ಎಂದರೋ ಮಹಾನುಭಾವುಲು ಅಂದರೀಕಿ ವಂದನಮು
ಎಂದು ಹೇಳಿ ಧನ್ಯರಾದವರು ಶ್ರೀ ತ್ಯಾಗರಾಜರು. ತ್ಯಾಗರಾಜರು ಕರ್ನಾಟಕ ಸಂಗೀತಕ್ಕೆ ನೀಡಿರುವ ಕೊಡುಗೆ ಅನುಪಮ. ತ್ಯಾಗರಾಜರು ತಮ್ಮ ಸಂಗೀತ ಸಂಯೋಜನೆಯ ಜೊತೆಗೆ ಕರ್ನಾಟಕ ಸಂಗೀತಕ್ಕೆ ನೀಡಿರುವ ಸಾಹಿತ್ಯದ ಕೊಡುಗೆಯೂ ಅಪಾರ.
ಶ್ರೀತ್ಯಾಗರಾಜರ ‘ಪಂಚರತ್ನ ಕೃತಿ’ ಕೇಳದ - ಹಾಡದ ಸಂಗೀತಾಸಕ್ತರು - ಸಂಗೀತಗಾರರು ವಿರಳ. ತ್ಯಾಗರಾಜರು ಕರ್ನಾಟಕ ಸಂಗೀತ - ಸಾಹಿತ್ಯ ಪರಂಪರೆಗೆ ನೀಡಿರುವ ಕೊಡುಗೆ ಅನನ್ಯ. ಶ್ರೀಪುರಂದರದಾಸರು ಕಟ್ಟಿದ ಭದ್ರ ತಳಹದಿಯ ಮೇಲೆ ಸಂಗೀತದ ಲಲಿತ ಮಹಲ್ಲನ್ನೇ ನಿರ್ಮಿಸಿದ ತ್ಯಾಗರಾಜರ ಹಿರಿಮೆ .. ವಂದನಂ
ಸೀತಾರಾಮರ ಪರಮ ಭಕ್ತರಾಗಿದ್ದ ತ್ಯಾಗರಾಜರಿಗೆ ಅವರ ತಾಯಿ ಸೀತಮ್ಮನವರು, ಬಾಲ್ಯದಿಂದಲೇ ಶ್ರೀಪುರಂದರದಾಸರ ಕೀರ್ತನೆಗಳನ್ನು ಹೇಳಿಕೊಡುತ್ತಿದ್ದರು. ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಎಂಬಂತೆ ತಾಯಿ ಸೀತಮ್ಮನವರಿಂದ ಸಂಗೀತದ ಓಂಕಾರ ಕಲಿತ ತ್ಯಾಗರಾಜರು, ತಮ್ಮ 12ನೇ ವಯಸ್ಸಿನಲ್ಲೇ ಸ್ವಂತ ಕೃತಿಗಳನ್ನು ರಚಿಸಿ, ತಾವೇ ಸಂಗೀತ ಸಂಯೋಜಿಸಿ ಸುಶ್ರಾವ್ಯವಾಗಿ ಹಾಡುತ್ತಿದ್ದರು.
ತ್ಯಾಗರಾಜರ ಈ ಸಂಗೀತ ವಿದ್ವತ್ತಿಗೆ ಮಾರುಹೋದ, ಸ್ವತಃ ವೈಣಿಕರಾಗಿದ್ದ ತಾತ ಕಾಳಹಸ್ತಯ್ಯನವರು ತ್ಯಾಗರಾಜರಿಗೆ ಹಲವು ಸಂಗೀತ ಶಾಸ್ತ್ರ ಗ್ರಂಥಗಳನ್ನು ಒದಗಿಸಿ, ಸಂಗೀತದ ಬಗ್ಗೆ ಹೆಚ್ಚು ತಿಳಿಯಲು ನೆರವಾದರು. ಬಾಲ ತ್ಯಾಗರಾಜರ ಸಂಗೀತ ಸಾಧನೆಯನ್ನು ಮೆಚ್ಚಿದ ಶ್ರೀರಾಮಕೃಷ್ಣಾನಂದ ಯತಿಗಳು ಕರುಣಿಸಿದ ಸಂಗೀತ ಶಾಸ್ತ್ರದ ಒಳಮರ್ಮಗಳನ್ನು ಒಳಗೊಂಡ ‘ಸ್ವರಾ-ರ್ಣ-ವ’ ಗ್ರಂಥ ತ್ಯಾಗರಾಜರ ಸಂಗೀತ ವಿದ್ವತ್ತನ್ನು ಮತ್ತಷ್ಟು ಹೆಚ್ಚಿಸಿತು.
ಪ್ರಭಾತದಲ್ಲೇ ಎದ್ದು, ತಾಯಿ ಕಾವೇರಿನದಿಯಲ್ಲಿ ಮಿಂದು, ಆರಾಧ್ಯದೈವನಾದ ಶ್ರೀರಾಮನ ಪೂಜಿಸಿ, ಉದರಂಭರಣೆಯ ಮುಗಿದೊಡನೆ ಸಂಗೀತಸಾಧನೆಯಲ್ಲಿ ನಿರತರಾಗುತ್ತಿದ್ದ ತ್ಯಾಗರಾಜರು ಸಾಧಿಸಿದ್ದು ಅಪಾರ. ತಾವು ಕಲಿತದ್ದನ್ನು ಜಾತಿ-ಮತ- ಭೇದಗಳಿಲ್ಲದೆ ಎಲ್ಲರಿಗೂ ಧಾರೆಎರೆದದ್ದು ತ್ಯಾಗರಾಜರ ಮತ್ತೊಂದು ಮಹತ್ಸಾಧನೆ.
ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ ತ್ಯಾಗರಾಜರು ಇಹವನ್ನು ತ್ಯಜಿಸಿ 155 ವರ್ಷಗಳಾಯ್ತು. ಅವರು ಈ ಭುವಿಯಲ್ಲಿ ಇಲ್ಲದಿದ್ದರು, ಅವರ ಕೃತಿಗಳು ಅಮರ. ಇಂದೂ ಕಾವೇರಿ ತಟದ ತಿರುವೈಯಾರಿನಲ್ಲಿ ಅವರ ಮೂರ್ತಿಯನ್ನು ನಿರ್ಮಿಸಿ, ಪೂಜಿಸಲಾಗುತ್ತದೆ.
ಪ್ರತಿವರ್ಷ ಪುಷ್ಯ ಬಹುಳ ಪಂಚಮಿಯ ದಿನ (ಶನಿವಾರ 2-2-2002) ತ್ಯಾಗರಾಜರ ಪುಣ್ಯತಿಥಿಯನ್ನು ಆಚರಿಸಲಾಗುತ್ತದೆ. ಪಂಚರತ್ನ ಕೃತಿ ನೀಡಿದ ಮಹಾನುಭಾವನ ಗೌರವಾರ್ಥ ಐದು ದಿನಗಳ ಕಾಲ ಆರಾಧನೆ ಜರುಗುತ್ತದೆ. ಸಹಸ್ರಾರು ಸಂಗೀತ ವಿದ್ವಾಂಸರು, ತ್ಯಾಗರಾಜರ ಸಾವಿರಾರು ಕೃತಿಗಳನ್ನು ಹಾಡಿ, ಅವರಿಗೆ ಗೀತಾಂಜಲಿ ಅರ್ಪಿಸುತ್ತಾರೆ. ಪಿಟೀಲು, ಕೊಳಲು, ಮೃದಂಗವಾದಕರು ಈ ಆರಾಧನೆಯಲ್ಲಿ ಪಾಲ್ಗೊಂಡು ತಮ್ಮ ಜನ್ಮವನ್ನು ಸಾರ್ಥಕಪಡಿಸಿಕೊಳ್ಳುತ್ತಾರೆ.
ತ್ಯಾಗರಾಜರನ್ನು ಅವತಾರಪುರುಷ ಎಂದೇ ಭಾವಿಸಿದವರೂ ಉಂಟು. ಗಾಯನದಿಂದಲೇ ಶ್ರೀರಾಮನ ಒಲಿಸಿಕೊಳ್ಳುವ ಮಾರ್ಗವನ್ನು ತೋರಿದ ಸಂತರಿವರು. ರಾಮಾಯಣವನ್ನು ಬರೆದ ವಾಲ್ಮೀಕಿ ಮಹರ್ಷಿಗಳೇ ತ್ಯಾಗರಾಜರಾಗಿ ಹುಟ್ಟಿದರು ಎಂಬ ನಂಬಿಕೆಯೂ ಇದೆ.
ತ್ಯಾಗರಾಜರ ಎಲ್ಲ ಕೃತಿಗಳೂ ಭಕ್ತಿ ಪ್ರಧಾನವಾಗಿದ್ದು, ಮನಸ್ಸಿಗೆ ಮುದನೀಡುತ್ತವೆ. ತ್ಯಾಗರಾಜರ ಕೃತಿಗಳನ್ನು ಸುಶ್ರಾವ್ಯ ಕಂಠಸಿರಿಯಲ್ಲಿ ಕೇಳುತ್ತಿದ್ದರಂತೂ ಶ್ರೋತೃಗಳು ತಮ್ಮ ಇರುವನ್ನೇ ಮರೆತು ತಲ್ಲೀನರಾಗುತ್ತಾರೆ. ಆ ಕೃತಿಗಳಲ್ಲಿರುವ ರಾಗಲಕ್ಷಣವೇ ಅಂತಹದ್ದು.
ಶ್ರೀತ್ಯಾಗರಾಜರು ಕರ್ನಾಟಕ ಸಂಗೀತಕ್ಕೆ ನೀಡಿರುವ ಕೊಡುಗೆಯ ಜೊತೆಜೊತೆಗೇ ಸಾಹಿತ್ಯದಿಂದ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಜೀವನೋತ್ಕರ್ಷಕ್ಕೆ ನೀಡಿರುವ ಮಾರ್ಗದರ್ಶನ ಹಾಗೂ ಸಂದೇಶಗಳು ಸರ್ವಕಾಲಿಕ.
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications