ನಮ್ಮವರೇ ಏಕೆ ಬಾಳೆಹಣ್ಣು ಸಿಪ್ಪೆ ಎಸೆಯುತ್ತಾರೆ?

***
ನೀವು ನಿಮ್ಮ ಮನೆಯವರೊಂದಿಗೆ ಹೇಗೆ ನಡೆದುಕೊಳ್ಳುತ್ತೀರಿ? ಅನೇಕ ಮಂದಿ, ಬೀದಿಯಲ್ಲಿ ಸಿಗುವ ಅಪರಿಚಿತ ವ್ಯಕ್ತಿಯನ್ನು ತಮ್ಮ ಕುಟುಂಬದವರಿಗಿಂತ ಚೆನ್ನಾಗಿ ಮಾತನಾಡಿಸುತ್ತಾರೆ. "ನನ್ನ ಕುಟುಂಬ ಸದಸ್ಯರು ನನ್ನ ಖಾಸಗಿ ವಸ್ತುಗಳು" ಎಂಬ ದುರಾಲೋಚನೆ ನಮ್ಮ ಸಮಾಜದಲ್ಲಿ, ಹಟ್ಟಿ ಗಣಿಯ ಚಿನ್ನದ ಹಾಗೆ, ಒಳಗೆ ಹೂತು ಹೋಗಿದೆ.
ವಿಜಯಲಕ್ಷ್ಮಿ ಅಲಿಯಾಸ್ ವಿಜಿ ಅವರಿಗೆ ಮೂರು ಮಕ್ಕಳು, ಒಂದು ಗಂಡ. ಶಾಲೆಗೆ ಹೋಗುವ ಮುನ್ನ ಮಕ್ಕಳು ವಿಜಿಯವರಿಗೆ "ಮಾತೃ ದೇವೊ ಭವ" ಎಂದು ನಮಸ್ಕರಿಸುತ್ತಾರೆ. ಶಾಲೆ ಮುಗಿದು ಮನೆಗೆ ಬಂದ ಮಕ್ಕಳು, ತಿಂಡಿ ಕೊಡು, ಕತೆ ಹೇಳು, ಗೊಂಬೆ ಕೊಡಿಸು, ಆಟವಾಡು, ಎಂದೆಲ್ಲಾ ದೇವರನ್ನು ಪೀಡಿಸುತ್ತಾರೆ. ವಿಜಿ, ಮುಖ ಸಿಂಡರಿಸಿಕೊಂಡು, ಈ ಪಾತ್ರಗಳನ್ನೆಲ್ಲಾ ನಿರ್ವಹಿಸಿ, "ಉಫ್ ಅಪ್ಪಾ" ಎಂದು ಕುಳಿತುಕೊಳ್ಳುವ ಹೊತ್ತಿಗೆ ಪತಿರಾಯರು ಆಫೀಸ್ ಇಂದ ಆಗಮಿಸಿದ್ದಾರೆ.
ಆಫೀಸಿಂದ ಬಂದ ನಂತರ ಹೆಂಡತಿಗೆ ಒಂದು ಎರಡು ಒಳ್ಳೆಯ ಮಾತು? ಇಲ್ಲವೇ ಇಲ್ಲ. ಬೇಟೆಯನ್ನು ಮುಗಿಸಿ ಬಂದ ಹುಲಿಯ ಹಾಗೆ ಗಂಡ ವಿಜಿಯನ್ನು ನೋಡಿ "ಗುರ್ರ್" ಎಂದು ರೇಗುತ್ತಾರೆ. ಕಾಫಿ, ಪೇಪರ್, ಕನ್ನಡಕ ಮುಂತಾದ ವಸ್ತುಗಳಿಗೆ ಯಜಮಾನರಿಂದ ಆಜ್ಞೆಯಾಗುತ್ತದೆ. ವಿಜಿ ಏನೂ ಹೇಳದೆ ಆಜ್ಞೆಗಳನ್ನು ದಯಪಾಲಿಸುವುದೂ ಸತ್ಯ. ಎಲ್ಲರೂ ಮಲಗಿದ ಮೇಲೆ ತನ್ನ ಕರ್ಮವನ್ನು ದೂಷಿಸುವುದೂ ಸತ್ಯ. ವಿಜಿ ತಮ್ಮ ಚಿತ್ರಕಲೆಯ ಹವ್ಯಾಸಕ್ಕೆ ಚಪ್ಪಡಿ ಕಲ್ಲು ಹಾಕಿಸಿ ಎಷ್ಟೋ ವರ್ಷಗಳು ಕಳೆದು ಹೋಗಿವೆ. ಸಿನೆಮಾ, ಸಂಗೀತ ಮುಂತಾದ ಮನರಂಜನೆಯ ಚಟುವಟಿಕೆಗಳಂತೂ ಕೇಳುವುದೇ ಬೇಡ. ವಿಜಿಯ ಜೀವನವು ಗಂಡ-ಮಕ್ಕಳ ಸುನಾಮಿಯಲ್ಲಿ ಮುಳುಗಿ ಹೋಗಿದೆ. ಕುಟುಂಬಸೇವಕಿ ವಿಜಯಲಕ್ಷ್ಮಿಯವರು ಒಬ್ಬರೇ ಇದ್ದಾಗ ಕಾರಣವಿಲ್ಲದೆ (?) ಅಳುತ್ತಾರೆ.
***
ಸರ್ಕಾರಿ ನೌಕರ ಭೋಜಯ್ಯನವರಿಗೆ ತಮ್ಮ ಕುಟುಂಬದ ಬಗ್ಗೆ ಬಲು ಹೆಮ್ಮೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಭೋಜಯ್ಯನವರಿಗೆ ತಾವು ಕುಟುಂಬದವರ ಮೇಲೆ ಚಲಾಯಿಸುವ ಅಧಿಕಾರದ ಮೇಲೆ ಹೆಮ್ಮೆ. ಸದಾಕಾಲ ಪತಿ ಸೇವೆಯಲ್ಲಿ ನಿರತರಾಗಿರುವ ಪತ್ನಿ. ಹೇಳಿದಕ್ಕೆಲ್ಲಾ ತಲೆಯಾಡಿಸುವ ಮಕ್ಕಳು. ಭೋಜಯ್ಯನವರಿಗೆ ತಮ್ಮ ಮಗನನ್ನು ಒಬ್ಬ ದೊಡ್ಡ ಐಎಎಸ್ ಅಧಿಕಾರಿಯನ್ನಾಗಿ ಮಾಡಬೇಕೆಂಬ ಹಿರಿದಾಸೆ. ತಮ್ಮ ಮಗಳನ್ನು ಅಷ್ಟೇ ದೊಡ್ಡ ಐಪಿಎಸ್ ಅಧಿಕಾರಿಗೆ ಕೊಟ್ಟು ಮದುವೆ ಮಾಡಬೇಕೆಂಬ ಕನಸು. ಮಕ್ಕಳ ಆಸೆ ಏನೆಂದು ಯಾರು ಕೇಳುವರು?
ಯಾರೂ ಕೇಳಲಿಲ್ಲ. ಒಂದು ದಿವಸ, ಭೋಜಯ್ಯನವರ ಮಗ ಮುಂದಿನ ಮನೆಯ ಹುಡುಗಿಯ ಜೊತೆ ಓಡಿ ಹೋದನು. ಐಟಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ತಂದೆಯನ್ನು ಮರೆತನು. ಇದಾದ ಎರಡು ತಿಂಗಳಿಗೆ, ಭೋಜಯ್ಯನವರ ಮಗಳು ಹಿಂದಿನ ಮನೆಯ ಹುಡುಗನ ಜೊತೆ ಓಡಿ ಹೋದಳು. ತಂದೆಯನ್ನು ಧಿಕ್ಕರಿಸಿ ಬರೆದ ಮಗಳ ಪತ್ರವನ್ನು ಓದಿ, ಭೋಜಯ್ಯನವರಿಗೆ ಹೃದಯಾಘಾತವಾಯಿತು. ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಅವರಿಗೆ, "ಅನ್ನ, ಮನೆ, ಉಡುಪು, ಹಣ ಎಲ್ಲವನ್ನೂ ಒದಗಿಸಿದ ನನಗೇ ನನ್ನ ಮಕ್ಕಳು ಏಕೆ ಮುಖಕ್ಕೆ ಬಾಳೆಹಣ್ಣು ಸಿಪ್ಪೆ ಎಸೆದರು?" ಎಂಬ ಆಲೋಚನೆ.
***
ಸ್ನೇಹಿತರೇ, ನಿಮ್ಮ ಮನೆಯವರು ಆಸೆ, ಆಕಾಂಕ್ಷೆ, ಖಾಸಗಿತನಗಳಿರುವ ವಿಶೇಷ ಜೀವಿಗಳೆಂದು ನೀವು ಮರೆತಿರಬಹುದು. ಅನೇಕ ಜನರಿಗೆ ಆಹಾರ ನೀಡುವ ಬೆಳೆಗಳನ್ನು ಆನೆಗಳು ದಬ ದಬ ಎಂದು ತುಳಿದುಹಾಕುವ ಹಾಗೆ, ನೀವು ನಿಮ್ಮ ಕುಟುಂಬದವರ ವಿಶಿಷ್ಟ ವ್ಯಕ್ತಿತ್ವಗಳನ್ನು ದಮನ ಮಾಡುತ್ತಿರಬಹುದು. ಶಾಂತಿ, ಸಹಾನುಭೂತಿಗಳಿಂದ ನಿಮ್ಮ ಸಂಸಾರವನ್ನು ನಡೆಸಲು ಈ ಕೆಳಗಿನ ತಂತ್ರಗಳು ಸಹಾಯ ಮಾಡುತ್ತವೆ:
* ನೀವು ನಿಮ್ಮ (ದು)ಸ್ತಿತಿಗೆ ತಂದೆ, ತಾಯಿ, ಗಂಡ, ದೇವರು ಮುಂತಾದವರನ್ನು ದೂಷಿಸುತ್ತೀರಾ? ಒಂದು ವಿಷಯ ನೆನಪಿರಲಿ. ನಿಮ್ಮ ಅವಸ್ತೆಗೆ ಸಂಪೂರ್ಣವಾಗಿ ನೀವೇ ಹೊಣೆ! ಹೌದು. ನಿಮ್ಮ ಗಂಡ ನಿಮಗೆ ಹೊಡೆಯಬಹುದು ಅಥವಾ ಹೆಂಡತಿ ಪೀಡಿಸಬಹುದು. ಇಂತಹ ನೀಚ ವರ್ತನೆಗಳನ್ನು ಸಹಿಸಿಕೊಂಡರೆ, ನೀವು ಅನ್ಯರಿಗೆ ಬಲಿಪಶು ಆಗುವುದು ಖಂಡಿತ. ನಿಮ್ಮ ಮೂಲಭೂತ ಮಾನವೀಯ ಹಕ್ಕುಗಳನ್ನು ಪಡೆಯಲು ನೀವೇ ಎದ್ದು ನಿಲ್ಲಬೇಕು.
* ಪ್ರತಿಯೊಂದು ಮನುಜನಿಗೂ ಖಾಸಗಿತನ ಎಂಬ ಒಂದು ಮೌಲ್ಯವಿರುತ್ತದೆ ಎಂಬುದು ನಿಮಗೆ ಗೊತ್ತೇ? ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಒಮ್ಮೊಮ್ಮೆ ಏಕಾಂತದ ಅವಶ್ಯಕತೆ ಇರುತ್ತದೆ. ಅನಿಸಿಕೆ-ಅನುಭವ-ಭಾವನೆಗಳನ್ನು ಸದಾಕಾಲ ಹರಟುತ್ತಿರಬೇಕು ಎಂಬ ಕುಟುಂಬ ತೆರಿಗೆಯನ್ನು ಇಂದೇ ಮುಕ್ತಗೊಳಿಸಿ. ಭಾವನೆಗಳ ಹಂಚಿಕೆ ಐಚ್ಛಿಕವೇ ಹೊರತು ಕಡ್ಡಾಯವಲ್ಲ.
* ಮದುವೆ ಮುಂತಾದ ಸಮಾರಂಭಗಳಿಗೆ ನಾವು ಜೊತೆಯಲ್ಲೇ ಹೋಗಬೇಕು, ಎಂದು ನಿಮ್ಮ ಜೀವನಸಂಗಾತಿಗೆ ಧಮ್ಕಿ ಹಾಕಬೇಡಿ. ಅವರಿಗೆ ಇಷ್ಟವಿಲ್ಲದಿದ್ದರೆ ನೀವು ಹೋಗಿಬನ್ನಿ. ಆದರೆ ಸಂಗಾತಿಯ ಊಟದ ವಿಷಯ ಮಾತ್ರ ಅವರಿಗೇ ಬಿಟ್ಟು ಬಿಡಿ!
* ಮಕ್ಕಳು ಮಾಲೀಕತ್ವದ ವಸ್ತುಗಳಲ್ಲ. ಅವರೂ ಸ್ವಾತಂತ್ರ್ಯ ಬಯಸುವ ಜೀವಿಗಳು. ಪುಟಾಣಿಗಳು ಬೆಳೆದು ನಿಂತ ಮೇಲೆ ಒಂದಲ್ಲಾ ಒಂದು ದಿನ ತಮ್ಮ ಕನಸುಗಳನ್ನು ಪೂರೈಸಲು ಮನೆಯನ್ನು ಬಿಟ್ಟು ಹೋಗಲೇಬೇಕು. ಹೀಗೆ ಹೊರಡುವಾಗ, ರಂಪ ರಾದ್ಧಾಂತ ಮಾಡಿ, "ನೀನು ಬಿಟ್ಟು ಹೋದರೆ ನಾನು ಸತ್ತೇಹೋಗ್ತೀನಿ", ಎಂದು ಹೇಳಿ, ಆಣೆ ಪ್ರಮಾಣ ಮಾಡಿಸಿ, ಕೊನೆಗೆ ಎರಡೂ ಕಡೆ ಬೇಸರ ಮಾಡಿಕೊಂಡು ಕಳಿಸಿಕೊಡುವ ಅವಶ್ಯಕತೆ ಇಲ್ಲ. ಗೂಡನ್ನು ಬಿಟ್ಟು ಹೊರಡುವುದು ಪರಿಣಾಮಕಾರಿ ಬದುಕಿನ ಒಂದು ಪ್ರಮುಖ ಭಾಗ.
* ಮನೆಯವರಿಂದ ಆಜ್ಞೆ ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಆಜ್ಞೆ ಕೊಡುವುದನ್ನು ನಿಲ್ಲಿಸಿ. ಮನೆಯವರೊಬ್ಬರ ಒಂದು ನಿರ್ಧಾರದ ಬಗ್ಗೆ ನಿಮ್ಮ ದಿವ್ಯಾಭಿಪ್ರಾಯವನ್ನು ಒದಗಿಸುವ ಮುನ್ನ ಸುಮ್ಮನೆ ಇದ್ದು ನೋಡಿ. ನೀವು ಕಲ್ಪಿಸಿಕೊಂಡ ಪ್ರಳಯ ಖಂಡಿತ ಸಂಭವಿಸುವುದಿಲ್ಲ!
ಕುಟುಂಬ ಎಂಬುದು ಮನುಷ್ಯರಿಗೆ ಒಂದು ಅಪೂರ್ವ ಬೆಳವಣಿಗೆಯ ಘಟಕವೂ ಆಗಬಹುದು; ಗಂಭೀರ ಮಾನಸಿಕ ಸಮಸ್ಯೆಗಳ ಘಟಕವೂ ಆಗಬಹುದು. ನಿಮ್ಮ ಮನೆಮಂದಿಯನ್ನು ನೀವು ಆಪ್ತ ಸ್ನೇಹಿತರಾಗಿ ಕಾಣಬಹುದು ಅಥವಾ ಖಳನಾಯಕರಂತೆ ನೋಡಬಹುದು. ಆಯ್ಕೆ ನಿಮ್ಮದು. ಆದರೆ, ಮಾನವನ ಪ್ರತ್ಯೇಕ ಅಸ್ತಿತ್ವವನ್ನು ಗೌರವಿಸುವ, ಸಹನೆಯಿಂದ ತುಂಬಿದ, ನಿರ್ಬಂಧ ಇಲ್ಲದ ಪ್ರೀತಿಯನ್ನು ನೀಡುವ ಸಂಬಂಧಗಳಿವೆಯಲ್ಲ? ಅವು ನಿಜವಾಗಿಯೂ ಸುಂದರ, ಸುಕೋಮಲ ಮತ್ತು ಸಾರ್ಥಕ. ಇಂತಹ ಸಂಬಂಧಗಳು ನಿಮ್ಮದಾಗಲಿ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications