ನಿಸಾರ್, ಜಯಂತಿ, ಎ.ಎಸ್.ಮೂರ್ತಿಗೆ ಸಂದೇಶ ಪ್ರಶಸ್ತಿ
ಮಂಗಳೂರು : ನಿತ್ಯೋತ್ಸವ ಕವಿ ನಿಸಾರ್ ಅಹಮದ್, ಅಭಿನಯ ಶಾರದೆ ಜಯಂತಿ, ಆಕಾಶವಾಣಿ ಈರಣ್ಣ ಎ.ಎಸ್.ಮೂರ್ತಿ, ಪತ್ರಕರ್ತ ವೈಕುಂಠ ರಾಜು ಸೇರಿದಂತೆ ಎಂಟು ಮಂದಿ ಸಾಧಕರಿಗೆ 2003ನೇ ಇಸವಿಯ ಸಂದೇಶ ಪ್ರತಿಷ್ಠಾನದ ಪ್ರಶಸ್ತಿ ಸಲ್ಲಲಿದೆ.
ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಬಿ.ಎ.ವಿವೇಕ್ ರೈ ಗುರುವಾರ ಸುದ್ದಿಗಾರರಿಗೆ ಪ್ರಶಸ್ತಿಗೆ ಆಯ್ಕೆಯಾಗಿರುವವರ ಹೆಸರುಗಳನ್ನು ತಿಳಿಸಿದರು. ಸಂದೇಶ ಪ್ರಶಸ್ತಿಯಲ್ಲದೆ ವಿಶೇಷವಾಗಿ ಗುರ್ತಿಸಿಕೊಂಡವರಿಗೂ ಪ್ರತಿಷ್ಠಾನ ಪ್ರಶಸ್ತಿ ನೀಡಲಿದೆ. ಸಂದೇಶ ಪ್ರಶಸ್ತಿಯು 10 ಸಾವಿರ ರುಪಾಯಿ ಹಾಗೂ ಬಿನ್ನವತ್ತಳಿಕೆ ಮತ್ತು ವಿಶೇಷ ಸಾಧಕರಿಗೆ ಕೊಡಮಾಡುವ ಪ್ರಶಸ್ತಿಯು 5 ಸಾವಿರ ರುಪಾಯಿ ನಗದು ಹಾಗೂ ಬಿನ್ನವತ್ತಳಿಕೆಯನ್ನು ಒಳಗೊಂಡಿದೆ ಎಂದು ಪ್ರತಿಷ್ಠಾನದ ನಿರ್ದೇಶಕ ಫಾದರ್ ಡೆನ್ನಿಸ್ ಡಿಸೋಜ ಹೇಳಿದರು.
ಸಂದೇಶ ಪ್ರಶಸ್ತಿಗೆ ಭಾಜನರಾದ ಇತರರು-
ಮುಂಬಯಿಯ ಜೆ.ಬಿ.ಸೆಕ್ವೆರ (ಕೊಂಕಣಿ)
ಸಂಡೂರಿನ ಬುರ್ರಕಥಾ ಈರಮ್ಮ ದಾರೋಜಿ (ಕಲೆ)
ಮಂಗಳೂರಿನ ಪಿ.ಎಸ್.ರಾವ್ (ತುಳು)
ಮಂಗಳೂರಿನ ಗಣೇಶ್ ಸೋಮಯಾಜಿ (ಉತ್ತಮ ಮೇಷ್ಟ್ರು).
ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿರುವವರು-
ಮೂಡಬಿದ್ರಿಯ ಡಾ.ಮೋಹನ್ ಆಳ್ವ (ಕಲೆ ಮತ್ತು ಸಂಸ್ಕೃತಿ)
ಮಂಗಳೂರಿನ ಕರ್ನಾಟಕ ಥಿಯಲಾಜಿಕಲ್ ಕಾಲೇಜು (ಕನ್ನಡ, ತುಳು ಭಾಷೆ ಮತ್ತು ಸಾಹಿತ್ಯ ಹಾಗೂ ಸಂಸ್ಕೃತಿ)
ರೆವರೆಂಡ್ ಫಾದರ್ ವಾಲ್ಟರ್ ಅಲ್ಬುಕರ್ಕ್ (ಧಾರ್ಮಿಕ ಸಂಗೀತ)
ಡಾ.ವಿಜಯಾ ದಬ್ಬೆ, ಸಮತಾ ವೇದಿಕೆ, ಮೈಸೂರು (ಮಹಿಳಾ ಜಾಗೃತಿ ಮತ್ತು ಸ್ತ್ರೀ ಸಾಹಿತ್ಯ)
ಬೆಳಗಾವಿಯ ನಾರಾಯಣ ಅತಿವಾಡ್ಕರ್ (ಮೂಢನಂಬಿಕೆ ಹೋಗಲಾಡಿಸುವಿಕೆ ಮತ್ತು ಸಾಮಾಜಿಕ ನ್ಯಾಯ).
ಫೆಬ್ರವರಿ 14ನೇ ತಾರೀಕು ಮಂಗಳೂರಿನಲ್ಲಿ ಸಮಾರಂಭವೊಂದನ್ನು ಆಯೋಜಿಸಿ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ಅವರಿಂದ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡೆನ್ನಿಸ್ ಡಿಸೋಜ ಹೇಳಿದರು.
(ಪಿಟಿಐ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications