ರೇಷ್ಮೆ, ತೋಟಗಾರಿಕೆ ಕೃಷಿ ಇಲಾಖೆ ವ್ಯಾಪ್ತಿಗೆ; 2 ಸಾವಿರಕ್ಕೂ ಅಧಿಕ ಹುದ್ದೆ ರದ್ದು
ಬೆಂಗಳೂರು, ಅಕ್ಟೋಬರ್ 12; ಕರ್ನಾಟಕ ಸರ್ಕಾರ ಕೋವಿಡ್ ಸಮಯದ ಬಳಿಕ ಆಡಳಿತಾತ್ಮಕ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಅದಕ್ಕಾಗಿ ಇಲಾಖೆಗಳ ವಿಲೀನ, ಅನಗತ್ಯ ಹುದ್ದೆಗಳನ್ನು ರದ್ದು ಮಾಡುವ ಕುರಿತು ವರದಿ ನೀಡಲು ಸಂಪುಟ ಉಪ ಸಮಿತಿ ರಚನೆ ಮಾಡಿದೆ.
ಮಂಗಳವಾರ ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ ನೇತೃತ್ವದಲ್ಲಿ ಸಂಪುಟ ಉಪ ಸಮಿತಿಯ ಮೂರನೇ ಸಭೆ ನಡೆಯಿತು. ಸಭೆಯಲ್ಲಿ ಆಡಳಿತ ಸುಧಾರಣೆ, ವೆಚ್ಚ ಕಡಿತಕ್ಕಾಗಿ ಹಲವಾರು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಗಳ ಸಚಿವಾಲಯ ಮಟ್ಟದ, ಉನ್ನತ ಹಾಗೂ ಹಿರಿಯ ಶ್ರೇಣಿಯ ಎರಡು ಸಾವಿರ ಹುದ್ದೆಗಳನ್ನು ರದ್ದುಪಡಿಸಲು ಸಮಿತಿಯ ಸಭೆಯಲ್ಲಿ ಶಿಫಾರಸು ಮಾಡಲಾಗಿದೆ.
ಆಡಳಿತ ವೆಚ್ಚ ಕಡಿತ; 3 ಇಲಾಖೆಗಳ ವಿಲೀನ ಪ್ರಕ್ರಿಯೆ ಆರಂಭ
ಸಭೆಯಲ್ಲಿ ಅರಣ್ಯ ಸಂರಕ್ಷಣೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ವಿಲೀನದ ಬಗ್ಗೆ ಗಂಭೀರ ಚರ್ಚೆಯಾಗಿದೆ. ಆದರೆ ಈ ಕುರಿತು ಒಮ್ಮತ ಮೂಡಿಲ್ಲ. ಇದರಿಂದಾಗಿ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅರಣ್ಯ ಸಂರಕ್ಷಣೆ ಇಲಾಖೆ ಮುಂದುವರೆಸುವುದು, ಸಾಮಾಜಿಕ ಅರಣ್ಯ ಇಲಾಖೆ ರದ್ದುಗೊಳಿಸುವುದು. ಉಳಿದ ಜಿಲ್ಲೆ, ತಾಲೂಕುಗಳಲ್ಲಿ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಕೈಬಿಟ್ಟು ಸಾಮಾಜಿಕ ಅರಣ್ಯ ಇಲಾಖೆ ಮುಂದುವರೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಸಿ ಗ್ರೂಪ್ ಸಿಬ್ಬಂದಿ ಬಿ ಗ್ರೂಪನಲ್ಲಿ ವಿಲೀನ: ಯುಡಿಡಿ ಕಾರ್ಯದರ್ಶಿ ಹೈಕೋರ್ಟ್ ಹಾಜರ್
ಕೇವಲ ಇಲಾಖೆಗಳು ಮಾತ್ರವಲ್ಲ ಪ್ರಾಧಿಕಾರಗಳನ್ನು ಸಹ ವಿಲೀನಗೊಳಿಸಲು ಸಭೆಯಲ್ಲಿ ಚರ್ಚೆ ನಡೆದಿದೆ. ಈ ಕುರಿತು ಮಾತನಾಡಿರುವ ಆರ್. ಅಶೋಕ, "ಒಂದೇ ಜಿಲ್ಲೆಯೊಳಗೆ ಹಲವು ಯೋಜನಾ ಪ್ರಾಧಿಕಾರಗಳಿವೆ. ಅವೆಲ್ಲವನ್ನುರದ್ದುಪಡಿಸಿ ಜಿಲ್ಲಾ ಮಟ್ಟದಲ್ಲಿ ಒಂದೇ ಪ್ರಾಧಿಕಾರ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ" ಎಂದು ಹೇಳಿದ್ದಾರೆ.
'ಸಿ' ಗ್ರೂಪ್ ಸಿಬ್ಬಂದಿ 'ಬಿ' ಗ್ರೂಪನಲ್ಲಿ ವಿಲೀನ: ಯುಡಿಡಿ ಕಾರ್ಯದರ್ಶಿಗೆ ಬುಲಾವ್
ಬೊಕ್ಕಸದ ಮೇಲಿನ ಹೊರೆ ತಗ್ಗಿಸುವುದು
ಗೃಹ ಸಚಿವ ಆರಗ ಜ್ಞಾನೇಂದ್ರ, ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ ಸಂಪುಟ ಉಪ ಸಮಿತಿ 3ನೇ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ಬಳಿಕ ಮಾತನಾಡಿದ ಸಚಿವ ಆರ್. ಅಶೋಕ, "ಅನಗತ್ಯವಾಗಿರುವ ಹುದ್ದೆಗಳು, ಇಲಾಖೆಗಳನ್ನು ವಿಲೀನ/ ರದ್ದುಗೊಳಿಸುವ ಮೂಲಕ ಸರ್ಕಾರದ ಬೊಕ್ಕಸದ ಮೇಲಿನ ಹೊರೆ ತಗ್ಗಿಸುವ ಕಾರ್ಯ ಪ್ರಗತಿಯಲ್ಲಿದೆ" ಎಂದರು.
"ಐಎಫ್ಎಸ್ ಸೇರಿದಂತೆ ರಾಜ್ಯದ ಅರಣ್ಯ ಇಲಾಖೆಯಲ್ಲಿರುವ ಹಿರಿಯ ಅಧಿಕಾರಿಗಳ ಹುದ್ದೆಗಳನ್ನು ಗಣಣೀಯವಾಗಿ ತಗ್ಗಿಸಲು ಸಂಪುಟ ಉಪ ಸಮಿತಿಯು ಚಿಂತನೆ ನಡೆಸಿದೆ. ಇದಕ್ಕೆ ಪೂರಕವಾಗಿ ಸಮಗ್ರ ವಿವರ ನೀಡಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ" ಎಂದು ಆರ್. ಅಶೋಕ ಹೇಳಿದರು.
ತೋಟಗಾರಿಕೆ, ರೇಷ್ಮೆ ಇಲಾಖೆ ವಿಲೀನ
ಕೃಷಿ ಇಲಾಖೆಯ ಜೊತೆ ತೋಟಗಾರಿಕೆ, ರೇಷ್ಮೆ ಇಲಾಖೆ ವಿಲೀನಗೊಳಿಸಲು ಸಭೆಯಲ್ಲಿ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ. ಸಚಿವಾಲಯ ಸೇರಿದಂತೆ ಇಲಾಖೆಯ ಎಲ್ಲಾ ಹಂತದಲ್ಲೂ ಈ ಬದಲಾವಣೆ ಜಾರಿಗೆ ಬರಲಿದೆ. ಹಿರಿಯ ಅಧಿಕಾರಿಗಳ ಹುದ್ದೆಗಳನ್ನು ಸಹ ರದ್ದುಗೊಳಿಸಲಾಗುತ್ತದೆ. ಈಗ ಇಲಾಖೆಯಲ್ಲಿರುವ ಸುಮಾರು 2 ಸಾವಿರ ಹುದ್ದೆಗಳು ರದ್ದಾಗಲಿವೆ.
ಮೊದಲ ಹಂತದಲ್ಲಿ ಎರಡು ಇಲಾಖೆಗಳ ಜವಾಬ್ದಾರಿಯನ್ನು ಕೃಷಿ ಇಲಾಖೆಗೆ ವಹಿಸಲಾಗುತ್ತದೆ. ರೇಷ್ಮೆ ಬೆಳೆಯುವ ಪ್ರದೇಶಗಳಿಗೆ ಸೀಮಿತವಾಗಿ ರೇಷ್ಮೆ ಇಲಾಖೆ ಅಧಿಕಾರಿ ಹುದ್ದೆಗಳನ್ನು ಉಳಿಸಿಕೊಳ್ಳಲಾಗುತ್ತದೆ ಎಂದು ಸಭೆಯ ಬಳಿಕ ಸಚಿವರು ವಿವರಣೆ ನೀಡಿದ್ದಾರೆ.
ಇಲಾಖೆ, ನಿಗಮಗಳು ರದ್ದು
ಸಭೆಯಲ್ಲಿ ಶಿಕ್ಷಣ ಇಲಾಖೆಯ ಜೊತೆಗೆ ಮುದ್ರಣ, ಲೇಖನ ಸಾಮಾಗ್ರಿ ಮತ್ತು ಪ್ರಕಟಣೆ ಇಲಾಖೆಯನ್ನು ವಿಲೀನಗೊಳಿಸಲು ಸಹ ತೀರ್ಮಾನಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸಹ ವಿಲೀನಗೊಳ್ಳಲಿದೆ.
ಬೆಂಗಳೂರು ನಗರದ ಸುತ್ತಮುತ್ತಲೂ ನೆಲಮಂಗಲ, ಹೊಸಪೇಟೆ, ದೇವನಹಳ್ಳಿ, ಮಾಗಡಿ, ಚನ್ನಪಟ್ಟಣ, ರಾಮನಗರ ಹೀಗೆ ವಿವಿಧ ಯೋಜನಾ ಪ್ರಾಧಿಕಾರಗಳು ಅಸ್ತಿತ್ವದಲ್ಲಿವೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಗೆ ಪ್ರತ್ಯೇಕ ಪ್ರಾಧಿಕಾರವಿದೆ. ಈ ಎಲ್ಲವನ್ನು ರದ್ದುಗೊಳಿಸಿ ಜಿಲ್ಲೆಗೆ ಒಂದೇ ಯೋಜನಾ ಪ್ರಾಧಿಕಾರ ಉಳಿಸಿಕೊಳ್ಳಲಾಗುತ್ತದೆ.
ಅಧಿಕಾರಿಗಳ ಹುದ್ದೆಗಳಿಗೆ ಸಹ ಕತ್ತರಿ
ಕರ್ನಾಟಕದಲ್ಲಿ 150 ಐಎಫ್ಎಸ್ ಅಧಿಕಾರಿಗಳು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಈ ಸಂಖ್ಯೆಯನ್ನು ಕಡಿತಗೊಳಿಸಲು ಸಭೆಯಲ್ಲಿ ಚರ್ಚೆ ನಡೆದಿದೆ. ಹೆಚ್ಚುವರಿ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ವಾಪಸ್ ಕಳಿಸುವ ಕುರಿತು ಮತ್ತೊಂದು ಸುತ್ತು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.
ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದುವರೆಸುವ ಪ್ರಸ್ತಾಪವಿದೆ. ಪ್ರಾದೇಶಿಕ ಆಯುಕ್ತರ ಕಚೇರಿಯನ್ನು ಮುಚ್ಚಿದರೆ ಒಟ್ಟು ಮಂಜೂರಾದ 549 ಅಧಿಕಾರಿ ಸಿಬ್ಬಂದಿ ಹುದ್ದೆಗಳು ಕಂದಾಯ ಇಲಾಖೆಯಲ್ಲಿ ವಿಲೀನವಾಗಲಿದೆ.