ನಿರುದ್ಯೋಗಿಗಳಿಗೆ ಹೊಸ ಸರ್ಕಾರದಿಂದ ಸಿಹಿಸುದ್ದಿ: 2.5 ಲಕ್ಷ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ; ಪ್ರಿಯಾಂಕ್ ಖರ್ಗೆ
2023ರ ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಭರ್ಜರಿ ಬಹುಮತದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ನಿರುದ್ಯೋಗಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದೆ.
"ರಾಜ್ಯದಲ್ಲಿ ಒಟ್ಟಾರೆ 2.5 ಲಕ್ಷ ಹುದ್ದೆಗಳು ಖಾಲಿ ಇದ್ದು, ನಮ್ಮ ಸರ್ಕಾರದಿಂದ ನಿರುದ್ಯೋಗಿ ಯುವಕ-ಯುವತಿಯರಿಗೆ ಕೇವಲ ಹಣ ನೀಡಿದರೆ ನಿರುದ್ಯೋಗ ಹೋಗಲ್ಲ, ಬದಲಾಗಿ ಉದ್ಯೋಗ ನೀಡಬೇಕು. ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಎಲ್ಲ 2.5 ಲಕ್ಷ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ," ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, "ನಿರುದ್ಯೋಗ ನಿರ್ಮೂಲನೆ ಮಾಡಲು ಉದ್ಯೋಗಗಳು ಸೃಷ್ಟಿಯಾಗಬೇಕು. ಯಾವುದೇ ಸ್ಕೀಮ್ ಅಥವಾ ಉಚಿತ ಯೋಜನೆಗಳು ಜೀವನಪೂರ್ತಿಯಾಗಿ ನೀಡಲು ಸಾಧ್ಯವಿಲ್ಲ. ಶೀಘ್ರದಲ್ಲೇ ಉದ್ಯೋಗ ಭರ್ತಿಗೆ ಕ್ರಮ ಕೈಗೊಳ್ಳುತ್ತೇವೆ," ಎಂದು ತಿಳಿಸಿದರು.
ಪಿಎಸ್ಐ ನೇಮಕಾತಿ ಹಗರಣಕ್ಕೆ ತಾರ್ಕಿಕ ಅಂತ್ಯ
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಬಿಟ್ ಕಾಯಿನ್ ಹಗರಣ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಹಗರಣಗಳಿಗೆ ನಾವು ತಾರ್ಕಿಕ ಅಂತ್ಯ ನೀಡುತ್ತೇವೆ. ಈ ಬಗ್ಗೆ ನಾನು ವಿಪಕ್ಷದಲ್ಲಿದ್ದಾಗ ಮಾತನಾಡಿದ್ದೆ ಅದರಂತೆ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
"ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಜಾರಿಗೊಳಿಸುತ್ತೇವೆ. ಈ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ. ಸಹಜವಾಗಿ ಯೋಜನೆಗಳು ಜಾರಿಗೆ ಬಂದಾಗ ಕೆಲವು ನಿಯಮಗಳು ಅನ್ವಯವಾಗುತ್ತವೆ. ಬಡ ವರ್ಗದ ಜನರ ಬದುಕು ಸುಧಾರಿಸಲು ಉಚಿತ ಸೌಲಭ್ಯ ನೀಡುತ್ತಿದ್ದೇವೆ," ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

ಗ್ಯಾರಂಟಿ ಯೋಜನೆಗಳಿಗೆ ಷರತ್ತು ಅನ್ವಯ
ಇನ್ನು "ಚುನಾವಣೆ ವೇಳೆ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳಿಗೆ ಕೆಲವು ಷರತ್ತುಗಳು ಅನ್ವಯವಾಗಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ," ಎಂದು ಹೇಳಿದರು.
"ಚಿತ್ತಾಪುರ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು ಬಿಜೆಪಿ ಭಾರೀ ಪ್ರಯತ್ನ ನಡೆಸಿತು. ಚಿತ್ತಾಪುರ ಕ್ಷೇತ್ರದಿಂದ ನಾನು ಮೂರು ಬಾರಿ ಜಯಿಸಿದ್ದೇನೆ ಎಂದರೆ ಏನೋ ಮಾಡಿರಬೇಕಲ್ಲ. ಅರವಿಂದ್ ಚೌಹಾಣ್ ಕೂಡ ಬಿಜೆಪಿಯಿಂದ ಹೊರಬಂದು ನನಗೆ ಬೆಂಬಲ ನೀಡಿದರು. ಈಗ ನನಗೆ ಸಚಿವ ಸ್ಥಾನ ನೀಡಿದ್ದಾರೆ. ನಾನು ಸಚಿವನಾಗಲು ಅರ್ಹನಲ್ಲವಾ?," ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.












Click it and Unblock the Notifications