ಕಡ್ಲೇಕಾಯಿ ಪರಿಷೆಗೆ ಕೆ.ಸಿ.ದಾಸ್ ಸ್ವೀಟ್ಸ್ ಮುಂದೆ ನಿನಗಾಗಿ ಕಾಯುವ ಕರ್ಪೂರ
ಇವಳೇ,
ಮತ್ತೊಂದು ಕಡ್ಲೇಕಾಯಿ ಪರಿಷೆ ಬಂದಿದೆ. ಮುಂದಿನ ಸೋಮವಾರ ಬಸವನಗುಡಿಯ ಅದೇ ಕೆ.ಸಿ.ದಾಸ್ ಸ್ವೀಟ್ ಅಂಗಡಿ ಹತ್ತಿರ ನಿನಗಾಗಿಯೇ ಕಾಯ್ತಾ ನಿಂತಿರ್ತೀನಿ.
ಹೋದ ವರ್ಷಕ್ಕಿಂತ ಒಂದು ಕ್ಲಾಸು ಜಾಸ್ತಿ ಆಗಿದ್ದೀಯಾ. ಮೂಗಿನ ಮೇಲೊಂದು ಪುಟ್ಟ ಮೊಡವೆ. ಕಣ್ಣಲ್ಲಿ ತುಳುಕಿಸುವ ಎಷ್ಟೋ ಭಾವದಲ್ಲಿ ಮುಳುಗಿ ಹೋಗುವ ಭಯದಲ್ಲೇ ಥರಗುಡುತ್ತಾ ಈ ಪತ್ರ ಬರೆಯುತ್ತಿದ್ದೀನಿ.
ವಾಟ್ಸಾಪ್, ಫೇಸ್ ಬುಕ್, ಟೆಲಿಗ್ರಾಮ್ ಅನ್ನೋ ಕಾಲದಲ್ಲಿ ಪತ್ರ ಬರೆಯುವ ರೋಮಾಂಚನ ಅನುಭವ ಎಂಥ ಚಂದ ಗೊತ್ತಾ? ಬಿಳಿ ಹಾಳೆಯ ಮೇಲಿನ ಅಕ್ಷರಗಳ ನೀಲಿ ಶಾಯಿ ಕೈ ಬೆವರ ಹನಿಗೆ ಅಲ್ಲಲ್ಲಿ ಹರಡಿಕೊಂಡಿರುತ್ತದೆ. ಸಂತೋಷಕ್ಕೋ ದುಃಖಕ್ಕೋ ಗೊತ್ತಿಲ್ಲದೆ ಬೀಳುವ ಕಣ್ಣ ಹನಿಯೂ ಕಾಗದದ ಜತೆಯಾಗುತ್ತದೆ. ಎಲ್ಲಕ್ಕೂ ನಿನ್ನನ್ನು ಸೇರುವ ತವಕ.

ನಿನ್ನ ಕೈಗೆ ಈ ಪತ್ರ ಕೊಟ್ಟ ನಂತರ ಪುಸ್ತಕದ ಮಧ್ಯೆ ಇಟ್ಟುಕೊಂಡು ಮನೆಗೆ ಹೋದ ಮೇಲೆ, ಮಹಡಿಯ ಮೇಲೆ ಹೋಗಿ ಒಬ್ಬಳೇ ಓದುವಾಗ ಅದೆಷ್ಟು ಸಲ ನನ್ನ ನೆನಪು ನಿನಗಾಗುತ್ತದೆ ಅಂತ ಕೇಳಿದಾಗ, ಇನ್ನೊಂದ್ಸಲ ಹೇಳ್ತೀನಿ ಎಂದು ತಪ್ಪಿಸಿಕೊಂಡು ಓಡಿ ಹೋಗ್ತಿಯಲ್ಲೇ, ಇದು ನಿನಗೆ ಸರೀನಾ?
ಆಡಿಟರ್ ಆಫೀಸಿಗೆ, ಬ್ಯಾಂಕ್ ಗೆ ಹಣ ಕಟ್ಟಲು ಹೋಗುವಾಗ, ಯಾವುದೋ ಚೆಕ್ ಬರೆಯುವಾಗ ಅದೆಷ್ಟು ಸಲ ನಿನ್ನ ಹೆಸರೇ ಬರೆದಿದ್ದೀನಿ ಗೊತ್ತಾ? ಹೇಳು, ನಮ್ಮಿಬ್ಬರ ಹೆಸರನ್ನು ಪಕ್ಕಪಕ್ಕ ನೋಡುವುದು ಯಾವಾಗ?
ಇರಲಿ, ಸೋಮವಾರ ಸಂಜೆ ಖಂಡಿತಾ ಸಿಗಬೇಕು. ದೊಡ್ಡ ಬಸವಣ್ಣ ಹಾಗೂ ಗಣೇಶನ ದೇವಸ್ಥಾನಕ್ಕೆ ಹೋಗಿಬರೋಣ. ಪರಿಚಯಸ್ಥರು ಯಾರಾದರೂ ನೋಡಿಬಿಡ್ತಾರೆ ಅಂತ ನೀ ಹೆದರುತ್ತೀಯಾ ಅಂತ ನನಗೆ ಗೊತ್ತು. ಕಡೇ ಪಕ್ಷ ದೂರ ದೂರ ನಿಂತಾದರೂ ನಮ್ಮಿಬ್ಬರ ಒಂದೇ ಪ್ರಾರ್ಥನೆಯನ್ನು ದೇವರ ಮುಂದೆ ಒಪ್ಪಿಸಿ ಬರೋಣ.
ನಿನ್ನ ಕಣ್ಣ ಕಾವಿಗೆ ಕರಗುವ
ಕರ್ಪೂರ












Click it and Unblock the Notifications