25 ವರ್ಷಗಳ ಹಿಂದೆ ಅಪ್ಸರೆ ಹೇಳಿದ್ದರ ಮರ್ಮ!
ಒಬ್ಬ ಕಾಲು ಮುರಿದುಕೊಂಡ ಮಧ್ಯವಯಸ್ಕನೊಬ್ಬ ಮೂಳೆ ತಜ್ಞ ವೈದ್ಯರ ಬಳಿ ಬರುತ್ತಾನೆ. ವೈದ್ಯ ಎಲ್ಲವನ್ನೂ ಪರೀಕ್ಷಿಸಿ ಇದು ಹೇಗಾಯಿತೆಂದು ಕೇಳುತ್ತಾನೆ. ಅದಕ್ಕೆ ಆ ವ್ಯಕ್ತಿ, "25 ವರ್ಷಗಳ ಹಿಂದೆ..." ಅಂತ ಅನ್ನುವಷ್ಟರಲ್ಲಿ ತಾಳ್ಮೆ ಕಳೆದುಕೊಂಡ ವೈದ್ಯ, "25 ವರ್ಷಗಳ ಹಿಂದಿನ ಕಥೆ ಬೇಡ. ಈಗ ಕಾಲು ಮುರಿದಿದ್ದು ಹೇಗೆಂದು ಹೇಳಿ" ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳುತ್ತಾನೆ.
"ಸ್ವಲ್ಪ ನಾನು ಹೇಳುವುದನ್ನು ಕೇಳಿ ವೈದ್ಯರೆ. 25 ವರ್ಷಗಳ ಹಿಂದೆ ನಾನು ಚಿಕ್ಕಮಗಳೂರಿನ ಕಾಫಿ ತೋಟವೊಂದರಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದೆ. ಆ ತೋಟದ ಮಾಲಿಕ ನನಗೆ ತನ್ನ ಮನೆಯ ಹಿಂಬದಿಯ ಕೋಣೆಯೊಂದರಲ್ಲಿ ವಾಸಿಸಲು ಅನುವು ಮಾಡಿಕೊಟ್ಟಿದ್ದ."
"ಕಥೆ ತುಂಬಾ ಇಂಟರೆಸ್ಟಿಂಗ್ ಆಗಿದೆ. ಮುಂದೇನಾಯಿತು?"
"ಮಳೆಗಾಲದ ಒಂದು ರಾತ್ರಿ, ಆಕಾಶಕ್ಕೇ ತೂತುಬಿದ್ದಂತೆ ಮಳೆ ಸುರಿಯುತ್ತಿತ್ತು. ಊಟವನ್ನು ಮುಗಿಸಿಕೊಂಡು ಇನ್ನೇನು ಹಾಸಿಗೆಗೆ ಬೀಳಬೇಕೆಂದಿದ್ದೆ. ಅಷ್ಟರಲ್ಲಿ ಕೋಣೆಯ ಬಾಗಿಲು ಬಡಿದಂತಾಯಿತು. ಯಾರೆಂದು ನೋಡಲು, ತೋಟದ ಮಾಲಿಕನ ಅಪ್ಸರೆಯಂಥ ಮಗಳು."
"ಆಹಾ..."
"ನಾನು ಕೂಡ ಕಟ್ಟುಮಸ್ತು ದೇಹ ಹೊಂದಿದ್ದೆ. ನನಗೆ 21ರ ಹರೆಯ, ಆಕೆ 18ರ ಸೌಂದರ್ಯವತಿ. ಯೌವನ ಇಬ್ಬರಲ್ಲಿಯೂ ತುಂಬಿ ತುಳುಕುತ್ತಿತ್ತು."
"ವಾವ್!"
"ವೈಯಾರದಿಂದ ಬಂದ ಆಕೆ 'ಮತ್ತೇನಾದರೂ ಬೇಕಾ' ಎಂದು ಕೇಳಿದಳು. ಆಶ್ಚರ್ಯಚಕಿತನಾದ 'ನಾನು, ನನಗೇನೂ ಬೇಡ' ಎಂದು ಹೇಳಿದೆ. 'ನಿಜವಾಗ್ಲೂ ಏನೂ ಬೇಡ್ವಾ?' ಅಂತ ಮತ್ತೆ ಅದೇ ನಾಚಿಕೆಭರಿತ ಭಾವದಿಂದ ಕೇಳಿದಳು. ನಾನು 'ಊಟ ಆಯ್ತು, ನೀರು ಕುಡಿದಾಯ್ತು, ಖಂಡಿತ ನನಗೇನು ಬೇಡ' ಎಂದು ಉತ್ತರಿಸಿದೆ. ಆಕೆ ತನ್ನ ರೂಮಿಗೆ ಮರಳಿದಳು."
ಅತ್ಯಂತ ಆಸಕ್ತಿಯಿಂದ ಕೇಳುತ್ತಿದ್ದ ವೈದ್ಯ ಇದ್ದಕ್ಕಿದ್ದಂತೆ ರೇಗಿ, "ಅಲ್ಲಯ್ಯಾ, ನಿನ್ನ ಕಥೆಗೂ ಕಾಲು ಮುರಿದುಕೊಂಡಿದ್ದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ?" ಎಂದು ಸಿಡಿಮಿಡಿಗೊಂಡ.
"ಹೇಳ್ತೀನಿ ಹೇಳ್ತೀನಿ, ಈಗ ವರ್ತಮಾನಕ್ಕೆ ಬರ್ತೀನಿ ಡಾಕ್ಟ್ರೆ. 25 ವರ್ಷಗಳ ಹಿಂದೆ ಆಕೆ ಹೇಳಿದ್ದರ ಮರ್ಮ ಇಂದು 'ಠಂಗ್' ಅಂತ ಫ್ಲಾಷ್ ಆಯ್ತು. ಬೆವರಿ ತೊಪ್ಪೆಯಾಗಿಬಿಟ್ಟೆ. ಯಾವುದೋ ಲಕ್ಷ್ಯದಲ್ಲಿ ಕಾಲಿಟ್ಟೆ ನೋಡಿ, ಮಹಡಿ ಮೇಲಿಂದ ಬಿದ್ದುಬಿಟ್ಟೆ!"












Click it and Unblock the Notifications