ನಡೆದಾಡುವ ಸಂಗೀತ ವಿಶ್ವಕೋಶ ಆರ್ಕೆ ಶ್ರೀಕಂಠನ್
ಈಚೆಗೆ ಪೇಪರಿನಲ್ಲಿ ಓದುತ್ತಿದ್ದಾಗ ಕನ್ನಡಾಂಬೆ ಕಾವೇರಿ ನದಿಯ ತೀರದ ಹಾಗೂ 'ತಿರುವಯ್ಯಾರ್' ಎಂದು ಪರಿಚಯವಾಗುತ್ತಿರುವ 'ರುದ್ರಪಟ್ಟಣ'ದಲ್ಲಿ ಸತತವಾಗಿ ಕಳೆದ ಆರು ವರ್ಷದಿಂದ ತ್ಯಾಗರಾಜ್ಯೋತ್ಸವ ನಡೆಸುತ್ತಿದ್ದು, ಈ ವರ್ಷ ಏಳನೆಯದಾಗಿ, 'ಸಪ್ತಸ್ವರ' ದೇವಸ್ಥಾನ ನಿರ್ಮಿತವಾಗುತ್ತಿರುವುದು ತಿಳಿದು ಸಂತೋಷವಾಯಿತು. ರುದ್ರಪಟ್ಟಣವೆಂದ ತಕ್ಷಣ ನೆನಪಿಗೆ ಬಂದುದು ಶ್ರೇಷ್ಠ, ಹಿರಿಯ, ಕಸ್ತೂರಿ ಕನ್ನಡದವರಾದ, ಸಂಗೀತ ಕಲಾನಿಧಿ ಡಾ.ಆರ್.ಕೆ. ಶ್ರೀಕಂಠನ್ರವರ ಜನ್ಮಸ್ಥಳವಲ್ಲವಾ ಎಂದು.
ಹೀಗೆ ಅವರ ನಡೆಸಿದ ಸಂಗೀತ ಕಚೇರಿಗಳಲ್ಲಿ ಅವರ ಸಂಗೀತವನ್ನು ಕೇಳಿದ್ದು ಮೆಲುಕು ಹಾಕಿಕೊಳ್ಳುತ್ತಿರುವಾಗಲೇ, E-TVಯಲ್ಲಿ ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ನಡೆಸುವ 'ರಾಗ ರಂಜಿನಿ' ಕಾರ್ಯಕ್ರಮದಲ್ಲೂ ಆರ್.ಕೆ.ಎಸ್.ರವರ ಗಾಯನ ಬಂದದ್ದು ನೋಡಿ, ಸಹಿಸಿಕೊಳ್ಳಲಾಗದಷ್ಟು ಸಂತೋಷವಾಯಿತು. ರಾಗರಂಜಿನಿ ತಪ್ಪದೇ ವೀಕ್ಷಿಸುವುದು ನಮ್ಮ ಪದ್ದತಿ. ಪ್ರವೀಣ್ ಕಾರ್ಯಕ್ರಮದಲ್ಲಿ ಹೇಳಿದಂತೆ "Walking Encyclopedia of Carnatic Music" ಎಂದು ಆರ್.ಕೆ.ಎಸ್.ರವರನ್ನು ಕುರಿತು ಹೇಳಿದ್ದು ಉತ್ಪ್ರೇಕ್ಷೆಯಲ್ಲಿ ಎಂದೆನಿಸಿತು.
ಈ ಇಳಿ ವಯಸ್ಸಿನ ಮಹಾನ್ ವಿದ್ವಾಂಸರು ನೆಟ್ಟಗೆ, ಗಾಂಭೀರ್ಯದ ವರ್ಚಸ್ಸಿನಿಂದ, ಒಂದು ಸುಕ್ಕಿನ ಗೆರೆಯೂ ಇಲ್ಲದ ಹಣೆಗೆ ಗಂಧ, ಕುಂಕುಮವಿಟ್ಟು, ಕೆಂಪು ಶಾಲು ಪಕ್ಕಕ್ಕೆ ಹಾಕಿಕೊಂಡು, ಆನಂದಭೈರವಿ ರಾಗದ ಆಲಾಪನೆ ಮಾಡಿ ಶ್ಯಾಮಾಶಾಸ್ತ್ರಿಯವರ 'ಓ ಓ ಜಗದಾಂಭ ನನ್ನು ಅಂಬಾ' ಹಾಡನ್ನು ತುಂಬು ಭಕ್ತಿಯಿಂದ ಸ್ರುಶ್ಯಾವ್ಯವಾಗಿ ಹಾಡುತ್ತಿದ್ದರೆ ಸ್ವತಃ ದೇವಿಯೇ ಪ್ರತ್ಯಕ್ಷಳಾಗುವಳೇನೋ ಎನ್ನುವಂತಿರುತ್ತದೆ. ಸಂಗೀತಗಾರರಲ್ಲಿರಬೇಕಾದ ಶಿಸ್ತು, ಶ್ರದ್ಧೆ, ಭಕ್ತಿ ಆರ್.ಕೆ.ಎಸ್.ರಲ್ಲಿ ಒಂದಿಂಚೂ ಕಡಿಮೆಯಾಗಿಲ್ಲ.
ಪುರಂದರದಾಸರ ಕೃತಿಗಳನ್ನೂ ಮನಮುಟ್ಟುವಂತೆ ಇಂಪಾಗಿ ಹಾಡುವುದು ಅವರ ಶೈಲಿ. ಅವರ ಮಗ ರಮಾಕಾಂತ ಕೂಡ ಒಳ್ಳೆಯ ಸಂಗೀತಗಾರರು. ತಂದೆಯವರ ಜೊತೆಗೂ ಸಹಕಾರಿಯಾಗಿ ಮುಂದೆ ಬರುತ್ತಿರುವರು. ಒಂದು ಬಾರಿ ನಮ್ಮ ಬಳಗದವರೇ ಒಬ್ಬರು 'ಪಿಟೀಲು' ವಾದಕರಾಗಿ ಒಮ್ಮೆ ಬಾಯಿ ಹಾಡುಗಾರಿಕೆಯ ಕಚೇರಿ ನಡೆಸಿದ್ದರು. ಕೊನೆಯಲ್ಲಿ ವಂದನಾರ್ಪಣೆ ನಡೆಸಿದವರು, "ಬಹಳ ಸುಶ್ರಾವ್ಯವಾಗಿ ಹಾಡಿದೆ, ಆದರೆ ಪಿಟೀಲು ನುಡಿಸುವುದನ್ನೇ ಮುಂದುವರೆಸು" ಎಂದು ಅಭಿನಂದಿಸಿದರು. ಏಕೆ ಈ ಘಟನೆಯನ್ನು ಬರೆಯುತ್ತಿದ್ದೇನೆಂದರೆ ಈಗಿನವರ ಕಚೇರಿಯಲ್ಲಿ ಸಂಗೀತದ ಜೊತೆಗೆ ಹಾವ ಭಾವ, ಅಂಗ ಚೇಷ್ಟೆಯೂ ಅತಿಯಾಗಿ ತೋರಿಸಿಬಿಡುವರು (ತಪ್ಪಿದ್ದರೆ ಮನ್ನಿಸಿ).
ಒಮ್ಮೆ 1995ರಲ್ಲಿ ಆರ್.ಕೆ.ಎಸ್. ಭೇಟಿ ಮಾಡಲು ಹೋದಾಗ ಅವರ ಆರೋಗ್ಯ ಅಷ್ಟು ಸರಿಯಾಗಿರದೆ, ಡಾಕ್ಟರ್ ಹತ್ತಿರ ಹೋಗಿದ್ದರು. ಮಗ ರಮಾಕಾಂತ ಮನೆಯಲ್ಲಿದ್ದು ನಮ್ಮನ್ನು ಬರಮಾಡಿಕೊಂಡು ಮಾತನಾಡುತ್ತಿದ್ದಾಗ ಆರ್.ಕೆ.ಎಸ್. ಮತ್ತು ಅವರ ಧರ್ಮಪತ್ನಿ ಬಂದರು. ನಂತರ ಆದರ ಮತ್ತು ಸಂತೋಶದಿಂದ ಉಭಯ ಕುಶಲೋಪರಿ ಆಗಿ, ನಮಗೆ ರಸಬಾಳೆಹಣ್ಣು, ಹಾಲು ಕೊಟ್ಟು ಸತ್ಕರಿಸಿ ನಾವೂ ಅವರಿಗೆ ಆರೋಗ್ಯ ಬೇಗಲೇ ಸುಧಾರಿಸಲೆಂದು ಹೇಳಿದ್ದು ಕಣ್ಣಮುಂದೆ ಹಚ್ಚ ಹಸಿರಿನಿಂತಿದೆ.
ಫ್ರೆಂಚ್ ಗಣ್ಯವ್ಯಕ್ತಿ ಹೇಳಿದಹಾಗೆ, "Don't think of Age think of Life" ಎನ್ನುವಂತೆ, ಕ್ಲೀವ್ಲಾಂಡ್ನಲ್ಲಿ ನಡೆಸುತ್ತಿರುವ 'ತ್ಯಾಗರಾಜೋತ್ಸವ' ಸಮಾರಂಭದಲ್ಲೂ ತಪ್ಪದೆ ಭಾಗವಹಿಸಿ, ಈಗಿನ ಪೀಳಿಗೆಯವರಿಗೆ ವಿದ್ಯಾದಾನ ಮಾಡುತ್ತ ಗಂಟೆಗಳ ಕಾಲ ಕಚೇರಿ ನಡೆಸುವ ಶಕ್ತಿ, ಸಾಮರ್ಥ್ಯವಿಟ್ಟುಕೊಂಡಿದ್ದಾರೆ.