ಮಳೆ, ಚಳಿ, ಬಿಸಿಲಲ್ಲಿ ಚರ್ಮದ ರಕ್ಷಣೆಗೆ ಏನೆಲ್ಲ ಮಾಡಬೇಕು? ಇಲ್ಲಿದೆ ಸೂಕ್ತ ಸಲಹೆ
ಮಳೆ, ಚಳಿ, ಬಿಸಿಲು ಹೀಗೆ ವಾತಾವರಣದ ಏರುಪೇರುಗಳು ಸದಾ ನಮ್ಮ ತ್ವಚೆಯ ಮೇಲೆ ಪರಿಣಾಮಗಳನ್ನು ಬೀರುತ್ತಲೇ ಇರುತ್ತದೆ. ಹೀಗಾಗಿ ಕೆಲವೊಮ್ಮೆ ತ್ವಚೆ ಗಡಸಾಗುವುದು, ತುರಿಕೆ ಕಾಣಿಸಿಕೊಳ್ಳುವುದು ಹೀಗೆ ಒಂದಲ್ಲ ಒಂದು ಸಮಸ್ಯೆಗಳು ಕಾಡುವುದರೊಂದಿಗೆ ಕಾಪಾಡಿಕೊಂಡಿದ್ದ ಸುಂದರ ತ್ವಚೆಗೆ ಸಂಕಷ್ಟ ತಂದೊಡ್ಡಿ ಬಿಡುತ್ತದೆ. ಹೀಗಾಗಿಯೇ ಕಾಲಕ್ಕೆ ತಕ್ಕಂತೆ ತ್ವಚೆಯನ್ನು ಕಾಪಾಡಿಕೊಳ್ಳುವುದು ಜಾಣತನವೇ.
ಇತ್ತೀಚೆಗಿನ ದಿನಗಳಲ್ಲಿ ನಮ್ಮ ದೈಹಿಕ ಆರೋಗ್ಯದ ಜತೆಗೆ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ಒಂದು ಸವಾಲ್. ನಮ್ಮ ಸೌಂದರ್ಯದ ಗುಟ್ಟಾಗಿರುವ ಚರ್ಮವನ್ನು ಕಾಲಕ್ಕೆ ತಕ್ಕಂತೆ ರಕ್ಷಿಸಿ ಅದನ್ನು ಜತನದಿಂದ ನೋಡಿಕೊಳ್ಳುವುದು ಸುಲಭವಾಗಿ ಉಳಿದಿಲ್ಲ. ತ್ವಚೆಯ ಸೌಂದರ್ಯ ಎನ್ನುವುದು ಕೇವಲ ಮುಖದ್ದಾಗಿ ಉಳಿದಾಗಿಲ್ಲ. ಕೈಕಾಲು ಹೀಗೆ ಒಟ್ಟಾರೆ ದೇಹದ ಚರ್ಮಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯವಾಗುತ್ತದೆ.

ಇದು ಮುಖದಲ್ಲಿ ಅಥವಾ ಇನ್ನೆಲ್ಲಾದರೂ ಚರ್ಮದಲ್ಲಿ ಕಲೆಗಳು ಕಾಣಿಸಿದರೆ ಅಥವಾ ಇನ್ನೇದರೂ ಸಮಸ್ಯೆವುಂಟಾದರೆ ಚರ್ಮಕ್ಕೆ ಸಂಬಂಧಿಸಿದ ತಜ್ಞರನ್ನು ಕಂಡು ಅವರ ಸಲಹೆಯಂತೆ ಔಷಧಿಯನ್ನು ಬಳಸಬೇಕಾಗುತ್ತದೆ. ಅದು ಬಿಟ್ಟು ಸ್ವಯಂ ವೈದ್ಯೆ ಮಾಡಿಕೊಳ್ಳುವುದು ಅಪಾಯಕಾರಿಯಾಗಿದೆ. ಸಾಮಾನ್ಯವಾಗಿ ಪ್ರತಿ ಬಾರಿಯೂ ವಾತಾವರಣ ಬದಲಾದಾಗ ನಮ್ಮ ಶರೀರ ಮತ್ತು ಆರೋಗ್ಯದಲ್ಲಿ ಒಂದಷ್ಟು ಬದಲಾವಣೆಗಳಾಗುತ್ತವೆ. ಕೆಲವೊಮ್ಮೆ ಅದು ನಮ್ಮ ಚರ್ಮದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ಬಹು ಅಗತ್ಯ
ಈ ಬಾರಿ ಮಳೆ ಅದರ ಜತೆಗೆ ತಲೆಸುಡುವ ಬಿಸಿಲು, ಈ ನಡುವೆ ಚಳಿಯೂ ಕಾಡುತ್ತಿದೆ. ಹೀಗೆ ವಾತಾವರಣದ ವೈಪರೀತ್ಯತೆ ಕೆಲವೊಮ್ಮೆ ಚರ್ಮದ ಮೇಲೆ ಪರಿಣಾಮ ಬೀರಿದರೂ ಅಚ್ಚರಿಯಿಲ್ಲ. ಇನ್ನು ಚಳಿ ಹೆಚ್ಚಾದರೆ ನಾವೆಷ್ಟೇ ಶರೀರವನ್ನು ಕಾಪಾಡಿಕೊಂಡರೂ ಕೈಕಾಲುಗಳಲ್ಲಿ ಬಿರುಕು, ಚರ್ಮದಲ್ಲಿ ಒಡಕು ಕಂಡು ಬರುವುದು ಸಾಮಾನ್ಯ. ಇದರಿಂದ ಸಂರಕ್ಷಿಸಿಕೊಳ್ಳುವುದೇ ಒಂದು ಸವಾಲ್. ನಮ್ಮ ಶರೀರ ಅಂದವಾಗಿಯೂ, ರೋಗ ಮುಕ್ತವಾಗಿಯೂ ಇರಬೇಕಾದರೆ ಚರ್ಮದ ಬಗೆಗಿನ ಒಂದಷ್ಟು ಕಾಳಜಿ ಅಗತ್ಯ. ಚರ್ಮವನ್ನು ಶುಚಿಯಾಗಿರಿಸಿಕೊಳ್ಳದ ಸಂದರ್ಭ ಪರಿಣಾಮ ಬೀರಿ ಹಲವು ಚರ್ಮ ರೋಗಗಳು ಬರುವ ಸಾಧ್ಯತೆ ಇರುತ್ತದೆ.
ಚರ್ಮ ಸುಂದರವಾಗಿಯೂ, ಆರೋಗ್ಯವಾಗಿಯೂ ಇರಬೇಕಾದರೆ ಕೆಲವೊಂದು ಕ್ರಮಗಳನ್ನು ಅನುಸರಿಸುವುದು ಒಳಿತು. ಆರೋಗ್ಯವಂತ ಚರ್ಮ ನಮ್ಮದಾಗಿದ್ದರೆ ಮಾತ್ರ ಆರೋಗ್ಯವಂತ ಬದುಕು ನಮ್ಮದಾಗಲು ಸಾಧ್ಯವಾಗುತ್ತದೆ. ಹಾಗಾದರೆ ಆರೋಗ್ಯವಂತ ಚರ್ಮ ಯಾವುದಪ್ಪಾ ಎಂಬ ಪ್ರಶ್ನೆಗಳು ನಮ್ಮಲ್ಲಿ ಏಳುತ್ತವೆ. ಕಾಂತಿಯಿಂದ ಮಿನುಗುವ, ಮೃದುವಾಗಿರುವ ಚರ್ಮವೇ ಆರೋಗ್ಯವಂತ ಚರ್ಮವಾಗಿದ್ದು, ಕೆಲವೊಮ್ಮೆ ವಾತಾವರಣದ ಮಾಲಿನ್ಯ, ಅತಿ ಉಷ್ಣ, ಅತಿ ಚಳಿ, ಪೌಷ್ಠಿಕ ಆಹಾರದ ಕೊರತೆ, ಅನಾರೋಗ್ಯ ಪರಿಸರಗಳಲ್ಲಿ ನೆಲೆಸುವುದರಿಂದ ಚರ್ಮದ ಆರೋಗ್ಯಕ್ಕೆ ಧಕ್ಕೆಯುಂಟಾಗುತ್ತದೆ.
ಎಳೆ ಬಿಸಿಲಿನಲ್ಲಿ ವಾಕಿಂಗ್ ಉತ್ತಮ ಅಭ್ಯಾಸ
ಚರ್ಮವು ಆರೋಗ್ಯವಾಗಿರಲು ಸೂರ್ಯನ ಕಿರಣಗಳ ಅಗತ್ಯವಿದೆಯಾದರೂ, ಕೆಲಮೊಮ್ಮೆ ಅಗತ್ಯಕ್ಕಿಂತ ಹೆಚ್ಚಿನ ಸೂರ್ಯನ ಕಾಂತಿಯಿಂದಲೂ ಚರ್ಮಕ್ಕೆ ಹಾನಿಯಾಗುತ್ತದೆ. ಏಕೆಂದರೆ ಸೂರ್ಯ ಕಿರಣದಲ್ಲಿನ ಅತಿನೇರಳೆ ಬಣ್ಣದ ಕಿರಣಗಳು ಚರ್ಮವನ್ನು ಒಣಗುವಂತೆ ಮಾಡಿ ಮೃದುತ್ವವನ್ನು ನಾಶಮಾಡುತ್ತದೆ.

ಸೂರ್ಯ ಕಿರಣಗಳಿಂದಾಗಿ ಉಂಟಾಗುವ ರೆಡಿಯೇಷನ್ನಿಂದಲೂ ಸಹ ಚರ್ಮವು ತನ್ನ ತೇವವನ್ನು ಕಳೆದುಕೊಂಡು ಕಳಾಹೀನವಾಗಿ ಬಿಡುತ್ತದೆ. ಆದುದರಿಂದ ಬೆಳಗಿನ ಎಳೆ ಬಿಸಿಲಿನಲ್ಲಿ ವಾಕಿಂಗ್ ಮಾಡುವುದರಿಂದ ಚರ್ಮ ನುಣುಪಾಗಿರುತ್ತದೆ. ಬಿಸಿಲೇ ತಾಕದಂತೆ ಇದ್ದರೂ ಕೆಲವೊಮ್ಮೆ ಚರ್ಮ ಒಣಗಿ ಸುಕ್ಕು ಕಟ್ಟಿ ಬಿಡುತ್ತದೆ.
ನಾವು ವಾಸವಿರುವ ಮನೆಯ ಸುತ್ತಮುತ್ತ ಕಲುಷಿತ ವಾತಾವರಣ ಇದ್ದಾಗಲೂ ಚರ್ಮಕ್ಕೆ ಕೆಲವು ವ್ಯಾಧಿಗಳು ತಗಲುವ ಸಾಧ್ಯತೆಯಿರುತ್ತದೆ. ಗಾಳಿ, ನೀರು, ಧೂಳು, ಹೊಗೆ, ಅಲರ್ಜಿಕಾರಕ ವಸ್ತುಗಳಿಂದಲೂ ಚರ್ಮಕ್ಕೆ ಹಾನಿಯಾಗುತ್ತದೆ. ತೇವವಾಗಿ ತಣ್ಣಗಿರುವ ವಾತಾವರಣ ಚರ್ಮಕ್ಕೆ ತುಂಬಾ ಒಳ್ಳೆಯದು. ಹಾಗೆಂದು ಮಿತಿಮೀರಿದ ಚಳಿಯಲ್ಲಿ ಓಡಾಡುವುದು ಒಳ್ಳೆಯದಲ್ಲ. ಚಳಿಗಾಲದಲ್ಲಿ ಚರ್ಮ ಒಡೆಯುತ್ತದೆ.
ವೈದ್ಯರ ಸಲಹೆಯನ್ನು ತಪ್ಪದೆ ಪಾಲಿಸಬೇಕು
ವೈದ್ಯರು ಹೇಳುವ ಪ್ರಕಾರ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಪೌಷ್ಟಿಕಾಂಶವುಳ್ಳ ಆಹಾರ, ಕಾಯಿಪಲ್ಯೆ, ತರಕಾರಿಗಳನ್ನು ಆಹಾರವಾಗಿ ಸೇವಿಸಬೇಕು. ಕೇಕ್, ತಂಪು ಪಾನೀಯಗಳು, ಸಿಹಿತಿಂಡಿಗಳು, ಮಸಾಲೆಯ ಪದಾರ್ಥ ತಿನ್ನುವುದನ್ನು ಕಡಿಮೆ ಮಾಡಬೇಕು. ಚರ್ಮಕ್ಕೆ ಹೊಂದಿಕೊಳ್ಳುವ ಸಾಬೂನನ್ನು ಅರಿತು ಅದನ್ನೇ ಉಪಯೋಗಿಸಬೇಕು. ಕೃತಕ ಸೌಂದರ್ಯ ವರ್ಧಕಗಳಿಂದ ಆದಷ್ಟು ದೂರವಿರಬೇಕು. ಬಾದಾಮಿ ಎಣ್ಣೆಯಿಂದ ಚರ್ಮವನ್ನು ಮೃದುವಾಗಿ ಮಾಲೀಶ್ಮಾಡಬೇಕು.
ಬಿಗಿಯಾದ ಉಡುಪುಗಳನ್ನು ಧರಿಸಬಾರದು. ಸೌತೆಕಾಯಿಯನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ, ಚರ್ಮದ ಮೇಲೆ ಇಟ್ಟುಕೊಂಡರೆ ಜಿಡ್ಡು ದೂರವಾಗುತ್ತದೆ. ಧರಿಸುವ ಉಡುಪು ಶುಭ್ರವಾಗಿರುವಂತೆ ನೋಡಿಕೊಳ್ಳಬೇಕು. ಶರೀರ ಹಾಗೂ ಬಟ್ಟೆ ಸ್ವಚ್ಛವಾಗಿರುವಂತೆ ಪ್ರತಿದಿನವೂ ನೋಡಿಕೊಂಡರೆ ಚರ್ಮವನ್ನು ಇತರೆ ವ್ಯಾಧಿಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಕೆಲವರ ಚರ್ಮ ಸೂಕ್ಷ್ಮವಾಗಿರುವುದರಿಂದ ಅಂಥವರು ವೈದ್ಯರ ಸಲಹೆಯನ್ನು ಪಡೆದು ಅದರಂತೆ ಪಾಲನೆ ಮಾಡುವುದನ್ನು ರೂಢಿಸಿಕೊಂಡರೆ ಉತ್ತಮ ಎನ್ನುವುದನ್ನು ಮರೆಯಬಾರದು.












Click it and Unblock the Notifications