ಸಿನಿಮಾ ರೋಗಗ್ರಸ್ತ ,ಟೀವಿ ರೋಗಗ್ರಸ್ತ ಆಗುವತ್ತ ,ನಾಟಕ ಜೀವಂತ
ದಾವಣಗೆರೆ : ಕಪ್ಪು ಹಣ ಬಿಳಿ ಮಾಡಲು ಕಲಾ ಮಾಧ್ಯಮ ಬಳಕೆಯಾಗುತ್ತಿದೆ. ಭೂಗತ ದೊರೆಗಳು ಸಿನಿಮಾ ನಿರ್ಮಾಪಕರಾಗುತ್ತಿದ್ದಾರೆ ಎಂದು ರಂಗಾಯಣದ ಮಾಜಿ ಅಧ್ಯಕ್ಷ ಸಿ.ಬಸವಲಿಂಗಯ್ಯ ವಿಷಾದಿಸಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿ ದಾವಣಗೆರೆಯ ವನಿತಾ ಸಮಾಜ ರಂಗಮಂದಿರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬಾ ಅತಿಥಿ ಸಂವಾದ ಕಾರ್ಯಕ್ರಮದಲ್ಲಿ ಬಸವಲಿಂಗಯ್ಯ ಮಾತನಾಡುತ್ತಿದ್ದರು. ಸಿನಿಮಾ ಮಾಧ್ಯಮ ರೋಗಗ್ರಸ್ತವಾಗಿದೆ, ಟೀವಿ ಮಾಧ್ಯಮ ಕೆಲವೇ ವರ್ಷಗಳಲ್ಲಿ ರೋಗಗ್ರಸ್ತವಾಗಲಿದೆ. ಆದರೆ ರಂಗಭೂಮಿ ಜೀವಂತಿಕೆ ಪಡೆದುಕೊಳ್ಳುತ್ತಿದೆ ಎಂದು ಅವರು ಪ್ರಸಕ್ತ ಕಲಾ ಸಂದರ್ಭವನ್ನು ವಿಶ್ಲೇಷಿಸಿದರು.
ಕಲೆಯ ವಾಣಿಜ್ಯೀಕರಣ
ಬಹುರಾಷ್ಟ್ರೀಯ ಕಂಪನಿಗಳ ಸ್ವಾಧೀನಕ್ಕೆ ಕಲಾ ಮಾಧ್ಯಮಗಳು ಪಕ್ಕಾಗುತ್ತಿದ್ದು, ಹಣದ ಆಸೆಯಿಂದ ಜಾಹಿರಾತುಗಳಲ್ಲಿ ಕಲಾವಿದರು ಮುಖ ತೋರಿಸುತ್ತಿದ್ದಾರೆ. ಕಲಾವಿದರು ಮತ್ತು ಸಾಹಿತಿಗಳು ತಮ್ಮತನ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಜನಪದ ಕಲಾವಿದರು ಮತ್ತು ದೇವದಾಸಿಯರು ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಅವರು ಕಲೆಯನ್ನು ವ್ಯಾಪಾರ ಮಾಡಲಿಲ್ಲ ಎಂದು ಬಸವಲಿಂಗಯ್ಯ ಹೇಳಿದರು.
ಚಳವಳಿಗಳು ಅಂತರ್ಗತವಾಗುತ್ತಿರುವ ಈ ಹೊತ್ತು ಭಾರತ ಗುಲಾಮಗಿರಿಯತ್ತ ಸಾಗಿದೆ. ಪ್ರತಿಯಾಬ್ಬರೂ ಗಾಂಧಿ, ಬಸವಣ್ಣ, ಅಂಬೇಡ್ಕರ್ ಆಗಬೇಕಾದ ಅನಿವಾರ್ಯತೆ ಎದುರಾಗಿದೆ. ಕಲಾವಿದ ಮಾನಸಿಕ ವೈದ್ಯನಂತೆ ಕೆಲಸ ಮಾಡುತ್ತಾನೆ. ರಂಗಭೂಮಿಯಿಂದ ಬದಲಾವಣೆ ಸಾಧ್ಯವಿಲ್ಲ . ಆದರೆ ಜಾಗೃತಿ ಮೂಡಿಸಬಹುದು ಎಂದು ಬಸವಲಿಂಗಯ್ಯ ಅಭಿಪ್ರಾಯಪಟ್ಟರು.
ಲೇಖಕರಾದ ಬಿ.ವಿ. ವೀರಭದ್ರಪ್ಪ, ಎಸ್.ಎಸ್.ಹಿರೇಮಠ್ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕಡಕೋಳ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications