Railway Recruitment: ರೈಲ್ವೆ ಇಲಾಖೆಯಲ್ಲಿ ಹುದ್ದೆ ಪಡೆಯಲು ಕನ್ನಡಿಗರ ನಿರಾಸಕ್ತಿ: ವಿ.ಸೋಮಣ್ಣ
ಬೆಂಗಳೂರು, ಡಿಸೆಂಬರ್ 24: ಭಾರತೀಯ ರೈಲ್ವೆ ವ್ಯಾಪ್ತಿಯಲ್ಲಿ ಬೃಹತ್ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ರೈಲ್ವೆ ನೇಮಕಾತಿ ಮಂಡಳಿಯು (ಆರ್ಆರ್ಬಿ) ಈಗಾಗಲೇ ಸಾವಿರಾರು ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಹೀಗಿದ್ದರೂ ಸಹ ಕನ್ನಡಿಗರು ರೈಲ್ವೆ ನೇಮಕಾತಿಯಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಹಾಲಿ 12 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಆ ಎಲ್ಲ ನೌಕರರ ಪೈಕಿ ಬಹುತೇಕ ಮಂದಿ ದಕ್ಷಿಣ ಭಾರತೀರಲ್ಲ. ಬದಲಾಗಿ ಉತ್ತರ ಭಾರತದ ಸಿಬ್ಬಂದಿಯೇ ಹೆಚ್ಚಿದ್ದಾರೆ. ನನಗೆ ಕನ್ನಡಿಗರು ಕೇಂದ್ರ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಮಾಡಬೇಕು. ನಿರುದ್ಯೋಗ ನಿವಾರಣೆ ಆಗಬೇಕು ಎಂಬ ಆಶಯ ಇದೆ ಎಂದರು.

ಇತ್ತೀಚೆಗೆ ರೈಲ್ವೆ ಇಲಾಖೆ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶ ಕೊಡಿಸಿದ್ದೇವೆ. ಹೀಗಿದ್ದರು ಕನ್ನಡಿಗರು ಈ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಆಕಸ್ತಿಯೇ ವಹಿಸುತ್ತಿಲ್ಲ. ದಿನಪೂರ್ತಿ ಇಲ್ಲಿ ಕೆಲಸ ಮಾಡಬೇಕು. ಹೀಗಾಗಿ ಇಂತಹ ಕೆಲಸ ನನಗೆ ಬೇಡ ಎಂದು ಹೇಳುವವರೇ ಹೆಚ್ಚು ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕೇಂದ್ರ ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ಹೆಚ್ಚು ಹೆಚ್ಚು ಕನ್ನಡಿಗರು ಬರೆದು ಪಾಸಾಗಬೇಕು. ಒಳ್ಳೆಯ ಹುದ್ದೆ ಪಡೆಯಬೇಕು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ಸಿಕ್ಕಿದೆ. ತುಮಕೂರಿನ ಜನರು ಆಯ್ಕೆ ಮಾಡಿ ಕಳುಹಿಸಿದ್ದಾರೆ. ನನ್ನ ಅಧಿಕಾರಾವಧಿಯಲ್ಲಿಯೇ ಕನ್ನಡಿಗರಿಗೆ ರೈಲ್ವೆ ಇಲಾಖೆಯಲ್ಲಿ ಅತ್ಯಧಿಕ ಕೆಲಸಗಳು ಸಿಗಬೇಕು ಎಂಬುದು ನನ್ನ ಆಶಯ ಎಂದು ತಿಳಿಸಿದರು.
ವಿವಿಧ ಹುದ್ದೆಗಳಿಗೆ ನೇಮಕಾತಿ ಶುರು
ರೈಲ್ವೆ ನೇಮಕಾತಿ ಮಂಡಳಿಯು 32000ಕ್ಕೂ ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನಿಸಿದೆ. ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು ಇಲಾಖೆಯಲ್ಲಿ 15ವಿವಿಧ ಹುದ್ದೆಗಳ ಅರ್ಜಿ ಕರೆಯಲಾಗಿದೆ. ಸಹಾಯಕ ವ್ಯವಸ್ಥಾಪಕ ಮತ್ತು ಸೈಟ್ ಇಂಜಿನಿಯರ್ ಹುದ್ದೆಗಳ ಭರ್ತಿ ನಡೆಯಲಿದೆ.
ರೈಲ್ವೆ ನೇಮಕಾತಿಯು 753 ಖಾಲಿ ಹುದ್ದೆಗಳ ಅರ್ಜಿ ಆಹ್ವಾನಿಸಲಾಗಿದೆ. ಬೋಧಕ ಹುದ್ದೆಗಳ ನೇಮಕಾತಿ ಇದಾಗಲಿದೆ. ಇವೆಲ್ಲವು 2025ರಲ್ಲಿ ನಡೆಯಲಿರುವ ನೇಮಕಾತಿಗಳಾಗಿವೆ. ಇಷ್ಟೆಲ್ಲ ನೇಮಕಾತಿ ಪ್ರಕ್ರಿಯೆ ಶುರುವಾಗಿದ್ದು, ಕನ್ನಡಿಗರು ಅರ್ಜಿ ಸಲ್ಲಿಸಬೇಕಿದೆ.












Click it and Unblock the Notifications