ಸಂಕ್ರಾಂತಿಯ ಮೊದಲೇ ಜೋಗಿ ಸಾಹಿತ್ಯದ ಸುಗ್ಗಿ

ಜೋಗಿ ಎಂದೇ ಖ್ಯಾತರಾಗಿರುವ ಪತ್ರಕರ್ತ, ಸಾಹಿತಿ ಗಿರೀಶ್ ರಾವ್ ಅವರ ಮೂರು ಹೊತ್ತಗೆಗಳು ಪ್ರಸವಕ್ಕೆ ಸಿದ್ಧವಾಗಿವೆ. 'ಮಾಯಾ ಕಿನ್ನರಿ' ಎಂಬ ಹೊಸ ಕಾದಂಬರಿ, 'ನದಿಯ ನೆನಪಿನ ಹಂಗು' ಎಂಬ ಹಳೆಯ ಕಾದಂಬರಿಯ ಮೂರನೇ ಮುದ್ರಣ ಮತ್ತು 'ರೂಪ-ರೇಖೆ' ಎಂಬ ಅಂಕಣ ಬರಹಗಳ ಸಂಗ್ರಹ ಪುಸ್ತಕ ರೂಪದಲ್ಲಿ ಬೆಂಗಳೂರಿನಲ್ಲಿ ಭಾನುವಾರ ಬೆಳಗ್ಗೆ 10.30ಕ್ಕೆ ಲೋಕಾರ್ಪಣೆಯಾಗಲಿವೆ.
ಜೋಗಿ ಪುಸ್ತಕಗಳೆಂದರೆ ಸಮೃದ್ಧ ಸಾಹಿತ್ಯದ ಸುಗ್ಗಿ. ಸಂಕ್ರಾಂತಿ ಕೆಲವೇ ದಿನಗಳು ಇರುವಾಗಲೇ ಗಿರೀಶ್ ರಾವ್ ಅವರ ಪುಸ್ತಕಗಳು ಬಿಡುಗಡೆಯಾಗುತ್ತಿರುವುದು ಸಾಹಿತ್ಯ ಪ್ರೇಮಿಗಳಿಗೆ ಹುಗ್ಗಿ ತಿಂದಂತೆ. ಈ ಪುಸ್ತಕಗಳಲ್ಲಿ ನದಿಯ ನೆನಪಿನ ಹಂಗು ಕಾದಂಬರಿ ದಟ್ಸ್ ಕನ್ನಡದಲ್ಲಿ ದೈನಂದಿನ ಧಾರಾವಾಹಿಯಾಗಿ ಪ್ರಕಟವಾಗಿತ್ತು.
ಈ ಕಾರ್ಯಕ್ರಮದ ಮತ್ತೆರಡು ಆಕರ್ಷಣೆ, ಹಾಯ್ ಬೆಂಗಳೂರು ವಾರ ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಪುಸ್ತಕಗಳನ್ನು ಬಿಡುಗಡೆ ಮಾಡುತ್ತಿರುವುದು ಮತ್ತು ದಶಕಗಳ ನಂತರ ನಿರ್ದೇಶನ ಕೈಗೆತ್ತಿಕೊಂಡಿರುವ 'ಸೂಪರ್' ನಟ ಉಪೇಂದ್ರ ಅಧ್ಯಕ್ಷರಾಗಿ ಭಾಗವಹಿಸುತ್ತಿರುವುದು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಾಹಿತಿ ಲಕ್ಷ್ಮೀಶ ತೊಳ್ಪಾಡಿ ಶೋಭೆ ತರಲಿದ್ದಾರೆ.
ರವಿ ಬೆಳಗೆರೆಯವರ ಹಾಸ್ಯ, ಮೊನಚಿನಿಂದ ತುಂಬಿದ ಚಾಟಿಏಟಿನ ಮಾತುಗಳು ಪುಸ್ತಕ ಬಿಡುಗಡೆಯ ಪ್ರಧಾನ ಆಕರ್ಷಣೆಯಾಗಲಿವೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಉಪೇಂದ್ರ ಏನು ಮತ್ತು ಯಾವುದರ ಬಗ್ಗೆ ಮಾತಾಡಬಹುದು ಎಂದು ಉತ್ಸುಕರಾಗಿರುವವರು ಕಾರ್ಯಕ್ರಮಕ್ಕೆ ಬರಲೇಬೇಕು.
ಪುಸ್ತಕಗಳನ್ನು ಅಂಕಿತ ಪುಸ್ತಕ ಪ್ರಕಾಶನ ಪ್ರಕಟಿಸಿದ್ದು, ಪುಸ್ತಕ ಬಿಡುಗಡೆಯ ತವರುಮನೆಯಂತಿರುವ ಬಸವನಗುಡಿಯ ಬಿಪಿ ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ ಮೂರೂ ಪುಸ್ತಕಗಳು ಬೆಳಕು ಕಾಣುತ್ತಿವೆ. ಅರ್ಧ ಗಂಟೆ ಮೊದಲೇ ಬಂದರೆ ಪುಸ್ತಕ ಕೊಳ್ಳಲು ಬರುವ ಎಲ್ಲ ಸ್ನೇಹಿತರ ಉಭಯ ಕುಶಲೋಪರಿ ವಿಚಾರಿಸಬಹುದು. ಸರ್ವರಿಗೂ ಸುಸ್ವಾಗತ. [ಬಸವನಗುಡಿ]











Click it and Unblock the Notifications