ಝಾಕಿರ್ ಹುಸೇನ್ ತಬಲಾ ತೀನ್ತಾಲ್ಗೆ ‘ವಾಹ್ ಉಸ್ತಾದ್ ವಾಹ್’!
ಬೆಂಗಳೂರು : ‘ಕಲಾವಿದನ ಇತಿಹಾಸ ಎಂಥದು, ಎಷ್ಟು ಪ್ರಶಸ್ತಿಗಳನ್ನು ಅವನು ಗಳಿಸಿದ್ದಾನೆ ಅನ್ನುವುದು ಮುಖ್ಯವಲ್ಲ. ವೇದಿಕೆ ಹತ್ತಿದಾಗ ಅಳುಕಿಲ್ಲದೆ ತಾನು ಕಲಿತ ಕಲೆಯನ್ನು ಅಭಿವ್ಯಕ್ತಿ ಮಾಡುವನೇ ಅನ್ನುವುದಷ್ಟೆ ಮುಖ್ಯ. ಒಬ್ಬ ಕಲಾವಿದನ ಸಾಮರ್ಥ್ಯ ಎಂಥದು ಎಂಬುದು ಬಯಲಾಗುವುದೇ ವೇದಿಕೆಯಲ್ಲಿ’.
ತಬಲಾ ಮೋಡಿಗಾರ ಉಸ್ತಾದ್ ಝಾಕಿರ್ ಹುಸೇನ್ ಶನಿವಾರ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಆಡಿದ ಈ ಮೊದಲ ಮಾತಿನಿಂದ ಶುರುವಾರ ಪ್ರೇಕ್ಷಕರ ‘ವಾಹ್ ಉಸ್ತಾದ್ ವಾಹ್’ ಉದ್ಗಾರ ಪದೇ ಪದೇ ಅನುರಣಿಸಿತು. ಟಿಕೇಟು ದರ ದುಬಾರಿಯಾದರೂ (500 ರುಪಾಯಿಗಿಂತ ಹೆಚ್ಚು) ಭವನ ಖಚಾಖಚಿ ತುಂಬಿತ್ತು.
ಝಾಕಿರ್ ತಬಲದ ತೀನ್ತಾಲ್, ಉಸ್ತಾದ್ ಸುಲ್ತಾನ್ ಖಾನ್ರ ಸಾರಂಗಿಯ ‘ಬಿಹಾರಿ’ಗೆ ಉತ್ತರವಾಗಿ ಮೂಡಿದಾಗಂತೂ ಪ್ರೇಕ್ಷಕರು ಉಸ್ತಾದ್ ಆಪ್ಕಾ ಜವಾಬ್ ನಹೀಂ ಎಂದು ಶಹಬ್ಭಾಸ್ ಕೂಗಿದರು. ಸಾರಂಗಿ ಹಾಗೂ ತಬಲದ ಮಿಲನ ದನಿ ಸೊಗಸಾಗಿ ಮೂಡಿಬಂತು. ನಂತರ ಉಸ್ತಾದ್ ಝಾಕಿರ್ ಹುಸೇನ್ ತಬಲಾದಲ್ಲಿ ತಮ್ಮದೇ ಆದ ವರಸೆಗಳನ್ನು ಮೆರೆದರು. ಸುಮಾರು 2 ತಾಸು ಪ್ರೇಕ್ಷಕನಿಗೆ ಸಂಗೀತದೂಟ. ‘ಗರ್ವ ’ಖ್ಯಾತಿಯ ವೆಂಕಟೇಶ್ ಗೋಡ್ಖಿಂಡಿ ಮತ್ತು ಪ್ರವೀಣ್ ಗೋಡ್ಖಿಂಡಿ ಈ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ತಮ್ಮ ಸಂಜೋಗ್ ಮಹಾವಿದ್ಯಾಲಯದಲ್ಲಿ ಮಕ್ಕಳಿಗೆ ಬಾನ್ಸುರಿ ಕಲಿಸಲು ಗೋಡ್ಖಿಂಡಿ ಅಂಡ್ ಗೋಡ್ಖಿಂಡಿ ಬಳಸಲಿದ್ದಾರೆ.
ಉಸ್ತಾದ್ ಝಾಕಿರ್ ಹುಸೇನ್ ಮಾಡೆಲ್ ಆಗಿರುವ ತಾಜ್ಮಹಲ್ ಚಹಾ ಈ ಕಾರ್ಯಕ್ರಮವನ್ನೂ ಪ್ರಾಯೋಜಿಸಿತ್ತು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಸಾಹಿತ್ಯ
ಸೊಗಡು