್ದರೆ ಅಸಹ್ಯದವಳಂತೆ ಇರಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿದ್ದಾಳೆ.

ಈ ಕೃಶ ದೇಹದ ಯುವಕನೇ ಅವಳ ಗಂಡನಾಗಿದ್ದಾನೆ. ಅವನು ಆತ್ಮಹತ್ಯೆಗೆ ವಿಷ ತೆಗೆದುಕೊಂಡಿದ್ದಾನೆ ಎಂಬುದು ತಿಳಿಯಿತು. ಇವನ ಅತ್ತೆ ಮಾವ ಮಗಳ ಸೌಭಾಗ್ಯವನ್ನು ಉಳಿಸಲು ಹೆಣಗಾಡುತ್ತಿದ್ದಾರೆ. ಮಾವ ಊರನ್ನೆಲ್ಲ ಸುತ್ತಿ ಹಣಕ್ಕಾಗಿ ಪರದಾಡುತ್ತಿದ್ದಾನೆ. ಮಗಳ ಸೌಭಾಗ್ಯ ಬೆವರ ಹನಿಯ ಜೊತೆ ಕರಗುತ್ತಿದೆ. ಅತ್ತೆ ಅಳಿಯನ ಪ್ರಾಣ ಉಳಿಸಲು ಜನರನ್ನು ಬೇಡುತ್ತಿದ್ದಾಳೆ, ಗಾಡಿ ಕಟ್ಟಿ ಆಸ್ಪತ್ರೆಗೆ ಸಾಗಿಸಿ ಎಂದು ಕಾಡುತ್ತಿದ್ದಾಳೆ.

ಅಂತೂ ಮಾವ ಅಲ್ಲಿ ಇಲ್ಲಿ ಅಲ್ಪ ಹಣ ಕೂಡಿಸಿಕೊಂಡು ಯಾರದೋ ಗಾಡಿ ಕಟ್ಟಿ ಅಳಿಯನನ್ನ ಹಾಕಿಕೊಂಡು ದವಾಖಾನೆಗೆ ಹೋದನು. ಈ ಅಳಿಯ ಬಹಳ ರುಚಿಕಂಡೋನು ಅಂದರೆ ಕುಡಿಯುವ ಚಟವುಂಡು. ಅಲ್ಲದೇ ಇವನಿಗೆ ಮದುವೆ ಮೊದಲೇ ಆಗಿತ್ತಂತೆ. ಅನಿವಾರ್ಯದಿಂದ ಮೊದಲನೆಯವಳು ರೋಗದಿಂದ ತತ್ತರಿಸಿ ಸತ್ತಳು ಅಂತ ಅಂತಾನೆ. ಕುಡಿದು ಬಡಿದು ಕೊಂದನೊ ಏನೋ ಗೊತ್ತಿಲ್ಲ. ಒಟ್ಟಾರೆ ಅವನಿಗೆ ಆಗಿರುವ 22 ವಯಸ್ಸಿಗೆ ಇಬ್ಬರ ಹೆಂಡ್ತಿರ ಗಂಡನಾಗಿದ್ದ. ಸಂಸಾರ ಸಾಕು ಅಂತ ಅನ್ನಿಸಿತ್ತು ಅಂತ ಇರಬಹುದು, ಸಾಯಲು ಹೊರಟಿದ್ದನೇನೋ? ಆದರೂ ಪಾಪಿ ಸಮುದ್ರಕ್ಕೆ ಮುಳುಗಲಿಕ್ಕೆ ಹೋದರೂ ಮೊಣ ಕಾಲುದ್ದ ನೀರು ಅನ್ನೋ ಮಾತು ಸತ್ಯ ಮಾಡಿದ್ದ.

ಮಾವ ಅಳಿಯನ ಅಪ್ಪನಿಗೆ ಅಂದರೆ ಬೀಗರಿಗೆ ಹೇಳಿ ಕಳಿಸಿದ್ದ. ಅವ ಅಂದರೆ ಅವರಪ್ಪ ದುಡ್ಡು ಕೈ ಬಿಡುತ್ತೆ ಅಂತ ತಿಳಿದುಕೊಂಡು ಮಗನನ್ನೆ ಕೈ ಬಿಟ್ಟಿದ್ದ. ಅವ ನನ್ಮಗನೆ ಅಲ್ಲವೆಂದು ಕಳಿಸಿದ್ದ. ಇತ್ತ ಅಳಿಯನ ಉಳಿಸಿಕೊಳ್ಳಲು ಮಾವ ಒಂದು ಎರಡರಿಂದ ಎರಡೂವರೆ ಸಾವಿರ ರೂಪಾಯಿಗೆ 4 ಹೋತಗಳನ್ನು ಮಾರಿಸಿದ್ದ. 4ರಿಂದ 5ದಿನಕ್ಕೆ ಚೇತರಿಸಿಕೊಂಡಿದ್ದ ಅಳಿಯ ದೇವರು, 6ನೇ ದಿನಕ್ಕೆ ಆಸ್ಪತ್ರೆಯಿಂದ ನಾಪತ್ತೆ.

ಅವ ಪ್ರಾಣ ಉಳಿಸಿದ ಮಾವನ್ನ ಅತ್ತೇನ, ಹೆಂಡ್ತಿನ ಮರೆತು ಅಪ್ಪನ ಹಿಂದೆ ಓಡಿದ್ದ. ಇವ ಬಂದಿದ್ದು ಮಾವನ ಮನೆಗೆ. ಹೆಂಡ್ತಿನ ಕರಕೊಂಡು ಹೋಗೋಕೆ. ಅಂದರೆ ಹೆಂಡ್ತಿ ಬಾಣಂತನಕ್ಕೆಂದು ಅವರಪ್ಪನ ಮನೆಗೆ ಬಂದಿದ್ದಳು. ಅವಳನ್ನು ಕರೆದುಕೊಂಡು ಹೋಗೋಕೆ ಬಂದೋನು, ಇವನೇ ಮೊದಲು ಸ್ವರ್ಗ ಸೇರೊ ದಾರಿಗೆ ಹೋಗುತ್ತಿದ್ದ. ಅಂತು ಮಗಳಿಗೆ ಇಲ್ಲೇ ಉಳಿಯುವ ಸ್ಥಿತಿ ಬಂದಿತ್ತು.

ಬದುಕೆಂದರೆ ಹೀಗೇನಾ? ಯಾರಿಗೆ ಯಾರು ಆಗುವರಿಲ್ಲಿ? ಇದನು ದಾದರು ಹೇಗೆ? ಅರಿತು ಬದುಕಲು ಆದೀತೆ? ಹಾಗಾದರೆ ಬದುಕೇತಕೆ? ಬದುಕುವುದಾದರು ಏತಕೆ? ನೀವಾದರೂ ಉತ್ತರಿಸಿ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X