ಬೆಂಗಳೂರಲ್ಲಿ ತಡರಾತ್ರಿ ಯುವಕನ ಬರ್ಬರ ಹತ್ಯೆ ಕೇಸ್, 6ಮಂದಿ ಬಂಧನ
ಬೆಂಗಳೂರು, ಡಿಸೆಂಬರ್ 07: ಬೆಂಗಳೂರಿನಲ್ಲಿ ಇತ್ತೀಚೆಗೆ ತಡರಾತ್ರಿ ವ್ಯಕ್ತಿಯೊಬ್ಬನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿ ಒಟ್ಟು ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಮೂಲದ ಪ್ರೇಮವ್ವ, ಅಕ್ಕ ಮಹಾದೇವಿ, ಮಂಜುನಾಥ್, ಕಿರಣ, ಚನ್ನಪ್ಪ ಮತ್ತು ಕಾಶಿನಾಥ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಭಾನುವಾರ ತಡರಾತ್ರಿ ಒಂದು ಗಂಟೆ ಸುಮಾರಿಗೆ ನಗರದ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಮಖಂಡಿ ಮೂಲದ ಯುವಕ ಮಂಜುನಾಥ್ನನ್ನು ಹತ್ಯೆ ಮಾಡಲಾಗಿತ್ತು. ಇದೇ ಆರೋಪಿಗಳ ಗುಂಪು ಸುಮಾರು 10ಕ್ಕೂ ಅಧಿಕ ಭಾರಿ ಯುವಕನ ಮುಖ ಜಜ್ಜಿ ಕೊಲೆ ಮಾಡಿದ್ದರು. ಬಳಿಕ ಆರೋಪಿಗಳು ಪರಾರಿಯಾಗಿದ್ದರು.
ವಿಜಯಪುರ; ವಿಮಾನದಲ್ಲಿ ಹಾರುವ ಜನರ ಕನಸು ಶೀಘ್ರವೇ ನನಸು
ತಲೆ ತಪ್ಪಿಸಿಕೊಂಡಿದ್ದವರ ಪೈಕಿ ಆರು ಮಂದಿ ಬಂಧನವಾಗಿದ್ದು, ಮತ್ತೊಬ್ಬಳಾದ ಸರೋಜಾ ಎಂಬುವವರ ಪತ್ತೆ ಕಾರ್ಯ ನಡೆಯುತ್ತಿದೆ. ಈ ಸರೋಜಾ ಹಾಗೂ ಹತ್ಯೆಗೀಡಾದ ಯುವ ಮಂಜುನಾಥ ಒಂದೇ ಊರಿನವರಾಗಿದ್ದು, ಇಬ್ಬರ ಮಧ್ಯೆ ಸಂಬಂಧ ಸರಿ ಇರದ ಕಾರಣ ಕೊಲೆಯಾಗಿದೆ ಎಂದು ತಿಳಿದು ಬಂದಿದೆ.
ಆರೋಪಿ ವಿವಾಹಿತೆ ಸರೋಜಾ ಕೆ.ಪಿ ಅಗ್ರಹಾರದಲ್ಲಿ ನೆಲೆಸಿದ್ದರು. ಆಕೆಯ ಪತಿ ದುಬೈನಲ್ಲಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ. ಈ ವಿವಾಹಿತೆ ಹಿಂದೆ ಮೃತ ಯುವಕ ಬಿದ್ದಿದ್ದ ಎನ್ನಲಾಗಿದೆ. ಮೊದಲು ಸಲುಗೆ ಬೆಳೆಸಿಕೊಂಡಿದ್ದ ಯುವಕ ಇತ್ತೀಚೆಗೆ ನನ್ನ ಮದುವೆಯಾಗು ಎಂದು ಪಿಡಿಸುತ್ತಿದ್ದ. ಇದರಿಂದ ಬೇಸತ್ತ ಸರೋಜ ಬೆಂಗಳೂರಿನ ಕೆ.ಪಿ. ಅಗ್ರಹಾರ ಬಂಧುಗಳ ಮನೆಗೆ ಬಂದು ನೆಲೆಸಿದ್ದಳು.
ಸರೋಜಾಳ ಬೆಂಗಳೂರಿನ ವಿಳಾಸ ಪತ್ತೆ ಮಾಡಿದ ಮೃತ ಮಂಜುನಾಥ್ ಭಾನುವಾರ ಬೆಂಗಳೂರಿಗೆ ಬಂದು ಆಕೆಯ ಮನೆ ಬಳಿ ತೆರಳಿದ್ದಾಗ ಘಟನೆ ನಡೆದಿದೆ. ಮೊದಲು ಯುವಕ ಹಾಗೂ ಸರೋಜಾ ಮತ್ತವರ ಕುಟುಂಬ ಸದಸ್ಯರು ಮಧ್ಯೆ ಮಾತಿನ ಜಟಾಪಟಿ ನಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಯುವಕನನ್ನು ನಡೆರಸ್ತೆಯಲ್ಲೇ ಹಿಡಿದು ಕಲ್ಲಿನಿಂದ ಹೊಡೆ ಕೊಂಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.