ಸಿಂಗಲ್ ಬೆಡ್ ಶೀಟ್ ನಲ್ಲಿ ಟಾಪ್ ಲೆಸ್ ಫೋಟೋಶೂಟ್: What Next?
ನವದೆಹಲಿ, ನವೆಂಬರ್.02: ಫೋಟೋಶೂಟ್. ಮೊದಲೆಲ್ಲ ಮದುವೆಗಳಲ್ಲಿ ಝಗಮಗಿಸುವ ಅಲಂಕಾರದ ನಡುವೆ ನಡೆಯುತ್ತಿದ್ದ ಫೋಟೋಶೂಟ್ ಸಂಭ್ರಮದ ವೈಖರಿ ಬದಲಾಗಿದೆ. ಅತ್ಯಾಧುನಿಕ ಶೈಲಿಗೆ ಹೊಂದಿಕೊಳ್ಳುವ ಮತ್ತು ವಿದೇಶ ಸಂಸ್ಕೃತಿಯನ್ನು ಹೋಲುವಂತಾ ಫೋಟೋಶೂಟ್ ಇತ್ತೀಚಿಗೆ ಭಾರತದಲ್ಲೂ ಟ್ರೆಂಡ್ ಆಗುತ್ತಿದೆ.
ಮದುವೆಗೂ ಮೊದಲು ಮತ್ತು ಮದುವೆ ನಂತರದಲ್ಲಿ ದಂಪತಿಯ ಫೋಟೋಶೂಟ್ ಸಂಭ್ರಮದ ಸಂಕೇತವಾಗುವ ಬದಲಿಗೆ ಟ್ರೋಲ್ ಪೇಜ್ ಗಳಿಗೆ ಆಹಾರವಾಗುತ್ತಿವೆ. ಕೇರಳದ ಲಕ್ಷ್ಮಿ ಮತ್ತು ಋಷಿ ಕಾರ್ತಿಕ್ ದಂಪತಿಯ ಪೋಸ್ಟ್-ಮ್ಯಾರೇಜ್ ಫೋಟೋಶೂಟ್ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.
ಸಿಂಗಲ್ ಬೆಡ್ ಶೀಟ್ ನಲ್ಲಿ ಟಾಪ್ ಲೆಸ್ ಆಗಿ ಫೋಟೋಶೂಟ್ ಮಾಡಿಸಿಕೊಂಡ ದಂಪತಿ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಫೋಟೋಶೂಟ್ ನೆಪದಲ್ಲಿ ಅಳತೆ ಮೀರಿದ ವರ್ತನೆ ಸರಿಯಲ್ಲ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಅಂಥದ್ದೇ ಮತ್ತೊಂದು ಫೋಟೋಶೂಟ್ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸದ್ದು ಮಾಡಿತ್ತು. ಸುಳ್ಯ ಸಮೀಪದ ತೋಡಿಕಾನ ಗ್ರಾಮದ ದೇವರ ಗುಂಡಿ ಜಲಪಾತದ ಬಳಿ ರೂಪದರ್ಶಿಗಳು ಅರೆಬೆತ್ತಲೆಯಾಗಿ ಫೋಟೋಶೂಟ್ ನಡೆಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಕೇರಳದ ದಂಪತಿಯ ಹಾಟ್ ಫೋಟೋಶೂಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾದ ಅಭಿಪ್ರಾಯದ ಬಗ್ಗೆ ಸ್ವತಃ ದಂಪತಿಯೇ ಹೇಳಿಕೊಂಡಿದ್ದಾರೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಲವ್ ಕಮ್ ಅರೆಂಜ್ ಮ್ಯಾರೇಜ್ ಆದ ದಂಪತಿ
ಟೆಲಿಕಾಮ್ ಕಂಪನಿ ಉದ್ಯೋಗಿ ಆಗಿರುವ ಋಷಿ ಕಾರ್ತಿಕ್ ಕುಟುಂಬ ಹಾಗೂ ಎಲೆಕ್ಟ್ರಾನಿಕ್ ಎಂಜಿನಿಯರ್ ಪೂರ್ಣಗೊಳಿಸಿದ ಲಕ್ಷ್ಮಿ ಕುಟುಂಬದ ನಡುವೆ ಮದುವೆ ಮಾತುಕತೆ ನಡೆಯಿತು. ಅಂದಿನಿಂದ ಡೇಟಿಂಗ್, ಚಾಟಿಂಗ್ ನಲ್ಲಿದ್ದ ದಂಪತಿ ನಡುವೆ ಪ್ರೇಮಾಂಕುರವಾಯಿತು. ಕೇರಳ ಎರ್ನಾಕುಲಂ ಮೂಲದ ಲಕ್ಷ್ಮಿ ಮತ್ತು ಋಷಿ ಕಾರ್ತಿಕ್ ವಿವಾಹಕ್ಕೆ ಏಪ್ರಿಲ್ ನಲ್ಲಿ ವಿವಾಹಕ್ಕೂ ದಿನಾಂಕ ನಿಗದಿಗೊಳಿಸಲಾಗಿತ್ತು. ಆದರೆ ಕೊರೊನಾವೈರಸ್ ಮತ್ತು ಭಾರತ ಲಾಕ್ ಡೌನ್ ಮದುವೆಗೆ ಅಡ್ಡಿಯಾಯಿತು.
ಭಾರತ ಲಾಕ್ ಡೌನ್ ನಿಂದ ಮದುವೆ ಮುಂದೂಡಿಕೆ
ಕಳೆದ ಮಾರ್ಚ್ ತಿಂಗಳಿನಲ್ಲಿ ಭಾರತ ಲಾಕ್ ಡೌನ್ ಘೋಷಿಸಲಾಯಿತು. ಕೊರೊನಾವೈರಸ್ ಸೋಂಕು ಹರಡುವಿಕೆ ಆರಂಭಿಕ ಹಂತದಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಅದ್ಧೂರಿ ಮದುವೆ ಅಸಾಧ್ಯವಾಗಿತ್ತು. ಲಾಕ್ ಡೌನ್ ಹಿನ್ನೆಲೆ ಮದುವೆ ದಿನಾಂಕವನ್ನು ಮುಂದೂಡುತ್ತಲೇ ಬರಲಾಗಿತ್ತು. ಆದರೆ, ಕೊರೊನಾವೈರಸ್ ಸೋಂಕಿತ ಪ್ರಕರಣಗಳು ನಿಯಂತ್ರಣಕ್ಕೆ ಬರುವ ಲಕ್ಷಣಗಳು ಗೋಚರಿಸದ ಹಿನ್ನೆಲೆ ಸಪ್ಟೆಂಬರ್ ತಿಂಗಳಿನಲ್ಲಿ ಲಕ್ಷ್ಮಿ ಮತ್ತು ಋಷಿ ಕಾರ್ತಿಕ್ ಮದುವೆಗೆ ದಿನಾಂಕ ನಿಗದಿಗೊಳಿಸಲಾಗಿತ್ತು.
ಸಪ್ಟೆಂಬರ್ ನಲ್ಲಿ ಮದುವೆ ನಂತರ ದಿನಾಂಕ ನಿಗದಿ
ಭಾರತ ಲಾಕ್ ಡೌನ್ ಸಡಿಲಿಕೆಯಾದ ಹಿನ್ನೆಲೆ ಸಪ್ಟೆಂಬರ್.16ರಂದು ಕೇರಳದ ಕೊಲ್ಲಂನಲ್ಲಿ ಲಕ್ಷ್ಮಿ ಮತ್ತು ಋಷಿ ಕಾರ್ತಿಕ್ ವಿವಾಹವನ್ನು ಸರಳವಾಗಿ ನೆರವೇರಿಸಲಾಗಿತ್ತು. ಮದುವೆ ಕಾರ್ಯಕ್ರಮದಲ್ಲಿ ಎರಡೂ ಕುಟುಂಬಗಳಿಗೆ ಸೇರಿದ ಕೇವಲ 50 ಜನರು ಭಾಗವಹಿಸುವುದಕ್ಕಷ್ಟೇ ಅನುಮತಿ ನೀಡಲಾಗಿತ್ತು. ಅದ್ಧೂರಿ ಮದುವೆ ಕನಸು ಕಂಡಿದ್ದ ದಂಪತಿಗೆ ಸರಳ ವಿವಾಹವು ಕೊಂಚ ಬೇಸರ ಮೂಡಿಸಿತ್ತು. ಅಂದು ದಂಪತಿಯ ತಲೆಗೆ ಹೊಳೆದಿದ್ದೇ ಮದುವೆ ನಂತರದ ಫೋಟೋಶೂಟ್.
ರೊಮ್ಯಾಂಟಿಕ್ ಆಯ್ತು ದಂಪತಿ ಫೋಟೋಶೂಟ್
ಸರಳವಾಗಿ ವಿವಾಹವಾದ ಋಷಿ ಕಾರ್ತಿಕ್ ಮತ್ತು ಲಕ್ಷ್ಮಿ ದಂಪತಿಯು ತಮ್ಮ ಮದುವೆಯ ಸುಮಧುರ ಕ್ಷಣವನ್ನು ಸ್ಮರಣೀಯಗೊಳಿಸುವುದಕ್ಕೆ ತೀರ್ಮಾನಿಸಿದರು. ದಂಪತಿಯ ನಡುವೆ ಆತ್ಮೀಯ, ಅನ್ಯೋನ್ಯ ಹಾಗೂ ರೋಮಾಂಚನ ಹುಟ್ಟಿಸುವ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವುದಕ್ಕೆ ನಿರ್ಧರಿಸಿದರು. ಚಹಾ ಎಸ್ಟೇಟ್ ನಲ್ಲಿ ಮದುವೆ ನಂತರದ ಫೋಟೋಶೂಟ್ ನಡೆಸಿಕೊಳ್ಳುವುದಕ್ಕೆ ಋಷಿ ಕಾರ್ತಿಕ್ ಸ್ನೇಹಿತ ಹಾಗೂ ಫೋಟೋಗ್ರಾಫರ್ ಆಗಿರುವ ಅಖಿಲ್ ಕಾರ್ತಿಕೇಯನ್ ಸಲಹೆ ನೀಡಿದರು.
ದಂಪತಿ ಬಗ್ಗೆ ಅಶ್ಲೀಲ ಕಾಮೆಂಟ್ಸ್ ಹಾವಳಿ
"ಸ್ನೇಹಿತನ ಸಲಹೆಯಂತೆ ಚಹಾ ಎಸ್ಟೇಟ್ ನಲ್ಲಿ ದಂಪತಿಯ ಫೋಟೋಶೂಟ್ ಸಖತ್ ರೋಮ್ಯಾಂಟಿಕ್ ಆಗಿಯೇನೋ ನಡೆಯಿತು. ಆದರೆ ಅಲ್ಲಿಂದಲೇ ನಿಜವಾದ ಸಮಸ್ಯೆ ಶುರುವಾಯಿತು. ದಂಪತಿಯ ಫೋಟೋಶೂಟ್ ನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಅಶ್ಲೀಲ ಕಾಮೆಂಟ್ಸ್ ಗಳು ಬರುವುದಕ್ಕೆ ಶುರುವಾಯಿತು. ಅಶ್ಲೀಲ ಚಿತ್ರಗಳಲ್ಲಿ ನಟಿಸುವಂತೆ ಕೆಲವರು ಸಂದೇಶಗಳನ್ನು ಹಾಕುವುದಕ್ಕೆ ಆರಂಭಿಸಿದರು. ನಮ್ಮ ಕುಟುಂಬ ಸದಸ್ಯರು ಕೂಡಾ ಈ ಬಗ್ಗೆ ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದರು. ಕುಟುಂಬದ ವಾಟ್ಸಾಪ್ ಗ್ರೂಪ್ ಗಳಿಂದ ಕೂಡಾ ನಮ್ಮನ್ನು ರಿಮ್ಯೂ ಮಾಡಲಾಗಿತ್ತು" ಎಂದು ಸ್ವತಃ ಪತ್ನಿ ಲಕ್ಷ್ಮಿ ಹೇಳಿದ್ದಾರೆ.
ದಂಪತಿ ಫೋಟೋಶೂಟ್ ಟ್ರೋಲ್ ಪೇಜ್ ಗೆ ಆಹಾರ
ಋಷಿ ಕಾರ್ತಿಕ್ ಮತ್ತು ಲಕ್ಷ್ಮಿ ದಂಪತಿಯ ಮದುವೆ ನಂತರದ ಫೋಟೋಶೂಟ್ ಟ್ರೋಲ್ ಪೇಜ್ ಗಳಿಗೆ ಆಹಾರವಾಯಿತು. "ನಮ್ಮ ಫೋಟೋಗಳನ್ನು ಅಶ್ಲೀಲವಾಗಿ ಕಾಮೆಂಟ್ ಮಾಡುವುದಕ್ಕೆ ಬಳಸಿಕೊಳ್ಳಲಾಯಿತು. ಟ್ರೋಲ್ ಪೇಜ್ ಗಳ ಹಾವಳಿಯು ನಮ್ಮ ಸಂತೋಷವನ್ನೇ ಕಿತ್ತುಕೊಳ್ಳುವ ಮಟ್ಟಕ್ಕೆ ಹೆಚ್ಚಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಫೋಟೋಗಳನ್ನು ತೆಗೆಯುವಂತೆ ಒತ್ತಡವೂ ಕೇಳಿ ಬಂತು. ಅಂತಿಮವಾಗಿ ಅದ್ಯಾವುದಕ್ಕೂ ನಾವು ತಲೆ ಕೆಡಿಸಿಕೊಳ್ಳಲಿಲ್ಲ" ಎಂದು ಲಕ್ಷ್ಮಿ ಹೇಳಿದ್ದಾರೆ.
ಮಂಗಳೂರಿನ ಪವಿತ್ರ ಸ್ಥಳದಲ್ಲಿ ಅರೆಬೆತ್ತಲೆ ಫೋಟೋಶೂಟ್
ಇನ್ನು, ಕೇರಳ ದಂಪತಿಯದ್ದು ಆ ಕಥೆಯಾದರೆ ಕರ್ನಾಟಕದಲ್ಲೂ ಫೋಟೋಶೂಟ್ ಹೆಸರಿನಲ್ಲಿ ಅಳತೆ ಮೀರಿ ವರ್ತಿಸುತ್ತಿರುವವರ ಸಂಖ್ಯೆ ಹೆಚ್ಚಿದೆ. ಕಳೆದ ಅಕ್ಟೋಬರ್.29ರಂದು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಸಮೀಪದ ತೋಡಿಕಾನ ಗ್ರಾಮದ ದೇವರ ಗುಂಡಿ ಜಲಪಾತದಲ್ಲಿ ಬೆಂಗಳೂರು ಮೂಲದ ರೂಪದರ್ಶಿಗಳು ಅರೆಬೆತ್ತಲೆಯಾಗಿ ಫೋಟೋಶೂಟ್ ನಡೆಸಿದ್ದರು. ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಂಬಂಧಿಸಿದ ಜಲಪಾತದಲ್ಲಿ ಶಿವನೇ ಬಂದು ಇಲ್ಲಿ ಸ್ನಾನ ಮಾಡುತ್ತಾನೆ ಎಂಬ ಐತಿಹಾಸಿಕ ಹಿನ್ನೆಲೆಯಿದೆ. ಇಂಥ ಪವಿತ್ರ ಸ್ಥಳದಲ್ಲಿ ಅರೆಬೆತ್ತಲೆ ಫೋಟೋಶೂಟ್ ನಡೆಸುವ ಮೂಲಕ ಇಲ್ಲಿನ ಜನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಫೋಟೋಶೂಟ್ ನಿಂದ ಸಂಸ್ಕೃತಿ ಕಳೆದು ಹೋಗುತ್ತದೆಯೇ?
ಮದುವೆ ಪೂರ್ವದಲ್ಲಿ ಮತ್ತು ಮದುವೆ ನಂತರದಲ್ಲಿ ನಡೆಸುವ ಫೋಟೋಶೂಟ್ ಗಳು ಸಂಸ್ಕೃತಿಗೆ ಧಕ್ಕೆ ಉಂಟು ಮಾಡುತ್ತಿವೆಯಾ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಅಳವಡಿಕೆ ಭರಾಟೆಯಲ್ಲಿ ಮೂಲ ಸಂಪ್ರದಾಯ ಮತ್ತು ಸಂಸ್ಕೃತಿಗೆ ವಿರುದ್ಧವಾಗಿ ಯುವ ಸಮುದಾಯ ನಡೆದುಕೊಳ್ಳಿತ್ತಿದೆಯಾ. ಭಾರತೀಯ ಸಂಸ್ಕೃತಿಯಲ್ಲೇ ಭಿನ್ನ ವಿಭಿನ್ನ ಶೈಲಿಯ ಫೋಟೋಶೂಟ್ ಮಾಡಿಸಿಕೊಳ್ಳುವುದಕ್ಕೆ ಅವಕಾಶಗಳಿವೆ. ದೇಶೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಮರೆತು ವಿದೇಶಿ ಸಂಸ್ಕೃತಿಯ ಬೆನ್ನು ಬೀಳುವುದು ಅದೆಷ್ಟರ ಮಟ್ಟಿಗೆ ಸರಿ ಎಂದು ಯುವ ಸಮುದಾಯವು ಒಂದು ಬಾರಿ ಯೋಚಿಸಬೇಕಿದೆ.