ಎಂಆರ್ಪಿಎಲ್ನಲ್ಲಿ ಕನ್ನಡಿಗರಿಗೆ ಅನ್ಯಾಯ; ನೇಮಕಾತಿಗೆ ತಡೆ
ಮಂಗಳೂರು, ಮೇ 23; ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರಸ್ತುತ ನೇಮಕಾತಿಯನ್ನು ತಡೆ ಹಿಡಿಯಲು ಸೂಚನೆ ನೀಡಲಾಗಿದೆ.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಎಂಆರ್ಪಿಎಲ್ ಆಡಳಿತ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಇತ್ತೀಚೆಗೆ ಸುಮಾರು 200ಕ್ಕೂ ಹೆಚ್ಚು ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಸದರಿ ನೇಮಕಾತಿಯಲ್ಲಿ ಕರ್ನಾಟಕದ ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಮಾಹಿತಿಯನ್ನು ಪಡೆದರು.

ಸ್ಥಳೀಯರಿಗೆ ಆದ ಅನ್ಯಾಯದ ಬಗ್ಗೆ ಎಂಆರ್ ಪಿಎಲ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಸದರಿ ನೇಮಕಾತಿ ಪಟ್ಟಿಯನ್ನು ಕೂಡಲೇ ತಡೆಹಿಡಿಯಲು ಆದೇಶ ನೀಡಿದರು. ಎಂಆರ್ ಪಿಎಲ್ ಆಡಳಿತ ನಿರ್ದೇಶಕರು ಸದರಿ ನೇಮಕಾತಿಯನ್ನು ತಡೆಹಿಡಿಯಲು ಒಪ್ಪಿಗೆ ಕೊಟ್ಟರು.
ಮುಂದಿನ ನೇಮಕಾತಿಯ ಪ್ರಕ್ರಿಯೆಯನ್ನು ಸಂಸದರ, ಉಸ್ತುವಾರಿ ಸಚಿವರ ಹಾಗೂ ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ನಡೆಸಲು ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಏನಿದು ವಿವಾದ?; ಎರಡು ವರ್ಷಗಳ ಹಿಂದೆ ಎಂಆರ್ಪಿಎಲ್ 224 ಹುದ್ದೆಗಳಿಗೆ ನೇಮಕಾತಿ ಆರಂಭಿಸಿತ್ತು. ಸ್ಥಳೀಯರಿಗೆ ಶೇ 80ರಷ್ಟು ಸ್ಥಾನಗಳನ್ನು ಮೀಸಲಿಟ್ಟು ಹೊಸದಾಗಿ ನೇಮಕಾತಿ ನಡೆಸುವಂತೆ ಡಿವೈಎಫ್ಐ ಪ್ರತಿಭಟನೆ ನಡೆಸಿತ್ತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್. ನಾಗಾಭರಣ ಕಂಪನಿಗೆ ನೋಟಿಸ್ ನೀಡಿದ್ದರು. ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಸೂಚಿಸಿದ್ದರು. ಕಂಪನಿ ನೇಮಕಾತಿ ಪ್ರಕ್ರಿಯೆ ತಡೆಹಿಡಿತ್ತು.
ಈಗ ಲಾಕ್ಡೌನ್ ನಡುವೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ಆದರೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕಕ್ಕೆ 13 ಹುದ್ದೆಗಳು ಮಾತ್ರ ಸಿಕ್ಕಿವೆ. ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.












Click it and Unblock the Notifications