ಅಭಿನಂದನಾರ್ಹ ಮುಸ್ಲಿಂ ರಾಷ್ಟ್ರೀಯ ಮಂಚ್
ಈ ವಿಷಯವಾಗಿ ಹಲವಾರು ಬುಧ್ಧಿಜೀವಿಗಳು, ಸಂಘಟನೆಗಳು ಕಾಯಿದೆಯ ವಿರುದ್ಧ ಪ್ರತಿಭಟಿಸುತ್ತಲೇ ಬಂದಿದ್ದಾರೆ. 'ಅಲ್ಪಸಂಖ್ಯಾತರ ಹಾಗು ದಲಿತರ ಆಹಾರ ಸ್ವಾತಂತ್ರ್ಯ'ಕ್ಕೆ ಧಕ್ಕೆ ಬರುತ್ತದೆ ಎಂದು ಬೊಂಬಡಿ ಬಜಾಯಿಸುತ್ತಿದ್ದಾರೆ. ಆದರೆ ಇದೇ ಗೋಹತ್ಯೆ ನಿಷೇಧದ ಕಾನೂನಿನ ಜಾರಿಗೋಸ್ಕರ ರಾಘವೇಶ್ವರ ಭಾರತಿ ಸ್ವಾಮೀಜಿಗಳ ಜತೆ ಕೈ ಜೋಡಿಸಿ ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿರುವ ಸುಮಾರು ಮೂರು ಲಕ್ಷಕ್ಕೂ ಅಧಿಕ ಮುಸ್ಲಿಮರು ಮನುಷ್ಯರಲ್ಲವೇ? ಅವರ 'ಆಹಾರ ಸ್ವಾತಂತ್ರ್ಯ' ಹರಣವಾಗುವುದಿಲ್ಲವೇ?
ಮುಸ್ಲಿಂ ರಾಷ್ಟ್ರೀಯ ಮಂಚ್ ಎಂಬ ಸಂಘಟನೆ ಹಲವಾರು ತಿಂಗಳುಗಳಿಂದ ಗೋಹತ್ಯೆಯನ್ನು ನಿಷೇಧಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಡುತ್ತಲೇ ಬಂದಿದೆ. ಕೃಷಿ ಅಭಿವೃದ್ಧಿಗೆ ಮಾರಕವಾದ ಗೋಹತ್ಯೆಯನ್ನು ಖಂಡಿತವಾಗಿ ನಿಷೇಧಿಸಬೇಕು ಎಂದು ಮುಸ್ಲಿಂ ಜಾಗರಣ ಮಂಚ್ ನ ಕೆ.ಎಂ. ಅನೀಸ್ ಉಲ್ ಹಕ್ ರವರು ಸಾರ್ವಜನಿಕ ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಒಳ್ಳೆಯ ಕೆಲಸಕ್ಕೋಸ್ಕರ ಎಲ್ಲ ಮುಸ್ಲಿಮರೂ ಕೈ ಜೋಡಿಸಬೇಕು ಎಂದು ಕರೆ ಕೊಟ್ಟಿದ್ದಾರೆ.
ಆದರೆ ಕೆಲ ಸ್ವಾರ್ಥರೋಗ ಪೀಡಿತ ರಾಜಕಾರಣಿಗಳು ಹಾಗು ಬುದ್ಧಿಜೀವಿಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ತಮ್ಮ 'ಬಿಜೆಪಿ ವಿರೋಧಿ' ನಿಲುವಿನಡಿಯಲ್ಲಿ ಮುಸ್ಲಿಮರನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಈ ಮೂಲಕ ತಮ್ಮ ರಾಜಕೀಯ ಸ್ವಾರ್ಥದ ಬೇಳೆಯನ್ನು ಬೇಯಿಸಿಕೊಳ್ಳಲಾಗುತ್ತಿದೆ.
ಆದರೆ ಇವುಗಳ ಹಿಂದಿನ ದುರುದ್ದೇಶಗಳನ್ನು ಅರ್ಥ ಮಾಡಿಕೊಂಡಿರುವ ಸಜ್ಜನ ಮುಸ್ಲಿಮರು 'ಗೋಹತ್ಯೆ ನಿಷೇಧ ಕಾನೂನಿನ' ಜಾರಿಗೊಸ್ಕರ ಒತ್ತಾಯಿಸುತ್ತಿದ್ದಾರೆ. ತಮ್ಮ ಧರ್ಮದವರ ಜಾಗೃತಿಗೋಸ್ಕರ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರದ ಒಳಿತಿಗೋಸ್ಕರ, ದುಷ್ಟ ರಾಜಕಾರಣಿಗಳ ಓಲೈಕೆಗೆ ಕಿವಿಗೊಡದೆ ಮುನ್ನಡೆಯುತ್ತಿರುವ ಮುಸ್ಲಿಂ ರಾಷ್ಟ್ರೀಯ ಮಂಚ್ ನ ಎಲ್ಲ ಕಾರ್ಯಕರ್ತರೂ ಅಭಿನಂದನಾರ್ಹರು.
ನಿಷ್ಕ್ರಿಯರಾಗಿರುವ ಎಲ್ಲ ಸಜ್ಜನರೂ ಸಕ್ರಿಯರಾಗಿರಬೇಕು. ರಾಷ್ಟ್ರೀಯತೆಯ ಪ್ರವಾಹದಲ್ಲಿ ಒಂದಾಗಬೇಕು.