ಹಾಸ್ಯ ಸಾಹಿತ್ಯವೆಂಬುದು ಬರಿಯ ‘ಜೋಕಲ್ಲ’ ಅಂತಾರೆ ಟಿ. ಸುನಂದಮ್ಮ
ಬೆಂಗಳೂರು, ಜ.20 : ಪರಿಸ್ಥಿತಿ, ಪರಿಸರ, ಜೀವನ, ರಾಜಕೀಯ, ಸಾಮಾಜಿಕ ನೋವು - ನಲಿವುಗಳನ್ನು ವಿಡಂಬನಾತ್ಮಕವಾಗಿ ಕೃತಿಗಿಳಿಸುವುದು ಹಾಸ್ಯ ಸಾಹಿತ್ಯ. ಆದರೆ, ಇಂದು ಹಾಸ್ಯ ಸಾಹಿತ್ಯ ಎಂಬುದು ಕೇವಲ ಜೋಕ್ಸ್ ಎಂಬಂತಾಗಿದೆಯೇ ಪರಂತು ಹಾಸ್ಯ ಸಾಹಿತ್ಯವಾಗಿಲ್ಲ ಎಂದು ಖ್ಯಾತ ಸಾಹಿತಿ ಟಿ. ಸುನಂದಮ್ಮ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಕನ್ನಡ ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಇಂದು ನಿಜ ಅರ್ಥದಲ್ಲಿ ಹಾಸ್ಯ ಸಾಹಿತ್ಯ ಮೂಡಿ ಬರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ತಮ್ಮ 84ವರ್ಷಗಳ ಜೀವಿತದ ಹಾಸ್ಯ ಸನ್ನಿವೇಶಗಳನ್ನು ಒಂದೊಂದಾಗಿ ಹೆಕ್ಕಿ ತೆಗೆದ ಅವರು, ತಮ್ಮ ಪ್ರಾಥಮಿಕ ಶಾಲೆಯ ಅನುಭವಗಳನ್ನೂ ಪ್ರೇಕ್ಷಕರೊಂದಿಗೆ ಹಂಚಿಕೊಂಡರು. ತಾವೂ ನಕ್ಕರು, ಪ್ರೇಕ್ಷಕರನ್ನೂ ನಗಿಸಿದರು. ಮಹಿಳೆ ಸಾಹಿತ್ಯದಿಂದ ದೂರವಿದ್ದ ಕಾಲದಲ್ಲಿ, ಮಿಗಿಲಾಗಿ ಹಾಸ್ಯ ಸಾಹಿತ್ಯದ ಕೊರತೆ ಇದ್ದ ಸಂದರ್ಭದಲ್ಲಿ ತಾವು ಆ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾಗಿಯೂ ತಿಳಿಸಿದರು.
ಈ ಹಂತದಲ್ಲಿ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ರಾ.ಶಿ ಮಿಗಿಲಾಗಿ ಕೊರವಂಜಿ ಪತ್ರಿಕೆ ತಮಗೆ ನೀಡಿದ ಪ್ರೋತ್ಸಾಹ, ಸ್ಫೂರ್ತಿಯನ್ನು ಅವರು ಸ್ಮರಿಸಿದರು. ತಮಗೆ ಹಾಸ್ಯ ಲೇಖಕಿ ಎಂಬ ಹಣೆಪಟ್ಟಿ ಬಿದ್ದಿರುವುದರಿಂದ, ತಾವು ರಚಿಸಿರುವ ಗೀತ ರೂಪಕಗಳು ಹಲವರ ಗಮನಕ್ಕೆ ಬಂದಿಲ್ಲ ಎಂದರು.
ಕೇವಲ ನಗಿಸಬೇಕು ಎಂಬ ಒಂದೇ ಕಾರಣಕ್ಕಾಗಿ ಬರೆಯುವುದು ಹಾಸ್ಯ ಸಾಹಿತ್ಯವಲ್ಲ. ಅದು ಜೋಕ್ ಆಗುತ್ತದೆ ಅಷ್ಟೇ. ಇಷ್ಟು ಪೆದ್ದು ಪೆದ್ದಾಗಿರುವುದು ಹಾಸ್ಯ ಸಾಹಿತ್ಯವಾಗಲು ಹೇಗೆ ಸಾಧ್ಯ ಎಂಬ ಅನುಮಾನ ಮೂಡುತ್ತದೆ. ಹಾಸ್ಯ ಸಾಹಿತ್ಯ ಹಾಸ್ಯಾಸ್ಪದವಾಗುತ್ತಿದೆ ಎಂದವರು ಹೇಳಿದರು. ಕನ್ನಡ ಸಾಹಿತ್ಯ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಸುನಂದಮ್ಮ ವಿಷಾದ ವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications