KSRTC: ರಸ್ತೆ ಅಫಘಾತಗಳಿಗೆ ಹಿರಿಯ ಅಧಿಕಾರಿಗಳೇ ಹೊಣೆ: ರಾಮಲಿಂಗಾ ರೆಡ್ಡಿ ಖಡಕ್ ಎಚ್ಚರಿಕೆ
ಬೆಂಗಳೂರು, ಮೇ 12: ಸರ್ಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕವಾಗಿ ನೇಮಕಾತಿ ಪೂರ್ಣಗೊಳಿಸುವುದು ಒಂದು ಸವಾಲಿನ ಕೆಲಸವೇ ಸರಿ ಎಂಬುದು ನನ್ನ ಭಾವನೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) ಹೊಸದಾಗಿ ನೇಮಕವಾದ ಎರಡು ಸಾವಿರಕ್ಕೂ ಹೆಚ್ಚು ನಿರ್ವಾಹಕರಿಗೆ ನೇಮಕಾತಿ ಆದೇಶ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಬಸ್ ಅಪಘಾತಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಅಪಘಾತಗಳಿಗೆ ಕಾರಣರಾದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
9000 ಹುದ್ದೆಗಳ ನೇಮಕಾತಿಗೆ ಚಾಲನೆ
2018 ರಿಂದ ಇಲ್ಲಿಯವರೆಗೂ ಬಿ.ಎಂ.ಟಿ.ಸಿಯಲ್ಲಿ ಯಾವುದೇ ನೇಮಕಾತಿ ಆಗಿರಲಿಲ್ಲ. ಇದೀಗ ನೇಮಕಗೊಂಡ ಬರೋಬ್ಬರಿ 2286 ನಿರ್ವಾಹಕರಿಗೆ ಬೆಂಗಳೂರಿನಲ್ಲಿ ಸೋಮವಾರ ಸಾರಿಗೆ ಸಚಿವರು ನೇಮಕಾತಿ ಆದೇಶ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ನಾಲ್ಕು ಸಾರಿಗೆ ನಿಗಮಗಳಲ್ಲಿ 9000 ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಈ ಹಿಂದಿನ ಎರಡು ವರ್ಷದಲ್ಲಿ ಅತ್ಯಂತ ಪಾರದರ್ಶಕವಾಗಿ 4700 ಹೊಸ ನೇಮಕಾತಿ ಮತ್ತು 1000 ಅನುಕಂಪದ ನೇಮಕಾತಿ ಪೂರ್ಣಗೊಳಿಸಲಾಗಿದೆ. ಉಳಿದ 4300 ನೇಮಕಾತಿಗಳು ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ಭರವಸೆ ನೀಡಿದರು.
ಸರ್ಕಾರಿ/ ಖಾಸಗಿವಲಯಗಳಲ್ಲಿ ನಿರುದ್ಯೋಗ ಸಮಸ್ಯೆ ಮತ್ತು ಹುದ್ದೆ ಕಡಿತ ಜಾರಿಯಲ್ಲಿದೆ. ಈ ವೇಳೆ 10,000 ನೇಮಕಾತಿ ಪಾರದರ್ಶಕವಾಗಿ ನಡೆಸಿ ಉದ್ಯೋಗ ನೀಡಿರುವುದು. ನಮ್ಮ ಸರ್ಕಾರವು ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ.

ಅಪಘಾತದಲ್ಲಿ ಭಾರತಕ್ಕೆ ಮೊದಲ ಸ್ಥಾನ: ಕಳವಳ
ಅಂತಾರಾಷ್ಟ್ರೀಯ ಮಟ್ಟದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಬಗ್ಗೆ ಅವಲೋಕಿಸಿದಾಗ, ಭಾರತ ದೇಶವು ರಸ್ತೆ ಅಪಘಾತದಲ್ಲಿ ಮೊದಲ ಸ್ಥಾನದಲ್ಲಿದೆ. ಅತೀ ಹೆಚ್ಚು ಅಪಘಾತ, ಸಾವು ನೋವು ದಾಖಲಾಗುತ್ತಿರುವುದು ನಮ್ಮ ದೇಶದಲ್ಲಿ ಇದು ಅತ್ಯಂತ ಕಳವಳಕಾರಿ. ಅದನ್ನು ತಡೆಗಟ್ಟಲು ನಮ್ಮ ಸಾರಿಗೆ ಇಲಾಖೆಯಿಂದ ( RTO - ROAD Safety Fund) ಸಹ ವಿವಿಧ ಅಭಿಯಾನಗಳನ್ನು ಸಹ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಕರ್ನಾಟಕ ಸಾರಿಗೆ ಸಂಸ್ಥೆಗಳ ಬಸ್ಸುಗಳ ಅಪಘಾತಗಳು ಅಧಿಕವಾಗುತ್ತಿವೆ. ಅಪಘಾತಕ್ಕೆ ಯಾರೇ ಕಾರಣವಿರಬಹುದು, ಆದರೆ ಅಪಘಾತದಿಂದ ನಡೆಯುವ ಸಾವು ನೋವುಗಳಿಗೆ ಯಾವುದೇ ಕಾರಣ/ ಪರಿಹಾರವು ನ್ಯಾಯ ಒದಗಿಸುವುದಿಲ್ಲ. ಅಪಘಾತದಿಂದ ಕಳೆದುಕೊಂಡ ಅಮೂಲ್ಯ ಜೀವಗಳನ್ನು ವಾಪಸ್ಸು ತರಲು ಸಾಧ್ಯವೇ? ಅವರ ಅವಲಂಬಿತರು ಅನುಭವಿಸುವ ನೋವಿಗೆ ಪರ್ಯಾಯವಿದೆಯೇ? ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಎರಡು ವಾರದ ಹಿಂದೆ ಅಪಘಾತದಲ್ಲಿ ಕಾಲು ಕಳೆದುಕೊಂಡ ಚಾಲನಾ ಸಿಬ್ಬಂದಿಯೊಬ್ಬರಿಗೆ ರೂ.25 ಲಕ್ಷ ಪರಿಹಾರ ಹಣವನ್ನು ನಾವು ನೀಡುವಾಗ ನನಗೆ ಅರ್ಥವಾಗಿದ್ದು ಒಂದೇ ವಿಷಯ. ಯಾವುದೇ ಆರ್ಥಿಕ ಸೌಲಭ್ಯವು ಆ ಸಿಬ್ಬಂದಿಗೆ ತನ್ನ ಹಿಂದಿನ ಸಂತೋಷದ ಜೀವನ ತಂದು ಕೊಡುವುದಿಲ್ಲ. ಬೇರೆಯವರನ್ನು ನೋಡಿದಾಗ ಅವನಿಗಾಗುವ ಮಾನಸಿಕ ವೇದನೆ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಅವವರು ವಿಷಾಧಿಸಿದರು.
ಬಸ್ಸು ರಸ್ತೆಯಲ್ಲಿ ಸಂಚರಿಸುವ ದೊಡ್ಡ ವಾಹನ, ಆದ್ದರಿಂದ ನಮ್ಮ ಚಾಲಕರು ಮತ್ತಷ್ಟು ತಾಳ್ಮೆ, ಜಾಗ್ರತೆ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ನಿರ್ವಾಹಕರು ಚಾಲಕರಿಗೆ ವೇಗ ತಗ್ಗಿಸಲು, ಜಾಗ್ರತೆ ವಹಿಸಲು ಮನವರಿಕೆ ಮಾಡಿಕೊಡಬೇಕು ಎಂದರು.
ಕೆಲ ಸಂದರ್ಭಗಳಲ್ಲಿ ಬಸ್ಸುಗಳ ಅಪಘಾತಕ್ಕೆ ಬಸ್ಸುಗಳ ಸ್ಥಿತಿಗತಿಗಳು/ತಾಂತ್ರಿಕ ದೋಷಗಳು ಕಾರಣವಿರಬಹುದು. ಆ ನಿಟ್ಟಿನಲ್ಲಿಯೂ ನಾವು ಗಮನವಹಿಸಬೇಕು ತಾಂತ್ರಿಕ ಇಲಾಖೆಯ ಅಧಿಕಾರಿಗಳು,ಮೇಲ್ವಿಚಾರಕ ಸಿಬ್ಬಂದಿಗಳ ಅಜಾಗರೂಕತೆ ನಿರ್ಲಕ್ಷತೆ ಕಾರಣವಾಗಿರುತ್ತದೆ.
ತಾಂತ್ರಿಕ ತೊಂದರೆಗಳಿಗೆ ಇನ್ನು ಮುಂದೆ, ಚಾಲನಾ ಸಿಬ್ಬಂದಿಗಳ ಬದಲಾಗಿ ತಾಂತ್ರಿಕ ಇಲಾಖೆಯ ಅಧಿಕಾರಿಗಳು, ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಘಟಕ ವ್ಯವಸ್ಥಾಪಕರುಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ನೂರು ಅಪಘಾತಗಳಲ್ಲಿ ಇದೊಂದು..ತಪ್ಪು
ಅಪಘಾತ, ತಾಂತ್ರಿಕ ತೊಂದರೆ ವಿಚಾರವಾಗಿ ಇಷ್ಟು ತೀಕ್ಷ್ಣವಾಗಿ ಪ್ರತಿಕ್ರಿಯಿಸಲು ಕಾರಣವೇನೆಂದರೆ ಇತ್ತೀಚಿನ ದಿನಗಳಲ್ಲಿ ಅಪಘಾತದ ಬಗ್ಗೆ ಭಯ ಮತ್ತು ಸಂವೇದನಾ ಶೀಲತೆ ಇಲ್ಲದಂತಾಗಿದೆ. ನೂರು ಅಪಘಾತಗಳಲ್ಲಿ ನನ್ನದೊಂದು ಎಂಬ ಅಸಹನೀಯ ಭಾವನೆ ಚಾಲನಾ ಸಿಬ್ಬಂದಿಗಳಲ್ಲಿ ಇರಬಾರದು. ಇಂತಹ ಭಾವನೆ ಆಘಾತಕಾರಿ ಎಂದು ಅವರು ಎಚ್ಚರಿಸಿದರು.
ಸಾಋಇಗೆ ಇಲಾಖೆಯು ಮುಂದೆ ಅಪಘಾತಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳದೆ ಅನ್ಯ ಮಾರ್ಗವಿಲ್ಲದಂತಾಗಿದೆ. ಅಪಘಾತಗಳನ್ನು ತಗ್ಗಿಸಲು ಕಠಿಣ ಕ್ರಮಗಳನ್ನು ಸಹ ಕೆಲವೊಮ್ಮೆ ಜಾರಿಗೊಳಿಸುವುದು ಪ್ರಯಾಣಿಕರ ಹಿತ ದೃಷ್ಟಿಯಿಂದ ಅಗತ್ಯವಾಗಿರುತ್ತದೆ. ಅಪಘಾತಗಳು ಆಕಸ್ಮಿಕವೇ ಆದರೂ ಅದನ್ನು ತಡೆಗಟ್ಟಲು ಎಲ್ಲಾ ರೀತಿಯ ಕ್ರಮಗಳನ್ನು ತೆಗದುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿದರು.












Click it and Unblock the Notifications