ರವಿ ಬೆಳಗೆರೆಗೆ ಸ್ನೇಹಪೂರ್ವಕ ಓಲೆ
ಆತ್ಮೀಯ ರವಿ ಬೆಳಗೆರೆಯವರಿಗೆ ಸ್ನೇಹದ ಓಲೆ.
ಆಗಸ್ಟ್ 1, ‘ಗೆಳೆತನದ ದಿನ’, ಎಲ್ಲಾ ಸ್ನೇಹಿತ/ ಸ್ನೇಹಿತೆಯರಿಗೆ ಹಾರ್ದಿಕ ಅಭಿನಂದನೆಗಳು. ಮೊನ್ನೆ ‘ಅದುವೆ ಕನ್ನಡ’ದಲ್ಲಿ ಅನು ಬರೆದ ಗೆಳೆತನ ದಿನಕ್ಕೊಂದು ಪ್ರೀತಿಯ ರೂಪಕ ಓದಿ, ಸ್ಫೂರ್ತಿ ಬಂದು ಪ್ರಾಸಂಗಿಕವಾಗಿ ಇದೇ ಸಮಯದಲ್ಲಿ ನಾನೇಕೆ ರವಿಯವರಿಗೆ ಸ್ನೇಹದ ಓಲೆ ಬರೆಯಬಾರದು ಅಂತ ಅನಿಸಿ, ಬರೆಯುತ್ತಿದ್ದೇನೆ. ಯಾಕೆಂದರೆ ಅವರು ತುಂಬಾ ಬಿಜಿ ವ್ಯಕ್ತಿ. ಕರ್ನಾಟಕದ ರಾಜಧಾನಿಯಲ್ಲಿರುವ ಅವರನ್ನು ನಾನು ದೂರದ ದೆಹಲಿಯಿಂದ ಎಷ್ಟೊ ಸಲ ಸಂಪರ್ಕಿಸಲು ಪ್ರಯತ್ನಿಸಿ ಸೋತು, ನನ್ನ ಸ್ನೇಹದ ಅಭಿನಂದನೆಯ ಮಾತುಗಳನ್ನು ತಿಳಿಸಲು ತಿಳಿಯದೆ ‘ಅದುವೇ ಕನ್ನಡ’.ಕಾಮ್ ನ ಮೊರೆ ಹೋಗಿದ್ದೇನೆ. ಇಲ್ಲಾದರೂ ಆ ಪುಣ್ಯಾತ್ಮ ಓದಲಿ ಅಂತ. ಗೆಳೆತನದ ದಿನದಂದು ನಮ್ಮನ್ನು ಪ್ರಭಾವಿಸಿದ, ನಾವಾಗೇ ಆತ್ಮೀಯರಾಗಿಸಿಕೊಂಡ ವ್ಯಕ್ತಿಗಳನ್ನು ಯಾಕೆ ಅಭಿನಂದಿಸಬಾರದು ? ಅಲ್ಲವೇ? ‘ಫ್ರೆಂಡ್ ಶಿಪ್’ ಡೇ’ ಗೆ ಯಾರೂ ಹೊರತಲ್ಲ.
ಆತ್ಮೀಯ ರವೀ ಅವರಿಗೆ,
‘ಗೆಳೆತನದ ದಿನದ ಅಭಿನಂದನೆ’ಗಳು. ನಿಮಗೆ ಪತ್ರ ಬರೆಯುವ ಹುಕ್ಕಿ ಬಂದದ್ದು ಯಾಕೆ ಗೊತ್ತಿಲ್ಲ, ಆದರೆ ಕೆಲವು ಬಾರಿ ನಮಗೆ ಯಾರಿಗಾಗಿಯೋ ಅಭಿಮಾನ ಬೆಳೆದು ಅವರನ್ನು ಅಭಿನಂದಿಸೋಣಾ ಅಂತ ಹಾತೊರೆಯುತ್ತೇವೆ, ಆದ್ರೆ ಅಭಿಮಾನಿಗಳ ಅಭಿಮಾನಕ್ಕೆ ಪಾತ್ರರಾದವರಿಗೆ ಅವುಗಳನ್ನು ಇರಿಸಿಕೊಂಡವರ ಭಾವನೆಗಳ ತೀವ್ರತೆ ಅರ್ಥವಾಗುವುದಿಲ್ಲ. ನನ್ನಲ್ಲೂ ಅಂಥದೇ ತೀವ್ರತೆ. ಅದು ನಿಮಗೂ ಅರ್ಥವಾಗುವದಿಲ್ಲ ಬಿಡಿ. ಮೂರು ತಿಂಗಳಿಂದ ನನ್ನ ಬುದ್ಧಿ, ಮನಸ್ಸನ್ನು ಆವರಿಸಿರುವ ಗಾರುಡಿಗಾರನ ಬಗ್ಗೆ ನಾನೇಕೆ ಇಷ್ಟು ತಲೆಕೆಡಿಸಿಕೊಳ್ಳಬೇಕು. ನಿಮಗಾಗಿ ಮಾಡಿದ ಟೆಲಿಫೋನ್ಗಳಿಗೆ ಲೆಕ್ಕವಿಲ್ಲ, ನಿಮ್ಮ ಆಫೀಸಿನಲ್ಲೇ ಕೇಳಿ. ಒಂದುಸಾರಿಯೂ ನಿಮಗೆ ಟೆಲಿಫೋನ್ ಕೊಡಲಿಲ್ಲ . ಯಾವಾಗಲೂ ಇಲ್ಲಾ ಮೇಡಂ! ಅವರಿಗೆ ನನ್ನ ‘ಹಾರ್ಮ್ ಲೆಸ್’ ಭಾವನೆಗಳನ್ನು, ಬರೀ ಒಂದು ಅಭಿನಂದನೆ ಕರೆಯೆಂದೂ ವಿವರಿಸಿ ವ್ಯರ್ಥವಾಯಿತು. ಯಾಕೆ , ನೀವು ಬೇರೆಯವರ ಜತೆ ಮಾತಾಡುವುದಿಲ್ಲವೇ? ಅಷ್ಟೂ ಸಮಯವಿಲ್ಲವೇ? ಅದು ಬರೀ ಅಭಿಮಾನದ ಪರಾಕಾಷ್ಠೆ ಮಾತ್ರ ಅಂತ ಅನ್ನುತ್ತಿರಾ? ಆದರೆ ನನಗೆ ತುಂಬಾ ಬೇಜಾರಾಯಿತು. ನನಗೆ ನಿಮ್ಮ ಮೊಬೈಲ್ ನಂಬರೂ ಕೊಟ್ಟಳು ರಿಸೆಪ್ಷನಿಸ್ಟ್ . ಆದುವೋ ಸದಾ ಆಫ್ ಆಗೇ ಇರುತ್ತೆ. ಬರೀ ಶನಿವಾರ ಮಾತ್ರ ಪ್ರಯತ್ನಿಸಬೇಕಂತೆ. ಹೇಗೆನಿಸಬಹುದು ನೀವೇ ಹೇಳಿ?
ದೆಹಲಿಯಲ್ಲಿ ನಮಗೆ ಕನ್ನಡ ಪತ್ರಿಕೆಗಳು ಸಿಗುವುದು ನಮ್ಮ ಕನ್ನಡ ಸಂಘದಲ್ಲೆ . ನಮಗೆ ಸ್ವಂತಕ್ಕೆ ಬೇಕೆಂದರೆ ನಾವು ಯಾವಾದಾದರೂ ಮದ್ರಾಸಿ ಅಂಗಡಿಗಳಿಗೆ ಹೇಳಿ ತರಿಸಿಕೋಬೇಕು. ರಜೆಗೆ ಹೋಗಿದ್ದೆ ನೋಡಿ, ಆಗಲೇ ನನ್ನ ಕೈಗೆ ‘ಓ ಮನಸೇ..... ’ ಪತ್ರಿಕೆ ಸಿಕ್ಕಿದ್ದು. ಎಲ್ಲ ಬಿಡದಂತೆ ಓದಿದ್ದೂ ಓದಿದ್ದೇ. ಓದಿ ಎಷ್ಟು ಖುಷಿಯಾಯಿತೆಂದರೆ ನಾನು ರಜೆ ಮುಗಿಸುವದರಲ್ಲಿ ‘ಓ...ನನ್ನ ಮನಸ್ಸನ್ನು ಆವರಿಸಿಕೊಂಡು, ದೆಹಲಿಗೆ ಮರಳಿದ ಮೇಲೆ ಕಂಡ ಕಂಡ ಶಾಪ್ಗಳಲ್ಲಿ ಹುಡುಕಿದೆ, ಸಿಗಲಿಲ್ಲ. ಆ ಪತ್ರಿಕೆಯಲ್ಲಿ ನೀವೇ ಬರೆದ ಮಾತುಗಳಿವೆಯಲ್ಲಾ ಅವು ನೆನಪಾದವು. ನಿಮ್ಮ ಅಭಿಮಾನಿ ಯಾರೋ ಒಬ್ಬರು ತಮ್ಮ ಮಗುವಿಗೆ ‘ನೀಲಿ ಬೆಳೆಗೆರೆ’ ಅಂತ ಹೆಸರಿಟ್ಟಿದ್ದು, ಮತ್ತು ಸಮಾಧಾನ ಅಂಕಣವನ್ನು ನೀನೇ ನೊಂದವರಿಗೆ ಪಕ್ಕದಲ್ಲೇ ಕೂತು ಸಾಂತ್ವನ ನೀಡುತ್ತಿರುವೆಯೆನೋ ಅನ್ನಿಸುವಷ್ಟು ಮುತುವರ್ಜಿಯಿಂದ ಬರೆಯುವುದು, ಯಾರೋ ಒಬ್ಬ ನಿರಾಶೆಯಾದ ವ್ಯಕ್ತಿಗೆ ‘ನನ್ನ ಆಫೀಸಿಸ್’ನಲ್ಲಿ ಬಂದುಕಾಣು ಅಂತ ಬರೆದಿದ್ದು ಓದಿದ್ದೇನೆ. ಅಂಕಣಗಳೋ ಒಂದಕ್ಕಿಂತ ಒಂದು ಚೆನ್ನ. ನಿಮ್ಮ ಟೀಮೂ ಮತ್ತೂ ಚೆನ್ನ. ಅನಂತ ಚಿನಿವಾರ್- ಸೈನ್ಸ್ ಪೇಜು, ನಿವೇದಿತಾ ಲೇಖನಗಳು...ವಾವ್ !! ಎಷ್ಟು ಪರಫೆಕ್ಟ್ ಟೀಮು. ಚೆಂದವಾದ ಪತ್ರಿಕೆ. ಅಂದಹಾಗೆ, ಕನ್ನಡನಾಡಿನ ತುಂಬಾ ಅಭಿಮಾನಿಗಳ ಗುಂಪೇ ಇರುವ ನಿಮ್ಮ ಜಾದೂವಿನ ಗುಟ್ಟೇನು?
ನಾನು ನಿಮ್ಮ ‘ಹಾಯ್ ಬೆಂಗಳೂರು’ ಮಾತ್ರ ಓದಿದವಳಲ್ಲ , ಆದರೂ ಈ ಅಭಿಮಾನ. ನನ್ನ ಮನಸ್ಸಿಗಾನಂದ ನೀಡಿದ್ದು ‘ಓ...... .
ದೆಹಲಿಯಲ್ಲಿ ಸಿಗುವ ಪತ್ರಿಕೆಗಳು ಎಲ್ಲಿ-ಎತ್ತ ತಾಣ ಗೊತ್ತಿಲ್ಲಾ. ನೀವೇಕೆ ಈ ಬಗ್ಗೆ ಯೋಚಿಸಬಾರದು? ನಮಗೆ ಎಲ್ಲ ಪತ್ರಿಕೆಗಳು ಸಿಗುವಂತೆ ನಿನ್ನ ಚಮತ್ಕಾರಿಕ ಕಾರ್ಯಪ್ರವೃತ್ತಿಯನ್ನಾದರೂ ಉಪಯೋಗಿಸಿದರೆ ಮಹದುಪಕಾರವಾದಿತು. ನಿನ್ನಷ್ಟು ಯಾವುದೇ ಪತ್ರಕರ್ತ, ಬರಹಗಾರ ಜನತೆಯಾಂದಿಗೆ ಇಷ್ಟು ಭಾವನಾತ್ಮಕವಾಗಿ ಹೊಂದಿಕೊಂಡದ್ದು, ಜನಪ್ರಿಯನಾಗಿದ್ದು ಕಂಡಿದ್ದೇ ಇದೇ ಮೊದಲು. ಬೇರೆಯವರು ಇದ್ದರೂ ನನ್ನ ಅರಿವಿಗೆ ಬಂದಿಲ್ಲ. ಯಾರಾದರೂ ನಿಮ್ಮ ಬಗ್ಗೆ ಪ್ರಶಂಸಿಸಿದಾಗ ಮೈಯೆಲ್ಲ ಕಿವಿಯಾಗಿ ಕೇಳುತ್ತೇನೆ. ನನ್ನ ತಮ್ಮ ಹಳೇ ‘ಹಾಯ್...ಬೆಂಗಳೂರನ್ನು’ ಕೂಡ ರದ್ದಿಗೆ ಹಾಕದೇ ಇಟ್ಟುಕೊಂಡಿದ್ದ ಹುಚ್ಚ. ಅಂಥ ಹುಚ್ಚನ್ನು ಹಿಡಿಸಿದ ನಿಮ್ಮ ಪೆನ್ನು ನಿಮ್ಮ ಟೀಮು ನಿಜಕ್ಕೂ ಶ್ಲಾಘನೀಯ.
ದೆಹಲಿಯಲ್ಲೂ ಯಾವದೇ ಕನ್ನಡಿಗನ್ನು ಕೇಳಲಿ, ‘ರವೀ ಬೆಳೆಗೆರೆನಾ? ಅಬ್ಬಾ ಭಾರಿ ಮನ್ಷ್ಯ., ಏನೇ ಪ್ರಾಬ್ಲಮ್ , ಲಫ್ಹಡಾ ಆಗಿರಲಿ, ನೀವೊಂದು ಫೋನ್ ಹೊಡೆದ್ರೆ ಸಾಕು, ಪೋಲಿಸರು ತಲುಪುವದು ಲೇಟಾಗಿ, ಅದಕ್ಕಿಂತ ಮೊದಲು ರವಿ ಬೆಳೆಗೆರೆಯ ಟೀಮು ತಲುಪಿರುತ್ತೆ. ಅಷ್ಟು ಕ್ವಿಕ್ ಆಕ್ಷನ್ ತಗೋತಾನೆ’ ಅಂತ ನಿಮ್ಮನ್ನು ತಮ್ಮ ಗೆಳೆಯನೇ ಅನ್ನುವಷ್ಟು ಸಲುಗೆಯಿಂದ ಹೇಳಿದ ಮಾತು ಕೇಳಿ ಯಾರಿಗೆ ಮನಸ್ಸಿಗೆ ಹಿತವಾಗಿರುವುದಿಲ್ಲ ? ಯಾರಿಗೆ ಅಭಿಮಾನ ಉಕ್ಕುವದಿಲ್ಲ ? ನಿಮ್ಮ ‘ಕ್ರೈಂ ಸ್ಟೋರಿ’ಗಳ ಸತ್ಯ, ಸುಳ್ಳಿನ ಪರದೆಯನ್ನು ಸರಿಸಿ, ಯಥಾಸ್ಥಿತಿಯನ್ನು ಜನತೆಗೆ ಕನ್ನಡಿ ಹಿಡಿದು ತೋರಿಸುವ ಆ ಕ್ಷಮತೆ ಯಾರಿಗುಂಟು? ನೀವು ಖುಷ್ವಂತರ ಅಭಿಮಾನಿ ಅಂತಾ ಗೊತ್ತಾಗಿದ್ದು ‘ಓ ಮನಸಿನಿಂದಲೇ., ಅದು ‘ಮನಸು ಮನಸುಗಳ ಪಿಸು ಮಾತಿಗೊಂದು ಪಾಕ್ಷಿಕ’ ಅಂತ ತಾನೇ ನೀವು ಬರೆಯೋದು? ಹಾಗಾದರೆ ನನ್ನ ಮಾತು ನಿಮಗೆ ತಲುಪುವುದು ಯಾವ ರೀತಿ? ಈ-ಮೈಲಾ? ಅದನ್ನಾದರೂ ಓದಲು ಪುರುಸೊತ್ತಿದೆಯ? ಹೇಳ್ತಿರಾ? ನನಗಂತೂ ಓ ಮನಸೇ... ಓದಲು ಬೇಕು...ಏನು ಮಾಡಲಿ? ಅದನ್ನು ಅಂತರಜಾಲದಲ್ಲಿ ಯಾಕೆ ಲಭ್ಯಮಾಡಬಾರದು? ನೀವೇನಂತೀರ?
ನಿಮ್ಮನ್ನೊಂದು ಬಾರಿ ದೆಹಲಿಗೆ ಕರೆಸಬೇಕು, ನಿಮ್ಮೊಂದಿಗೇ ಖುಶ್ವಂತ ಸಿಂಗರನ್ನು ಕಾಣಬೇಕೆಂಬ ಆಸೆ. ನಮ್ಮ ದೆಹಲಿ ಕನ್ನಡ ಶಾಲೆಯೆದುರು ಸುಜಾನ್ ಸಿಂಗ ಪಾರ್ಕ ಅಪಾರ್ಟ್ಮೆಂಟಲ್ಲೆ ೕ ಇರುವದಲ್ಲವಾ? ನೀವು ಅವರ ‘ದಿಲ್ಲಿ’ ಎಂಬ ಹೆಸರಿನ ಪುಸ್ತಕವನ್ನು ಕನ್ನಡಕ್ಕೆ ತರ್ಜುಮೆ ಮಾಡುತ್ತಿದ್ದುದು ಓದಿದ್ದೆ, ಮುಗಿಯಿತಾ? ಖುಷ್ವಂತ್ ನನಗೂ ಇಷ್ಟವಾದ ವ್ಯಕ್ತಿ. ಮೊನ್ನೆ ಮೊನ್ನೆ ಅವರ ಮಗ ‘ ತನ್ನ ತಂದೆಯ ಬಗ್ಗೆ’ ಬರೆದ ಪುಸ್ತಕವೊಂದು ಬಿಡುಗಡೆಯಾಯಿತು. ನೀವು ದೆಹಲಿಗೆ ಬಂದರೆ ಇಲ್ಲಿನ ಗುಂಬಜ್ ಗಳನ್ನು ತೋರಿಸಿ- ನೀವು ಇತಿಹಾಸವನ್ನು , ಆ ಗತಕಾಲದ ಪಾಳುಬಿದ್ದ ಹಾಳುಗೋಡೆಗಳು, ಅಲ್ಲಿನ ಗೋರಿಗಳು ಹೇಳುವ ಕಥೆಯನ್ನು ನಿಮ್ಮ ಕಣ್ಣಿಂದ ಯಾವ ರೀತಿ ಬಣ್ಣಿಸಬಹುದು ಅಂತಾ ಕೇಳುವ ಕೆಟ್ಟ ಕುತೂಹಲ. ಈ ಆದರೆಗಳನ್ನೆಲ್ಲ ಮೀರಿ ನಿಮ್ಮನ್ನು ಓಲೆಯಿಂದಲಾದರೂ ಮಾತಾಡಿಸಿ ಖುಷಿಪಟ್ಟುಕೊಂಡಿದ್ದೇನೆ. ಮತ್ತೇನು ಬರೆಯಲಿ? ರವಿಯ ಕೀರ್ತಿ ಹೀಗೆ ಸೂರ್ಯಚಂದ್ರರಿರುವವರೆಗೂ ಬೆಳಗುತ್ತಿರಲೆಂದೇ ಆಶಿಸುವೆ.
ಹಾಂ ! ನಿಮಗೆ, ನಿಮ್ಮ ಟೀಮಿನ ಎಲ್ಲರಿಗೂ, ನಿಮ್ಮ ಮನೆಯವರಿಗೂ, ಮುದ್ದು ಮಕ್ಕಳಿಗೂ ನನ್ನ ಶುಭಾಶಯಗಳು.
ಇತಿ ನಿಮ್ಮ ಅಭಿಮಾನಿ,
- ರೇಣುಕಾ ಶ್ಯಾಮ್, ನವದೆಹಲಿ
[email protected]












Click it and Unblock the Notifications