ಅಂತೂ ದೋಣಿಯನ್ನು ತೇಲಿಸಿದೆವು !
ಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ ನೀರೆಬೈಲೂರಿನಿಂದ ನಾಲ್ಕು ಮೈಲಿ ದೂರದ ಸುವರ್ಣಾ ನದಿಯ ಉತ್ತರ ತಟದ ಶಿರೂರು ಗ್ರಾಮದಲ್ಲಿ ಹೊಸ ಅಗಮೆ ಮಾಡಿ ನಿರ್ಮಿಸಿದ ಬೃಹತ್ ತೆಂಗಿನ ತೋಟ ಹಾಗೂ ಐದು ಎಕರೆ ಗದ್ದೆ.
ತಾ : 28 ಜೂನ್ 1968.
ಸುವರ್ಣಾ ನದಿ ಕೆಂಪಾಗಿ ಉಕ್ಕಿ ಹರಿಯುತ್ತಿದ್ದಳು. ಹದಿನಾರು ಮೈಲು ದೂರದ ಉಡುಪಿಗೆ ಅಂದು ಬೆಳಗ್ಯೆ ಸೈಕಲ್ ಮೇಲೆ ಹೊರಟು ಮನೆಗೆ ಬೇಕಾದ ದಿನಸಿ ಸಾಮನು, ಸೀಮೆಎಣ್ಣೆ ಕೊಂಡು ಪ್ಲಾಸ್ಟಿಕ್ ಶೀಟಿನಲ್ಲಿ ಸುತ್ತಿ ಸೈಕಲ್ ಕ್ಯಾರಿಯರಿಗೆ ಕಟ್ಟಿಕೊಂಡು ಸಾಯಂಕಾಲಕ್ಕೆ ವಾಪಸ್ ಮರಳಿದೆ.
ಮಳೆ ಧಾರಕಾರ ಸುರಿಯುತ್ತಿತ್ತು. ರೈನ್ ಕೋಟ್ ಇದ್ದರೂ, ಮಳೆಯೆಲ್ಲ ಅದರೊಳಗೇ! ನಮ್ಮ ಸ್ವಂತ ದೋಣಿಯ ಮೇಲೆ ಸೈಕಲ್ ಏರಿಸಿಕೊಂಡು ಉಕ್ಕಿ ಪ್ರವಹಿಸುತ್ತಿದ್ದ ನದಿಯನ್ನು ಪ್ರಯಾಸದಿಂದ ದಾಟಿ, ನನ್ನ ಪುಟ್ಟ ಬಿಡಾರ ತಲುಪಿದೆ.
ಆ ಸಂಜೆಗೆ ಮಳೆ ನಿಲ್ಲುವ ಸೂಚನೆಯೇ ಕಾಣಲಿಲ್ಲ. ಮುಂಜಾಗ್ರತೆಯಿಂದ ದೋಣಿಯನ್ನು ಉದ್ದವಾದ ಹಗ್ಗ ಬಳಸಿ ನದಿಯ ಬದಿಯಲ್ಲಿದ್ದ ದೊಡ್ಡ ಹಲಸಿನ ಮರಕ್ಕೆ ಬಿಗಿದೆ.
‘ಹತ್ತು ಅಡಿ ನೀರು ಏರಿಬಂದರೂ ಚಿಂತೆಯಿಲ್ಲ’ ಎಂದು ಮನೆಗೆ ಮರಳಿ ಬೆಚ್ಚಗಿನ ಬೆಂಕಿಮಾಡಿ, ಅಟ್ಟು ಉಂಡು ನಿದ್ರಾಲೋಕ ಸೇರಿಬಿಟ್ಟೆ . ರಾತ್ರೆ ಇಡೀ ಗಾಢಾಂಧಕಾರ ಹಾಗೂ ಜಡಿ ಮಳೆ.
ಮರುದಿನ ಬೆಳಗ್ಯೆ ಬೆಳಕು ಹರಿಯುವಷ್ಟರಲ್ಲಿ ಮಳೆ ಸ್ವಲ್ಪ ಕಡಿಮೆಯಾದಂತೆ ನನಗೆ ಅನಿಸಿತು.
‘ದೋಣಿಯ ಅವಸ್ಥೆ ಏನಾಗಿದೆ?’ ಎಂದು ನೋಡಲು ಹೋದೆ.
ರಾತ್ರಿ ನೀರಿನ ಮಟ್ಟ ಹನ್ನೆರಡು ಅಡಿಗಳಿಗಿಂತಲೂ ಹೆಚ್ಚಿಗೆ ಏರಿ, ಬೆಳಗಿನ ಜಾವದಿಂದ ನೀರಿನ ಮಟ್ಟ ಇಳಿಯುತ್ತಾ ಇತ್ತು.
ನೋಟಕ್ಕೇನೋ ದೋಣಿ ಸುರಕ್ಷಿತವಾಗೇ ಇತ್ತು - ಉದ್ದನೆಯ ಹಗ್ಗದ ತುದಿಯಲ್ಲಿ !
ಆದರೆ, ಅದು ತೇಲುತ್ತಿರಲಿಲ್ಲ.
ಅದು ನನ್ನ ಪಂಪ್ ಶೆಡ್ಡಿನ ಹತ್ತು ಅಡಿ ಎತ್ತರದ ಕಾಂಕ್ರೀಟ್ ಮಾಡಿನ ಮೇಲೆ ಸುಖವಾಗಿ ಕುಳಿತಿತ್ತು ! ನನ್ನ ಡೀಸೆಲ್ ಪಂಪ್ ನೀರು ಕುಡಿಯುತ್ತಾ ನೆರೆ ನೀರಿನಲ್ಲಿ ಕುಳಿತಿತ್ತು!
ಆ ದಿನ ಸಂಜೆ ಮಳೆ ಬಿಟ್ಟ ನಂತರ ಹತ್ತಾರು ಜನ ಸೇರಿ, ದೋಣಿಯಲ್ಲಿನ ನೀರು ಖಾಲಿಮಾಡಿ, ಶತಪಯತ್ನದಿಂದ ದೋಣಿಯನ್ನು ಕೆಳಗಿಳಿಸಿ, ಅದನ್ನು ನದಿಗೆ ನೂಕಿ ಪುನಃ ತೇಲಿಸಿದೆವು.
- ನನ್ನ ‘ನೆನಪಿನ ದೋಣಿ’ ಇಂದ.