ಧರ್ಮ ಒಡೆಯಲು ಹೊರಟವರನ್ನು ಬಸವಣ್ಣನೇ ಕ್ಷಮಿಸಲಿ!

ಮಹಾ ಭಾರತದಲ್ಲಿ ಒಂದು ಪ್ರಸಂಗ ಬರುತ್ತದೆ. ಅರ್ಜುನನು ಶಿವನನ್ನು ಕುರಿತು ತಪಸ್ಸು ಮಾಡಿ ಪಾಶುಪತಾಸ್ತ್ರ ಪಡೆದು ಬರುತ್ತಾನೆ. ಆಗ ಭೀಮ ಶಿವನನ್ನು ಒಲಿಸಿಕೊಳ್ಳಲು ಇಷ್ಟು ದಿನಗಳ ತಪಸ್ಸು ಬೇಕೆ? ಎಂದು ಹೇಳಿ, ತನ್ನ ಗದೆಯನ್ನು ಆಕಾಶಕ್ಕೆ ತೂರಿ ತನ್ನ ಎದೆಯನ್ನು ಒಡ್ಡಿ ನಿಂತು ಶಿವನನ್ನು ಪ್ರಾರ್ಥಿಸುತ್ತಾನೆ. ಆ ಗದೆ ಭೀಮನ ಎದೆ ಮುಟ್ಟುವ ಮೊದಲೇ ಶಿವನು ಪ್ರತ್ಯಕ್ಷನಾಗುತ್ತಾನೆ.

ಇಲ್ಲಿ ಭೀಮ ಮತ್ತು ಅರ್ಜುನರು ಶಿವನನ್ನು ಆರಾಧಿಸುವ ರೀತಿ ಬೇರೆಯೇ ಹೊರತು ದೇವರೇ ಬೇರೆ ಅಲ್ಲ!

ಬೇಡರ ಕಣ್ಣಪ್ಪ ಶಿವನನ್ನು ಆರಾಧಿಸುವ ರೀತಿ ಒಂದಾದರೆ, ನಮ್ಮ ಬಸವಾದಿ ಶರಣರು ಶಿವನನ್ನು ಆರಾಧಿಸಿದ ರೀತಿ ಬೇರೆ ಅಷ್ಟೆ. ನೆನಪಿರಲಿ ನಮ್ಮ ಶರಣರು ಶಿವನನ್ನು ಬದಲಿಸಲಿಲ್ಲ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನಾಲ್ಕು ಗೋಡೆಗಳ ಮಧ್ಯೆ ಇದ್ದ ಗಣಪತಿಯನ್ನು ಹೊರಗೆ ತಂದು ಅದನ್ನು ಬೀದಿ-ಬೀದಿಗಳಲ್ಲಿ ಉತ್ಸವವಾಗಿ ಮಾಡುವುದರ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ತಿರುವು ಕೊಟ್ಟವರು ಲೋಕಮಾನ್ಯ ತಿಲಕರು! ಹಾಗೆಂದು ಗಣಪತಿಯನ್ನು ಬೀದಿಯಲ್ಲಿ ಮತ್ತು ಸಾರ್ವಜನಿಕವಾಗಿಯೇ ಪೂಜಿಸಬೇಕೆ? ಎಂದು ಕೇಳಿದರೆ ಏನನ್ನೋಣ? ಅದು ಆ ಸಂದರ್ಭದ ಪೂಜಾ ವಿಧಿಯಷ್ಟೆ.

ಸಿದ್ದರಾಮಯ್ಯನವರ ಸರಕಾರ ಲಿಂಗಾಯತ ಮತ್ತು ವೀರಶೈವವನ್ನು ಬಸವ ತತ್ವದ ಟ್ಯಾಗ್ ಹಾಕಿ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡಿದ್ದು ಕೇಳಿದ ಕೂಡಲೆ ಇಂತಹ ಹತ್ತಾರು ವಿವಿಧ ಮತ್ತು ಭಿನ್ನ ಪೂಜಾ ಪದ್ದತಿಗಳ ಇತಿಹಾಸ ಮತ್ತು ಪರಂಪರೆ ನೆನಪಿಗೆ ಬಂತು.

May Basavanna himself pardon those who divided Lingayats

ಪ್ರತ್ಯೇಕ ಧರ್ಮದ ಬಗ್ಗೆ ವಾದ ಮಾಡುವವರು ಬಸವಣ್ಣನವರು ವೇದ ಆಗಮಗಳನ್ನು ತಿರಸ್ಕರಿಸಿದ್ದರು. ಆದ್ದರಿಂದ ಅವರ ಅನುಯಾಯಿಗಳಾದ ನಾವು ಹಿಂದೂಗಳಲ್ಲ ಎನ್ನುತ್ತಾರೆ. ಅಂತಹವರು ಈ ಕೆಳಗಿನ ಬಸವಣ್ಣನವರ ವಚನಗಳನ್ನು ಉದಾಹರಿಸುತ್ತಾರೆ.

ಓಂ ನಮಃ ಶಿವಾಯಃ ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ;
ಓಂ ನಮಃ ಶಿವಾಯಃ ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ;
ಓಂ ನಮಃ ಶಿವಾಯಃ ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ;
ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ.
ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ!
ಕೂಡಲಸಂಗಮದೇವ ಶ್ವಪಚನ ಮೆರೆದೆಡೆ
ಜಾತಿ ಭೇದವ ಮಾಡಲಮ್ಮವು.

ಓಂ ನಮಃ ಶಿವಾಯಃ ಎಂಬ ಮಂತ್ರವನ್ನು ಮೀರಲು ವೇದಕ್ಕೆ ಸಾಧ್ಯವಾಗಲಿಲ್ಲ. ಶಾಸ್ತ್ರಕ್ಕೂ ಸಾಧ್ಯವಾಗಲಿಲ್ಲ. ತರ್ಕ ಗ್ರಂಥಗಳಿಗೂ ಸಾಧ್ಯವಾಗಲಿಲ್ಲ. ಆದರೂ ಜನ ಮಂತ್ರ ತಂತ್ರಗಳೇ ಏನೆಲ್ಲವೆಂದು ಭ್ರಮೆಗೊಂಡಿದೆ. ಶಿವನಿರುವನ್ನು ಅರಿಯುವ ಜಾಡನು ಮರೆತು ಮಂತ್ರಗಳ ಹಿಂದೆ ಬಿದ್ದಿದೆ ಲೋಕ; ಓಂ ನಮಃ ಶಿವಾಯಃ ಎಂಬ ಮಂತ್ರವನ್ನು ಅರಿಯದೆ.

ಎಂದು ಇಲ್ಲಿ ಮಾತ್ರ ತಂತ್ರಗಳ ಮೂಢನಂಬಿಕೆಗಳ ಹಿಂದೆ ಬಿದ್ದವರನ್ನು ಎಚ್ಚರಿಸುತ್ತಾರೆ. ಬಸವಣ್ಣನ ಇನ್ನೊಂದು ವಚನ ಅವರ ನಿಲುವನ್ನು ಇನ್ನು ಸ್ಪಷ್ಟೀಕರಿಸುತ್ತದೆ.

ವಿಷ್ಣು ಬಲ್ಲಿದನೆಂಬೆನೆ?
ದಶಾವತಾರದಲ್ಲಿ ಭಂಗಬುಟ್ಟುದಕ್ಕೆ ಕಡೆಯಿಲ್ಲ!
ಬ್ರಹ್ಮ ಬಲ್ಲಿದನೆಂಬೆನೆ?
ಶಿರಹೋಗಿ ನಾನಾ ವಿಧಿಯಾದ!
ವೇದ ಬಲ್ಲಿತ್ತೆಂಬೆನೆ?
ನಾನಾ ಮುಖದಲ್ಲಿ ಸ್ತುತಿಯಿಸಿತ್ತಲ್ಲದೆ
ಲಿಂಗದ ಸಿಲುಕಡೆಯ ಕಾಣದು!
ಶಾಸ್ತ್ರ ಬಲ್ಲಿತ್ತೆಂಬೆನೆ? ಶಬ್ದಕ್ರೀ!
ಪುರಾಣ ಬಲ್ಲಿತ್ತೆಂಬೆನೆ? ಪೂರ್ವ ಕ್ರೀ!
ಆಗಮ ಬಲ್ಲಿತ್ತೆಂಬನೆ ವಾಯು ಹೊಂದಿತ್ತು!
ಇದು ಕಾರಣ ಕೂಡಲಸಂಗಮಯ್ಯನೆ ನಿತ್ಯ;
ಉಳಿದ ದೈವವೆಲ್ಲ ಅನಿತ್ಯ ಕಾಣಿಭೋ!

ವಿಷ್ಣು ದಶಾವತಾರಗಳಲ್ಲಿ ಹುಟ್ಟಿ ನಾನಾ ತೊಂದರೆಗಳನ್ನು ಅನುಭವಿಸಿದ. ಬ್ರಹ್ಮನ ಶಿರಹೋಯಿತು. ಮರಳಿ ಪಡೆಯುವ ಶಕ್ತಿಯಿಲ್ಲದೆ ಹತಾಶನಾದ, ವೇದ ನಾನಾ ಮುಖದಲ್ಲಿ ಸ್ತುತಿ ಮಾಡಿತು. ಆದರೆ ಅರಿವಿಗೆ ನಿಲುಕದೆ ಹೋಯಿತು. ಶಾಸ್ತ್ರ ಶಬ್ದದಲ್ಲಿ ಮಾತ್ರ ತನ್ನ ಶಕ್ತಿಯನ್ನು ಪ್ರದರ್ಶಿಸಿತು; ಕ್ರಿಯೆಯಲ್ಲಿ ನಪುಂಸಕವಾಯಿತು. ಪುರಾಣ ಪೂರ್ವಕಾಲದ, ಗತಕಾಲದ ಕತೆಯನ್ನು ಹೇಳಿತೆ ಹೊರತು ಅದು ಸತ್ಯವಾಗಿ ತೋರಿಸುವಲ್ಲಿ ವಿಫಲವಾಯಿತು. ಆಗಮ ಬಲ್ಲಿತೆಂಬಲ್ಲಿ ಅದು ಮಾಯೆಯನ್ನು ಹೊಂದಿತು.

ಬ್ರಹ್ಮ, ವಿಷ್ಣು, ವೇದ, ಆಗಮ, ಶಾಸ್ತ್ರ, ಪುರಾಣಗಳೆಲ್ಲ ಸ್ವರೂಪದ ಅರಿವೆಂಬ ಲಿಂಗಕ್ಕೆ ಸಮವಾಗಲರಿಯವು. ಸ್ವರೂಪದತ್ತ ಮನ ಪಯಣಿಸಲು ಮೇಲಿನವುಗಳು ಸಹಕಾರಿಯಾಗಬಲ್ಲವೇ ಹೊರತು ಸ್ವರೂಪ ಶಕ್ತಿಗೆ ಸಮವಾಗಿ ನಿಲ್ಲಲರಿಯವು.

ಉಳಿದ ದೈವಗಳೆಲ್ಲ ಅನಿತ್ಯ. ಅರಿವೆಂಬ ಸಂಗಮನಾಥನೊಬ್ಬನೆ ನಿತ್ಯ. ಆತನಮುಂದೆ ಆತನೇ ಸೃಷ್ಟಿದ ವೇದ ಆಗಮ ಪುರಾಣ ಶಾಸ್ತ್ರಗಳು ಹೇಗೆ ನಿಲ್ಲಬಲ್ಲವು? ದೇವರೆಂಬ ವೇಷಧಾರಿಗಳೆಲ್ಲ ಆತನಿಗೆ ಆಳೆಂದು ತಿಳಿದು ಸೇವೆ ಮಾಡಿದರೆ ತಪ್ಪದೆ ರಕ್ಷಿಸುವನು ಎಂದು ಬಹಳ ಸ್ಪಷ್ಟವಾಗಿ ದೇವರು ಅಂದರೆ ಶಿವನನ್ನು ತಲುಪುವುದು ಮುಖ್ಯವೇ ಹೊರತು ಮಾರ್ಗಗಳಲ್ಲ ಎಂದು ಸ್ಪಷ್ಟಪಡಿಸುತ್ತಾರೆ.

ಒಂದನ್ನು ನಾವಿಲ್ಲಿ ಗಮನಿಸಬೇಕು ಬಸವಣ್ಣನವರು ಶಿವನನ್ನು ತಿರಸ್ಕರಿಸಲಿಲ್ಲ, ತ್ರೀ ಮೂರ್ತಿಗಳನ್ನು ತಿರಸ್ಕರಿಸಲಿಲ್ಲ, ಅಂದು ಜಾರಿಯಲ್ಲಿದ್ದ ಪೂಜೆಯ ವಿಧಿ ವಿಧಾನಗಳನ್ನು ತಿರಸ್ಕರಿಸಿದರು. ತ್ರೀ ಮೂರ್ತಿಗಳನ್ನು ಆರಾಧಿಸುವ ಹಿಂದೂ ಪರಂಪರೆಯಲ್ಲಿ ಕಾಲಕಾಲಕ್ಕೆ ಉಂಟಾಗಿದ್ದ ಮೂಢನಂಬಿಕೆ ಹಾಗೂ ಸಾಧುವಲ್ಲದ ಆಚಾರ-ವಿಚಾರಗಳನ್ನು ಅನೇಕ ಮಹಾತ್ಮರು ತಮ್ಮದೇ ರೀತಿಯಲ್ಲಿ ಬದಲಾವಣೆಗೆ ಪ್ರಯತ್ನಿಸಿದ್ದಾರೆ.

ಅಂತಹವರಲ್ಲಿ ಬಸವಣ್ಣನವರು ಮೇರು ಪುರುಷರು. ಆದರೆ ಬಸವಣ್ಣನವರು ಬದಲಿಸಿದ ಪೂಜಾ ವಿಧಾನ ಹಾಗೂ ಧರ್ಮ ತತ್ವಗಳನ್ನು ಸರಳವಾಗಿ ಹೇಳಲು ಬಳಸಿಕೊಂಡ ವಚನ ಸಾಹಿತ್ಯವನ್ನು ಉಲ್ಲೇಖಿಸಿ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಹೊರಟವರನ್ನು ಆ ಬಸವಣ್ಣ ಕ್ಷಮಿಸಲಿ.

ಮತ ಗಳಿಕೆಯ ಕ್ಷುಲ್ಲಕ ಹೋರಾಟದಲ್ಲಿ ಇರುವವರು ಮಾಡುತ್ತಿರುವುದನ್ನು ನೋಡಿದಾಗ ಬಸವಣ್ಣನ ಈ ವಚನ ನೆನಪಾಗುತ್ತದೆ.

ಕೂಸುಳ್ಳಸೊಳೆ ಧನದಾಸೆಗೆ ಒತ್ತೆಯ ಕೆಂಡಡೆ
ಕೂಸಿಂಗಲ್ಲ; ಭೊಜಗಂಗಲ್ಲ
ಕೂಸನೊಮ್ಮೆ ಸಂತೈಸುವಳು;ಬೊಜಗನನೊಮ್ಮೆ ನೆರೆವಳು.
ಧನದಾಸೆ ಬಿಡದು ಕೂಡಲಸಂಗಮದೇವಾ!

ವಿಟ ವೇಶ್ಯೆಯೊಂದಿಗೆ ಸುಖಿಸಲು ಬಂದಿದ್ದಾನೆ. ಕೂಸು ಕರುಳು ಕಿತ್ತುವಂತೆ ರೋಧಿಸುತ್ತಲಿದೆ. ವೇಶ್ಯೆಗೆ ಧನದ ಮೇಲೆ ಆಸೆ, ಕೂಸಿನ ಮೇಲೆ ಕರುಣೆ! ವಿಟನೊಮ್ಮೆ ನೆರೆವಳು; ಕೂಸನೊಮ್ಮೆ ಸಂತೈಸುವಳು. ಧನದಾಸೆ ಬಿಡದು ಕೂಡಲ ಸಂಗಮದೇವಾ. ಅಧಿಕಾರದಾಸೆಯ ವ್ಯಕ್ತಿಗಳ ಕೃತ್ಯ ಕೂಡಲಸಂಗಮನನ್ನಾಗಲಿ ಅವನ ಭಕ್ತನನ್ನಾಗಲಿ ಬದಲಿಸುವುದಿಲ್ಲ. ಬದಲಿಗೆ ಅವರೇ ಬಯಲಾಗುವರು ಕಾಣಾ ಕೂಡಲಸಂಗಮದೇವಾ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+