ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ವಿದ್ಯಾರ್ಥಿಗಳಿಗೆ ಆಗುವ ಅನುಕೂಲವೇನು?
ಬೆಂಗಳೂರು, ಆಗಸ್ಟ್ 09 : ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿಗೆ ತರಲಾಗುತ್ತಿದೆ. ಪ್ರಸಕ್ತ ಸಾಲಿನಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವಂತೆ ಉನ್ನತ ಶಿಕ್ಷಣ ಪರಿಷತ್ ಎಲ್ಲಾ ವಿಶ್ವ ವಿದ್ಯಾಲಯಗಳಿಗೆ ನಿರ್ದೇಶನ ನೀಡಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.
ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ಪ್ರಸಕ್ತ ಸಾಲಿನಿಂದಲೇ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ದೇಶದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದ್ದು, ಈ ಸಂಬಂಧ ಆದೇಶ ನೀಡಲಾಗಿದೆ ಎಂದು ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಅವರು ಎಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಂಬಂಧ ಇರುವ ಮಾರ್ಗದರ್ಶನಗಳನ್ನು ಪಾಲಿಸಿಯೇ ಈ ನೀತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಅವರು ಇದೇ ವೇಳೆ ಸ್ಪಷ್ಟ ಪಡಿಸಿದ್ದಾರೆ.

ಆತುರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ
ಕೊರೊನಾ ಸೋಂಕಿನಿಂದ ದೇಶ ತತ್ತರಿಸಿದೆ. ಜು. 26 ರಿಂದಲೇ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಅದರೆ, ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮತ್ತೆ ಕಾಲೇಜುಗಳನ್ನು ಕ್ಲೋಸ್ ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಯಶಸ್ವಿ ಅನುಷ್ಠಾನ ಸಂಬಂಧ ಯಾವುದೇ ಪೂರ್ವ ತಯಾರಿ ಇಲ್ಲದೇ ರಾಜ್ಯದಲ್ಲಿ ಜಾರಿ ಮಾಡಲಾಗುತ್ತಿದೆ ಎಂಬ ಅಪಸ್ವರ ಎದ್ದಿದೆ. ಆತುರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವ ಅಗತ್ಯವಿಲ್ಲ. ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿರುವ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಾತ್ರವಲ್ಲ, ತರಾತುರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತಿರುವುದರಿಂದ ಮತ್ತಷ್ಟು ಸಮಸ್ಯೆಗಳು ಉದ್ಭವಿಸಲಿವೆ ಎಂಬ ಅಭಿಪ್ರಾಯಗಳು ಕಾಲೇಜು ಪ್ರಾಧ್ಯಾಪಕ ವಲಯದಿಂದ ಕೇಳಿ ಬರುತ್ತಿದೆ.

ಮೊದಲ ವರ್ಷದ ಪದವಿಯಿಂದ ಜಾರಿ
ರಾಜ್ಯದಲ್ಲಿರುವ ಎಲ್ಲಾ ವಿಶ್ವ ವಿದ್ಯಾಲಯಗಳ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ. ಈ ಕುರಿತು ಸುತ್ತೋಲೆ ಹೊರಡಿಸಿದೆ. ಪ್ರಸಕ್ತ ಸಾಲಿನಲ್ಲಿ 2020- 21 ನೇ ಸಾಲಿನಲ್ಲಿ ಮೊದಲ ವರ್ಷದ ಪದವಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ನೂತನ ಶಿಕ್ಷಣ ನೀತಿ ವ್ಯಾಪ್ತಿಗೆ ಒಳಪಡಲಿದ್ದಾರೆ. ಮೂರು ವರ್ಷದ ಪದವಿ ಶಿಕ್ಷಣವನ್ನು ನೂತನ ನೀತಿ ಪ್ರಕಾರ ನಾಲ್ಕು ವರ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಬಿಎ ಆನರ್ಸ್, ಬಿಎಸ್ ಸಿ ಆನರ್ಸ್, ಬಿಕಾಂ ಆನರ್ಸ್, ಬಿಬಿಎಂ ಆನರ್ಸ್ ಎಂಬ ಪದವಿ ಲಭ್ಯವಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಮೊದಲ ವರ್ಷದ ಪದವಿಗೆ ದಾಖಲಾತಿ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ಮುಗಿಸಲು ಸೂಚಿಸಲಾಗಿದೆ.

ವಿಷಯ ಆಯ್ಕೆಗೆ ಮುಕ್ತ ಅವಕಾಶ
ನೂತನ ಶಿಕ್ಷಣ ನೀತಿ ಪ್ರಕಾರ ನೂತನ ಪದವಿ ನಾಲ್ಕು ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಮೊದಲ ವರ್ಷ ಕಲಿತು ಪದವಿ ಬಿಟ್ಟವರಿಗೆ ಸರ್ಟಿಫಿಕೇಟ್ ಕೋರ್ಸ್ ಎಂದು ಪರಿಗಣಿಸಲಾಗುತ್ತದೆ. ಎರಡನೇ ವರ್ಷದ ಪದವಿ ಮುಗಿಸಿದವರಿಗೆ ಡಿಪ್ಲೋಮಾ ಪದವಿ ಎಂದು ಸರ್ಟಿಫಿಕೇಟ್ ನೀಡಲಾಗುತ್ತದೆ. ಮೂರನೇ ವರ್ಷ ಓದಿದವರಿಗೆ ಪದವಿ, ನಾಲ್ಕನೇ ವರ್ಷ ಅಧ್ಯಯನ ಮಾಡಿದವರಿಗೆ ಆನರ್ಸ್ ಎಂದು ಪರಿಗಣಿಸಿ ಅಂಕಪಟ್ಟಿ ನೀಡಲಾಗುತ್ತದೆ.
ವಿಶೇಷ ಎಂದರೆ ಬಿಎ ಪದವಿಗೆ ವಿಷಯ ಆಯ್ಕೆ ಮಾಡಿಕೊಂಡು ಎರಡು ವರ್ಷ ಓದಿದ ಬಳಿಕ ವಾಣಿಜ್ಯ, ವಿಜ್ಞಾನ ವಿಷಯವನ್ನು ಕೂಡ ಅಯ್ಕೆ ಮಾಡಿಕೊಳ್ಳಲು ನೂತನ ಶಿಕ್ಷಣ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಲಾ ವಿಭಾಗ ಓದಿದವರು ವಿಜ್ಞಾನ ಆಯ್ಕೆಗೂ ಅವಕಾಶ ನೀಡಿರುವುದು ವಿಶೇಷ. ಇದರಿಂದ ಕಲಾ ವಿಭಾಗದವರು ವಿಜ್ಞಾನ ಆಯ್ಕೆಗೆ, ವಿಜ್ಞಾನ ಓದುತ್ತಿರುವರು ಕಲಾ ವಿಭಾಗ ಆಯ್ಕೆಗೂ ಅವಕಾಶ ನೀಡಿರುವುದು ಹೊಸ ಶಿಕ್ಷಣ ನೀತಿ ವಿಶೇಷ. ಒಂದು ವಿಷಯ ಆಯ್ಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಭಾರತೀಯ ನಾಗರಿಕ ಸೇವೆ, ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷೆ ತೆಗೆದುಕೊಳ್ಳುವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಜ್ಞರು ಅಭಿಪ್ರಾಯ ತಿಳಿಸಿದ್ದಾರೆ

ಎರಡು ವರ್ಷಕ್ಕೆ ಕನ್ನಡ ಕಡ್ಡಾಯ ಎಂಬ ಭರವಸೆ
ನೂತನ ಶಿಕ್ಷಣ ನೀತಿ ಪ್ರಕಾರ ಭಾಷಾ ವಿಷಯ ಅಧ್ಯಯನವನ್ನು ಕೇವಲ ಒಂದು ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಅದರೆ, ಬಹುತೇಕ ರಾಜ್ಯಗಳು ಸ್ಥಳೀಯ ಭಾಷಾ ವಿಷಯಕ್ಕೆ ಆದ್ಯತೆ ನೀಡಿಲ್ಲ ಎಂಬ ಅಪಸ್ವರ ಕೇಳಿ ಬಂದಿತ್ತು. ರಾಜ್ಯದಲ್ಲಿ ಸಹ ಕನ್ನಡ ಪ್ರಾಧ್ಯಾಪಕರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಖಂಡಿಸಿದ್ದರು. ಕನಿಷ್ಠ ಎರಡು ವರ್ಷಕ್ಕೆ ಕನ್ನಡ ಭಾಷಾ ವಿಷಯವನ್ನು ಓದಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕು. ಭಾಷೆ ಎಂಬುದು ಸಂಸ್ಕೃತಿ. ಬದುಕನ್ನು ನಿರ್ಧರಿಸಿವುದು ಸಾಹಿತ್ಯ ಮತ್ತು ಜ್ಞಾನ. ಮಾತೃ ಭಾಷೆ ಬಿಟ್ಟು ಅನ್ಯ ಭಾಷೆಯಲ್ಲಿ ವಿದ್ಯಾರ್ಥಿಗಳು ಸಮರ್ಥವಾಗಿ ಕಲಿಯಲು ಸಾಧ್ಯವಿಲ್ಲ. ಹೀಗಾಗಿ ಎರಡು ವರ್ಷಕ್ಕೆ ಕನ್ನಡ ಭಾಷಾ ಅಧ್ಯಯನವನ್ನು ಉಳಿಸಿಕೊಳ್ಳಬೇಕು ಎಂಬ ಬೇಡಿಕೆ ಇಟ್ಟಿದ್ದರು. ಈ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ್ದ ಉನ್ನತ ಶಿಕ್ಷಣ ಸಚಿವ ಸಿ.ಎನ್ ಅಶ್ವತ್ಥ್ ನಾರಾಯಣ ಎರಡು ವರ್ಷ ಕನ್ನಡ ಭಾಷಾ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಸ್ತೂರಿ ರಂಗನ್ ವರದಿಗೆ ಕೋಕ್
ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿತ್ತಿದೆ. ಆದರೆ ಕಸ್ತೂರಿ ರಂಗನ್ ಪ್ರಕಾರ ವಿಶ್ವ ವಿದ್ಯಾಲಯಗಳಲ್ಲಿ ಕೌಶಲ್ಯ ಭರಿತ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕಾದರೆ ಪ್ರಾಧ್ಯಾಪಕರಿಗೆ ಸೇವಾ ಭದ್ರತೆ ಒದಗಿಸಬೇಕು. ಯಾವ ಕಾರಣಕ್ಕು ಗುತ್ತಿಗೆ, ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಬಾರದು ಎಂದು ಶಿಫಾರಸು ಮಾಡಿದ್ದರು. ರಾಜ್ಯದಲ್ಲಿರುವ ವಿಶ್ವ ವಿದ್ಯಾಲಯಗಳ ಪರಿಸ್ಥಿತಿ ಅವಲೋಕಿಸಿದರೆ ಶೇ. 20 ರಿಂದ 30 ರಷ್ಟು ಪ್ರೊಫೆಸರ್ಗಳು ಖಾಯಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಳಿದ ಶೇ. 80 ರಷ್ಟು ಪ್ರಾಧ್ಯಾಪಕರು ಅತಿಥಿ ಉಪನ್ಯಾಸಕರು. ಅತಿ ಪುರಾನತ ವಿವಿ ಮೈಸೂರು ವಿಶ್ವ ವಿದ್ಯಾಲಯದ ಪರಿಸ್ಥಿತಿ ಹೀಗಿರುವಾಗ ಇನ್ನು ಕರ್ನಾಟಕದ ಇತರೆ ವಿಶ್ವ ವಿದ್ಯಾಲಯಗಳ ಪರಿಸ್ಥಿತಿ ಏನಾಗಿರಬೇಕು ? ಸರ್ಕಾರ ಯಾವ ತಯಾರಿ ಇಲ್ಲದೇ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಾಯೋಗಿಕ ಜಾರಿಗೆ ಮುಂದಾಗಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ಹಲವು ಸಮಸ್ಯೆಗಳನ್ನು ಪರಿಹರಿಸಿ ಸಾಧಕ ಬಾಧಕಗಳ ಬಗ್ಗೆ ಚರ್ಚೆಸಿ ಅನುಷ್ಠಾನ ಮಾಡಬೇಕಿತ್ತು ಎಂದು ಕಾಲೇಜಿನ ಕನ್ನಡ ಪ್ರಾಧ್ಯಾಪಕರೊಬ್ಬರು ಇರುವ ವಾಸ್ತವ ಅಂಶವನ್ನು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ವರ್ಷವಾರು ಸಿಲಬಸ್ ತಯಾರಿ
ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುತ್ತಿದ್ದರೂ ಅದಕ್ಕೆ ತಕ್ಕಂತೆ ಮೊದಲ ವರ್ಷದ ಪಠ್ಯ ಕ್ರಮ ತಯಾರು ಮಾಡಲಾಗಿದೆ. ಅದರೆ ನೂತನ ಪಠ್ಯ ಪುಸ್ತಕಗಳ ಮುದ್ರಣ ಅಗಿಲ್ಲ ಎನ್ನಲಾಗಿದೆ. ಒಂದೊಂದು ವಿಭಾಗ ದ( ಕಲಾ ವಿಭಾಗ, ವಾಣಿಜ್ಯ ವಿಭಾಗ) ಪಠ್ಯ ಕ್ರಮವನ್ನು ಸಿದ್ಧತೆ ಮಾಡಿಕೊಡುವಂತೆ ಒಂದೊಂದು ವಿಶ್ವ ವಿದ್ಯಾಲಯಕ್ಕೆ ವಹಿಸಲಾಗಿದೆ. ಈಗಾಗಲೇ ಪಠ್ಯ ಕ್ರಮ ಬಂದಿದ್ದು ಕೆಲವೇ ದಿನಗಳಲ್ಲಿ ಕಾಲೇಜುಗಳಿಗೆ ಹಸ್ತಾಂತರಿಸಲಾಗುತ್ತಿದೆ. ಆದರೆ ಪಠ್ಯ ಪುಸ್ತಕ ಮುದ್ರಣ ಆಗಿಲ್ಲ. ಇದರ ಬಗ್ಗೆ ಕಾಲೇಜುಗಳೇ ಅಸಮಾಧಾನ ವ್ಯಕ್ತಪಡಿಸಿವೆ. ವರ್ಷವಾರು ಹಂತ ಹಂತವಾಗಿ ಸಿಲಬಸ್ ತಯಾರಿ ಮಾಡಿ ಕೊಡಲಾಗುವುದು ಎಂದು ಉನ್ನತ ಶಿಕ್ಷಣ ಪರಿಷತ್ ಅಧಿಕಾರಿಗಳು ತಿಳಿಸಿದ್ದಾರೆ. ಸಿಲಬಸ್ ತಯಾರಿ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಂಬಂಧ ಇವತ್ತು ಉನ್ನತ ಮಟ್ಟದ ಸಭೆ ಕರೆದಿದ್ದು, ಕೆಲವು ಮಹತ್ವದ ತೀರ್ಮಾನಗಳು ಹೊರ ಬೀಳಲಿವೆ.












Click it and Unblock the Notifications