ವಿಶೇಷ ವರದಿ: ಅಳಿವಿನಂಚಿನಲ್ಲಿರುವ ಆ ಜೀವಜಗತ್ತು ಯಾವುದು?
ಮೈಸೂರು, ಡಿಸೆಂಬರ್ 2: ನಮ್ಮ ನಡುವೆಯಿದ್ದ ಹಲವು ಸಸ್ಯ ಮತ್ತು ಪ್ರಾಣಿ ಪಕ್ಷಿಗಳ ಪೈಕಿ ಕೆಲವೊಂದರ ಸಂತತಿ ನಶಿಸಿ ಹೋಗಿದ್ದರೆ, ಮತ್ತೆ ಕೆಲವು ಅಳಿವಿನಂಚಿನಲ್ಲಿವೆ ಎಂಬುದೇ ನಿಜಕ್ಕೂ ದುರ್ದೈವದ ಸಂಗತಿಯಾಗಿದೆ.
ಇದಕ್ಕೆ ಹಲವು ಕಾರಣಗಳು ನಮ್ಮ ಮುಂದೆ ಇರಬಹುದಾದರೂ ಮುಂದಿನ ದಿನಗಳಲ್ಲಿ ಅಳಿನಂಚಿನಲ್ಲಿರುವ ಪ್ರಾಣಿ, ಪಕ್ಷಿ ಮತ್ತು ಸಸ್ಯ ಸಂಪತ್ತನ್ನು ನಾವು ಉಳಿಸಿಕೊಳ್ಳಲೇಬೇಕಾದ ಜರೂರತ್ತು ನಮ್ಮದಾಗಿದೆ.
ಈಗಾಗಲೇ ಜೀವವೈವಿಧ್ಯ ಮಂಡಳಿಯು ಕರ್ನಾಟಕದಲ್ಲಿ ವಿನಾಶದ ಅಂಚಿನ ಸಸ್ಯ ಹಾಗೂ ಪ್ರಾಣಿ ಸಂಕುಲಗಳ ಕುರಿತು ವಿಶೇಷ ಅಧ್ಯಯನ ಮಾಡಿ ಆ ಸಂಬಂಧದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿ ನಮ್ಮ ನಡುವೆಯಿದ್ದು, ಇದೀಗ ನಾಶವಾಗಿರುವ ಮತ್ತು ನಾಶವಾಗುತ್ತಿರುವ ಪ್ರಾಣಿ, ಪಕ್ಷಿ ಮತ್ತು ಸಸ್ಯಗಳನ್ನು ಗುರುತಿಸಲಾಗಿದೆ.
ಅಳಿವಿನಂಚಿನ ಸಸ್ಯ, ಪ್ರಾಣಿ- ಪಕ್ಷಿಗಳ ಅಧ್ಯಯನ
2020ರಲ್ಲಿ ಜೀವವೈವಿಧ್ಯ ಮಂಡಳಿ ರಚಿಸಲಾಗಿದ್ದು, ಇದರಲ್ಲಿ ಸಸ್ಯ ವರ್ಗೀಕರಣ ಶಾಸ್ತ್ರಜ್ಞರ ಸಮಿತಿ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಬೊಟಾನಿಕಲ್ ಸರ್ವೆ ಆಫ್ ಇಂಡಿಯಾದ ನಿವೃತ್ತ ನಿರ್ದೇಶಕ ಡಾ.ಎಂ. ಸಂಜಪ್ಪ ಹಾಗೂ ಪ್ರಾಣಿಶಾಸ್ತ್ರಜ್ಞರ ಸಮಿತಿ ಅಧ್ಯಕ್ಷರಾಗಿ ಹಿರಿಯ ಪ್ರಾಣಿ ವಿಂಗಡನಾ ಶಾಸ್ತ್ರಜ್ಞ ಡಾ.ಎ. ರಾಮಕೃಷ್ಣ ಕಾರ್ಯನಿರ್ವಹಿಸಿದ್ದಾರೆ. ಇವರ ನೇತೃತ್ವದ ಸಮಿತಿಯು ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾರ್ಗದರ್ಶನದಲ್ಲಿ ವರದಿಯನ್ನು ಸಿದ್ಧಪಡಿಸಿ ಈ ಹಿಂದೆಯೇ ಸರ್ಕಾರಕ್ಕೆ ಆಗಿನ ಅರಣ್ಯ ಸಚಿವರಾಗಿದ್ದ ಅರವಿಂದ ಲಿಂಬಾವಳಿ ಮೂಲಕ ಸಲ್ಲಿಸಿದ್ದನ್ನು ಸ್ಮರಿಸಬಹುದಾಗಿದೆ.
ಜೀವವೈವಿಧ್ಯ ಮಂಡಳಿ ಸಲ್ಲಿಸಿದ ವರದಿಯಲ್ಲೇನಿದೆ?
ಇನ್ನು ವರದಿಯಲ್ಲಿ ನೀಡಿರುವ ವಿನಾಶದ ಅಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿಗಳ ಪ್ರಭೇದಗಳನ್ನು ನೋಡಿದರೆ ಅಚ್ಚರಿ ಮೂಡುತ್ತದೆ. ವರದಿ ಪ್ರಕಾರ 2010ರಲ್ಲಿ 16 ವಿನಾಶದ ಅಂಚಿನ ಸಸ್ಯ ಪ್ರಭೇದ ಗುರುತಿಸಿದ್ದರೆ, 2021ರಲ್ಲಿ ಇದೀಗ ಹಿಂದಿನ 16 ಪ್ರಬೇಧ ಸೇರಿ ಒಟ್ಟು 32 ಪ್ರಭೇದಗಳನ್ನು ವಿನಾಶದ ಅಂಚಿನಲ್ಲಿದೆ ಎಂದು ಗುರುತಿಸಲಾಗಿದೆ.
ಇನ್ನು ವ್ಯಾಪಕ ವಾಣೀಜ್ಯೀಕರಣಕ್ಕೆ ಒಳಗಾಗಿರುವ ಕಾಡಿನ ಸಸ್ಯ ಪ್ರಭೇದಗಳ ಸಂಖ್ಯೆ 7 ಆಗಿದೆ. ಹಾಗೆಯೇ ರಾಜ್ಯದ 40 ಸಸ್ತನಿಗಳನ್ನು 2021ರಲ್ಲಿ ವಿನಾಶದ ಅಂಚಿನ ಪ್ರಭೇದಗಳು ಎಂದು ಗುರುತಿಸಿರುವುದು ಕಂಡು ಬಂದಿದೆ. ಇದಲ್ಲದೆ ಅಪಾಯದ ಅಂಚಿನ ಪಕ್ಷಿ ಪ್ರಭೇದಗಳು 23, ಅಪಾಯದ ಅಂಚಿನ ಸರೀಸೃಪ ಪ್ರಭೇದಗಳು 26, ಅಪಾಯದ ಅಂಚಿನ ಉಭಯವಾಸಿ ಪ್ರಭೇದಗಳು 21, ಅಪಾಯದ ಅಂಚಿನ ಸಿಹಿನೀರು ಮೀನು ಪ್ರಭೇದಗಳು 53, ಅಪಾಯದ ಅಂಚಿನ ಸಮುದ್ರ ಮೀನಿನ ಪ್ರಭೇದಗಳು 35. ವಿನಾಶದ ಅಂಚಿನ ಅಕಶೇರುಕ ಪ್ರಭೇದಗಳನ್ನು ಗುರುತಿಸಬೇಕು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿರುವುದು ಬೆಳಕಿಗೆ ಬಂದಿದೆ.
ಮೂರು ಬಗೆಯಲ್ಲಿ ಗುರುತಿಸಿದ ತಜ್ಞರು
ವರದಿಯಲ್ಲಿ ಗಂಭೀರವಾಗಿ ವಿನಾಶದಂಚಿಗೆ ಜಾರಿದವು, ವಿನಾಶದಂಚಿನವು ಹಾಗೂ ವಿನಾಶದೆಡೆಗೆ ಸಾಗುತ್ತಿರುವ ಹೀಗೆ ಮೂರು ಗುಂಪುಗಳ ಪ್ರಭೇದಗಳನ್ನು ಒಟ್ಟಾಗಿ "ಅಪಾಯದಂಚಿನಲ್ಲಿರುವ ಸಸ್ಯವರ್ಗ' ಎಂದು ಹೆಸರಿಸಲಾಗಿದ್ದು, ಇವುಗಳಲ್ಲಿ, "ಗಂಭೀರವಾಗಿ ವಿನಾಶದಂಚಿಗೆ ಜಾರಿದ' ಹೂಬಿಡುವ ಸಸ್ಯ ಪ್ರಬೇಧಗಳನ್ನು "ಜೀವವೈವಿಧ್ಯ ಕಾಯ್ದೆ, 2002' ರ ಸೆಕ್ಷನ್ 38ರ ಅನ್ವಯ, "ಕರ್ನಾಟಕದ ವಿನಾಶದಂಚಿನ ಸಸ್ಯಪ್ರಬೇಧ'ಗಳ ಪಟ್ಟಿಗೆ ಸೇರಿಸಲು ತಜ್ಞರ ಸಮಿತಿಯು ಕರ್ನಾಟಕ ಜೀವವೈವಿಧ್ಯ ಮಂಡಳಿಗೆ ಶಿಫಾರಸು ಮಾಡಿರುವುದು ಕಂಡು ಬಂದಿದೆ.
ಸೀತಾ ಅಶೋಕ, ಮರದರಶಿನ, ಭೂತಾಳಗಿಡ, ಎಣ್ಣೆಮರ, ನೀರನೇರಳೆ ಮೊದಲಾದವು ಸೇರಿದಂತೆ ಒಟ್ಟು 16 ಪ್ರಭೇದಗಳಿದ್ದು, ಇದರ ಜೊತೆಗೆ ವ್ಯಾಪಕವಾಗಿ ವಾಣಿಜ್ಯಕವಾಗಿ ಬಳಸುತ್ತಿರುವ ಪ್ರಬೇಧಗಳು 7, ಭವಿಷ್ಯದಲ್ಲಿ ವಿನಾಶವಾಗಲಿರುವ ಹೂ ಬಿಡುವ ಸಸ್ಯ ಪ್ರಬೇಧಗಳು 94, ಬಹಳ ಸೀಮಿತವಾಗಿವಿರುವ ಹೂ ಬಿಡುವ ಸಸ್ಯ ಪ್ರಬೇಧಗಳು 11, ಕರ್ನಾಟಕದಲ್ಲಿ ಮಾತ್ರ ಸಿಗುವ ಹೂ ಬಿಡುವ ಸಸ್ಯ ಪ್ರಭೇಧಗಳು 106, ರಾಜ್ಯ ಹಾಗೂ ನೆರೆಹೊರೆಯ ಪ್ರದೇಶದಲ್ಲಿ ಮಾತ್ರ ಕಾಣಸಿಗುವ ಪ್ರಭೇದಗಳನ್ನೂ ಸೇರಿ 666 ಸಸ್ಯಗಳನ್ನು ಗುರುತಿಸಲಾಗಿದೆ.
ವಿನಾಶದಂಚಿನಲ್ಲಿ ರಾಜ್ಯದ 40 ಸಸ್ತನಿಗಳು
ನಮ್ಮ ರಾಜ್ಯದಲ್ಲಿ ವಿನಾಶದಂಚಿನಲ್ಲಿರುವ ಸಸ್ತನಿಗಳನ್ನು ನೋಡುವುದಾದರೆ, ಪುನಗಿನಬೆಕ್ಕು, ಕಾಡುಪಾಪ, ನೀರಾನೆ, ಬಾವಲಿ, ತಿಮಿಂಗಲ ಪ್ರಭೇದಗಳು ಸೇರಿದಂತೆ, ಒಟ್ಟು 40 ಸಸ್ತನಿಗಳು ವಿನಾಶದಂಚಿಗೆ ತಲುಪಿರುವುದು ಬೆಳಕಿಗೆ ಬಂದಿದೆ.
ಇಷ್ಟೇ ಅಲ್ಲದೆ ಕಶೇರುಕ ಗುಂಪಿನ ಇತರ ಪ್ರಾಣಿ ವರ್ಗಗಳಲ್ಲಿನ ವಿನಾಶದಂಚಿನ ಪ್ರಭೇದಗಳನ್ನು ಕೂಡ ತಜ್ಞರ ಸಮಿತಿಯು ಸೂಚಿಸಿದ್ದು, ಅದರಂತೆ ಅಪಾಯದಂಚಿನಲ್ಲಿರುವ ಪಕ್ಷಿ ಪ್ರಭೇದಗಳು 23, ಅಪಾಯದಂಚಿನಲ್ಲಿರುವ ಸರಿಸೃಪ ಪ್ರಭೇದಗಳು 26, ಅಪಾಯದಂಚಿನಲ್ಲಿರುವ ಉಭಯವಾಸಿ ಪ್ರಭೇದಗಳು 21, ಅಪಾಯದಂಚಿನಲ್ಲಿರುವ ಸಿಹಿನೀರು ಮೀನು ಪ್ರಭೇದಗಳು 53, ಅಪಾಯ ದಂಚಿನಲ್ಲಿರುವ ಸಮುದ್ರ ಮೀನಿನ ಪ್ರಭೇದಗಳು 35 ಆಗಿದೆ. ಇದೊಂದು ಆಘಾತಕಾರಿ ಬೆಳವಣಿಗೆ ಎಂದರೆ ತಪ್ಪಾಗಲಾರದು.
ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರಕ್ಕೆ ವರದಿ ಸಲ್ಲಿಕೆ
ಇನ್ನೊಂದೆಡೆ ತಜ್ಞ ಸಮಿತಿ ನೀಡಿದ ವರದಿಯನ್ನು ಜೀವವೈವಿಧ್ಯ ಮಂಡಳಿ ಜನವರಿ 2021ರಲ್ಲಿ ಅಂಗೀಕರಿಸಿದ್ದು. ಪರಿಷ್ಕರಿಸಿರುವ ಪಟ್ಟಿಯನ್ನು ಕೇಂದ್ರ ಅರಣ್ಯ ಪರಿಸರ ಮಂತ್ರಾಲಯಕ್ಕೆ, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರಕ್ಕೆ ಸಲ್ಲಿಸಿದೆ.
ಇದೆಲ್ಲದರ ನಡುವೆ ಅಳಿವಿನಂಚಿನಲ್ಲಿರುವ ಪ್ರಾಣಿ- ಪಕ್ಷಿ, ಸಸ್ಯಗಳ ಉಳಿವಿಗೆ ಏನು ಮಾಡಬಹುದು ಎಂಬುದಕ್ಕೆ ಕೆಲವೊಂದು ಪ್ರಮುಖ ಸಲಹೆಗಳನ್ನು ಜೀವವೈವಿಧ್ಯ ಮಂಡಳಿ ನೀಡಿದ್ದು, ಕರ್ನಾಟಕ ಜೀವವೈವಿದ್ಯ ಮಂಡಳಿಯು ಕೈಗೊಳ್ಳುವ ಎಲ್ಲ ಬಗೆಯ ಸಂರಕ್ಷಣೆ, ಸಂವರ್ಧನೆ ಹಾಗೂ ಬಳಕೆಯ ನ್ಯಾಯಯುತ ಹಂಚಿಕೆ ಕುರಿತ ಕಾರ್ಯಯೋಜನೆಗಳಿಗೆ ಸಾರ್ವಜನಿಕರು ಕೈಜೋಡಿಸುವುದು, ಈಗಾಗಲೇ ರಾಜ್ಯಾದ್ಯಂತ ರಚಿಸಿರುವ "ಜೀವವೈವಿಧ್ಯ ನಿರ್ವಹಣಾ ಸಮಿತಿಗಳು" ತಮ್ಮ ವ್ಯಾಪ್ತಿಯ ಜನತಾ ಜೀವವೈವಿಧ್ಯ ದಾಖಲಾತಿಗಳ ಪರಿಷ್ಕರಣೆ ಹಾಗೂ ಅದರ ಆಧಾರದಲ್ಲಿ ಕೈಗೊಳ್ಳುವ ಎಲ್ಲ ಸಂರಕ್ಷಣಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು.
ಜೀವ ವೈವಿಧ್ಯಗಳ ಉಳಿವು ಹೇಗೆ?
ಅರಣ್ಯ ಇಲಾಖೆ, ವನ್ಯಜೀವಿ ವಿಭಾಗ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಮೀನುಗಾರಿಕಾ ಇಲಾಖೆ ಇವುಗಳ ವ್ಯಾಪ್ತಿಯಲ್ಲಿನ ವಿವಿಧ ಸಂರಕ್ಷಣೆ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಬೇಕು. ಅರಣ್ಯ ಇಲಾಖೆಯು ನಿರ್ವಹಿಸುವ ಗಿಡಗಳ ನರ್ಸರಿಯಲ್ಲಿ ಹಾಗೂ ವನೀಕರಣ ಯೋಜನೆಗೆ ಆದ್ಯತೆ ನೀಡಬೇಕು. ವಿಶ್ವವಿದ್ಯಾನಿಲಯ ಹಾಗೂ ಸಂಶೋಧನಾ ಸಂಸ್ಥೆಗಳಲ್ಲಿ ಈ ಕುರಿತಂತೆ ಸಂಶೋಧನಾ ಕಾರ್ಯಕ್ರಮಗಳು ನಡೆಯಬೇಕು. ಶಾಲೆ ಹಾಗೂ ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆ ಕುರಿತ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಹೀಗೆ ಹತ್ತಾರು ಸಲಹೆಗಳನ್ನು ನೀಡಲಾಗಿದೆ.
ಅದೇನೇ ಇರಲಿ ಪ್ರತಿಯೊಬ್ಬರೂ ಅರಣ್ಯ ಸಂರಕ್ಷಣೆಯತ್ತ ಗಮನ ಹರಿಸಿದ್ದೇ ಆದರೆ, ಜೀವ ವೈವಿಧ್ಯಗಳ ಉಳಿವಿಗೆ ಅಳಿಲು ಸೇವೆ ಮಾಡಿದಂತಾಗುತ್ತದೆ ಎಂಬುದಂತೂ ಸತ್ಯ.