ಕನ್ನಡಮ್ಮನ ಹಬ್ಬ ಬಂದಿದೆ! ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ....
- ಕೇಶವಸುತ
ಕ್ಯಾಲೆಂಡರ್ನಲ್ಲಿ ನವೆಂಬರ್ ತಿಂಗಳು ಬಂದ ತಕ್ಷಣ, ಕನ್ನಡಿಗರು ನಿದ್ರೆಯಿಂದ ಬೆಚ್ಚಿಬಿದ್ದವರಂತೆ ಎದ್ದು, ‘ಒಂದೇ ಒಂದೇ ಒಂದೇ ಕರ್ನಾಟಕ ಒಂದೇ ಇಂದೇ ಮುಂದೆ ಎಂದೇ ಕರ್ನಾಟಕ ಒಂದೇ’ ಎಂದು ದನಿಸೇರಿಸುತ್ತಾರೆ.
ಮತ್ತೊಂದು ರಾಜ್ಯೋತ್ಸವ ನಮ್ಮ ಮುಂದಿದೆ. ಇಂದು 49 ನೇ ರಾಜ್ಯೋತ್ಸ ವ ಬಂದಿದೆ ಎನ್ನುವುದನ್ನು ಸಾಬೀತು ಪಡಿಸಲು ಪತ್ರಿಕೆಗಳಲ್ಲಿ ಸರಕಾರ ಅರ್ಧಪುಟದ ಜಾಹೀರಾತು ನೀಡಿ ಧನ್ಯತೆ ಅನುಭವಿಸಿದೆ! ಯಾವ ಚಾನಲ್ ತಿರುಗಿಸಿದರೂ ಕನ್ನಡದ ಸಿನಿಮಾ, ಹಾಡು, ಚರ್ಚೆ, ಒಂದು ರೀತಿ ಅಲರ್ಜಿಯಾಗುವಷ್ಟು ಕಾರ್ಯಕ್ರಮಗಳು. ಕನ್ನಡತನ ಪ್ರದರ್ಶಿಸುವ ನೆಪದಲ್ಲಿ ಜಾಹೀರಾತುಗಳ ಮೂಲಕ ಹಣ ಲೂಟಿ ಮಾಡುವ ಪ್ರಯತ್ನ. ಇದಕ್ಕೆ ರಾಜ್ಯೋತ್ಸವ ಒಂದು ನೆಪ ಅಷ್ಟೆ.
ಕರ್ನಾಟಕದಾದ್ಯಂತ ಅನ್ನೋದಕ್ಕಿಂತ, ಕನ್ನಡಿಗರು ಇರೋ ಕಡೆಯೆಲ್ಲಾ ರಾಜ್ಯೋತ್ಸವ ಇಂದು ರಂಗು ಪಡೆದಿದೆ. ಬೆಂಗಳೂರಿನಲ್ಲಿ ಬಸ್ಸು, ಲಾರಿ, ಕಾರು, ಆಟೋ ರಿಕ್ಷಾ, ಬೈಕುಗಳು ಹೀಗೆ ವಾಹನಗಳಿಗೆ ಕನ್ನಡದ ಬಾವುಟ ಕಟ್ಟಿಕೊಂಡು, ಕನ್ನಡದ ಸ್ಟಿಕ್ಕರ್ಸ್ಗಳನ್ನು ಅಂಟಿಸಿಕೊಂಡು, ಕನ್ನಡದ ಕ್ಯಾಸೆಟ್ಗಳನ್ನು ಕೇಳಿಕೊಂಡು ರಸ್ತೆ ಪ್ರವೇಶಿಸಿರುವ ಮಂದಿಗೆ ಸಂಭ್ರಮವೋ ಸಂಭ್ರಮ!
ನಮ್ಮ ಬೆಂಗಳೂರು ಜನರಿಗೆ ನವೆಂಬರ್ 1 ರ ಬಗೆಗೆ ವಿಶೇಷ ಆಸಕ್ತಿಯೇನಿಲ್ಲ. ರಾಜ್ಯೋತ್ಸವ ಇವರ ಪಾಲಿಗೆ ನಿತ್ಯೋತ್ಸವ!
‘ನವೆಂಬರ್ನಲ್ಲಿ ಪೆಂಡಾಲ್ ಹಾಗೂ ಆರ್ಕೆಸ್ಟ್ರಾದವರನ್ನು ಮಾತಾಡಿಸೋಕೆ ಆಗೋದಿಲ್ಲ... ಸೀಸನ್ ಮುಗಿದ ಮೇಲೆ ನಾವು ಕೇಳಿದ ರೇಟ್ಗೆ ಒಪ್ಪುತ್ತಾರೆ. ಹೀಗಾಗಿ ಡಿಸೆಂಬರ್, ಜನವರಿ, ಫೆಬ್ರವರಿ...ಹೀಗೆ ಸಮಯ ಸಿಕ್ಕಾಗ ರಾಜ್ಯೋತ್ಸವ ಮಾಡ್ತೇವೆ’ ಎನ್ನುವ ಕನ್ನಡ ಹೋರಾಟಗಾರರಿಗೆ ಏನ್ ಹೇಳೋದು. ಅವರ ಖುಷಿ, ಅವರ ಮಜ, ಅದಕ್ಕೆ ದುಡ್ಡು ಮಾತ್ರ ಅವರದಲ್ಲ!
ಈ ವರ್ಷರಾಜ್ಯೋತ್ಸವ ಪ್ರಶಸ್ತಿ ವಿಜೇತರ ಸಂಖ್ಯೆಯನ್ನು ಶತಕ ದಾಟಿಸುವ ಮೂಲಕ, ಧರ್ಮಸಿಂಗ್ ಸರಕಾರ ಕನ್ನಡ ಪ್ರೇಮವನ್ನು ಸ್ವಲ್ಪ ಜಾಸ್ತಿ ಪ್ರದರ್ಶಿಸಿದೆ. ಇದರ ಪರಿಣಾಮ ಪ್ರಶಸ್ತಿ ಸ್ವೀಕರಿಸುವ ಗಣ್ಯರಿಗೆ ಮುಜುಗರ ಉಂಟಾಗಿದೆ! 60 ರಿಂದ ಪ್ರಶಸ್ತಿಗಳನ್ನು 109 ಕ್ಕೆ ಹಿಗ್ಗಿಸಿದರೂ ಏನೋ ಕೊರತೆ ಕಾಡುತ್ತಿದೆ. ಎಚ್ಐವಿ ಯಿಂದ ಬಳಲುತ್ತಿದ್ದರೂ ವಿಶಿಷ್ಟ ಸೇವೆಯಿಂದ ಗುರ್ತಿಸಿಕೊಂಡಿರುವ ವೀಣಾಧರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿ ಎನ್ನುವ ಸಾರ್ವಜನಿಕ ಅಭಿಪ್ರಾಯ ಸರಕಾರದ ಕಿವಿಗೆ ಕೇಳಿಸಲೇ ಇಲ್ಲ.
ಗಜ ಗಾತ್ರದ ಪ್ರಶಸ್ತಿ ವಿಜೇತರ ಪಟ್ಟಿ ಬಗೆಗೆ ಮುಖ್ಯಮಂತ್ರಿಗಳಿಗೆ ಯಾವುದೇ ಮುಜುಗರವಿಲ್ಲ. ಸಂಖ್ಯೆ ದೊಡ್ಡದಾದರೂ ಪ್ರಶಸ್ತಿಗಳು ಯೋಗ್ಯರಿವೆ ಸಂದಿವೆ ಎಂದು ಸಮರ್ಥಿಸಿಕೊಂಡಿದ್ದಾರೆ. ಪಾಪ ಸಮರ್ಥಿಸಿಕೊಳ್ಳುವ ಅನಿವಾರ್ಯತೆ ಅವರಿಗಿದೆ!
ಸಮ್ಮಿಶ್ರ ಸರಕಾರದ ಪ್ರಶಸ್ತಿ ಮಹಾತ್ಮೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಕ್ಕಟ್ಟಿಗೆ ಸಿಲುಕಿದೆ. 10 ಸಾವಿರ ರೂ.ಮೌಲ್ಯದ 22 ಕ್ಯಾರೆಟ್ ಚಿನ್ನದ ಪದಕ ಪ್ರಶಸ್ತಿ ಪತ್ರ ಮತ್ತು ಶಾಲನ್ನು ಪ್ರಶಸ್ತಿ ಒಳಗೊಂಡಿದೆ. 109 ಮಂದಿಗೆ ಒಟ್ಟಾರೆ, 10.90 ಲಕ್ಷ ರೂ.ಗಳು ಅಗತ್ಯ. ಹೆಚ್ಚುವರಿ ಪ್ರಶಸ್ತಿಗಳ ಹೊರೆಯ ಪರಿಣಾಮ, ಇಲಾಖೆಯ ಚಟುವಟಿಕೆಗಳು ಕುಂಠಿತವಾಗುವ ಅಪಾಯಗಳಿವೆ.
‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂದು ಹಾಡುವುದನ್ನು ನಿಲ್ಲಿಸಿ, ಉದಯವಾಗಿರುವ ನಾಡು ಆಸ್ತಂಗತವಾಗದಂತೆ ಎಚ್ಚರವಹಿಸಬೇಕಾಗಿದೆ. ಕನ್ನಡವನ್ನು ಆಡಳಿತ ಭಾಷೆಯಾಗಿ ಜಾರಿಗೆ ತರುವ ಬಗೆಗಿನ ಹಿಂದಿನ ಮುಖ್ಯಮಂತ್ರಿಗಳ, ಹೇಳಿಕೆಯನ್ನು ಮುಖ್ಯಮಂತ್ರಿ ಧರ್ಮಸಿಂಗ್ ಪುನಾರಾವರ್ತಿಸಿದ್ದಾರೆ. ಕನ್ನಡ ಬಳಸದ ಅಧಿಕಾರಿಗಳ ಬಗೆಗೆ ಗುರ್ ಎಂದಿದ್ದಾರೆ. ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಕನ್ನಡ ನಿರ್ಲಕ್ಷ್ಯ ಮಾಡಿರುವ ಅಧಿಕಾರಿಗಳನ್ನು ಪಟ್ಟಿಮಾಡಿದ್ದರು. ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ನೀಡಿದ್ಧ ಪಟ್ಟಿ ಯಾವ ಮೂಲೆ ಸೇರಿದೆಯೋ ಮುಖ್ಯಮಂತ್ರಿಗಳೇ ತಿಳಿಸಬೇಕು.
ಕರ್ನಾಟಕದಲ್ಲಿ ಕನ್ನಡದ ಸ್ಥಿತಿ ಯಾವ ಮಟ್ಟ ತಲುಪಿದೆ ಎನ್ನುವುದನ್ನು ರಾಜ್ಯೋತ್ಸವದ ಬೆನ್ನಲ್ಲಿ, ಕನ್ನಡ ಚಿತ್ರೋದ್ಯಮದ ಬಿಕ್ಕಟ್ಟು ಸಮರ್ಥವಾಗಿ ಅರ್ಥಮಾಡಿಸಿದೆ. ಏಳು ವಾರಗಳ ನಂತರ ಪರಭಾಷಾ ಚಿತ್ರಗಳ ಪ್ರದರ್ಶಿಸುವ ತೀರ್ಮಾನ, ಪರಭಾಷೆಯವರಿಗಿಂತಲೂ ಕನ್ನಡಿಗರಿಗೆ ಹೆಚ್ಚಿನ ಬೇಸರ ಹುಟ್ಟಿಸಿದೆ. ಈ ಸಂದರ್ಭದಲ್ಲಿ ಚಿತ್ರಪ್ರದರ್ಶಕರ ಧೋರಣೆ ಕನ್ನಡದ ಅವನತಿಯನ್ನು ಬಿಂಬಿಸಿದೆ. ‘ಕನ್ನಡ ಚಿತ್ರಗಳು ಚೆನ್ನಾಗಿರೋದಿಲ್ಲ... ಪರಭಾಷಾ ಚಿತ್ರಗಳು ಚೆನ್ನಾಗಿರುತ್ತವೆ ...ಹೀಗಾಗಿ ಅವುಗಳನ್ನು ಮಾತ್ರ ನೋಡುತ್ತೇವೆ’ ಎನ್ನುತ್ತಾರೆ ಯುವ ಕನ್ನಡಿಗರು.
‘ನಾಡಿನೊಳಗೆ ನಾಡು ಚಲುವ ಕನ್ನಡನಾಡು’ ಎನ್ನುವ ಹುಸಿ ಭ್ರಮೆಗಳಿಂದ ಹೊರಬಂದು ಸದ್ಯದ ನಾಡಿನ ಸ್ಥಿತಿಗತಿಗಳ ಗಮಸಿಸ ಬೇಕಾಗಿದೆ. ಮಮ್ಮಿ ಡ್ಯಾಡಿ ಸಂಸ್ಕೃತಿ, ಹಿಂದಿ ಮತ್ತು ಆಂಗ್ಲ ಭಾಷೆಗಳು ನಡೆಸುತ್ತಿರುವ ಸವಾರಿ, ಗಡಿ ಭಾಗದ ಸಂಕಷ್ಟ ಸ್ಥಿತಿ, ಕನ್ನಡಿಗರ ನಿರಭಿಮಾನ, ತಮಿಳು, ತೆಲುಗು, ಮರಾಠಿಗಳು ಆರ್ಭಟ ಇವೆಲ್ಲವನ್ನೂ ವಿರೋಧಿಸುವ ಹಕ್ಕನ್ನು ವನ್ನು ನಮ್ಮ ಕನ್ನಡ ಹೋರಾಟಗಾರರು, ಭಾಷಣಗಾರರಿಗೆ ನೀಡಿ ಕನ್ನಡಿಗರು ಕೈಕಟ್ಟಿ ಕುಳಿತಿದ್ದಾರೆ.












Click it and Unblock the Notifications