ಪುರಂದರದಾಸರ ನೆನೆನೆನೆ
ದಿನಾಂಕ 24 ಜನವರಿ, 2001. ಪುಷ್ಯ ಬಹುಳ ಅಮಾವಾಸ್ಯೆ ಬುಧವಾರ. ದಾಸಶ್ರೇಷ್ಠ ಪುರಂದರದಾಸರ ಪುಣ್ಯದಿನ.
ಡೊಂಕುಬಾಲದ ನಾಯಕರನ್ನು ತಿದ್ದುವುದರಿಂದ ಮೊದಲುಗೊಂಡು ಪದುಮನಾಭನ ಪಾದದೊಲುಮೆಗೆ ಹಂಬಲಿಸುವ ಮುನ್ನ ಈ ಭವಸಾಗರವನ್ನು ಈಸಬೇಕು ಇದ್ದು ಜಯಿಸಬೇಕು ಎಂದು ಹಾಡಿದ ಪುರಂದರರು ಭಕ್ತಿಪಂಥದ ಆರಾಧಕರು, ಸಮಾಜ ಶಾಸ್ತ್ರಜ್ಞರು, ಸಂಗೀತಕಲಾ ಕೋವಿದರು. ಅವರು ರಚಿಸಿ ಹಾಡಿದ ಪದಗಳು ಗಹನವಾದ ಸಂಗತಿಗಳನ್ನು ಚರ್ಚಿಸಿದರೂ ಸಂದೇಶಗಳನ್ನು ನಮಗೆ ತಲುಪಿಸಿದ ರೀತಿ ಮಾತ್ರ ಅತ್ಯಂತ ಸರಳ, ಅನನ್ಯ. ಸುಲಿದ ಬಾಳೆಹಣ್ಣಿನ ಕನ್ನಡ ಎಂದರೆ ಇದೇ.
ದಾಸ ಸಾಹಿತ್ಯವನ್ನು ಧರ್ಮದ ಉತ್ಕರ್ಷೆಗೆ ಪೋಷಕವಾದ ಅತ್ಯಮೂಲ್ಯ ಭೋದಾಮೃತ ಎಂದು ಬಣ್ಣಿಸಲಾಗಿದೆಯಷ್ಟೆ. ದಾಸ ಶ್ರೇಷ್ಠರಾದ ಪುರಂದರದಾಸರು ಬದುಕಿನ ಎಲ್ಲ ರಂಗಗಳಿಗೂ ಅನ್ವಯವಾಗುವ ನೀತಿಸಾರ ಅರಳಿಸುವ ಅಸಂಖ್ಯಾತ ಗೀತೆಗಳನ್ನು ರಚಿಸಿದ್ದಾರೆ. ಪುರಂದರದಾಸರ ಪದಗಳನ್ನು ಹಾಡದ ಕನ್ನಡಿಗರ ಮನೆಯೇ ಇಲ್ಲ ಎಂಬ ಮಾತು ಇತ್ತೀಚಿನವರೆವಿಗೂ ಇತ್ತು. ಮುಂದೂ ಇರಲಿ ಎಂಬ ಆಶಯದಿಂದ ಇವತ್ತು ಅವರ ಪುಣ್ಯದಿನವನ್ನು ವೆಬ್ಜಾಲದಲ್ಲಿ ಆಚರಿಸೋಣ.
ಜನಪದದಂತೆಯೇ ಪುರಂದರ ದಾಸರ ಪದಗಳೂ ಬಾಯಿಯಿಂದ ಬಾಯಿಗೆ ಹರಡಿ, ಜನಜನಿತವಾಗಿವೆ. ಶ್ರೀಪುರಂದರದಾಸರ ಸ್ಮರಣಾರ್ಥ ಒಂದು ದಾಸರ ಪದವನ್ನು ನಾವು ನಿಮಗಾಗಿ ಸಾದರ ಪಡಿಸುತ್ತಿದ್ದೇವೆ, ಹಾಡಿಕೊಳ್ಳಿ:
ಗೀತೆ : ಅಂಬಿಗ ನಾ ನಿನ್ನ ನಂಬಿದೆ. ರಾಗ ಶಂಕರಾಭರಣ, ಅಟ ತಾಳ
ಅಂಬಿಗ ನಾ ನಿನ್ನ ನಂಬಿದೆ : ಜಗ : ದಂಬರಮಣ ನಂಬಿದೆ ::ಪ::
ತುಂಬಿದ ಹರಿಗೋಲಂಬಿಗ : ಅದ ಕೊಂಭತ್ತು ಛಿದ್ರವು ಅಂಬಿಗ ::
ಸಂಭ್ರಮದಿಂ ನೋಡಂಬಿಗ : ಅದ : ರಿಂಬು ನೋಡಿ ನಡೆಸಂಬಿಗ ::1::
ಹೊಳೆವ ಭರವ ನೋಡಂಬಿಗ : ಅದಕೆ : ಸೆಳವು ಘನವಯ್ಯ ಅಂಬಿಗ ::
ಸುಳಿಯಾಳು ಮುಳುಗಿದೆ ಅಂಬಿಗ : ಎನ್ನ ಸೆಳೆದುಕೊಂಡೊಯ್ಯೋ ನೀನಂಬಿಗ ::2::
ಆರು ತೆರೆಯ ನೋಡಂಬಿಗ : ಅದು : ಮೀರಿ ಬರುತಲಿದೆ ಅಂಬಿಗ ::
ಯಾರಿಂದಲಾಗದು ಅಂಬಿಗ : ಅದ ನೀ : ವಾರಿಸಿ ದಾಟಿಸೋ ಅಂಬಿಗ ::3::
ಸತ್ಯವೆಂಬುದೆ ಹುಟ್ಟಂಬಿಗ : ಸದಾ : ಭಕ್ತಿಯೆಂಬುದೆ ಪಥವಂಬಿಗ ::
ನಿತ್ಯ ಮೂರುತಿ ಪುರಂದರ ವಿಠಲ : ನಮ್ಮ : ಮುಕ್ತಿ ಮಂಟಪ ಕೊಯ್ಯಾ ಅಂಬಿಗ ::4::












Click it and Unblock the Notifications