ವ್ಯಕ್ತಿಪೂಜೆ ಸಾಕು ; ಹೊಸಬರಿಗೆ ನ್ಯಾಯಬೇಕು !
- ಎಚ್. ಆನಂದರಾಮ ಶಾಸ್ತ್ರಿ
ಹೇಳುವವರು ಹೇಳಿದರು, ಸಭೆಯಲ್ಲಿ ಆಲಿಸಿದವರು ಕೊನೆಯಲ್ಲಿ ಆಕಳಿಸಿ ಮೈಮುರಿದು ಎದ್ದು ಹೊರಟುಹೋದರು, ಪತ್ರಿಕೆಗಳವರು ಪ್ರಿಂಟಿಸಿದರು, ಓದುಗರು ಓದಿ ತತ್ಕ್ಷಣ ಮರೆತರು. ಇಲ್ಲಿಗೆ ಈ ವಿಷಯದ ಇತಿಶ್ರೀ ಆಯಿತು! ಇಂಥ ಎಲ್ಲ ಭಾರೀ ತೂಕದ ಹೇಳಿಕೆಗಳ ಹಣೆಬರಹ ಇಷ್ಟೆ. ಮಂತ್ರದಿಂದ ಮಾವಿನಕಾಯಿ ಉದುರುವುದಿಲ್ಲ. ಹೇಳಿಕೆಗಳ ಬದಲು ಪ್ರಯತ್ನಗಳೂ ಸಾಗಿದಲ್ಲಿ ಮಾತ್ರ ಏನಾದರೂ ಫಲ ಸಿಕ್ಕೀತು. ಆದರೆ, ಇಂಥ ಹೇಳಿಕೆಗಳ ಮಹಾಪೂರವೇ ಹರಿದುಬರುತ್ತಿರುವ ನಮ್ಮ ಸಾಹಿತ್ಯ ಕ್ಷೇತ್ರದಲ್ಲಿ ಈ ಬಗ್ಗೆ ಪ್ರಯತ್ನಗಳೂ ಎಷ್ಟರಮಟ್ಟಿಗೆ ನಡೆದಿವೆಯೆಂದು ನೊಡಿದರೆ ಯಾರಿಗೇ ಆಗಲಿ ತೀವ್ರ ನಿರಾಸೆಯಾಗುತ್ತದೆ.
ಇದೇ ಬರಗೂರರೇ ಈ ಹಿಂದೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು. ಮೇಲೆ ಉಲ್ಲೇಖಿಸಲಾದ ಅವರ ಹೇಳಿಕೆಯ ಅನುಷ್ಠಾನಕ್ಕೆ ಅವರ ಅಧ್ಯಕ್ಷಾವಧಿಯಲ್ಲಿ ಏನು ಕ್ರಮ ಕೈಗೊಂಡರು? ಪ್ರಕಟಿಸಿದರು, ಪ್ರಶಸ್ತಿ ನೀಡಿದರು, ಸಮಾರಂಭ ಏರ್ಪಡಿಸಿದರು, ಭಾಷಣ ಮಾಡಿದರು. ಹೆಚ್ಚೆಂದರೆ ಒಂದು ದೀರ್ಘ ವರದಿ ತಯಾರಿಸಿ ಸರಕಾರದ ಕಸದಬುಟ್ಟಿಗೆ ಎಸೆದು ತೆಪ್ಪಗಿದ್ದುಬಿಟ್ಟರು. ಮೊದಲಿನಿಂದ ಇಂದಿನ ತನಕ ನಮ್ಮೆಲ್ಲ ಅಕಾಡೆಮಿ, ಪರಿಷತ್ತು, ಪ್ರಾಧಿಕಾರ, ನಿರ್ದೇಶನಾಲಯಗಳು ಮಾಡುತ್ತಿರುವುದೂ ಇದೇ ಕೆಲಸವನ್ನೇ. ಇದಿಷ್ಟೇ ಕೆಲಸವನ್ನೇ. ಒಂದಿಷ್ಟು ಪುಸ್ತಕಗಳನ್ನು ಪ್ರಿಂಟು ಮಾಡಿಸಿ, ಒಂದಿಷ್ಟು ಸಮಾರಂಭಗಳನ್ನು ಏರ್ಪಡಿಸಿ, ಒಂದಷ್ಟು ಬಹುಮಾನಗಳನ್ನು ನೀಡುವುದು. ನಮ್ಮಲ್ಲಿ ಇಷ್ಟೊಂದು ಅಕಾಡೆಮಿ, ಪರಿಷತ್ತು, ಪ್ರಾಧಿಕಾರ, ನಿರ್ದೇಶನಾಲಯಗಳು ಮಾಡುತ್ತಿರುವುದೂ ಇದೇ ಕೆಲಸವನ್ನೇ. ಒಂದಿಷ್ಟು ಪುಸ್ತಕಗಳನ್ನು ಪ್ರಿಂಟು ಮಾಡಿಸಿ, ಒಂದಿಷ್ಟು ಸಮಾರಂಭಗಳನ್ನು ಏರ್ಪಡಿಸಿ, ಒಂದಿಷ್ಟು ಬಹುಮಾನಗಳನ್ನು ನೀಡುವುದಕ್ಕಾಗಿ ನಮ್ಮಲ್ಲಿ ಇಷ್ಟೊಂದು ಅಕಾಡೆಮಿ, ಪರಿಷತ್ತು, ಪ್ರಾಧಿಕಾರ, ನಿರ್ದೇಶನಾಲಯಗಳು! ತೆರಿಗೆದಾರನ ಹಣದ ಬೇಕಾಬಿಟ್ಟಿ ಬಳಕೆ! ಇದರಿಂದಾಗಿ ಈ ನೆಲದ ಎಷ್ಟು ಮಂದಿ ಸಮಕಾಲೀನ ಲೇಖಕರು ಸಮಾಜಕ್ಕೆ ಪರಿಚಯಿಸಲ್ಪಟ್ಟರು? ಅವರುಗಳ ಎಷ್ಟು ಕೃತಿಗಳು ಈ ಸಂಸ್ಥೆಗಳ ನೆರವಿನಿಂದಾಗಿ ಪ್ರಕಟವಾದವು, ಮಾರಾಟವಾದವು? ಎಷ್ಟು ಜನ ಓದಿ ಈ ಲೇಖಕರನ್ನು ಅರಿತರು? ದುಃಖವಾಗುವಷ್ಟು ನಗಣ್ಯ!
ಈ ಎಲ್ಲ ಸರಕಾರೀ ಕೃಪಾಪೋಷಿತ ಸಂಸ್ಥೆಗಳೂ ತಂತಮ್ಮ ವಲಯಗಳನ್ನು ನಿರ್ಮಿಸಿಕೊಂಡು, ಆ ವಲಯದೊಳಗಿನ ಮುಖಗಳಿಗೇ ಮಣೆಹಾಕುತ್ತಿರುವುದು ಮೊದಲಿನಿಂದಲೂ ನಡೆದು ಬಂದಿರುವ ಪದ್ಧತಿ. ಪ ರಿಣಾಮ, ಇಂದು ನೀವು ಯಾವುದೇ ಪುಸ್ತಕದಂಗಡಿಗೆ ಹೋಗಿರಿ, ಅದೇ ಕುವೆಂಪು-ಕಂಬಾರ-ಕಾರ್ನಾಡ-ಕಾರಂತ... ಕೆ.ಎಸ್.ನ.-ಕೆ.ಎಸ್.ನಿ.-ಪುತಿನ. ಇಂಥವರುಗಳ ಕೃತಿಗಳೇನೋ ಮೌಲಿಕವೇ. ಆದರೆ, ಬರೀ ಇವೇ ಆದರೆ, ಇಂದಿನ ಕಡಿಮೆ ಪ್ರಸಿದ್ಧ ಹಾಗೂ ಪ್ರಸಿದ್ಧರಲ್ಲದವರ ಕೃತಿಗಳನ್ನು ಯಾರು ಪ್ರಕಟಿಸಬೇಕು, ಪರಿಚಯಿಸಬೇಕು? ಈ ಸಂಸ್ಥೆಗಳಿಂದ ಇಂಥ ಅಪ್ರಸಿದ್ಧರ ಕೆಲವು ಕೃತಿಗಳೂ ಹೊರ ಬಂದಿವೆಯಾದರೂ ಅದು ಏನೇನೂ ಸಾಲದು. ಪರಿಣಾಮ, ಇಂಥ ಲೇಖಕರು ತಮ್ಮ ಕೃತಿಗಳನ್ನು ತಾವೇ ಪ್ರಕಟಿಸಿ, ಮಾರಾಟಕ್ಕಾಗಿ ಒದ್ದಾಡಿ-ಗುದ್ದಾಡಿ ಸೋತು, ಕಂಡಕಂಡವರಿಗೆಲ್ಲ ಉಚಿತವಾಗಿ ಹಂಚಿಯೂ ಪುಸ್ತಕ ಖಾಲಿಯಾಗದಾದಾಗ ತಲೆ ಮೇಲೆ ಕೈಹೊತ್ತು ಕೂರುತ್ತಾರೆ. ಇಂಥ ಲೇಖಕರ ಕೃತಿಗಳನ್ನು ಪುಸ್ತಕದಂಗಡಿಗಳವರು ಕಣ್ಣೆತ್ತಿಯೂ ನೋಡುವುದಿಲ್ಲ.
‘ಕುವೆಂಪು, ಬೇಂದ್ರೆ, ಕೆ.ಎಸ್.ನ. ಪರಂಪರೆ’ಯ ಅಂಚಿಗೆ ಸಿಕ್ಕು ಸಾಯುವ ದುರ್ಗತಿ! ನಮ್ಮಂಥ ಲೇಖಕರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯವನ್ನು ಮೇಲೆ ಹೇಳಿದ ಸಂಸ್ಥೆಗಳು ಏನೆಲ್ಲ ವಿಧಾನಗಳಲ್ಲಿ ಮಾಡಬಹುದು. ಈ ಕೆಲಸವನ್ನು ಅವುಗಳು ಮಾಡದಿದ್ದಾಗ, ಅಂಗಡಿಗಳವರೂ ನಮ್ಮನ್ನು ನಿರಾಕರಿಸಿದಾಗ ನಾವು ಏನು ಮಾಡಬೇಕು? ಗಾಂಧಿಬಜಾರ್ನ ಫುಟ್ಪಾಟ್ನಲ್ಲಿ ನಮ್ಮ ಕೃತಿಗಳನ್ನು ಇಟ್ಟುಕೊಂಡು ಮಾರಬೇಕು! ಅಲ್ಲವೇ?
ಇದುವರೆಗೆ ನಮ್ಮ ಸಾರ್ವಜನಿಕ ಗ್ರಂಥಾಲಯವಾದರೂ ಇಡೀ ರಾಜ್ಯಕ್ಕೆ ಒಟ್ಟಿಗೆ ಪುಸ್ತಕಗಳನ್ನು ಸಗಟು ಖರೀದಿ ಮಾಡುತ್ತಿತ್ತು. ಈ ವರ್ಷದಿಂದ ಅದೂ ಸಹ ಆಯಾ ಜಿಲ್ಲೆಗಳಿಗೆ ಆಯಾ ಜಿಲ್ಲೆಗಳಲ್ಲಿಯೇ ಖರೀದಿ ಕಾರ್ಯ ನಡೆಸಲಿದೆ. ಅಂದರೆ, ನಾವೀಗ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪುಸ್ತಕ ಕಳಿಸಿ ಅರ್ಜಿ ಗುಜರಾಯಿಸಿ ಕಾದು ಕುಳಿತು ಕೊಳ್ಳಬೇಕು! ಹೀಗೆ ಅರ್ಜಿ ಗುಜರಾಯಿಸಲು ಕೂಡ ಆಯಾ ಜಿಲ್ಲೆಯ ಪತ್ರಿಕಾ ಪ್ರಕಟಣೆಯನ್ನು ಗಮನಿಸಿ ಮುಂದುವರೆಯತಕ್ಕದ್ದು! ಕುವೆಂಪು, ಬೇಂದ್ರೆ, ಕಾರಂತರಿಗೆ ಈ ಕಷ್ಟವಿತ್ತೆ ? ಈಗಲಾದರೂ(ಅವರ ಕೃತಿಗಳಿಗೆ) ಇದೆಯೆ?
ನಮ್ಮ ಅಕಾಡೆಮಿ, ಪರಿಷತ್ತು, ಪ್ರಾಧಿಕಾರ, ನಿರ್ದೇಶನಾಲಯಗಳು ತಮ್ಮ ‘ವಲಯ, ಚಿಪ್ಪು, ಧೋರಣೆ, ಅಜ್ಞಾನ, ಅಹಂಕಾರ’ ಇವುಗಳಿಂದ ಹೊರಬರಬೇಕು. ಸಾಹಿತ್ಯ-ಸಂಸ್ಕೃತಿ ಸೇವೆಯ ತಮ್ಮ ಗುರುತರ ಕರ್ತವ್ಯವನ್ನು ಅರಿಯಬೇಕು. ಸಮಕಾಲೀನ, ಸಮರ್ಥ, ಆದರೆ ಪ್ರಸಿದ್ಧರಲ್ಲದ (ಪ್ರಭಾವಿಗಳಲ್ಲದ) ಲೇಖಕರನ್ನು ಸಮಾಜಕ್ಕೆ ಪರಿಚಯಿಸುವಂತಹ ವಿಧವಿಧ ಯೋಜನೆಗಳನ್ನು ಜವಾಬ್ದಾರಿಯಿಂದ ರೂಪಿಸಿ ಪ್ರಾಮಾಣಿಕತೆಯಿಂದ ಅನುಷ್ಠಾನಗೊಳಿಸಬೇಕು. ಬರೀ ಭಾಷಣ ಮಾಡುವುದು, ಮಾಡಿಸುವುದು ಇವುಗಳಿಂದ ಏನೂ ಸಾಧಿಸದಂತಾಗದು.
(ಸ್ನೇಹಸೇತು : ವಿಜಯ ಕರ್ನಾಟಕ)












Click it and Unblock the Notifications