ಹಾಡು ಹಕ್ಕಿಗೆ ಸಂದ ಬಿರುದು ಸಮ್ಮಾನ:ಎಸ್ಪಿ ಮಿಲೆನಿಯಂ ಗಾಯಕ
ಬೆಂಗಳೂರು : ಕನ್ನಡಿಗರು ಹಾಗೂ ತೆಲುಗರು ಶ್ರೀ ಕೃಷ್ಣ ದೇವರಾಯನ ಕಾಲದಿಂದಲೂ ಅಣ್ಣ ತಮ್ಮಂದಿರಂಬ ಭಾವನೆ ಇಟ್ಟು ಕೊಂಡಿದ್ದಾರೆ. ಸಾಹಿತ್ಯ, ಸಂಸ್ಕೃತಿ, ಕಲೆ ಮೊದಲಾದ ಕ್ಷೇತ್ರಗಳಲ್ಲಿ ಎರಡೂ ಭಾಷಿಕರಲ್ಲಿ ಸಾಮೀಪ್ಯವಿದೆ. ಸಂಪರ್ಕದ ಕೊಂಡಿಯಾದ ಭಾಷೆಯ ಬಗೆಗೆ ಅಭಿಮಾನವಿರಬೇಕೇ ಹೊರತು ದುರಭಿಮಾನ ಸಲ್ಲ.
ಭಾನುವಾರ ನಗರದ ಅರಮನೆ ಆವರಣದಲ್ಲಿ ಮಿಲೆನಿಯಂ ಪ್ರಶಸ್ತಿ ಸ್ವೀಕರಿಸಿದ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆಡಿದ ಮಾತುಗಳಿವು. ಕನ್ನಡ ಹಾಗೂ ತೆಲುಗು ಜನ ಅಭಿಮಾನದ ಗೂಡು ಕಟ್ಟಿ ನನಗೆ ಬಾಡಿಗೆಗೆ ಕೊಟ್ಟಿದ್ದಾರೆ. 35 ವರ್ಷಗಳ ಕಾಲ ನನ್ನ ಕೈಲಾದ ಸೇವೆ ಮಾಡಿದ್ದೇನಷ್ಟೆ. ನನಗೆ ಸಂದಿರುವ ಪ್ರಶಸ್ತಿಯ ನಿಜವಾದ ವಾರಸುದಾರರು ಅವರೇ ಎಂದು ಎಸ್ಪಿ ಹೇಳಿದಾಗ ಕರತಾಡನ ಮುಗಿಲು ಮುಟ್ಟಿತು.
‘ಮೇಲು ಕಲಯಿಕ’ ಫೌಂಡೇಶನ್ ಆಯೋಜಿಸಿದ್ದ ಈ ಸಮಾರಂಭದಲ್ಲಿ ರಾಜ್ಯಪಾಲರಾದ ವಿ.ಎಸ್.ರಮಾದೇವಿ ಎಸ್ಪಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಬರೇ ಹಣ ಗಳಿಸೋ ಉದ್ದೇಶದಿಂದಷ್ಟೇ ಸಿನಿಮಾ ಮಾಡಬಾರದು. ಅಶ್ಲೀಲ ಹಾಗೂ ಹಿಂಸಾತ್ಮಕ ದೃಶ್ಯಗಳು ಕಾಸು ಹುಟ್ಟಿಸುತ್ತವಾದರೂ ಯಾವುದೋ ಒಂದು ವರ್ಗದವರು ಮಾತ್ರ ಅವನ್ನು ಸ್ವೀಕರಿಸುತ್ತಾರೆ. ಯುವಕರನ್ನು ಹಾದಿ ತಪ್ಪಿಸುವ ಇಂಥ ಚಿತ್ರಗಳ ನಿರ್ಮಾಪಕರು ಸಮಾಜದ ಬಗೆಗೂ ಚಿಂತಿಸುವ ಅಗತ್ಯವಿದೆ ಎಂದು ರಮಾದೇವಿ ಸಂದೇಶ ಕೊಟ್ಟರು.
ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಲು ಪುರುಸೊತ್ತಿಲ್ಲವಾದ್ದರಿಂದ ನಟಿ- ನಟಿಯರ ಪರಿಚಯ ನನಗೆ ಕಡಿಮೆ. ರಾಜಕಾರಣಿಗಳಿಗೇ ಎಲ್ಲಾ ಕ್ಷೇತ್ರಗಳಲ್ಲೂ ಅಭಿನಯಿಸುವ ಕಲೆ ಕರಗತವಾಗಿದೆಯಲ್ಲಾ ಎಂದು ರಾಜ್ಯಪಾಲರು ವ್ಯಂಗ್ಯದ ಚಟಾಕಿ ಹಾರಿಸಿದರು.
ಆಂಧ್ರ ಪಶು ಸಂಗೋಪನೆ ಸಚಿವ ನಿಮ್ಮಲ ಕೃಷ್ಣಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ನಟ ವಿಷ್ಣುವರ್ಧನ್, ತೆಲುಗು ನಟ- ನಟಿಯರಾದ ಚಂದ್ರಮೋಹನ್, ಎ.ವಿ.ಸುಬ್ರಮಣ್ಯ, ಆಲಿ, ಮೀನಾ ಮೊದಲಾದವರನ್ನು ರಾಜ್ಯಪಾಲರು ಸನ್ಮಾನಿಸಿದರು. ನಟ ಸಾಯಿಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
(ಇನ್ಫೋ ವಾರ್ತೆ)












Click it and Unblock the Notifications