ಶಿಡ್ಲಘಟ್ಟದ ರೈಲ್ ಕಾರ್ ದಿನಗಳು, ಕೆ ವಿಶ್ವನಾಥ್ ರ 'ಸಿರಿವೆನ್ನೆಲ'
ಮೂವತ್ತೊಂದು ವರ್ಷದ ಹಿಂದೆ ಬಿಡುಗಡೆಯಾದ ತೆಲುಗು ಚಿತ್ರ ಸಿರಿವೆನ್ನಲದ ನೆಪದಲ್ಲಿ ಶಿಡ್ಲಘಟ್ಟದಲ್ಲಿ ಸಂಚರಿಸುತ್ತಿದ್ದ ರೈಲ್ ಕಾರ್ ದಿನಗಳನ್ನು ಹಾಗೂ ಅದು ಹೇಗೆ ಜನ ಮಾನಸದಲ್ಲಿ ಇಂದಿಗೂ ಉಳಿದಿದೆ ಎಂಬುದನ್ನು ಇಲ್ಲಿ ಮತ್ತೊಮ್ಮೆ ಸ್ಮರಿಸಿದ್ದಾರೆ ಲೇಖಕ-ಪತ್ರಕರ್ತ-ಛಾಯಾಗ್ರಾಹಕ ಡಿಜಿ ಮಲ್ಲಿಕಾರ್ಜುನ.
****
ಸೂಸ್ಯಾವಾ ಟ್ರೇನ್, ಬುಜ್ಜಿಗಾ ಎಲಾ ವುಂದೋ?'(ನೋಡಿದ್ಯಾ ರೈಲನ್ನು, ಎಷ್ಟು ಮುದ್ದಾಗಿದೆ?')... ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ರೈಲು ನಿಲ್ದಾಣದಲ್ಲಿ ಆಗ ಇದ್ದ ಪುಟ್ಟ ರೈಲ್ ಕಾರ್' ತೋರಿಸಿ ಹೇಳುವ ಈ ಸಂಭಾಷಣೆ 1986ರ ಕೆ.ವಿಶ್ವನಾಥ್ ನಿರ್ದೇಶನದ, ಪ್ರಶಸ್ತಿ ವಿಜೇತ ಸಿರಿವೆನ್ನೆಲ' ಚಲನಚಿತ್ರದ್ದು.
ನ್ಯಾರೋ ಗೇಜ್ ರೈಲು ಪಟ್ಟೆಗಳ ಮೇಲೆ ಪುಟ್ಟ ಮೂರು ಬೋಗಿಗಳ ಎರಡು ರೈಲ್ ಕಾರುಗಳು ಆಗ ಯಲಹಂಕ ಮತ್ತು ಬಂಗಾರಪೇಟೆಯ ನಡುವೆ ಸಂಚರಿಸುತ್ತಿದ್ದವು. ಯಲಹಂಕ, ದೇವನಹಳ್ಳಿ, ನಂದಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಕೋಲಾರ ಮತ್ತು ಬಂಗಾರಪೇಟೆ ಈ ರೈಲಿನ ಮಾರ್ಗವಾಗಿತ್ತು. ಚಿಂತಾಮಣಿ ರೈಲು ನಿಲ್ದಾಣದಲ್ಲಿ ಕ್ರಾಸಿಂಗ್ ಆಗುತ್ತಿದ್ದವು.
ಶಂಕರ್ ನಾಗ್ ಕನಸಿನ ನಂದಿ ಬೆಟ್ಟ ರೋಪ್ ವೇ ಸಾಕಾರಕ್ಕೆ ಮುಂದಾದ ಸರಕಾರ
ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ 1918ರಲ್ಲಿ ರೂಪಿಸಿದ್ದ ನ್ಯಾರೋ ಗೇಜ್ ಸ್ಟೀಮ್ ಎಂಜಿನ್ನಿನ ರೈಲು ಅರವತ್ತರ ದಶಕದ ಕೊನೆಯಲ್ಲಿ ನಿಂತಿತು. ಜನರ ಒತ್ತಾಯದ ಮೇರೆಗೆ ಆಗಿನ ಕೇಂದ್ರ ರೈಲ್ವೆ ಸಚಿವ ಟಿ.ಎ.ಪೈ ಯಲಹಂಕ ಮತ್ತು ಬಂಗಾರಪೇಟೆಯ ನಡುವೆ ರೈಲ್ ಕಾರ್ ಪ್ರಾರಂಭಿಸಿದ್ದರು.
ಮುದ್ದಾಗಿ, ಪುಟ್ಟದಾಗಿದ್ದ ಈ ರೈಲಿನಲ್ಲಿ ಓಡಾಡಿದವರು ಮತ್ತು ಅದಕ್ಕೂ ಹಿಂದಿನ ಸ್ಟೀಮ್ ಎಂಜಿನ್ನಿನ ರೈಲಿನಲ್ಲಿ ಓಡಾಡಿದ ಹಿರಿಯರು ಈಗಲೂ ಗತದಿನಗಳನ್ನು ನೆನೆಯುತ್ತಾರೆ.
ಅಂದಹಾಗೆ, ಈ ರೈಲುಕಾರ್ ಜಾನಪದ ಹುಟ್ಟಿಗೂ ಕಾರಣವಾಗಿತ್ತು.
ಬಂಡೀರಾ ಪೊಗ ಬಂಡೀರಾ
ದೊರಲು ಎಕ್ಕೆ ಪೊಗ ಬಂಡೀರಾ
ಮಲ್ಲನ್ನ ಬೊಗ್ಗೆಸೆ
ಮರಸುಟ್ಟು ಸುಟ್ಟೇಸೆ
ಮಾಲೂರು ಟೇಸನ್ ಲೊ ನಿಲಿಸೇನನನ್ನಾ
ಜಾತೋಡನ್ನ ನೇನು ಜಾತೋಡನ್ನ
ಜಾತೋನಿ ಪೊಗಬಂಡಿ ತೋಲೇನನ್ನ
ಮಲ್ಲನ್ನ ಬೊಗ್ಗೆಸೆ
ಮರಸುಟ್ಟು ಸುಟ್ಟೇಸೆ
ಮಾಲೂರು ಟೇಸನ್ ಲೊ ನಿಲಿಸೇನನನ್ನಾ'
ಈ ಪದ್ಯವನ್ನು ಸಾಸಲು ಚಿನ್ನಮ್ಮ' ಮುಂತಾದ ಕೇಳಿಕೆಗಳಲ್ಲಿ ಬಫೂನನ ಬಾಯಲ್ಲಿ ಕೇಳಬಹುದಾಗಿದೆ.
ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿರುವ ಕೆ.ವಿಶ್ವನಾಥ್ ತೆಲುಗಿನಲ್ಲಿ ಶಂಕರಾಭರಣಂ, ಸ್ವಾತಿಮುತ್ಯಂ, ಶ್ರುತಿಲಯಲು, ಸ್ವಾತಿಕಿರಣಂ, ಸಾಗರ ಸಂಗಮಂ, ಸ್ವರ್ಣಕಮಲಂ, ಶುಭಲೇಖ, ಜೀವನಜ್ಯೋತಿ, ಸ್ವರಾಭಿಷೇಕಮ್ ನಂಥ ಅಪೂರ್ವ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.
'ತೇರಿ ಇಟ್ಮೇಲ್ ಅಸ್ಯವಿರೆಕಾಳ್': ಹಳ್ಳಿಗರ ಪ್ರಶಂಸೆ, ಬಯ್ಗುಳ ಹೀಗೂ ಉಂಟು...
ಕೆ.ವಿಶ್ವನಾಥ್ ನಿರ್ದೇಶನದ ಸಿರಿವೆನ್ನೆಲ' ಚಿತ್ರದಲ್ಲಿ ಸರ್ವದಮನ ಬ್ಯಾನರ್ಜಿ, ಸುಹಾಸಿನಿ, ಮೂನ್ ಮೂನ್ ಸೇನ್ ನಟಿಸಿದ್ದಾರೆ. ಅಂಧ ನಾಯಕ ಮತ್ತು ಮಾತುಬಾರದ ನಾಯಕಿಯ ಪ್ರೇಮ ಕಥೆಯಿದು. ನಾಯಕ ಅಂಧನಾದರೂ ಅದ್ಭುತ ಸಂಗೀತಕಾರ. ನಾಯಕಿಗೆ ಮಾತು ಬಾಅರದಿದ್ದರೂ ಕುಂಚದಲ್ಲಿ ನವರಸಗಳನ್ನು ಬಿಡಿಸಬಲ್ಲಳು.
ಈ ಚಿತ್ರದ ಸಂಗೀತ, ಸಾಹಿತ್ಯಗಳಂತೂ ಅಪಾರ ಜನಮೆಚ್ಚುಗೆಗೆ ಪಾತ್ರವಾದವು. ಸಂಗೀತ ನಿರ್ದೇಶಕ ಕೆ.ಮಹದೇವನ್ ದೈವಸ್ವರೂಪಿಯಾದ ಸಂಗೀತವನ್ನೇ ಉಣಬಡಿಸಿದ್ದಾರೆ. ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಗಳ ಆದಿಭಿಕ್ಷುವು ವಾಡಿ, ವಿಧಾತ ತಲಪುನ ಹಾಡುಗಳ ಸಾಹಿತ್ಯವಂತೋ ಅಮೋಘ.