ಲೇರಿಯೊಂಕ -ಕನ್ನಡ ಪುಸ್ತಕ ವಿಮರ್ಶೆ

*ಮಲೆನಾಡಿಗ
ಲೇರಿಯೊಂಕನ ಪಾತ್ರದ ಮೂಲಕ ಮಾಸಯಿ ಜನಾಂಗದ ಪರಿಚಯವನ್ನು ಸ್ಥೂಲವಾಗಿ, ಸೂಕ್ಷ್ಮವಾಗಿ ಲೇಖಕರು ಮಾಡಿಕೊಡುವ ಪ್ರಯತ್ನಮಾಡಿದ್ದಾರೆ. ಆದರೆ, ಬಾಲಕ ಲೇರಿಯೊಂಕ, ಕಾಡಿನಿಂದ ನಾಡಿಗೆ ಬಂದು ಅಕ್ಷರ ಕಲಿತೂ ಕೂಡ ತನ್ನ ಮೂಲವನ್ನು ಮರೆಯದೆ ಪುನಃ ತನ್ನವರನ್ನು ಕೂಡಿಕೊಳ್ಳುವುದು ಮೂಲ ಕಥೆಯಾದ್ದರಿಂದ ಎಷ್ಟೋ ಕಡೆ ಇನ್ನಷ್ಟು ವಿಷಯಗಳನ್ನು ತಿಳಿಸುವ ಅಭಿಲಾಷೆಯನ್ನು ಲೇಖಕರು ಹತ್ತಿಕ್ಕಿಕೊಂಡು, ಲೇರಿಯೊಂಕನ ಪಾತ್ರ ಪೋಷಣೆಯಲ್ಲಿ ಮಾತ್ರ ತೊಡಗಿದಂತೆ ತೋರುತ್ತದೆ. ಇದರಿಂದ ಕಾದಂಬರಿಗೆ ನಷ್ಟವೇನೂ ಆಗಿಲ್ಲ ಎಂಬುದನ್ನು ಒಪ್ಪಬಹುದು.
ಕನ್ನಡಕ್ಕೆ ಆಫ್ರಿಕಾದ ಜನಾಂಗದ ಕಥೆಯನ್ನು ಲೇರಿಯೊಂಕ ಮೂಲಕ ತರುವಲ್ಲಿ ಲೇಖಕ ಪ್ರಶಾಂತ್ ಬೀಚಿ ಯಶಸ್ವಿಯಾಗಿದ್ದಾರೆ.ಕಾದಂಬರಿಯ ಮುಖಪುಟ ಹೊದಿಕೆ ಒಳಚಿತ್ರಗಳು ಚೆನ್ನಾಗಿದೆ. ಒಳಪುಟದ ಚಿತ್ರಗಳಲ್ಲಿ ಇನ್ನಷ್ಟು ವೈವಿಧ್ಯತೆ ಯನ್ನು ಮನ ಬಯಸುತ್ತದೆ. ಅರ್ಥಪೂರ್ಣ ಕಾದಂಬರಿಗಳನ್ನು, ಯುವ ಪ್ರತಿಭೆಗಳನ್ನು ಪೋಷಿಸುತ್ತಿರುವ ಛಂದಪುಸ್ತಕ ಪ್ರಕಾಶನದ ಲೇಖಕ ವಸುಧೇಂದ್ರ ಅವರ ಸ್ಮರಿಸದೇ ಮುಂದಿನ ಸಾಲುಗಳನ್ನು ಬರೆಯುವುದರಲ್ಲಿ ಅರ್ಥವಿಲ್ಲ. ವಸುಧೇಂದ್ರ ಅವರು ತಮ್ಮ ಕೈಂಕರ್ಯವನ್ನು ಹೀಗೆ ಮುಂದುವರೆಸಲಿ ಎಂಬುದು ನನ್ನ ಹಾರೈಕೆ.
ಕನ್ನಡದಲ್ಲಿ ಅನ್ಯ ದೇಶೀಯ ಸಂಸ್ಕೃತಿಯ ಕಥಾ ಚಿತ್ರಣಗಳನ್ನು ನಿರಂಜನರ ಮೃತ್ಯುಂಜಯ, ದೇಜಗೌ ಅವರ ಅನ್ನಾ ಕರೆನಿನಾ ಮೂಲಕ ಪರಿಚಯ ಮಾಡಿಕೊಂಡ ಓದುಗರು ಇದನ್ನೂ ಒಪ್ಪಿಕೊಳ್ಳದೇ ಇರಲು ಕಾರಣಗಳಿಲ್ಲ. ಲೇರಿಯೊಂಕನ ಪಾತ್ರ ಕಾರಂತಜ್ಜನ ಕುಡಿಯರ ಕೂಸು, ಕುವೆಂಪು ಕಾದಂಬರಿಯ ಪಾತ್ರಗಳೊಡನೆ ಹೋಲಿಸಿಕೊಂಡು ಓದಲು ಶುರುಮಾಡಿದರೆ ಸಮಯ ಮುಗಿಯುವುದು ಗೊತ್ತೇ ಆಗುವುದಿಲ್ಲ. ಅಷ್ಟರಮಟ್ಟಿಗೆ ಕಾದಂಬರಿ ಓದುಗರನ್ನು ಹಿಡಿದು ಇಟ್ಟುಕೊಳ್ಳುವ ಶಕ್ತಿ ಹೊಂದಿದೆ ಎನ್ನಬಹುದು. ಇನ್ನೊಂದು ವಿಷಯ ಕನ್ನಡ ಪ್ರತಿ ಓದುತ್ತಿದ್ದಂತೆ ಲೇಖಕ ಹೆನ್ರಿ ಓಲೆ ಕುಲೇಟ್ ಮೂಲ ಕೃತಿಯಲ್ಲಿ ಹೇಗೆ ಕಥೆ ಕಟ್ಟಿರಬಹುದು ಎಂಬಆಸಕ್ತಿ ಮೂಡುತ್ತದೆ. ಅಷ್ಟರ ಮಟ್ಟಿಗೆ ಓದುಗರ ಆಸಕ್ತಿ ಕೆರಳಿಸಿ ಓದುಗ ವರ್ಗವನ್ನು ಬೆಳೆಸುತ್ತದೆ ಈ ಕೃತಿ.
ಕಗ್ಗಾಡಿನಿಂದ ಕಲಿಕೆಯ ನಾಡಿಗೆ
ಕಥೆಯ ಆರಂಭದಲ್ಲಿ ಲೇರಿಯೊಂಕನ ಬಾಲ್ಯದ ಆಟಗಳು, ಜಾನುವಾರುಗಳ ಮೇಲಿನ ಪ್ರೀತಿ, ತಂದೆಯಂತೆ ಧೀರನಾಗಿ ಬಾಳಬೇಕೆಂಬ ಆಸೆ, ತಂದೆ ಸೇರಿದಂತೆ ಹಳ್ಳಿಗರಲ್ಲಿ ಉಂಟಾಗಿರುವ ಹೊಸ ಆತಂಕ ಸೊಗಸಾಗಿ ಮೂಡಿದೆ. ಕಥೆ ಆರಂಭದಲ್ಲಿ ಅಥವಾ ಕಾದಂಬರಿ ಆರಂಭಕ್ಕೆ ಮುನ್ನ ಮಾಸಯಿ ಜನಾಂಗದ ಬಗ್ಗೆ ಸ್ಥೂಲವಾಗಿ ವಿವರ ನೀಡಬಹುದಿತ್ತು. ಅಥವಾ ಕಥೆಯ ಮಧ್ಯೆ ಅಲ್ಲಲ್ಲಿ ಟಿಪ್ಪಣಿಗಳನ್ನು ನೀಡಿ ಓದುಗರ ಹಸಿವು ತಣಿಸಬಹುದಿತ್ತು. ಇರಲಿ, ಅದರಿಂದ ಕಥೆಗೆ ಹೆಚ್ಚಿನ ಮೌಲ್ಯ ಬರುತ್ತಿತ್ತು ಅಷ್ಟೇ. ನಾಡಿನಿಂದ ಬಂದ ಬಿಳಿಯರ ಜೊತೆಗೆ ತಮ್ಮ ಮಕ್ಕಳನ್ನು ಕಳಿಸಲು ಒಪ್ಪದ ಹಳ್ಳಿಗರು, ದೂರದಿಂದ ಬಂದ ಬಿಳಿಯರನ್ನು ಕುತೂಹಲದಿಂದ, ಆತಂಕದಿಂದ ನೋಡುವ ಹೆಂಗಸರು, ಮಕ್ಕಳು. ಆತಂಕಕ್ಕೀಡಾದ ಹಳ್ಳಿಯ ಮುಖಂಡರ ಚಿತ್ರಣ ಅಂದಿನ ಕಾಲಘಟ್ಟಕ್ಕೆ, ಅಲ್ಲಿನ ಪರಿಸರ ಚಿತ್ರಣ ನೀಡಿದರೂ ಅದು ಪ್ರಸ್ತುತ ಕಾಲಘಟ್ಟದ ಸಮಾಜದ ವ್ಯವಸ್ಥೆಯಿಂದ ಹೊರತಾಗಿಲ್ಲ ಎನ್ನಬಹುದು.
ಒಲ್ಲದ ಮನಸ್ಸಿನಿಂದ ಮಕ್ಕಳು ದೂರಾಗುವ ದೃಶ್ಯ, ಹೊಸ ನಾಡಿಗೆ, ಹೊಸತನವನ್ನು ಹುಡುಕಿಕೊಂಡು ಹೊರಟ ಲೇರಿಯೊಂಕ ಹಾಗೂ ಅವರ ಗೆಳೆಯರು, ಎರಡು ವಿಭಿನ್ನ ಪರಿಸರ ಹಾಗೂ ಸಂಸ್ಕೃತಿಯ ಪರಿಚಯಕ್ಕೆ ಮುನ್ನುಡಿ ಬರೆಯುತ್ತದೆ. ಹೊಸ ಪರಿಸರದಲ್ಲಿ ಕಾಡಿನಿಂದ ಬಂದ ಮಕ್ಕಳು ಅಕ್ಷರಭ್ಯಾಸ ಮಾಡುವುದು, ಶಾಲೆಯಲ್ಲಿನ ಶಿಸ್ತು, ವಿಭಿನ್ನ ಸಂಸ್ಕಾರವನ್ನು ಕಲಿಯಲು ಹೊರಟ ಮಾಸಯಿಗಳ ಪಾಡು ಓದುಗರನ್ನು ತಮ್ಮ ಬಾಲ್ಯದೆಡೆಗೆ ಕರೆದೊಯ್ಯುತ್ತದೆ.
ಆದರೆ, ಶಾಲಾ ಪರಿಸರಕ್ಕೆ ಹೊಂದಿಕೊಳ್ಳದೆ ತನ್ನೂರಿಗೆ ಓಡಿಹೋಗುವ ಲೇರಿಯೊಂಕನ ಆಪ್ತ ಸ್ನೇಹಿತ ಲೆಕಕೆನಿ, ಹಳ್ಳಿಯಿಂದ ತನ್ನ ಮಕ್ಕಳನ್ನು ನೋಡಲು ಬರುವ ಅಪ್ಪಂದಿರು , ರಜಾ ದಿನಕ್ಕೆ ಕಾಯುವ ಎಳೆಯ ಮನಸ್ಸುಗಳು ಸುಂದರ ಚಿತ್ರಣವನ್ನು ಕಣ್ಮುಂದೆ ತರುತ್ತದೆ. ಆಸೆಕಂಗಳನ್ನು ಹೊತ್ತು ರಜೆಯಲ್ಲಿ ತನ್ನ ಹೆತ್ತವರನ್ನು ಕಾಣಲು ಹೊರಟ ಲೇರಿಯೊಂಕನಿಗೆ ತನ್ನವರು ಊರು ಬದಲಿಸಿರುವುದು ತಿಳಿದಾಗ ಉಂಟಾಗುವ ಅವ್ಯಕ್ತ ಭಾವನೆ. ದೂರದ ಊರಿನಲ್ಲಿರುವ ತನ್ನವರನ್ನು ಕಾಣುವ ತವಕದಿಂದ ಕಾನನದ ಹಾದಿಯಲ್ಲಿ ಏಕಾಂಗಿಯಲ್ಲಿ ಸಂಚರಿಸಿ, ರಾತ್ರಿಯೆಲ್ಲಾ ಆತಂಕದಿಂದ ಮರದ ಮೇಲೆ ಕಳೆಯುವುದು ರೋಚಕವಾಗಿದೆ ಮೂಡಿದೆ.
ಬಹು ದಿನಗಳ ಮೇಲೆ ತನ್ನವರನ್ನು ಕಂಡಾಗ ಉಂಟಾದ ಹರ್ಷ, ತನ್ನ ಓರಿಗೆಯವರು, ಹಳ್ಳಿಗರು ತನ್ನನ್ನು ಹೊಸಬನಂತೆ ಕಾಣುವುದು. ತನ್ನ ನಡೆ ನುಡಿಯನ್ನು ಅಳೆದುನೋಡುವುದು. ಶಾಲೆಯಿಂದ ಓಡಿ ಬಂದಿದ್ದ ಗೆಳೆಯ ಲೆಕಕೆನಿ ಮತ್ತೆ ಸಂಧಿಸಿ ಶಾಲೆಯ ಬಗ್ಗೆ ಭಿನ್ನ ಅಭಿಪ್ರಾಯ ಮಂಡಿಸುವುದು ಎಲ್ಲಾ ಲೇರಿಯೊಂಕನನ್ನು ಕೆಲಕಾಲ ಶಾಲಾ ಪರಿಸರದಿಂದ ದೂರಾಗಿಸುತ್ತದೆ. ಎಂದಿನಂತೆ ತನ್ನ ತಾಯಿಯ ಆರೈಕೆಯ ಸವಿ ಉಣ್ಣುತ್ತಾ,ತಂದೆಯೊಡನೆ ವಿಧೇಯನಾಗಿ ಮುಂಜಾನೆಯ ವಿಹಾರಕ್ಕೆ ಹೋಗುತ್ತಾ, ಮೆಚ್ಚಿನ ಜಾನುವಾರುಗಳನ್ನು ಮುದ್ದಿಸುತ್ತಾ, ಇಷ್ಟವಾದ ಖಾದ್ಯಗಳನ್ನು ಮೆಲ್ಲುತ್ತಾ ಸಂತಸದಲ್ಲಿದ್ದ ಲೇರಿಯೊಂಕನಿಗೆ ಶಾಲೆಗೆ ಹಿಂದುರುಗುವುದು ಇನ್ನು ಕಷ್ಟಸಾಧ್ಯ ಎಂಬ ಹೆತ್ತವರ ಮಾತುಗಳು ಬಿಸಿತುಪ್ಪವಾಗಿ ಪರಿಣಮಿಸುತ್ತದೆ.
ದೂರದ ತನ್ನ ಮಾವನ ಊರಾದ ಅರುಷಗೆ ಹೊರಡಲು ಒಲ್ಲದ ಮನಸ್ಸಿನಿಂದ ಸಿದ್ಧನಾದರೂ, ಮಾಸಯಿ ಸಂಸ್ಕೃತಿಯ ಪರಿಪಾಲನೆ, ಹೆತ್ತವರ ಆಜ್ಞೆಯನ್ನು ಮೀರದಂತೆ ನಡೆಯುವ ಹೊಣೆಹೊತ್ತ ಲೇರಿಯೊಂಕನ ಕಂಗಳಲ್ಲಿ ಓದುವ ಆಸೆ ಇನ್ನು ಜೀವಂತವಾಗಿರುತ್ತದೆ. ಇಲ್ಲಿ ತಂದೆ ಮಗನ ಸಂವಾದ ಚುಟುಕಾಗಿ ಆಕರ್ಷಣೀಯವಾಗಿದೆ. ಹೀಗೆ ಹೊರಟು ನಿಂತ ಲೇರಿಯೊಂಕನ ಜೊತೆಗೆ ಲೆಕಕೆನಿ ಕೂಡ ಸೇರಿಕೊಳ್ಳುವುದು ವಿಶೇಷ. ಮುಂದೆ, ಪೆಲ್ಲೊ ಎಂಬ ಹಳ್ಳಿಗನೊಡನೆ ಈ ಇಬ್ಬರು ಗೆಳೆಯರು ಅರುಷದ ಕಡೆಗೆ ಹೊರಡುತ್ತಾರೆ. ಹರುಷವನ್ನು ಹುಡುಕಿಕೊಂಡು ಅರುಷದೆಡೆಗೆ ಹೊರಟ ಲೇರಿಯೊಂಕನಿಗೆ ಬರೀ ಆತಂಕದ ಪರಿಸ್ಥಿತಿಯೇ ಎದುರಾಗುತ್ತದೆ.
ಮಾರ್ಗ ಮಧ್ಯದಲ್ಲಿ ದಣಿವಾರಿಸಿಕೊಳ್ಳಲು ಉಳಿದುಕೊಂಡ ಊರಲ್ಲಿ ಲೇರಿಯೊಂಕನ ಪಯಣದ ಗುರಿಯನ್ನು ಕೇಳಿದ ಹಳ್ಳಿಗರು, ವಿದ್ಯೆಯಿಂದ ಆಗುವ ಪ್ರಯೋಜನದ ಬಗ್ಗೆ ಪ್ರಶ್ನಿಸಿದಾಗ, ಲೇರಿಯೊಂಕ ಕೊಡುವ ಉತ್ತರ..ಹಳ್ಳಿಗರ ದೃಷ್ಟಿಯಲ್ಲಿ ವಿದ್ಯೆಯ ಬಗ್ಗೆ ಇರುವ ಅಭಿಪ್ರಾಯ ಅದಕ್ಕೆ ಲೇರಿಯೊಂಕ ಕೊಡುವ ಸಮರ್ಥನೆ ಇಂದಿನ ಕಾಲಕ್ಕೂ ಕೇಳಿಕೊಳ್ಳಬಹುದಾದಂಥ ಪ್ರಶ್ನೆಯಾಗಿದೆ. ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವುದು ಮುಖ್ಯ. ಅವರು ಕಲಿಸಿಕೊಟ್ಟ ವಿದ್ಯೆ ಜೀವನೋಪಾಯಕ್ಕೆ ಸಾಕು ಇದರಿಂದ ನಮ್ಮ ಸಂಸ್ಕೃತಿ, ಪರಿಸರಕ್ಕೆ ಕೆಡಕಾಗಿಲ್ಲ ಎಂದ ಮೇಲೆ ಬೇರೆಡೆ ಹೋಗಿ ಕಲಿಯುವಂಥದ್ದು ಏನಿದೆ ಎಂದು ಹಳ್ಳಿಗರು ಪ್ರಶ್ನಿಸುತ್ತಿರುವುದು ಲೇರಿಯೊಂಕನನ್ನೇ ಆದರೂ ಅದು ಎಲ್ಲಾ ಓದುಗರಿಗೆ ತಟ್ಟುತ್ತದೆ. ನಾನು ಓದುವ ಓದು ನನ್ನ ಮುಂದಿನ ಜೀವನಕ್ಕೆ ಅಡಿಪಾಯವಾಗಬಲ್ಲುದೇ ಎಂಬ ವಿಚಾರ ನಮ್ಮಲ್ಲಿ ಅನೇಕರಿಗೆ ಇಲ್ಲದಿರುವುದು ಇದಕ್ಕೆ ಕಾರಣವಿರಬಹುದು.
ಮುಂದಿನ ಹಲವು ಸಂದಿಗ್ಧಗಳನ್ನು ಎದುರಿಸುವ ಲೇರಿಯೊಂಕ, ಸ್ನೇಹಿತ ಲೆಕಕೆನಿಗೆ ಹಾವು ಕಚ್ಚಿದಾಗ, ಪೆಲ್ಲೋ ಮಾಡುವ ಉಪಾಯ, ಔಷಧೋಪಚಾರಗಳನ್ನು ಬೆರಗುಗಣ್ಣಿನಿಂದ ನೋಡುವ ಲೇರಿಯೊಂಕ, ಕಡೆಗೆ, ಪೆಲ್ಲೊವಿನೊಡನೆ ಜಗಳವಾಗಿ ಅವರು ಇವರಿಬ್ಬರಿಂದ ದೂರಾದಾಗ ಮೂಡುವ ಆತಂಕದ ಕ್ಷಣಗಳು, ಅದರಿಂದ ದೂರಗಳು ಲೇರಿಯೊಂಕ ಮೆರೆಯುವ ಸಮಯಪ್ರಜ್ಞೆ ಉಲ್ಲೇಖನೀಯ. ಅಜ್ಞಾತ ಗೆಳೆಯರ ಸಹಾಯದಿಂದ ಅಪಾಯದಿಂದ ಪಾರಾಗಿ ಮತ್ತೊಂದು ಹಳ್ಳಿಯನ್ನು ಸೇರುವ ಲೇರಿಯೊಂಕ ಹಾಗೂ ಲೆಕಕೆನಿ , ಪರಸ್ಪರ ಸಹಾಯದ ಅಗತ್ಯವನ್ನು ಮನಗಾಣುತ್ತಾರೆ. ಅಜ್ಞಾತ ಗೆಳೆಯ ಸೆಲೆಲೊ, ಸಾಯ ನ ಊರಿನ ಜನರು ಈ ನೂತನ ಅತಿಥಿಗಳನ್ನು ನೋಡಿಕೊಳ್ಳುವ ಬಗೆ , ಅವರ ಆದರಾತಿಥ್ಯ ನಾಗರಿಕ ಸಮಾಜದಲ್ಲಿ ಕಾಣುವುದು ಅಪರೂಪ. ಊರಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದ ಲೇರಿಯೊಂಕನಿಗೆ ತನ್ನ ಹೆಸರಿನವನೊಬ್ಬ ಈ ಹಳ್ಳಿಯಲ್ಲಿ ಇದ್ದ. ಶಾಲೆಗೆ ಎಂದು ಹೋದವನು ಹಿಂದುರುಗಲಿಲ್ಲ ಎಂಬ ವಿಷಯ ತಿಳಿಯುತ್ತದೆ.
ಆದರೆ, ಲೇರಿಯೊಂಕ ಹೆಸರಿನ ಯುವಕ ಮತ್ತೆ ಊರಿಗೆ ಹಿಂದುರುಗಿದಾಗಿನ ವಾತಾವರಣ. ಬಾಲಕ ಲೇರಿಯೊಂಕನೊಂದಿಗೆ ಹಿರಿಯ ಲೇರಿಯೊಂಕನ ಮಾತುಕತೆ ವಿದ್ಯೆಯ ಮಹತ್ವದ ಅರಿವು ರಸವತ್ತಾಗಿದೆ.ಕೊನೆಗೆ ಲೀವಿಂಗ್ ಸ್ಟೋನ್ ಲೇರಿಯೊಂಕನ ಸಹಾಯದಿಂದ ಅರುಷವನ್ನು ಕೊನೆಗೂ ತಲುಪುವ ಲೇರಿಯೊಂಕ ತನ್ನ ಮಾವನನ್ನು ಸಂಧಿಸಿ, ಶಾಲೆಯನ್ನು ಸೇರುತ್ತಾನೆ. ಲೆಕಕೆನಿ ಪುನಃ ಶಾಲೆಯಿಂದ ದೂರ ಉಳಿಯುತ್ತಾನೆ. ಮಧ್ಯೆ ಪೆಲ್ಲೊ ಮತ್ತೆ ಹುಡುಗರ ಮೇಲೆ ಕೋಪದಿಂದ ದಾಳಿ ಮಾಡುವುದೂ ನಡೆದು ಹೋಗುತ್ತದೆ. ಒಂದೆಡೆ ಸಣ್ಣ ಕಾರಣಕ್ಕೆ ತನ್ನೂರಿನ ಹುಡುಗರ ವಿರುದ್ಧವಾದ ಪೆಲ್ಲೊ, ಇನ್ನೊಂದೆಡೆ ಪರೋಪಕಾರ ಮಾಡಿದರೆ ನನಗೆ ಮುಕ್ತಿ ಎನ್ನುವ ಅಜ್ಞಾತ ಗೆಳೆಯ. ಎರಡು ವೈರುಧ್ಯದ ಪರಿಚಯ ಒಂದೇ ಪರಿಸರದಲ್ಲಿ ಕಾಣ ಸಿಗುತ್ತದೆ.
ಮಾರ್ಗ ಮಧ್ಯೆಯಲ್ಲಿ ಮತ್ತೆ ಸಿಗುವ ಪರೋಪಕಾರಿ ಸೆಲೆಲೊ ಹಾಗೂ ಸಾವಿನಂಚಿನಲ್ಲಿರುವ ಮಾವನ ಅಕಸ್ಮಾತ್ ಭೇಟಿ ಅರುಷ ಸೇರಿದರೂ ಹರುಷ ಕಾಣದ ಲೇರಿಯೊಂಕ. ವಿದ್ಯೆ ಕಲಿಯದ ಸೆಲೆಲೊ ನಾಗರಿಕ ಸಮಾಜದಲ್ಲಿ ವ್ಯವಹರಿಸುವ ರೀತಿ ಕಂಡು ಅಚ್ಚರಿಪಡುವ ಲೇರಿಯೊಂಕ, ಶಾಲೆಯಿಂದ ಹೊರಗಡೆ ವ್ಯವಹಾರ ವಿದ್ಯೆಯನ್ನು ಕಲಿಯಲಾರಂಭಿಸುತ್ತಾನೆ. ತನ್ನ ಮಾವನ ಅಕಾಲಿಕ ಮರಣದಿಂದ ಧೃತಿಗೆಟ್ಟರೂ ಆಗಾಗಲೇ ಪ್ರಬುದ್ಧ ವಿದ್ಯಾರ್ಥಿಯಾಗುವತ್ತ ಹೆಜ್ಜೆ ಇಟ್ಟಿದ್ದ ಲೇರಿಯೊಂಕ ಕಷ್ಟದಿಂದ ಆದರೆ ಇಷ್ಟದಿಂದ ನಾಗರಿಕ ಸಮಾಜದ ಪಾಠಗಳನ್ನು ಗ್ರಹಿಸುತ್ತಾನೆ. ಮುಂದೆ ಹಣ ವಿಲ್ಲದೆ ಶಾಲೆಯಲ್ಲಿ ಮುಂದುವರೆಯಲು ಸಾಧ್ಯವಿಲ್ಲದಂತಾದಾಗ ನೆರವಿಗೆ ಬರುವ ಹಳೆ ಪ್ರಿನ್ಸಿಪಾಲ್ ಹಾಗೂ ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೊರಗಿನಿಂದಲೇ ಬೆಂಬಲಿಗನಾಗಿ ಬೆಳೆಯ ತೊಡಗುತ್ತಾನೆ. ಕೊನೆಗೆ ಗೆಳೆಯ ಹಿರಿಯ ಲೇರಿಯೊಂಕನೊಡನೆ ಪತ್ರ ವ್ಯವಹಾರ, ತನ್ನ ಹೆತ್ತವರನ್ನು ಪುನಃ ಭೇಟಿ ಮಾಡುವಲ್ಲಿ ಕಥೆ ಒಂದು ರೀತಿಯ ಅಂತ್ಯ ಕಾಣುತ್ತದೆ. ವಿದ್ಯೆಯನ್ನು ಕಲಿತ ಮಗ ಹಾಗೂ ಆತನ ವಿದ್ಯಾರ್ಜನೆಯ ಹಾದಿಯಲ್ಲಿ ನೆರವಿಗೆ ಬಂದವರಿಗೆ ಲೇರಿಯೊಂಕನ ಹೆತ್ತವರು ಹಾರೈಸಿ, ಮಗನ ಇಂದಿನ ಸ್ಥಿತಿಯಲ್ಲಿ ಒಪ್ಪಿಕೊಳ್ಳುವುದು ಒಳ್ಳೆಯ ಮುಕ್ತಾಯವಾಗಿದೆ.
ಕೊನೆಯ ದಾಗಿ
ಒಬ್ಬ ಹೇಗೆ ಎರಡು ವಿಭಿನ್ನ ಪ್ರಪಂಚದಲ್ಲಿ ಬದುಕಲು ಸಾಧ್ಯ? ಓದಿ ವಿದ್ಯಾವಂತನಾಗಿ ಅದೇ ಸಮಯದಲ್ಲಿ ಅನಾಗರಿಕರ ಮಧ್ಯೆ ಅವರಂತೆ ಬಾಳುವುದು ಹೇಗೆ ಎಂದು ಲಿವಿಂಗ್ ಸ್ಟೋನ್ ಗೆ ಲೇರಿಯೊಂಕ ಕೇಳುವ ಪ್ರಶ್ನೆ
ಭರ್ಜಿ ಹಾಗೂ ಪುಸ್ತಕವನ್ನು ಏಕಕಾಲಕ್ಕೆ ಧರಿಸಲು ಸಾಧ್ಯವಿಲ್ಲ ಎಂದ ಲೇರಿಯೊಂಕನ ತಂದೆ ಮಾತುಗಳು
ವಿದ್ಯೆಯ ಪ್ರಯೋಜನದ ಬಗ್ಗೆ ಹಳ್ಳಿಗರು ಕೇಳುವ ಪ್ರಶ್ನೆ
ತಮ್ಮ ಮಕ್ಕಳನ್ನು ಬಿಳಿಯರೊಡನೆ ಕಳುಹಿಸುವಾಗ ಹಳ್ಳಿಗರು ಅದರಲ್ಲೂ ಲೇರಿಯೊಂಕನ ತಂದೆ ಹೇಳುವ , ನನಗೆ ವಯಸ್ಸಾಗಿದೆ ಈ ಸಮಯದಲ್ಲಿ ನನ್ನ ಮಗನನ್ನು ದೂರಾಗಿಸುವುದು ಸರಿಯೆ?
ಸಹ ಪಯಣಿಗನ ಜೊತೆ ವಿದ್ಯೆ ಕಲಿತ ಲೇರಿಯೊಂಕ ಕೇಳುವ ಪ್ರಶ್ನೆಗಳು..ಅದಕ್ಕೆ ಆತ ಕೊಡುವ ಉತ್ತರ 'ನಾನು ಕರಾವಳಿ ನಾಡಿನಿಂದ ಬಂದಿದ್ದೇನೆ. ನಿಮ್ಮ ಮಾಸಯಿ ಭೂಮಿಯಿಂದ ದೂರ ಆದರೂ ನಾವು ಸಹೋದರರು. ಏಕೆಂದರೆ ನಾವಿಬ್ಬರೂ ಕೀನ್ಯಾಗೆ ಸೇರಿದವರು' ಎಂಬ ಆರ್ಥಪೂರ್ಣ ಮಾತುಗಳು .
ಕಡೆಗೆ ಸ್ವಾತಂತ್ರದ ಪ್ರಶ್ನೆ ಅದಕ್ಕೆ ಯುವ ಜನಾಂಗ ಕಂಡು ಕೊಳ್ಳುವ ಏಕತೆಯ ಮಾರ್ಗ ಮತ್ತೆ ಮತ್ತೆ ಕಾಡದೇ ಬಿಡದು. ಲೇರಿಯೊಂಕ ಕಾದಂಬರಿ ಓದುವುದರಿಂದ 'ಕಾಡಿನ ಹುಡುಗನ ಓದಿನ ಹಾದಿ' ಅಷ್ಟೇ ಅಲ್ಲ ಕವಲು ಹಾದಿಯಲ್ಲಿರುವ ಇಂದಿನ ಯುವ ಜನಾಂಗಕ್ಕೆ ಅನೇಕ ಚಿಂತನಾತೀತ ಪ್ರಶ್ನೆಗಳನ್ನು ಮೂಡಿಸುವುದು ಖಂಡಿತಾ.
ಸೂಚನೆ: ಪುಸ್ತಕದ ಪ್ರತಿಗಳು ಅಂಕಿತಾ, ಸಪ್ನಾ ಮುಂತಾದ ಪ್ರಮುಖ ಮಳಿಗೆಗಳಲ್ಲಿ ಲಭ್ಯ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವಸುಧೇಂದ್ರ I-004, ಮಂತ್ರಿ ಪ್ಯಾರಡೈಸ್ ಬನ್ನೇರುಘಟ್ಟ ರಸ್ತೆ ಬೆಂಗಳೂರು - 560 076.
ಈ ಮೇಲ್ : [email protected]ಲೇಖಕರ ಈ ಮೇಲ್ :[email protected]
-
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
NHAI ನಿಂದ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಅವಕಾಶ: ತಿಂಗಳಿಗೆ ₹20,000 ಸ್ಟೈಪೆಂಡ್, ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ ದಿನ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್












Click it and Unblock the Notifications