ದೆಲ್ಲಿ ಕನ್ನಡಿಗರಿಗೆ ರುಚಿಸಿದ ಹಂಪಿಜೇನು!
ಇದು ನಮ್ಮ ಕನ್ನಡ ಸಂಘದ ವೈಶಿಷ್ಟ್ಯ. ಯಾರೇ ಬರಲಿ, ಅವರನ್ನು ಪ್ರೀತ್ಯಾದರಗಳಿಂದ ಕರೆದು ಮನೆಗೆ ಬಂದ ಅತಿಥಿಯಾಂದಿಗೆ ಮನಸಾರೆ ಮಾತಾಡಿ ಬೀಳ್ಕೊಡುವ ಪರಂಪರೆಯನ್ನು ನಮ್ಮ ಸಂಘ ಸಂತೋಷಪೂರ್ವಕವಾಗಿ ನಡೆಸಿಕೊಂಡು ಬಂದಿರುವ ಒಂದು ಪದ್ಧತಿ. ಅದು ನಮ್ಮೆಲ್ಲರಿಗೂ ಖುಷಿ- ಹೆಮ್ಮೆಯ ಸಂಗತಿ.
ಕ.ಸಂ.ದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಸ್ವಾಗತಭಾಷಣ ಮಾಡಿದರು. ನಂತರ ಸಂಘದ ಅಧ್ಯಕ್ಷ- ಸಾಹಿತಿ, ಡಾ.ಬಿಳಿಮಲೆಯವರು ಸಂಕ್ಷಿಪ್ತವಾಗಿ, ಅತಿಥಿಗಳನ್ನು ಪರಿಚಯಿಸಿದರು. ಇಲ್ಲಿಗೆ ಆಗಮಿಸಿದ ಗಣ್ಯರೆಲ್ಲರೂ ಒಂದುಕಾಲಕ್ಕೆ ಬಿಳಿಮಲೆಯವರ ಶಿಷ್ಯರೂ, ನಿಕಟವರ್ತಿಗಳೂ ಅಭಿಮಾನಿಗಳು ಆಗಿದ್ದುದು ಇನ್ನೊಂದು ವಿಶೇಷ. ಹೀಗಾಗಿ ಕಾರ್ಯಕ್ರಮಕ್ಕೆ ಇನ್ನೂ ಮೆರಗು. ಬಂದವರಲ್ಲಿ ಉತ್ಸಾಹ ಎದ್ದು ಕಾಣುತಿತ್ತು. ಆಮೇಲೆ ಸಂಘದ ಸದಸ್ಯರಿಂದ ಅತಿಥಿಗಳಿಗೆ ಪುಷ್ಪಗುಚ್ಛ ಅರ್ಪಣೆ, ಅತಿಥಿಗಳಿಂದ ಎರಡು ಮಾತು.
ಮೊದಲು ಮಾತಾಡಿದ ಡಾ.ಗಾಯಕವಾಡರು ಕನ್ನಡ ಹಾಗೂ ಮರಾಠಿ ಭಾಷೆ ಬೇರೆ- ಬೇರೆಯಾದರೂ ಸಂಸ್ಕೃತಿ ಒಂದೇ ಎಂದು ವಿವರಿಸಿದರು. ಕರ್ನಾಟಕದಲ್ಲಿ ಶರಣರ ಪರಂಪರೆ ಪ್ರಾರಂಭಿಸಿದಾಗ ಮಹಾರಾಷ್ಟ್ರ ದಲ್ಲಿ ಸಂತರ ಪಂಥ ಪ್ರಾರಂಭವಾಗಿತ್ತು . ಮಹಾಭಾರತ ಯುದ್ಧಾನಂತರ ಉಳಿದ ಕುರು ಮತ್ತು ಯಾದವ ವಂಶಜರೇ ಕಾರಣಾಂತರದಿಂದ ದಕ್ಷಿಣಾವರ್ತಕ್ಕೆ ಬಂದು ನೆಲೆಸಿ, ಕುರು ವಂಶಜರು ಕನ್ನಡಿಗರೂ ಯಾದವರು ಮರಾಠಿಗಳೂ ಆದರೆಂದು ಗಾಯಕವಾಡ್ ತಿಳಿಸಿದರು.
ಬಡಿಗೇರರು ‘ಯಾವೂರ ಮುತ್ತುಗಾರ’ ಎನ್ನುವ ಜಾನಪದ ಗೀತೆ ಹಾಡಿ ಎಲ್ಲರನ್ನೂ ರಂಜಿಸಿದರು. ಫ್ರೊ.ಶಂಕರನಾರಾಯಣರು ಕನ್ನಡಿಗರಿಗೆ ನಾಡಿನಿಂದ ದೂರಹೋದಷ್ಟೂ ಅಭಿಮಾನ ಜಾಸ್ತಿಯಾಗುತ್ತದೆಂದರು, ನಾವಡರು, ರಾಜಧಾನಿಯಲ್ಲಿ ತುಳುವರೇ ಹೆಚ್ಚಾಗಿದ್ದು, ತುಳುವರು ಮತ್ತು ಕನ್ನಡಿಗರು ಒಟ್ಟಾಗಿ ಸೇರಿ ಕನ್ನಡತನವನ್ನು ಉಳಿಸಿದ್ದೀರಿ ಎಂದು ಹರ್ಷಿಸಿದರು. ಬೋರಲಿಂಗಯ್ಯ ಅವರು ಕನ್ನಡನಾಡಿನಿಂದ ದೆಹಲಿಗೆ ವಲಸೆ ಬಂದ ಬಿಳಿಮಲೆಯರ ಕೊರತೆ ಕನ್ನಡನಾಡಿಗಿದೆ ಎಂದು ಭಾವವಶರಾಗಿ ನುಡಿದರು. ಸಣ್ಣಕತೆಗಾರ ಕರೀಗೌಡ ಬೀಚನಹಳ್ಳಿ ಕನ್ನಡದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಡಾ.ಪ್ರೇಂಕುಮಾರರು ದೆಹಲಿ ಕನ್ನಡಿಗರ ಪ್ರೀತಿಗೆ ಧನ್ಯವಾದಗಳನ್ನು ತಿಳಿಸಿದರು. ಕೊನೆಗೆ ಮಾತನಾಡಿದ ಡಾ.ಕೆ.ಎಮ್.ಮೈತ್ರಿಯವರು, ಆದಿವಾಸಿ, ಅಲೆಮಾರಿ, ದಲಿತರ ಬಗ್ಗೆ ಮಾತನಾಡುತ್ತ, ಕರ್ನಾಟಕದಲ್ಲೇ ಸುಮಾರು 50 ಬುಡಕಟ್ಟು ಜನಾಂಗಗಳಿವೆ ಎಂದು ತಿಳಿಸಿದರು.
ಕನ್ನಡವನ್ನು ಬೆಳೆಸುವವರು ನಾವಲ್ಲ, ಆದಿವಾಸಿ ಬುಡಕಟ್ಟು ಜನಾಂಗದವರು.. ಯಾಕೆಂದರೆ ಮೂಲತಃ ಕನ್ನಡಿಗರಲ್ಲದ ಅವರು ಎಲ್ಲೆಲ್ಲಿಂದಲೋ ವಲಸೆ ಬಂದು ತಮ್ಮ ಹೊಟ್ಟೆಪಾಡಿಗಾಗಿ ತಮ್ಮ ಭಾಷೆ-ಸಂಸ್ಕೃತಿಯನ್ನು ಬಿಟ್ಟು ಬದುಕಿನ ಅನಿವಾರ್ಯತೆಗೆ ಕನ್ನಡವನ್ನು ಕಲಿತು ಬೆಳೆಸುತ್ತಾರೆ. ಆದರೆ ನಾವು ಅಧುನಿಕತೆಯ ನೆಪದಲ್ಲಿ ಪಾಶ್ಚಾತ್ಯೀಕರಣಕ್ಕೆ ಮೊರೆಹೊಗಿದ್ದೇವೆ, ಇದು ಕಟು ದುರಂತ ಎಂದು ಮೈತ್ರಿ ಹೇಳಿದರು.
ಕಾಲದ ಕೊರತೆಯಿರುವ ಇಂದು ದೊಡ್ಡ ದೊಡ್ಡ ಪುಸ್ತಕಗಳನ್ನು, ಗ್ರಂಥಗಳನ್ನು ಓದಲು ಯಾರಿಗೆ ಸಮಯವಿದೆ? ಹಾಗಾಗಿ ಜು.30ರಂದು ಸಾಹಿತಿಗಳೊಂದಿಗೆ ಕಳೆದ ಸಂಜೆ ಎಷ್ಟೋ ತಿಳಿಯದ ಕುತೂಹಲಕಾರಿ ವಿಷಯಗಳನ್ನು ತಿಳಿಸಿಕೊಟ್ಟಿತು ! ನಾಲ್ಕು ಜನ ಹಳೇ ಗೆಳೆಯರು ತಮ್ಮ ಮನೆಯ ಜಗುಲಿಯ ಮೇಲೆ ಕುಳಿತು ಹರಟಿದಂಥಾ ಸ್ನೇಹ-ಆತ್ಮೀಯತೆ. ಈ ಕಾರ್ಯಕ್ರಮ ಕೇಳಿದಷ್ಟು ಇನ್ನೂ ಕೇಳಬೇಕೆಂಬ ಆಸೆ ಹೊತ್ತಿಸಿತು.
ಸಂಘದ ಕಾರ್ಯದರ್ಶಿ ಎಸ್.ಕೆ.ಭಟ್ರ ವಂದನಾರ್ಪಣೆಯಾಂದಿಗೆ ಸಾಹಿತ್ಯ ಸಂಜೆ ಕೊನೆಗೊಂಡಿತು. ಎದೆಯಲ್ಲಿ ಮಾತ್ರ ಬೆಳಗೋ ಬೆಳಕು !