ದೆಹಲಿಯಲ್ಲಿ ಅದ್ಧೂರಿ ಕನ್ನಡ ಸಂಸ್ಕೃತಿ ಸಮಾವೇಶ
ನವದೆಹಲಿ, ಫೆ. 16 : ದೆಹಲಿಯಲ್ಲಿ ಹಾಗೂ ಹೊರನಾಡಿನಲ್ಲಿ ಕನ್ನಡಿಗರು ಶಾಂತಿಪ್ರಿಯರು, ಸಹಜೀವಿಗಳು ಹಾಗೂ ಶ್ರಮಜೀವಿಗಳು ಎಂದು ಹೆಸರು ಮಾಡಿದ್ದಾರೆ. ಎಲ್ಲಿ ಹೋದರೂ ಅಲ್ಲಿನ ಜನಜೀವನದೊಂದಿಗೆ ಸಾಮರಸ್ಯದಿಂದ ಬೆರೆತು ಹೋಗುವ ಗುಣ ರೂಢಿಸಿಕೊಂಡಿರುವುದು ಕನ್ನಡಿಗರಿಗೆ ಮತ್ತು ಕನ್ನಡ ನಾಡಿಗೆ ಹೆಮ್ಮೆ ತರುವಂಥ ವಿಚಾರ ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಭಾನುವಾರ ಇಲ್ಲಿ ಹೇಳಿದರು.
ಅವರು, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದೆಹಲಿ ಕರ್ನಾಟಕ ಸಂಘ ಜಂಟಿಯಾಗಿ ಆಯೋಜಿಸಿದ್ದ ಎರಡು ದಿನಗಳ 'ಸುವರ್ಣ ಕರ್ನಾಟಕ ದೆಹಲಿ ಉತ್ಸವ' ಕನ್ನಡ ಸಂಸ್ಕೃತಿ ಸಮಾವೇಶದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಭಾಷೆಗೆ ಒಗ್ಗೂಡಿಸುವ ಕಲೆ ಇದೆ. ತನ್ನ ತಾಯ್ನಾಡು ಮತ್ತು ಮಾತೃ ಭಾಷೆಯನ್ನು ಪ್ರತಿಯೊಬ್ಬರೂ ಪ್ರೀತಿಸುತ್ತಾರೆ ಮತ್ತು ಪ್ರೀತಿಸಬೇಕು, ಗೌರವಿಸಬೇಕು. ಅನ್ಯ ಭಾಷೆಗಳಿಗೆ ಯಾವುದೇ ತೊಂದರೆ ಮಾಡದೆ ಅವರೊಂದಿಗೆ ಇದ್ದು ನಾವು ನಮ್ಮ ಭಾಷೆ ಬೆಳೆಸಬೇಕು ಮತ್ತು ಉಳಿಸಬೇಕು ಎಂದರು.
ಕರ್ನಾಟಕ ಬಹಳ ಉತ್ಕೃಷ್ಟ ಸಂಗೀತ, ಕಲೆ, ಸಂಸ್ಕೃತಿ ಮತ್ತು ಪರಂಪರೆ ಹೊಂದಿದೆ. ಕರ್ನಾಟಕದ ಜಾನಪದ ಕಲೆಗಳು ದೇಶ ವಿದೇಶಗಳಲ್ಲೂ ಖ್ಯಾತಿ ಗಳಿಸಿವೆ. ಇಂಥ ಉತ್ಕೃಷ್ಟ ಕಲೆಗಳನ್ನು ಪ್ರದರ್ಶಿಸಲು ಈ ಎರಡು ದಿನಗಳು ಸಾರ್ಥಕವಾದವು ಎಂಬುದು ನನ್ನ ನಂಬಿಕೆ ಎಂದು ಹೇಳಿದ ಅವರು, ಹಿಂದೆ ಮೂರು ವರ್ಷಗಳ ಕಾಲ ದೆಹಲಿಯಲ್ಲಿನ ಕರ್ನಾಟಕ ಭವನದ ನಿವಾಸಿ ಆಯುಕ್ತನಾದ ಸಂದರ್ಭದಲ್ಲಿ ಇಲ್ಲಿನ ಎಲ್ಲ ಕನ್ನಡಿಗರನ್ನು ಭೇಟಿ ಮಾಡುವ ಅವಕಾಶ ಲಭ್ಯವಾಗಿರಲಿಲ್ಲ; ಈಗ ಇಂಥ ಒಂದು ಸುಯೋಗ ಒದಗಿ ಬಂದಿದೆ ಎಂದರು.
1974ರಲ್ಲಿ ರಾಂಚಿಯಲ್ಲಿ ಐಎಎಸ್ ಪ್ರೊಬೇಷನರಿ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ನಡೆದ ಘಟನೆಯನ್ನು ಸ್ಮರಿಸಿದ ಅವರು, ತಮ್ಮ ಸಮೀಪದ ಬಂಧುವನ್ನು ಭೇಟಿಯಾದ ಆಕಸ್ಮಿಕ ಘಟನೆಯನ್ನು ಮತ್ತು ನಂತರ ಅಮೆರಿಕದಲ್ಲಿ ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಭೇಟಿಯಾದ ಒಬ್ಬ ಭಾರತೀಯರು ಅವರ ಊರಾದ ಉಡುಪಿಯಲ್ಲಿನ ಪಕ್ಕದ ಮನೆಯ ವ್ಯಕ್ತಿಯೇ ಆಗಿದ್ದ ಸ್ವಾರಸ್ಯಕರ ಘಟನೆ ಸ್ಮರಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಕೇಶ್ ಮೆಹ್ತಾ ಅವರು ಮಾತನಾಡಿ, ದೆಹಲಿಯಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದ ಅಂಗವಾಗಿ ದೇಶದ ಎಲ್ಲ ಭಾಗಗಳ ಕಲೆ ಮತ್ತು ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅದರಲ್ಲಿ ಕರ್ನಾಟಕದ ಕಲಾ ತಂಡಗಳಿಗೂ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.
ಕಾಮನ್ವೆಲ್ತ್ ಕ್ರೀಡೆಗಳಿಗಾಗಿ ಹಾರ್ಡ್ ಇನ್ಫ್ರಾಸ್ಟ್ರಕ್ಚರ್ ಮತ್ತು ಸಾಫ್ಟ್ ಇನ್ಫ್ರಾಸ್ಟ್ರಕ್ಚರ್ ಎಂದು ಎರಡು ಭಾಗವಾಗಿ ವಿಂಗಡಿಸಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹಾರ್ಡ್ ಮೂಲಭೂತ ಸೌಕರ್ಯಗಳೆಂದರೆ, ರಸ್ತೆ, ಕ್ರೀಡಾಂಗಣ ಇತ್ಯಾದಿಗಳು. ಆ ಕೆಲಸ ಭರದಿಂದ ಸಾಗಿದೆ. ಅದರ ಜೊತೆಗೆ, ಸಾಫ್ಟ್ ಮೂಲಭೂತ ಸೌಕರ್ಯಗಳೆಂದರೆ, ಕ್ರೀಡಾಕೂಟ ವೀಕ್ಷಿಸಲು ಬಂದವರಿಗೆ ನಮ್ಮ ದೇಶದ ಕಲೆ ಸಂಸ್ಕೃತಿಯ ಪರಿಚಯ ಮಾಡಿಸುವುದು ಮತ್ತು ಅವರಿಗೆ ಇಲ್ಲಿನ ವಿಭಿನ್ನ ಆಹಾರ ಪದ್ಧತಿ, ಜನಜೀವನ ಮುಂತಾದವುಗಳ ಪರಿಚಯ ಮಾಡಿಸುವುದು. ಈ ಸಂದರ್ಭದಲ್ಲಿ ಕರ್ನಾಟಕದಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಕಲಾಕಾರರು, ಸಂಗೀತಗಾರರು, ಕಲಾತಂಡಗಳಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಗ್ರಹಾರ ಕೃಷ್ಣಮೂರ್ತಿ ಅವರೂ ಮಾತನಾಡಿ, ಕರ್ನಾಟಕ ಸರ್ಕಾರದ ಕ್ರಮವನ್ನು ಶ್ಲಾಘಿಸಿದರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ವಿ. ಗೋಪಿನಾಥ್ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಂಟಿ ನಿರ್ದೇಶಕ ಎಚ್. ಶಂಕರಪ್ಪ ವಂದಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರೇಣುಕುಮಾರ್ ನಿರೂಪಿಸಿದರು.
ಇದಕ್ಕೂ ಮುನ್ನ ಕೆ.ವಿ. ನಾಗರಾಜ ಮೂರ್ತಿ ಅವರ ನೇತೃತ್ವದ ಜಾನಪದ ಕಲಾವಿದರ ತಂಡ ಅಭೂತಪೂರ್ವ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದವು. ಸಮಾರೋಪ ಸಮಾರಂಭದ ನಂತರ ಗಣಪತಿ ಭಟ್ ಹಾಸಣಗಿ ಅವರಿಂದ ಹಿಂದೂಸ್ತಾನಿ ಸಂಗೀತ, ವೈಜಯಂತಿ ಕಾಶಿ ಅವರಿಂದ ನೃತ್ಯ ರೂಪಕ, ನಗೆ ನಾಟಕ ಬಡೇಸಾಬ್ ಪುರಾಣ ಮುಂತಾದವುಗಳು ಮೂಡಿಬಂದು ರೋಮಾಂಚನ ಉಂಟು ಮಾಡಿದವು. ಇಂದು ಬೆಳಿಗ್ಗೆ ದೇಶೀ ಸಂಸ್ಕೃತಿ ಕುರಿತಂತೆ ವಿದ್ವತ್ಪೂರ್ಣ ವಿಚಾರ ಗೋಷ್ಠಿ ಏರ್ಪಡಿಸಲಾಗಿತ್ತು.












Click it and Unblock the Notifications