‘ನನ್ನ ಶ್ರೇಯಸ್ಸಿನ ಸಿಂಹಪಾಲು ಕನ್ನಡಿಗರದು’-ಎಸ್.ಪಿ.ಬಾಲಸುಬ್ರಹ್ಮಣ್ಯಂ
ಬೆಂಗಳೂರು : ‘ತಾವು ಗಳಿಸಿರುವ ಯಶಸ್ಸಿನಲ್ಲಿ ಕನ್ನಡಿಗರ ಪಾಲು ದೊಡ್ಡದು. ಕರ್ನಾಟಕ ಹಾಗೂ ಕನ್ನಡಿಗರು ನನ್ನ ಮನಸ್ಸಿನಲ್ಲಿ ಸದಾ ಹಸಿರು’ ಎಂದು ದಕ್ಷಿಣಭಾರತದ ಪ್ರಖ್ಯಾತ ಚಲನಚಿತ್ರ ಹಿನ್ನೆಲೆಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹೇಳಿದ್ದಾರೆ.
ದಿವಂಗತ ಜಿ.ವಿ. ಅತ್ರಿ ಅವರು ಸ್ಥಾಪಿಸಿದ ಸಂಗೀತಗಂಗಾ ಸಂಸ್ಥೆಯ ಎಂಟನೇ ಹುಟ್ಟುಹಬ್ಬದ ಅಂಗವಾಗಿ, ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ‘ಸಂಗೀತಗಂಗಾ-2001’ ಪ್ರಶಸ್ತಿ ಸ್ವೀಕರಿಸಿ ಎಸ್ಪಿ ಮಾತನಾಡುತ್ತಿದ್ದರು. ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಹಾಗೂ ರಾಜನ್ ಪ್ರಶಸ್ತಿ ಪ್ರದಾನ ಮಾಡಿದರು.
‘ನಕ್ಕರೆ ಅದೇ ಸ್ವರ್ಗ’ ಸಿನಿಮಾ ಮೂಲಕ ತಮ್ಮ ಸ್ಯಾಂಡಲ್ವುಡ್ ಪ್ರವೇಶವನ್ನು ಸ್ಮರಿಸಿಕೊಂಡ ಅವರು, ‘ಕರ್ನಾಟಕ ಕಟ್ಟಿಕೊಟ್ಟ ನೆನಪಿನ ಬುತ್ತಿ ಬಹಳ ದೊಡ್ಡದು. ಈ ಮಾತನ್ನು ನಾನು ಭಾವುಕತೆಯಿಂದ ಹೇಳುತ್ತಿಲ್ಲ . ಇತರ ರಾಜ್ಯಗಳಲ್ಲಿ ಸನ್ಮಾನ ಸ್ವೀಕರಿಸುವಾಗ ಇಂತಹ ಮಾತುಗಳನ್ನು ಹೇಳಲು ಸಾಧ್ಯವಿಲ್ಲ ’ ಎಂದು ಕಿಕ್ಕಿರಿದಿದ್ದ ಅಸಂಖ್ಯ ಅಭಿಮಾನಿಗಳ ಕರತಾಡನದ ನಡುವೆ ಹೇಳಿದರು.
ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ಸಮಾರಂಭ ಉದ್ಘಾಟಿಸಿದರು. ಸಂಯುಕ್ತ ಜನತಾದಳದ ಹಿರಿಯ ಮುಖಂಡ ಪಿಜಿಆರ್ ಸಿಂಧ್ಯ ಅವರು ಜಿ.ವಿ.ಅತ್ರಿ ನಿರ್ದೇಶಿಸಿದ ‘ವಿಶ್ವಮಾತೆ’ ಧ್ವನಿಸುರುಳಿ ಬಿಡುಗಡೆ ಮಾಡಿದರು. ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ಎಚ್.ಆರ್.ಲೀಲಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಾಲಸುಬ್ರಹ್ಮಣ್ಯಂ ಅವರು ಹಾಡಿದ ಚಿತ್ರಗೀತೆಗಳನ್ನು ಹಾಡುವ ಮೂಲಕ ಸಂಗೀತಗಂಗಾ ಸದಸ್ಯರು ನೆಚ್ಚಿನ ಗಾಯಕನಿಗೆ ಅಭಿಮಾನದ ಅಭಿನಂದನೆ ಸಲ್ಲಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು