Get Updates
Get notified of breaking news, exclusive insights, and must-see stories!

ಅಶ್ವತ್ಥ ಕಟ್ಟೆಯಲ್ಲಿ ಕೂತ ಅಜ್ಜಿ ಕನ್ನಡ ಮೆಲುಕು

Mysore Grandma conversation on Kannada
ಕನ್ನಡ ಭಾಷೆ, ಸಾಹಿತ್ಯ ಸಮ್ಮೇಳನ, ಸಾಫ್ಟ್ ವೇರ್, ಕನ್ನಡಿಗರ ನಿರಾಭಿಮಾನ, ಭುವನೇಶ್ವರಿ ಪ್ರತಿಮೆ ಸ್ಥಾಪನೆ, ಹೊರಗಿನಿಂದ ಬಂದ್ ನಾನ್ ಕನ್ನಡಿಗರನ್ನು ಕನ್ನಡಿಗರನ್ನಾಸುವ ಬಗೆ ಹೇಗೆ ಎಂದು ಕನ್ನಡ ಪರ ಚಿಂತಕಿ ಅಜ್ಜಿ ಮೈಸೂರಿನ ಅಶ್ವತ್ಥಕಟ್ಟೆಯಲ್ಲಿ ಕುಳಿತು ಮೊಮ್ಮಗನೊಡನೆ ಹರಟೆ ಹೊಡೆದ ಸಂಭಾಷಣೆ ಸಾರ ಸಮಸ್ತ ಕನ್ನಡಿಗರಿಗೆ... ಅಜ್ಜಿ ಅಶ್ವತ್ಥಕಟ್ಟೆ ಹತ್ತಿರ ಕೂತಿದ್ದರು.

"ಏನಜ್ಜಿ, ಬಿಸಿಲು ಕಾಯಿಸ್ತಾಯಿದ್ದೀಯಾ? ಏನೋ ಯೋಚಿಸ್ತಿರೋ ಹಾಗಿದೆ?"

"ಅಲ್ಲಾ....ಸಾಹಿತ್ಯ ಸಮ್ಮೇಳನದಲ್ಲಿ "ಜೀವಿ" ಅವ್ರು ಭ್ರಷ್ಟಾಚಾರದ ವಿಷಯದಲ್ಲಿ ಕಡ್ಡಿ ತುಂಡು ಮಾಡೋ ಹಾಗೆ ಖಡಾಖಂಡಿತವಾಗಿ ಮಾತನಾಡಿದರು. ಆವರ ಧೈರ್ಯನಾ ಮೆಚ್ಚಬೇಕಾದ್ದೇ.."

"ಆಜ್ಜಿ! ಅವರು ಸಾಹಿತ್ಯದಲ್ಲಿ ಭೀಷ್ಮ ಪಿತಾಮಹನ ಸಮಾನ. ಜೊತೆಗೆ "ನಡೆದಾಡುವ ನಿಘಂಟು" ಬೇರೆ. ಮುಚ್ಚು ಮರೆ ಸ್ವಭಾವದವರಲ್ಲ. ಮುಂದಾದರೂ ರಾಜಕಾರಿಣಿಗಳು ಅವರ ಗುಣ ತಿದ್ದುಕೊಂಡು ನಡೀತಾರೋ ನೋಡ್ಬೇಕು."

"ಏನೋ ಬಿಡು. ಬೆಂಗಳೂರಿನತಲ್ಲಿ ನಾಲ್ಕೈದು ದಿವಸಗಳು ಎಲ್ಲೆಲ್ಲೂ ಕನ್ನಡ ಕೇಳಿ ಬಂತು!"

"ಬಹಳ ವರ್ಷ ಸಮ್ಮೇಳನ ಬೆಂಗಳೂರಿನಲ್ಲಿ ಮಾಡ್ಲಿಲ್ಲ; ಅದೇ ತಪ್ಪಾಯ್ತು. ಇನ್ನು ಮುಂದೆ ಐದೈದು ವರ್ಷಕ್ಕೆ ಒಮ್ಮೆಯಾದರೂ ಬೆಂಗಳೂರಿನಲ್ಲಿ ಮಾಡಬೇಕು."

"ಆದು ಸರೀ...ತಾಯಿ ಭುವನೇಶ್ವರಿ ಪ್ರತಿಮೆ ಕಟ್ಟಿಸ್ತೀವಿ ಅಂದರಲ್ಲಾ ಯಡಿಯೂರಪ್ಪನವರು.. ಅದರ ಬದಲಿಗೆ "ಭೂಮಿ ತಾಯಿ" ಪ್ರತಿಮೆ ಕಟ್ಟಿದರೆ ಒಳ್ಳೇದು...ನಮ್ಮ ರಾಜಕಾರಿಣಿಗಳಿಗೆ "ಭೂಮಿ ತಾಯಿ", "ಭೂಮಿ" ಅದರಲ್ಲೂ ಬೆಂಗಳೂರಿನ - ಸೈಟು" ಎಷ್ಟು ಇಷ್ಟ ಅಂತ ಎಲ್ಲಾರಿಗೂ ಗೊತ್ತಿದ್ದ ವಿಷಯವೇ !"

ಅಜ್ಜಿ ಹರ್ಭಜನ್ ಸಿಂಗ್ ತರಹ.. ಇದ್ದಕ್ಕಿದ್ದಂಗೆ ಮದ್ಯೆ "ದೂಸ್ರ" ಹಾಕಿ ಬಿಡ್ತಾರೆ!

"ಹ್ಹ ಹ್ಹ ಅಜ್ಜಿ! ಸರಿಯಾಗಿ ಹೇಳ್ದೆ.. ನ್ಯೂಯಾರ್ಕ್ ನಲ್ಲಿರೋ "ಸ್ಟಾಚ್ಯು ಅಫ್ ಲಿಬರ್ಟಿ" ತರಹಾನೇ ಕಟ್ಟಸ್ಬೇಕೂಂತ ಇದಾರೆ. 25 ಕೋಟಿ ರು. ಅದಕ್ಕೇಂತ ಬರೋ ಬಜೆಟ್ನಲ್ಲಿ ಇಡ್ತಾರಂತೆ".

"25 ರಿಂದ ಶುರುವಾಗಿ 250ರಲ್ಲಿ ಕೋಟೀಲಿ ಮುಗಿಯಿತ್ತೆ.....ನಮ್ಮ ಸೂರಿ ಕಳಿಸಿದ್ದಾ ಅಲ್ವ, ಅದರ ಫೋಟೋನ? ಬಹಳ ಚೆನ್ನಾಗಿತ್ತು. ಪಂಜು ಹಿಡಿದು ನಿಂತಿದ್ದಳು; ಅವಳ ಕಿರೀಟ ಹಾಕಿದ ತಲೇಮೇಲೆ ಕೊಂಬುಗಳು ಕೂಡ್ಸಿದ್ರು!"

"ಕೊಂಬಲ್ಲಾ ಅಜ್ಜಿ ಅದು! ನಮ್ಮ ಪ್ರಪಂಚದಲ್ಲಿರುವ ಏಳು ಸಮುದ್ರ, ಏಳು ಖಂಡಗಳ ಸಾಂಕೇತವಾಗಿ, ಏಳು ಸಲಾಕೆಗಳು ಕಿರೀಟದ ಮೇಲೆ ಜೋಡಿಸಿದ್ದಾರೆ."

"ಹೋಗ್ಲಿ ಬಿಡು. ನಮ್ಮ ಭುವನೇಶ್ವರಿ ಕಿರೀಟಕ್ಕೆ ಕೊಂಬಿದ್ರೆ ಸಂತೋಷವೇ! ನಮ್ಮ ಏಳು ದಿಗ್ಗಜ ಸಾಹಿತಿಗಳಾದ ಕುವೆಂಪು, ಬೇಂದ್ರೆ, ಕಾರಂತರು, ಮಾಸ್ತಿ, ಗೋಕಾಕ್, ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಅವರಿಗೆ ಬಂದ ಜ್ಞಾನ ಪೀಠದ ಪ್ರಶಸ್ತಿಯ ಸಂಕೇತವಾಗುತ್ತೆ!"

"ನಿಜ ಅಜ್ಜಿ".

"ನನಗೆ ಒಂದು ವಿಷಯದಲ್ಲಿ ನಂಬಿಕೆಯಿಲ್ಲ..... ಭುವನೇಶ್ವರಿ ಅಂತ ಶುರುವಾಗಿ ಮುಂದೆ ಶನಿ ಮಹಾತ್ಮೆ,, ಮೂಕಾಂಬಿಕೆ ಮತ್ತು ಇತರ ಡ್ಯೂಪ್ಲಿಕೇಟ್ ದೇವಸ್ಥಾನಗಳು ಇಲ್ಲಿ ಬರಬಾರದಪ್ಪಾ.... ಆಮೇಲೆ ಅಗ್ನಿ ಪರೀಕ್ಷೆ, ದೋಷ ಪರಿಹಾರ ಎಲ್ಲಾ ಶುರುವಾಗುತ್ತೆ. ಈ ಜಾಗ ಕನ್ನಡಕ್ಕೇ, ಕನ್ನಡದ ಅಭಿವೃದ್ದಿಗೇ ಮೀಸಲಾಗಿಡಬೇಕು ನೋಡು."

"ಹೌದಜ್ಜಿ.. ಅಮೇಲೆ ಏನೇನೋ ಬೆಳೆದು ಕೊಂಡು ಪೆಡಂಭೂತವಾಗಬಾರದು".

"ಭುವನೇಶ್ವರಿ ಪ್ರತಿಮೆಯ ಆಡಿಯಲ್ಲೇ ಒಳ್ಳೆ ಗ್ರಂಥಾಲಯ, ಕನ್ನಡದ ಡಾಕ್ಯುಮೆಂಟರಿ, ಆರ್ಟ್ ಸಿನಿಮಾ ತೋರಿಸಲಿಕ್ಕೆ ಒಂದು ಪುಟ್ಟ ಥಿಯೇಟರ್, ನಿರ್ಮಾಪಕರಿಗೆ ಮತ್ತು ವೀಕ್ಷಕರಿಗೆ ಉಪಯೋಗಕ್ಕೆ ಬರುತ್ತೆ. ಇಲ್ಲದಿದ್ದರೆ ಅವರಿಗೆ ಥಿಯೇಟರ‍್ಗಳೇಸಿಗೊಲ್ಲ...; ಕನ್ನಡದ ಬೆಳವಣಿಗೆಗೆ ಒಂದು ಸಂಶೋಧನಾ ಕೇಂದ್ರ ಬೇಕು. ಇವೆಲ್ಲಾ ಆಲ್ಲಿ ಮಾಡಿಸಿದರೆ ಸರ್ಕಾರಕ್ಕೆ ಪುಣ್ಯ ಬರುತ್ತೆ."

"ಹೌದು ಅಜ್ಜಿ. ಇದರಿಂದ ಕನ್ನಡ ಚೆನ್ನಾಗಿ ಬೆಳೆಯುತ್ತೆ ಕೂಡ".

"ಅಂದ ಹಾಗೆ ರಾಮು.. ಹೊರಗಡೆಯವರು, ಕನ್ನಡೇತರು ಕನ್ನಡ ಕಲಿಯುವುದು ಯಾವಾಗ? ಅದಕ್ಕೆ ನಾವು ಏನು ಪ್ರಯತ್ನ ಮಾಡೀದೀವಿ? ನಮ್ಮ "ಸಾಫ್ಟ್ವೇರ್ ಸೀತಮ್ಮ" ಹೇಳ್ತಾ ಇದ್ರು... ಫ್ರಾನ್ಸ್ ನಲ್ಲಿ ಎಲ್ಲಾ ಫ್ರೆಂಚ್ ಮಯವಂತೆ! ಸೀತಮ್ಮನ ಮಗಳು ಸಾಫ್ಟ್ ವೇರ್ ಇಂಜಿನಿಯರಾಗಿ ಪ್ಯಾರಿಸ್ನಲ್ಲಿ ಕೆಲಸಮಾಡ್ತಿದಾಳೆ.

ಅವಳ ಹತ್ತಿರ ಆರು ತಿಂಗಳು ಇದ್ದು ಬಂದ್ರು ಸೀತಮ್ಮ.; ಅಲ್ಲಿ ಬರೀ ಫ್ರೆಂಚೇ ಅಂತೆ. ಆವಾಗ ಅವರ ಭಾಷೆ ಕಲೀಲೇ ಬೇಕಾಗುತ್ತೆ. ಸೀತಮ್ಮ ಕೂಡ ಸ್ವಲ್ಪ "ಬಟ್ಲರ್ ಫ್ರೆಂಚ್" ಹೊಡೀತಾರೆ ಕಣೋ ಈಗ!"

ಸ್ನೇಹಿತರಿಗೆ ಎರಡನೇ ನಾಮಕರಣ ಮಾಡೋದ್ರಲ್ಲಿ ಅಜ್ಜಿ ಎತ್ತಿದ ಕೈ; ಬಿ.ವಿ.ಕೆ. ಐಯಂಗಾರ್ ರಸ್ತೆಯಲ್ಲಿ ಹಾರ್ಡವೇರ್ ಅಂಗಡಿ ಇಟ್ಟಿರುವ ಹಾಲಪ್ಪನ ಹೆಂಡತಿ ಹರಿಣಿಗೆ "ಹಾರ್ಡವೇರ್ ಹರಿಣಿ" ಅಂತ ಹೆಸರಿಟ್ಟಿದ್ದಾರೆ! ಹಾಲಪ್ಪ ನಮ್ಮ ಬೀದಿಯಲ್ಲೇ ಮೂರನೇ ಮನೆಯಲ್ಲಿ ಇರುತ್ತಾರೆ.

"ಪರವಾಗಿಲ್ವೆ ! ನಿನ್ನ ಬಟ್ಲರ್ ಇಂಗ್ಲಿಷ್ ತರಹ ಅಜ್ಜಿ!"

"ನನ್ನ ಹಾಸ್ಯ ಮಾಡಬೇಡ್ವೋ ಮನೇಹಾಳ! ಅದಿರಲಿ... ನಾವು ಕನ್ನಡ ಭಾಷೆ ಸ್ವಲ್ಪ ಸ್ವಲ್ಪವಾಗಿ ಎಲ್ಲಾಕಡೆ ಬಳಸುವ ಹಾಗೆ ಯಾಕೆ ಮಾಡಬಾರ್ದು?"

"ಹೇಗೆ ಆಜ್ಜಿ?"

"ನಮ್ಮ ವಿಮಾನ ನಿಲ್ದಾಣದಲ್ಲಿ ಶೌಚಾಲಯಕ್ಕೆ ಗಂಡಸಿನ ಚಿತ್ರಹಾಕಿ ಪಕ್ಕದಲ್ಲಿ "ಜಂಟ್ಸ್ " ಅಂತ ಬರೀತಾರಲ್ಲ.. ಅದನ್ನು ಇಂಗ್ಲೀಷ್ ಅಕ್ಷರದಲ್ಲಿ " ಗಂಡಸರು"(gandasaru ) ಅಂತ ಬರೀಬೇಕು. ಹಾಗೇನೇ "ಹೆಂಗಸಿನ ಚಿತ್ರದ ಪಕ್ಕದಲ್ಲಿ "ಲೇಡೀಸ್" ಅನ್ನುವ ಬದಲು "ಹೆಂಗಸರು"(hengasaru ) "ಅಂತ ಇಂಗ್ಲೀಷ್ ಅಕ್ಷರದಲ್ಲಿ ಬರೀಬೇಕು. ಸ್ವಲ್ಪ ದಿನಗಳಾದರೆ ಕನ್ನಡದ ಪದಗಳು ಅಭ್ಯಾಸವಾಗುತ್ತೆ."

"ಪರವಾಗಿಲ್ಲ ಅಜ್ಜಿ ನೀನು!"

"ಹಾಗೇನೇ, ಬಾಗಿಲ ಚಿತ್ರ ಬರೆದು, "ತಳ್ಳಿರಿ", "ಎಳೆಯಿರಿ" ಅಂತ ಇಂಗ್ಲಿಷ್ ಅಕ್ಷರದಲ್ಲಿ ಬರೆಯಬೇಕು. ಈ ತರಹ ಚಿತ್ರದ ಜೊತೆ ಕನ್ನಡದಲ್ಲಿ ಉಚ್ಚಾರ ಮಾಡಿದರೆ ಬೇಗ ಪದದ ಅರ್ಥ ಗೊತ್ತಾಗುತ್ತೆ. ಇದಾದ ಮೇಲೆ ಕನ್ನಡದ ಅಕ್ಷರಗಳನ್ನು ಕಲಿಸಬಹುದು. ನಾವೆಲ್ಲಾ ಹಿಂದಿ ಹಾಡು ಕೇಳಿ ತಾನೆ ಹಿಂದಿ ಕಲಿತಿದ್ದು!

"ಹೌದು ಅಜ್ಜಿ"

"ಬೆಂಗಳೂರಿನಲ್ಲಿ ಕನ್ನಡಪ್ರೇಮಿಗಳು ಉತ್ಸಾಹಿಗಳು ಕಡಿಮೇನೇ ? ಇವರೆಲ್ಲಾ ಮನಸ್ಸು ಮಾಡಿದರೆ ಈ ತರಹ ಪದಗಳನ್ನು ಮಾಲ್ ಗಳಲ್ಲಿ, ರೈಲ್ವೆ ಸ್ಟೇಷನ್, ಬಸ್ ಸ್ಟ್ಯಾಂಡ್ , ಸಿನಿಮಾ ಥಿಯೇಟರ್, ಮಾರ್ಕೆಟ್ ಗಳಲ್ಲಿ ಬಳಸುವ ಹಾಗೆ ಮಾಡಬಹುದು. ಹನಿಗೂಡಿದರೆ ಹಳ್ಳ... ಎಲ್ಲರ ಪ್ರಯತ್ನ ವ್ಯರ್ಥ ಆಗೊಲ್ಲ... ನಮ್ಮ ಕನ್ನಡದ ಪದಗಳು ಇತರರ ಬಾಯಲ್ಲಿ ಹೇಳಲು ಬಂದರೆ, ಮುಂದೆ ಕಲಿಯುವುದಕ್ಕೆ ಅವರಿಗೇ ಉತ್ಸಾಹವಿರುತ್ತೆ. ಅಲ್ವೆನೋ?"

"ಆಜ್ಜಿ, ನೀನು ಇವತ್ತು ವೀರು ಸೆಹ್ವಾಗ್ ತರ ಸಿಕ್ಸರ್ ಹೊಡೀತಿದಿಯ..."

"ಹೊಡೀಬೇಕು ಕಣೋ ! ನಮ್ಮ ಮನೇಕೆಲಸ ನಾವು ಮಾಡ್ದೆ ಬೇರೆ ಯಾರು ಮಾಡ್ಬೇಕೋ ?"

ಅಜ್ಜಿ ನನ್ನ ಬಾಯಿ ಕಟ್ಟಿಸ್ಬಿಟ್ರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+