ಗೋಪಾಲಕೃಷ್ಣ ಗೋಖಲೆ ಬಾಲ್ಯದಲ್ಲಿ ಹೇಗಿದ್ದರು?
*ಎಂ.ವಿ.ನಾಗರಾಜ ರಾವ್
ಶಾಲಾ ಮಾಸ್ತರು ತರಗತಿಯಲ್ಲಿ ಗಣಿತದ ಪಾಠವನ್ನು ಹೇಳಿಕೊಟ್ಟರು. ಮನೆಯಲ್ಲಿ ಒಂದು ಲೆಕ್ಕವನ್ನು ಮಾಡಿಕೊಂಡು ಬರುವಂತೆ ವಿದ್ಯಾರ್ಥಿಗಳಿಗೆ ಹೇಳಿದರು. ಯಾರು ಲೆಕ್ಕವನ್ನು ಸರಿಯಾಗಿ ಬಿಡಿಸಿಕೊಂಡು ಬರುತ್ತಾರೋ ಅವರಿಗೆ ಒಂದು ಬಹುಮಾನವನ್ನು ಕೊಡುವುದಾಗಿ ಘೋಷಿಸಿದರು. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಖುಷಿಯಾಯಿತು.
ಮಾರನೆಯ ದಿನ ತರಗತಿ ಪ್ರಾರಂಭವಾಯಿತು. ಗಣಿತದ ಮಾಸ್ತರರು ‘ನಿನ್ನೆ ಕೊಟ್ಟಿದ್ದ ಲೆಕ್ಕವನ್ನು ಯಾರು ಬಿಡಿಸಿದ್ದೀರಿ?’ ಎಂದು ಕೇಳಿದರು. ಎಲ್ಲಾ ವಿದ್ಯಾರ್ಥಿಗಳು ತಲೆ ತಗ್ಗಿಸಿದರು. ಅವರಾರೂ ಲೆಕ್ಕವನ್ನು ಬಿಡಿಸಿರಲಿಲ್ಲ. ಅದು ಅವರಿಗೆ ಕಠಿಣವಾಗಿತ್ತು.
ಆದರೆ ಒಬ್ಬ ವಿದ್ಯಾರ್ಥಿ ಮಾತ್ರ ಎದ್ದು ನಿಂತು ತಾನು ಬಿಡಿಸಿಕೊಂಡು ಬಂದಿದ್ದ ಲೆಕ್ಕವನ್ನು ಮಾಸ್ತರರಿಗೆ ತೋರಿಸಿದ. ಅದು ಸರಿಯಾಗಿತ್ತು. ಮಾಸ್ತರರು ಅವನನ್ನು ಪ್ರಶಂಸಿಸಿದರು ಮತ್ತು ಅವನಿಗೆ ದೊಡ್ಡ ಬಹುಮಾನವನ್ನು ಕೊಟ್ಟರು. ವಿದ್ಯಾರ್ಥಿ ಸಂತೋಷದಿಂದ ಬೀಗಿದ. ಉಳಿದ ವಿದ್ಯಾರ್ಥಿಗಳಿಗೆ ಇದರಿಂದ ಆಶ್ಚರ್ಯವಾಗಿತ್ತು. ತಮ್ಮ ಜೊತೆಗಾರ ಇಂಥ ಕಠಿಣವಾದ ಲೆಕ್ಕವನ್ನು ಹೇಗೆ ಬಿಡಿಸಿದ ಎನ್ನುವುದು ಅವರಿಗೆ ಒಗಟಾಗಿತ್ತು.
ಆದರೆ ಆ ವಿದ್ಯಾರ್ಥಿಗೆ ಇಡೀ ರಾತ್ರಿ ನಿದ್ದೆ ಬರಲಿಲ್ಲ . ಮಾಸ್ತರರು ತನ್ನ ಮೇಲಿಟ್ಟ ನಂಬಿಕೆಗೆ ಮೋಸ ಮಾಡಿದೆ ಎಂದು ಅವನ ಮನಸ್ಸು ವ್ಯಥಿತವಾಗಿತ್ತು . ಅವನು ಆ ಲೆಕ್ಕವನ್ನು ಬೇರೆಯವರ ಸಹಾಯದಿಂದ ಬಿಡಿಸಿದ್ದ . ನ್ಯಾಯವಾಗಿ ಬಹುಮಾನ ಅವನಿಗೆ ಸಿಕ್ಕಬೇಕಾಗಿರಲಿಲ್ಲ. ಅವನು ಪಶ್ಚಾತ್ತಾಪದ ಅಗ್ನಿಯಲ್ಲಿ ಬೆಂದಿದ್ದ.
ಬೆಳಗ್ಗೆ ತರಗತಿಗಳು ಆರಂಭವಾದವು. ವಿದ್ಯಾರ್ಥಿ ಮುಂದೆ ಬಂದು ಗುರುಗಳ ಕಾಲು ಹಿಡಿದು ಕ್ಷಮೆ ಕೇಳಿದ. ಗುರುವರ್ಯ, ಈ ಬಹುಮಾನಕ್ಕೆ ನಾನು ಅರ್ಹನಲ್ಲ. ದಯವಿಟ್ಟು ಇದನ್ನು ಹಿಂದಕ್ಕೆ ತೆಗೆದುಕೊಳ್ಳಿ ಎಂದು ಹೇಳಿದ.
ಇಡೀ ತರಗತಿಯಲ್ಲಿ ಒಂದು ಕ್ಷಣ ಮೌನ ಕವಿಯಿತು. ಈ ಬಾಲಕ ಏನು ಹೇಳುತ್ತಿದ್ದಾನೆಂದು ತಿಳಿಯದೆ ಮಾಸ್ತರರು ಚಕಿತರಾದರು. ‘ಮಗು, ಏನು ವಿಷಯ ಹೇಳು. ನಿನ್ನ ದುಃಖಕ್ಕೆ ಕಾರಣವೇನು?’ ಎಂದು ಅವನ ಕಣ್ಣೀರು ಒರೆಸುತ್ತಾ ಕೇಳಿದರು.
‘ನಾನು ಆ ಲೆಕ್ಕವನ್ನು ಬಿಡಿಸಲಿಲ್ಲ . ನೆರೆಮನೆಯವರೊಬ್ಬರ ಸಹಾಯದಿಂದ ಬಿಡಿಸಿದೆ. ಆದ್ದರಿಂದ ನಾನು ಬಹುಮಾನವನ್ನು ಪಡೆಯುವುದು ಸರಿಯಲ್ಲ ... ನನ್ನನ್ನು ಕ್ಷಮಿಸಿ. ಮುಂದೆಂದೂ ನನ್ನ ಜೀವನದಲ್ಲಿ ಇಂಥ ತಪ್ಪು ಮಾಡುವುದಿಲ್ಲ’ ಎಂದು ವಿದ್ಯಾರ್ಥಿ ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದನು.
ವಿದ್ಯಾರ್ಥಿಯ ಮಾತು ಕೇಳಿ ಮಾಸ್ತರರು ಗದ್ಗದಿತರಾದರು. ಅವನನ್ನು ಆಲಂಗಿಸಿಕೊಂಡು ಕಣ್ಣೀರು ಒರೆಸಿದರು. ‘ತಪ್ಪು ಮಾಡುವುದು ಮತ್ತು ಮೋಸ ಮಾಡುವುದು ನಿನ್ನ ಸ್ವಭಾವವಲ್ಲ . ಆದ್ದರಿಂದಲೇ ನಿನಗೆ ಇಷ್ಟು ದುಃಖವಾಗಿದೆ. ನೀನು ನಿನ್ನ ತಪ್ಪನ್ನು ಒಪ್ಪಿಕೊಂಡಿದ್ದೀಯ. ಇದು ಮೆಚ್ಚುವಂಥದು. ನೀನು ಮುಂದೆ ಮಹಾನ್ ವ್ಯಕ್ತಿಯಾಗುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ .’
ಮುಂದೆ ಇದೇ ಬಾಲಕ ಮಹಾನ್ ನ್ಯಾಯವಾದಿ ಗೋಪಾಲಕೃಷ್ಣ ಗೋಖಲೆ ಎಂದು ಹೆಸರು ಪಡೆದು ಭಾರತದ ಸುಪುತ್ರ ಎಂದೇ ಜನಪ್ರಿಯರಾದರು.
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications