'ಕಂಪ್ಯೂಟರ್ ಸಾಕ್ಷರತೆ ಕುರಿತು ಕನ್ನಡದಲ್ಲಿ ಮತ್ತಷ್ಟು ಪುಸ್ತಕ ಹೊರಬರಲಿ'

ಬೆಂಗಳೂರು, ಜುಲೈ 23 : ಸಾಕಷ್ಟು ಸೌಲಭ್ಯ ಹಾಗೂ ಪ್ರೋತ್ಸಾಹ ಇದ್ದರೂ ವಿಜ್ಞಾನ, ತಂತ್ರಜ್ಞಾನ ಮತ್ತು ಕಂಪ್ಯೂಟರ್ ಕುರಿತಂತೆ ಕನ್ನಡದಲ್ಲಿ ಹೆಚ್ಚು ಹೆಚ್ಚು ಪುಸ್ತಕಗಳು ಪ್ರಕಟಗೊಳ್ಳುತ್ತಿಲ್ಲ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ಡಾ. ಎಚ್. ಹೊನ್ನೇಗೌಡ ಕಳವಳ ವ್ಯಕ್ತಪಡಿಸಿದರು.

ಜು.22 ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕ್ಲಾರಿಟ್ರೀ ಸಂಸ್ಥೆ ಹಮ್ಮಿಕೊಂಡಿದ್ದ, ಪ್ರೊ.ಮಹದೇವಯ್ಯ ಅವರ 'ವೃತ್ತಿಪರ ಕಂಪ್ಯೂಟರ್ ಸಾಕ್ಷರತೆ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಬೆಂಗಳೂರಿನಲ್ಲಿರುವ 3500 ಅಧಿಕ ಐಟಿ ಕಂಪೆನಿಗಳಲ್ಲಿ 10 ಸಾವಿರಕ್ಕೂ ಹೆಚ್ಚು ಎಂಜಿನಿಯರ್ಸ್, ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ ಜಿಡಿಪಿಗೆ ಬೆಂಗಳೂರಿನಿಂದಲೇ ಶೇ.20 ರಷ್ಟು ಕೊಡುಗೆ ಸಿಗುತ್ತಿದೆ. ಇಷ್ಟಾದರೂ ಕನ್ನಡದಲ್ಲಿ ಸುಲಭವಾದ ತಂತ್ರಾಂಶ ಮಾತ್ರ ಲಭ್ಯವಾಗುತ್ತಿಲ್ಲ. ಕನ್ನಡಿಗರು ಕಂಪ್ಯೂಟರ್ ಶಿಕ್ಷಣಕ್ಕಾಗಿ ಇಂಗ್ಲಿಷ್ ಪುಸ್ತಕದ ಮೊರೆ ಹೋಗುತ್ತಿರುವುದು ದುರಂತ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Dr.Honne Gowda releases Vrittipara Computer Saksharathe book

ದೇಶದ ನಗರ ಪ್ರದೇಶದ ಶೇ.60ರಷ್ಟು ಹಾಗೂ ಗ್ರಾಮೀಣ ಭಾಗದ ಶೇ.15ರಷ್ಟು ಜನ ಇಂಟರ್ನೆಟ್ ಬಳಕೆ ಮಾಡುತ್ತಿದ್ದಾರೆ. ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಗೂಗಲ್ ಸರ್ಚಿಂಗ್ ಹೆಚ್ಚಾಗುತ್ತಿದೆ. ಬಹುತೇಕರು ಮಾತೃಭಾಷೆಯಲ್ಲಿ ಇಂಟರ್ನೆಟ್ ಸರ್ಚ್ ಮಾಡಲು ಬಯಸುತ್ತಾರೆ. ಆದರೆ, ಅದು ಕನ್ನಡಿಗರಿಗೆ ಸುಲಭ ಸಾಧ್ಯವಾಗಿಲ್ಲ. ಮುಂದಿನ ಐದು ವರ್ಷಗಳಲ್ಲಿ ದೇಶದ 70 ಕೋಟಿ ಜನರು ಇಂಟರ್ನೆಟ್ ಉಪಯೋಗಿಸಲಿದ್ದಾರೆ. ಹೀಗಾಗಿ ಮಾತೃಭಾಷೆಯಲ್ಲಿ ತಂತ್ರಜ್ಞಾನ ಕುರಿತ ಹೆಚ್ಚಿನ ಕೃತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಲೇಖಕ ಮಹದೇವಯ್ಯ ಅವರ ಪ್ರಯತ್ನ ಶ್ಲಾಘನೀಯ ಎಂದು ಪ್ರಶಂಸಿಸಿದರು.

ಪುಸ್ತಕ ಪರಿಚಯ ಮಾಡಿದ ಜನಪ್ರಿಯ ಅಂಕಣಕಾರ, ವಿಜ್ಞಾನಿ ಡಾ. ಸುಧೀಂದ್ರ ಹಾಲ್ದೊಡ್ಡೇರಿ ಮಾತನಾಡಿ, 'ವೃತ್ತಿಪರರಿಗೆ ಹಾಗೂ ಕಂಪ್ಯೂಟರ್ನಲ್ಲಿ ಕೆಲಸ ಮಾಡುವವರಿಗೂ ಈ ಪುಸ್ತಕ ಅನುಕೂಲವಾಗಲಿದೆ. ಕಂಪ್ಯೂಟರ್ ನಮ್ಮ ನಿತ್ಯ ಜೀವನದ ಸಂಗತಿಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಕನ್ನಡ ಬರಹಗಳನ್ನು ಯಾರು ಓದುವುದಿಲ್ಲ ಎಂಬ ಭ್ರಮೆ ಬಿಟ್ಟು ಹೆಚ್ಚೆಚ್ಚು ಪುಸ್ತಕ ಬರೆಯಬೇಕು. ಕನ್ನಡದ ಶಾಸ್ತ್ರೀಯ ಸ್ಥಾನಮಾನಕ್ಕೆ ಇಂತಹ ಕೃತಿಗಳು ಅವಶ್ಯ' ಎಂದರು.

Dr.Honne Gowda releases Vrittipara Computer Saksharathe book

ವಿಜ್ಞಾನ ತಂತ್ರಜ್ಞಾನ ರಾಕೇಟ ವೇಗದಲ್ಲಿ ಸಾಗುತ್ತಿದೆ. ಹೀಗಾಗಿ ಕಂಪ್ಯೂಟರ್ ಜ್ಞಾನ ಅತೀ ಅವಶ್ಯಕ. ತಂತ್ರಜ್ಞಾನ ನಾಗಲೋಟದ ಯುಗದಲ್ಲಿ ವಿಷಯ ಜ್ಞಾನದ ಜತೆಗೆ ಅದನ್ನು ಹೇಗೆ ಇನ್ನೊಬ್ಬರಿಗೆ ತಿಳಿಸುತ್ತೇವೆ ಎನ್ನುವುದು ಅತಿಮುಖ್ಯ. ಕಂಪ್ಯೂಟರ್ ಕುರಿತ ಕನ್ನಡದ ಬರಹ ಕಬ್ಬಿಣ ಕಡಲೆ ಅಲ್ಲ ಎಂಬುದು ಈ ಪುಸ್ತಕದಿಂದ ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಮಾತನಾಡಿ, ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಚುರುಕಾಗಿರುತ್ತಾರೆ. ಇಂಟರ್ನೆಟ್ ಮೂಲಕ ಅನೇಕ ಅಂಶಗಳನ್ನು ಅರಿತುಕೊಂಡಿರುತ್ತಾರೆ. ಹೀಗಾಗಿ ಪ್ರಬುದ್ಧ ಗುರು ಎನಿಸಿಕೊಳ್ಳುವುದು ಕಷ್ಟ ಎಂದರು.

Dr.Honne Gowda releases Vrittipara Computer Saksharathe book

ಲೇಖಕ ಮಹದೇವಯ್ಯ ಅವರು ಪುಸ್ತಕ ರಚನೆಗೆ ಪ್ರೇರೇಪಿಸಿದವರನ್ನೆಲ್ಲ ಸ್ಮರಿಸಿ, ಮಾತಿನ ನಡುವಲ್ಲಿ ರಸಪ್ರಶ್ನೆಗಳನ್ನೂ ಕೇಳಿ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ನೀಡಿದರು. ಕು.ನಿಹಾರಿಕಾ ಸುಶ್ರಾವ್ಯವಾಗಿ ಪ್ರಾರ್ಥಿಸಿ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರೆ, ಎಸ್. ಶಾಂತಾರಾಂ ಸ್ವಾಗತಿಸಿದರು. ಜಯಂತ್ ಕೆ ಎಸ್ ವಂದನಾರ್ಪಣೆ ಸಲ್ಲಿಸಿದರು. ಭಾರತಿ ಹೆಗಡೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+