"ಬೆಂಗಳೂರಲ್ಲಿ US ಬೇಸ್ನ ಕಂಪನಿಯಿಂದ AI ಸರ್ವರ್ ಉತ್ಪಾದನೆ: ₹1,500 ಕೋಟಿ ಹೂಡಿಕೆ, ಉದ್ಯೋಗ ಸೃಷ್ಟಿ''
ಬೆಂಗಳೂರು, ನವೆಂಬರ್ 06: ಇತ್ತೀಚೆಗೆ ಗೂಗಲ್ ಕಂಪನಿಯು ಅದಾನಿ ಕಂಪನಿ ಜೊತೆಗೆ ವಿಶಾಖಪಟ್ಟಣಂ ನಲ್ಲಿ ಎಐ ಹಬ್ ನಿರ್ಮಾಣ ಘೋಷಿಸಿತು. ಈ ಬಗ್ಗೆ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಗಳು, ಸರ್ಕಾರದಲ್ಲಿ ಅಭಿವೃದ್ಧಿ ಸಂಕಲ್ಪ ಇಲ್ಲ ಎಂದೆಲ್ಲ ಆರೋಪ ಕೇಳಿ ಬಂದವು. ಇದೀಗ ಅಮೆರಿಕದ ಮಿಯಾಮಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಬುರ್ಕಾನ್ ವರ್ಲ್ಡ್ ಇನ್ವೆಸ್ಟ್ಮೆಂಟ್ ಗ್ರೂಪ್ ಕರ್ನಾಟಕ ರಾಜ್ಯದಲ್ಲಿ ಭರ್ಜರಿ ಹೂಡಿಕೆಗೆ ಮುಂದಾಗಿದೆ.
AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ದಿಂದ ಕಾರ್ಯನಿರ್ವಹಿಸುವ ಅತ್ಯಾಧುನಿಕ ಎಐ ಸರ್ವರ್ ಗಳ ಉತ್ಪಾದನೆಗೆ 1,500 ಕೋಟಿ ರೂಪಾಯಿ ಬಂಡವಾಳ ಹೂಡಲು ಮುಂದೆ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪ ಕಂಪನಿಗೆ 10-15 ಎಕರೆ ಭೂಮಿ ಅಗತ್ಯವಿದೆ. ಇದನ್ನು ಸರ್ಕಾರ ಒದಗಿಸಲಿದೆ. ಈ ಹೂಡಿಕೆಯಿಂದ ಸಾಕಷ್ಟು ಉದ್ಯೋಗ ಸೃಷ್ಟಿ ಆಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದರು.

ಇಂದು (ಗುರುವಾರ) ವಿಧಾನಸೌಧದಲ್ಲಿ ತಮ್ಮನ್ನು ಭೇಟಿಯಾದ ಬುರ್ಕಾನ್ ಸಮೂಹದ ಸಿಇಒ ಶಫಿ ಎಂ ಖಾನ್ ಮತ್ತು ಅವರ ತಂಡದೊಂದಿಗೆ ಹೂಡಿಕೆ ಮತ್ತಿತರ ಸಂಗತಿಗಳ ಬಗ್ಗೆ ವಿಸ್ತೃತ ಮಾತುಕತೆ ನಡೆಸಿದರು. ಶಿಗ್ಗಾವಿ ಶಾಸಕ ಯಾಸಿರ್ ಅಹಮದ್ ಪಠಾಣ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು, ಕ್ವಾಡ್-ಜೆನ್ ಕಂಪನಿ ಅಧ್ಯಕ್ಷ ಸಿ.ಎಸ್.ರಾವ್ ಅವರು ಯೋಜನೆ ಬಗ್ಗೆ ಮಾಹಿತಿ ಪಡೆದರು.
ನಂತರ ಮಾತನಾಡಿದ ಸಚಿವ ಎಂಬಿ ಪಾಟೀಲ್ ಅವರು, ಡೇಟಾ ಸೆಂಟರ್ ಗಳಲ್ಲಿ ಬಳಕೆಯಾಗುವ ಈ ಸರ್ವರ್ ಗಳಿಗೆ ವಿಪರೀತ ಬೇಡಿಕೆ ಇದ್ದು ಬೇರೆ ಬೇರೆ ದೇಶಗಳಿಗೆ ರಫ್ತು ಕೂಡ ಮಾಡುವುದಾಗಿ ಕಂಪನಿಯವರು ಹೇಳಿದ್ದಾರೆ. ಅದಕ್ಕೆ ಪೂರ್ಣ ಸಹಕಾರ ನೀಡಲಾಗುವುದು. ಸಹಾಯಧನ ಇತ್ಯಾದಿ ವಿಚಾರಗಳ ಬಗ್ಗೆಯೂ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಲು ಪ್ರಧಾನ ಕಾರ್ಯದರ್ಶಿ ಅವರಿಗೆ ಸಚಿವರು ಸೂಚಿಸಿದರು.

ಎಐ-ರೆಡಿ ನೆಟ್ವರ್ಕ್ ಸ್ವಿಚ್ ಉತ್ಪಾದನೆ
ಬುರ್ಖಾನ್ ಸಮೂಹವು ಅತ್ಯಾಧುನಿಕ ಸಿಪಿಯು, ಜಿಪಿಯು, ಎಐ-ರೆಡಿ ನೆಟ್ವರ್ಕ್ ಸ್ವಿಚ್ ಉತ್ಪಾದನೆ ಆರಂಭಿಸುವುದಕ್ಕೂ ಬಯಸಿದೆ. ಇದಕ್ಕಾಗಿ ಅದು ಜಾಗತಿಕ ಮಟ್ಟದಲ್ಲಿ ತನ್ನ ತಾಂತ್ರಿಕ ಪಾಲುದಾರ ಕಂಪನಿಗಳಾದ ಸೂಪರ್-ಮೈಕ್ರೋ, ಗಿಗಾಬೈಟ್ ಮತ್ತು ಸೆರಾ ನೆಟ್ವರ್ಕ್ ಜತೆ ರಾಜ್ಯದಲ್ಲಿ ಬಂಡವಾಳ ಹೂಡಲು ಬಯಸಿದೆ. ಸರ್ಕಾರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದಿದ್ದಾರೆ.
ಬುರ್ಕಾನ್ ಕಂಪನಿಯ ಹೂಡಿಕೆಯಿಂದ ಸೆಮಿಕಂಡಕ್ಟರ್, ಎಐ ಹಾರ್ಡ್-ವೇರ್ ಮತ್ತು ಆಧುನಿಕ ಎಲೆಕ್ಟ್ರಾನಿಕ್ಸ್ ಕಾರ್ಯಪರಿಸರದ ಬಲವರ್ಧನೆಯಾಗಲಿದೆ. ಅದು ಉತ್ಪಾದನಾ ಪ್ರಕ್ರಿಯೆಯಲ್ಲಿ ರೆಸೊಲ್ಯೂಟ್ ಗ್ರೂಪ್ ಮತ್ತು ಕ್ವಾಡ್-ಜೆನ್ ಕಂಪನಿಗಳ ಸಹಯೋಗ ಹೊಂದಲು ಬಯಸಿದೆ. ಇದರಿಂದ ಸ್ಥಳೀಯವಾಗಿಯೇ ಆರ್ & ಡಿ ಅಭಿವೃದ್ಧಿ, ತಂತ್ರಜ್ಞಾನ ವರ್ಗಾವಣೆ, ಶಿಕ್ಷಣ ಸಂಸ್ಥೆಗಳು ಮತ್ತು ಇಲ್ಲಿಯ ಕೈಗಾರಿಕೆಗಳೊಂದಿಗೆ ಸಹಭಾಗಿತ್ವ ಕೈಗೂಡಲಿದೆ ಎಂದು ತಿಳಿಸಿದರು.
ಕಂಪನಿಯು ಭಾರತ ಮತ್ತು ಇಎಂಇಎ ವಲಯಗಳಲ್ಲಿ ಸೇವೆ ನೀಡುತ್ತಿದೆ. ಅದಕ್ಕಾಗಿ ಬೆಂಗಳೂರನ್ನು ಉತ್ಕೃಷ್ಟತಾ ಕೇಂದ್ರವನ್ನಾಗಿ ಮಾಡಿಕೊಳ್ಳಲಿದೆ. ರಾಜ್ಯಾದ್ಯಂತ ವಿಶೇಷ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಬೃಹತ್ ಕೈಗಾರಿಕೆ, ಐಟಿ-ಬಿಟಿ ಮತ್ತು ಇಎಸ್ಡಿಎಂ ಕ್ಷೇತ್ರಗಳಲ್ಲಿ ಪಾಲುದಾರಿಕೆಯ ಅವಕಾಶಗಳನ್ನು ಹುಡುಕುತ್ತಿದೆ ಎಂದರು.












Click it and Unblock the Notifications