ಕರ್ನಾಟಕ ಪೊಲೀಸ್ ವರ್ಗಾವಣೆಯಲ್ಲಿ ಮಹತ್ವದ ಬದಲಾವಣೆ
ಬೆಂಗಳೂರು, ಮೇ 18 : ಕರ್ನಾಟಕ ಪೊಲೀಸ್ ಇಲಾಖೆಯ ಸಿವಿಲ್ (ನಾಗರಿಕ) ಸೇವೆಯಲ್ಲಿ ಮುಂಬಡ್ತಿ ಹೊಂದಿದ ಅಧಿಕಾರಿಗಳು ಎರಡು ವರ್ಷ ಕಾರ್ಯಕಾರಿ ಹುದ್ದೆಯಲ್ಲಿ ಕಡ್ಡಾಯವಾಗಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.
ಪೊಲೀಸ್ ಇಲಾಖೆಯ ಸಿವಿಲ್ ಸೇವೆಯಲ್ಲಿ ಮುಂಬಡ್ತಿ ಹೊಂದಿದ ಅಧಿಕಾರಿಗಳು ಕಡ್ಡಾಯವಾಗಿ ಸಿಐಡಿ, ಡಿಸಿಆರ್ಇ, ಲೋಕಾಯುಕ್ತ, ಎಸಿಬಿ, ರಾಜ್ಯ ಗುಪ್ತವಾರ್ತೆ ಹುದ್ದೆಯಲ್ಲಿ 2 ವರ್ಷ ಕಡ್ಡಾಯವಾಗಿ ಕಾರ್ಯ ನಿರ್ವಹಿಸಬೇಕು.
ಕರ್ನಾಟಕ ಸರ್ಕಾರ ಡಿವೈಎಸ್ಪಿ/ಎಸಿಪಿ ಮತ್ತು ಪೊಲೀಸ್ ಇನ್ಸ್ಪೆಕ್ಟರ್ (ಪಿಐ) ವರ್ಗಾವಣೆಗೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಈ ತಿದ್ದುಪಡಿ ಮಾಡಿದೆ. ಡಿವೈಎಸ್ಪಿ/ಎಸಿಪಿ ಮತ್ತು ಪಿಐ ಹುದ್ದೆಗೆ ಬಡ್ತಿ ಹೊಂದಿದ ನಂತರ ಕಾರ್ಯಕಾರಿ ಹುದ್ದೆಯಲ್ಲಿ ಕನಿಷ್ಠ ಎರಡು ವರ್ಷ ಕಡ್ಡಾಯವಾಗಿ ಕೆಲಸ ಮಾಡಬೇಕು.
ವರ್ಗಾವಣೆ ಮಾರ್ಗಸೂಚಿಯಲ್ಲಿ ಬದಲಾವಣೆ ತರಬೇಕು ಎಂದು ಹಿಂದೆಯೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಎಲ್ಲರಿಗೂ ಈ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡಲು ಅವಕಾಶ ನೀಡಲು ತಿದ್ದುಪಡಿ ಮಾಡಲಾಗಿದೆ.

ಸರ್ಕಾರದ ಆದೇಶ
ಡಿವೈಎಸ್ಪಿ/ಎಸಿಪಿ ಮತ್ತು ಪಿಐ ಹುದ್ದೆಯಲ್ಲಿರುವವರು ಪೊಲೀಸ್ ಕಮೀಷನರೇಟ್ನಲ್ಲಿ ಕನಿಷ್ಠ 5 ವರ್ಷ ಮಾತ್ರ ಕಾರ್ಯಕಾರಿ ಹುದ್ದೆಯಲ್ಲಿ ಕೆಲಸ ಮಾಡಲು ಅವಕಾಶವಿದೆ. 5 ವರ್ಷ ಪೂರ್ಣಗೊಳಿಸಿದವರು ಆಯಾ ಕಮೀಷನರೇಟ್ ವ್ಯಾಪ್ತಿಯಿಂದ ಹೊರಗಿನ ಘಟಕದಲ್ಲಿ 5 ವರ್ಷ ಕಡ್ಡಾಯವಾಗಿ ಕೆಲಸ ಮಾಡಬೇಕು.

ಕೆಲಸ ಮಾಡಲು ಅರ್ಹತೆ
ಕಮೀಷನರೇಟ್ ವ್ಯಾಪ್ತಿಯಿಂದ ಹೊರಗಿನ ಘಟಕದಲ್ಲಿ 5 ವರ್ಷ ಕಡ್ಡಾಯವಾಗಿ ಕೆಲಸ ಮಾಡಬೇಕು ಆಗ ಮಾತ್ರ ಆಯಾ ಕಮೀಷನರೇಟ್ನಲ್ಲಿ ಕೆಲಸ ಮಾಡಲು ಅರ್ಹತೆಗಳಿಸಲಿದ್ದಾರೆ. ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಡಿವೈಎಸ್ಪಿ/ಎಸಿಪಿ ಮತ್ತು ಪಿಐಗಳಿಗೆ ಅವರ ಅವಧಿ ಮುಗಿದ ಬಳಿಕ ಈ ನಿಬಂಧನೆ ಅನ್ವಯವಾಗಲಿದೆ.

ತರಬೇತಿ ಪಡೆಯಬೇಕು
ಸರ್ಕಾರದ ಆದೇಶ ಪ್ರಕಾರ ಬಡ್ತಿ ಹೊಂದಿದ ಅಧಿಕಾರಿಗಳು ಎರಡು ವರ್ಷದ ಒಳಗೆ ನಾಲ್ಕು ವಾರಗಳ ಪುನರ್ ಮನನ ತರಬೇತಿ ಪಡೆಯಬೇಕು. ಈ ತರಬೇತಿ ಪೂರ್ಣಗೊಳಿಸದವರನ್ನು ಕಾರ್ಯಕಾರಿ ಹುದ್ದೆಗೆ ಪರಿಗಣಿಸಬಾರದು ಎಂದು ಸ್ಪಷ್ಟಪಡಿಸಲಾಗಿದೆ.

ಏಕೆ ಮಾರ್ಗಸೂಚಿ ಬದಲಾವಣೆ
ಬಡ್ತಿ ಹೊಂದಿದ ಅಧಿಕಾರಿಗಳಿಗೆ ಕಾರ್ಯಕಾರಿ ಹುದ್ದೆಯಲ್ಲಿ ಕೆಲಸ ಮಾಡಿ ಅನುಭವ ಹೆಚ್ಚಿಸಲು, ತಾಂತ್ರಿಕವಾಗಿ ಕಾರ್ಯಕ್ಷಮತೆ ಪಡೆಯಲು ಹಾಗೂ ಎಲ್ಲರಿಗೂ ಈ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲು ಮಾರ್ಗಸೂಚಿ ಬದಲಾವಣೆ ಮಾಡಲಾಗಿದೆ.












Click it and Unblock the Notifications