ಆಲೂಗಡ್ಡೆಗಳು ಮತ್ತು ಜಾಣತನ
ಆಲೂಗಡ್ಡೆಗಳು
ಒಂದೂರಿನಲ್ಲಿ ಚಿಕ್ಕ ಮಕ್ಕಳಿಗಾಗಿ ಒಂದು ಶಾಲೆಯಿತ್ತು. ಶಾಲೆಗೊಬ್ಬಳು ಮೇಡಮ್. ಅವಳು ಒಂದು ದಿನ ಎಲ್ಲ ಮಕ್ಕಳಿಗೂ ಕೆಲವು ಆಲೂಗಡ್ಡೆಗಳನ್ನು ತರಲು ಹೆಳಿದಳು. ಪ್ರತಿ ಆಲೂಗಡ್ಡೆಗೂ ಅವರು ಯಾರನ್ನೂ ದ್ವೇಷಿಸುತ್ತಾರೊ ಅವರ ಹೆಸರನ್ನಿಡಬೇಕು. ಆದ್ದರಿಂದ ಅವರು ಎಷ್ಟು ಜನರನ್ನು ದ್ವೇಷಿಸುತ್ತಾರೊ ಅಷ್ಟು ಆಲೂಗಡ್ಡೆಗಳನ್ನು ಒಂದು ಕೈ ಚೀಲದಲ್ಲಿ ಹಾಕಿ ತರಬೇಕು.
ಮರುದಿನ ಎಲ್ಲ ಮಕ್ಕಳು ಅವರು ಎಷ್ಟು ಜನರನ್ನು ದ್ವೆಷಿಸುತ್ತಾರೊ ಅಷ್ಟು ಆಲೂಗಡ್ಡೆಗಳನ್ನು ತಂದರು. ಕೆಲವರು ಎರಡು, ಕೆಲವರು ಮೂರು, ಇನ್ನೂ ಕೆಲವರು ಐದು ತಂದಿದ್ದರು. ಆಗ ಮೇಡಮ್ ಎಲ್ಲ ಮಕ್ಕಳಿಗೂ ಹೇಳಿದಳು- ‘ಈ ಕೈ ಚೀಲ ಒಂದು ವಾರದ ವರೆಗೆ ಯಾವಾಗಲೂ ನಿಮ್ಮ ಜೊತೆಯಿರಬೇಕು. ನೀವು ಎಲ್ಲಿ ಹೋದರೂ ಅಲ್ಲಿ ಜೊತೆಗಿರಿಸಿಕೊಂಡಿರಬೇಕು. ಗೆಳೆಯರ ಮನೆಗೆ ಹೋದಾಗಲೂ , ನಿದ್ದೆ ಹೋದಾಗಲೂ ಮತ್ತೆ ಶೌಚಾಲಯದಲ್ಲಿದ್ದಾಗಲೂ ಕೂಡ ಚೀಲ ನಿಮ್ಮ ಜೊತೆಗಿರಬೇಕು’. ಚಿಕ್ಕ ಕೈ ಚೀಲವಲ್ಲವಾ ಸರಿಯೆಂದು ಮಕ್ಕಳೆಲ್ಲ ಒಪ್ಪಿಕೊಂಡರು.
ಎರಡು ಮೂರು ದಿನ ಕಳೆದವು. ಮಕ್ಕಳೆಲ್ಲ ದೂರು ಹೇಳತೊಡಗಿದರು. ಆಲೂಗಡ್ಡೆಗಳೆಲ್ಲ ಕೊಳೆತು ವಾಸನೆ ಬರತೊಡಗಿದ್ದವು ಮತ್ತು ಆ ಕೈ ಚೀಲವನ್ನು ಯಾವಾಗಲೂ ಹೊತ್ತುಕೊಂಡಿರಬೇಕಾದ್ದರಿಂದ ಚೀಲ ಭಾರವೆನಿಸತೊಡಗಿತ್ತು. ಮಕ್ಕಳ ತಂದೆ ತಾಯಂದಿರು ಮೇಡಮ್ ಗೆ ಬೈಯತೊಡಗಿದರು.
ಇನ್ನೂ ಒಂದು ವಾರ ಪೂರ್ಣವಾಗಿರಲಿಲ್ಲ, ನಾಲ್ಕನೆ ದಿನವೆ ಮೇಡಮ್ ಮಕ್ಕಳನ್ನು ಕೇಳಿದಳು. ‘ಆಲೂಗಡ್ಡೆಗಳನ್ನು ನಾಲ್ಕು ದಿನಗಳ ವರೆಗೆ ಹೊತ್ತು ಹೇಗನ್ನಿಸಿತು’?. ಎಲ್ಲ ಮಕ್ಕಳೂ ಒಮ್ಮೆಲೆ ದೂರುಗಳನ್ನು ಹೇಳತೊಡಗಿದರು. ಆಲೂಗಡ್ಡೆಗಳನ್ನು ಯಾವಾಗಲೂ ಜೊತೆಗಿಡಲು ತಾವು ಎದುರಿಸಿದ ತೊಂದರೆಗಳನ್ನು ಒಂದೊಂದಾಗಿ ವಿವರಿಸತೊಡಗಿದರು.
ಎಲ್ಲರ ದೂರುಗಳನ್ನು ಕೇಳಿ ತಾನು ಈ ಕೆಲಸ ಮಕ್ಕಳಿಂದ ಏಕೆ ಮಾಡಿಸಿದೆನೆಂದು ವಿವರಿಸತೊಡಗಿದಳು.
‘ನೀವು ಯಾವಾಗ ಯಾರನ್ನಾದರೂ ದ್ವೇಷಿಸತೊಡಗುತ್ತಿರೊ, ಆಗ ನೀವು ಇದೇ ಪರಿಸ್ಥಿತಿ ಎದುರಿಸುತ್ತೀರಿ. ನಿಮ್ಮ ಹೃದಯ ಯಾವಾಗಲೂ ದ್ವೇಷದಿಂದ ತುಂಬಿರುತ್ತದೆ. ನೀವೆಲ್ಲೇ ಹೋದರೂ ನಿಮ್ಮ ಈ ದ್ವೇಷವನ್ನು ಜೊತೆಗಿರಿಸಿಕೊಂಡಿರುತ್ತೀರಿ. ನಿಮಗೆ ಹೇಗೆ ಕೊಳೆತ ಆಲೂಗಡ್ಡೆಯ ವಾಸನೆಯನ್ನು ಸಹಿಸಿಕೊಳ್ಳಲಾಗಲಿಲ್ಲವೊ , ಅದರ ಭಾರವನ್ನು ತಡೆಯಲಾಗಲಿಲ್ಲವೊ ಹಾಗೆಯೇ ದ್ವೇಷ ಹೃದಯದಲ್ಲಿದ್ದಾಗ ಉಂಟಾಗುತ್ತದೆ. ಹತ್ತಿರವಿದ್ದವರೆಲ್ಲಾ ದೂರವಾಗುತ್ತಾರೆ. ನಿಮಗೆ ನೆಮ್ಮದಿಯೆಂಬುದೆ ಇರುವುದಿಲ್ಲ. ನಿಮ್ಮ ಮನಸ್ಸು ಯಾವಾಗಲೂ ಭಾರವಾಗಿರುತ್ತದೆ. ಆದ್ದರಿಂದಲೇ ಹೇಳುವುದು- ಹೃದಯದಲ್ಲಿರುವ ದ್ವೇಷವನ್ನು ಬಿಸಾಕಿ. ಹೃದಯ ಇರುವುದು ದ್ವೇಷಿಸಲಿಕ್ಕಲ್ಲ ; ಪ್ರೀತಿಸಲಿಕ್ಕೆ.
***
ಜಾಣತನ
ಒಂದೂರಿನಲ್ಲಿ ಒಬ್ಬ ನಿರುದ್ಯೋಗಿಯಿದ್ದ. ತುಂಬಾ ದಿನಗಳಿಂದ ಕೆಲಸ ಸಿಕ್ಕಿರಲಿಲ್ಲ. ಸಂದರ್ಶನಗಳಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದರೂ ಕೆಲಸ ಸಿಕ್ಕಿರಲಿಲ್ಲ. ಲಂಚ ಕೊಡಲು ಅಥವಾ ಸ್ವಂತದ್ದೇನಾದರೂ ಮಾಡಲು ಅವನ ಹತ್ತಿರ ಹಣವಿರಲಿಲ್ಲ. ಶಿಫಾರಸ್ಸು ಮಾಡಲು ಪರಿಚಯದವರಾರೂ ಇರಲಿಲ್ಲ. ಅವನಿಗೆ ತುಂಬಾ ಬೇಜಾರಾಗಿತ್ತು.
ಒಂದು ದಿನ ಸಂದರ್ಶನಕ್ಕಾಗಿ ಕರೆ ಬಂತು. ಹೋಗುವುದೊ ಬೇಡವೊ ಎಂದು ಕೂತಿರುವಾಗ ಗೆಳೆಯರು ಆ ಕಂಪನಿಯ ಮೇನೇಜರ್ ತುಂಬಾ ಒಳ್ಳೆಯವರು, ನೀನು ಸಂದರ್ಶನದಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದರೆ ನಿನಗೆ ಕೆಲಸ ಸಿಕ್ಕಂತೆ ಎಂದು ಹುರಿದುಂಬಿಸಿ ಕಳಿಸಿದರು. ಮನಸಿಲ್ಲದ ಮನಸಿನಿಂದ ಹೊರಟ.
ಸಂದರ್ಶನ ಶುರುವಾಯ್ತು. ಅವರ ಎಲ್ಲ ಪ್ರಶ್ನೆಗಳಿಗೂ ಇವನಲ್ಲಿ ಉತ್ತರವಿತ್ತು. ಏನಿವನು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಿದ್ದಾನಲ್ಲ ಎಂದು ಅವರಿಗೆ ಅಸಹನೆ ಉಂಟಾಯ್ತು. ಇವನಿಂದ ಒಂದಾದರೂ ಉತ್ತರ ತಪ್ಪು ಹೇಳಿಸಬೇಕೆಂದು ಏನೆಲ್ಲ ಪ್ರಯತ್ನ ಮಾಡಿದರು. ಆದರವನೊ ಜಾಣ ! ಏನಾದರಾಗಲಿ ಎಂದು ಎಲ್ಲ ಪ್ರಶ್ನೆಗಳಿಗೂ ಧೈರ್ಯದಿಂದ ಉತ್ತರಿಸುತ್ತಿದ್ದ. ಮೇನೇಜರ್ ಕೊನೆಗೆ ಬೇಜಾರಾಗಿ ಹೇಳಿದ- ‘ನಿನಗೆ ಇನ್ನೂ ಹತ್ತು ಸುಲಭವಾದ ಪ್ರಶ್ನೆ ಕೇಳಲೊ ಅಥವಾ ಒಂದು ತುಂಬಾ ಕಷ್ಟಕರವಾದ ಪ್ರಶ್ನೆ ಕೇಳಲೊ? ಯಾಚನೆ ಮಾಡಿ ಹೇಳು’. ಇವನು ಕೆಲಸ ಸಿಕ್ಕರೆ ಸಿಗಲಿ ಬಿಟ್ಟರೆ ಬಿಡಲಿ ಎಂದು ಬಂದಿದ್ದ. ‘ಒಂದು ಕಷ್ಟಕರವಾದ ಪ್ರಶ್ನೆ’ ಎಂದ.
‘ಸರಿ ಹಾಗಾದರೆ ನೀನೆ ಆರಿಸಿಕೊಂಡಿದ್ದೀಯಾ, ಉತ್ತರ ಸರಿಯಾಗಿದ್ದರೆ ಕೆಲಸ ನಿನಗೆ’ ಮೇನೇಜರ್ ಹೇಳಿದ, ‘ಈಗ ಹೇಳು, ಹಗಲು ಮೊದಲು ಬರುತ್ತದೊ ಅಥವಾ ರಾತ್ರಿಯಾ?’
ಇವನು ಒಂದು ಕ್ಷಣ ಯಾಚಿಸಿ ಹೇಳಿದ ‘ಹಗಲು’.
‘ಅದು ಹ್ಯಾಗೆ?’ ಮೇನೇಜರ್ ಕೇಳಿದ.
ಇವನು ಹೇಳಿದ, ‘ಕ್ಷಮಿಸಿ ಸರ್, ನೀವು ಹೇಳಿದ್ದು ಒಂದೇ ಕಷ್ಟಕರವಾದ ಪ್ರಶ್ನೆಯೆಂದು, ಎರಡಲ್ಲ.’
ಮೇನೇಜರ್ ಒಂದು ಕ್ಷಣ ಅವಾಕ್ಕಾಗಿದ್ದ. ಮುಂದಿನ ಕ್ಷಣದಲ್ಲಿ ಇವನ ಜಾಣತನಕ್ಕೆ ಮೆಚ್ಚಿ ಕೈಕುಲುಕಿದ.












Click it and Unblock the Notifications