ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು ಆಗಸ್ಟ್ 24: ಕರ್ನಾಟಕದಲ್ಲಿ ಬಹುದಿನಗಳ ವಿರಾಮದ ನಂತರ ಮತ್ತೆ ಮುಂಗಾರು ಆರ್ಭಟಿಸುವ ಲಕ್ಷಣಗಳು ಕಂಡು ಬಂದಿವೆ. ಈ ಭಾರಿ ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಧಿಕ ಮಳೆ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಕರ್ನಾಟಕದಲ್ಲೂ ಸಹ ಗುರುವಾರ ಒಂದು ದಿನ ಮಳೆ ಅಬ್ಬರಿಸಲಿದೆ. ಉಳಿದಂತೆ ಮುಂದಿನ ಮೂರ್ನಾಲ್ಕು ದಿನ ದಕ್ಷಿಣ ಒಳನಾಡಿನ ಜಿಲ್ಲೆಗಳ ಹಲವೆಡೆ ಮುಂಗಾರು ಮಾರುತಗಳು ಹೆಚ್ಚಿ ಸಕ್ರಿಯವಾಗಿರಲಿವೆ. ಈ ವೇಳೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅಷ್ಟಾಗಿ ಮಳೆ ಸುರಿಯದೆ ತುಂತುರು ಇಲ್ಲವೇ ಸಾಧಾರಣವಾಗಿ ಮಳೆ ಬೀಳಲಿದೆ.
ಬಂಗಾಳಕೊಲ್ಲಿ ಭಾಗದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯಗಳಿಂದ ಕರಾವಳಿ ಕರ್ನಾಟಕ ಮತ್ತು ಮಲೆನಾಡು ಒಳಗೊಂಡ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆ ಕಳೆದ ಎರಡು-ಮೂರು ದಿನದಿಂದ ಬೀಳುತ್ತಿದೆ. ಆಗಾಗ ಬರುತ್ತಿರುವ ಮಳೆಯಿಂದ ಬೆಳೆ ಕೊಯ್ಲು ಮಾಡಿರುವ ರೈತರು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಈಗಾಗಲೇ ಹಾನಿಗೀಡಾದ ಸಂತ್ರಸ್ತರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮತ್ತೆ ಮಳೆ ಅಬ್ಬರ
ಕರ್ನಾಟಕ ರಾಜ್ಯ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಮತ್ತೆ ಮುಂಗಾರು ಮಳೆ ಆರ್ಭಟ ಶುರುವಿಟ್ಟುಕೊಂಡಿದೆ. ಕಳೆದ ಕೆಲವು ದಿನಗಳಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಮಳೆ ಕ್ಷೀಣಿಸಿತ್ತು. ಇದೀಗ ಆ ಎಲ್ಲ ಪ್ರದೇಶಗಳಲ್ಲಿ ಗುರುವಾರ ಇಲ್ಲವೇ ಶುಕ್ರವಾರದಿಂದ ಮತ್ತೆ ಮಳೆ ಅಬ್ಬರ ಶುರುವಾಗಲಿದೆ. ಈ ಪೈಕಿ ಕರ್ನಾಟಕ, ಅಂಡಮಾನ್ ಮತ್ತು ನಿಕೋಬಾರ್, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ರಾಜಸ್ಥಾನ್, ಆಂಧ್ರಪ್ರದೇಶ, ಓಡಿಶಾ ಸೇರಿದಂತೆ ವಿವಿಧೆಡೆ ಸಾಧಾರಣದಿಂದ ಭಾರಿ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನಲ್ಲಿ ಅಧಿಕ ಮಳೆ ಸಾಧ್ಯತೆ
ಕರ್ನಾಟಕದ ವಿವಿಧೆಡೆ ಆಗಸ್ಟ್ 28ರವರೆಗೆ ಮಳೆ ಮುಂದುವರಿಯಲಿದೆ. ಈ ಪೈಕಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಗುರುವಾರ ಒಂದು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದಂತೆ ದಕ್ಷಿಣ ಒಳನಾಡಿನಲ್ಲಿ ಶುಕ್ರವಾರ ಹೊರತು ಪಡಿಸಿ ಮುಂದಿನ ನಾಲ್ಕು ದಿನ ಸಾಧಾರಣದಿಂದ ಭಾರಿ ಮಳೆ ಬೀಳಲಿದೆ. ಹೀಗಾಗಿ ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಶಿಮವೊಗ್ಗ, ಚಿಕ್ಕಬಳ್ಳಾಪುರ, ಕೋಲಾರ ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ಅವಧಿಯಲ್ಲಿ ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ತುಂತುರು ಇಲ್ಲವೇ ಹಗುರ ಮಳೆ ದಾಖಲಾಗಬಹುದು. ಇದರ ಹೊರತು ಹವಾಮಾನದಲ್ಲಿ ಯಾವುದೇ ಗಂಭೀರ ರೂಪದ ಬದಲಾವಣೆಗಳು ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

ಸಿಲಿಕಾನ್ ಸಿಟಿಯ ಮಳೆ ಮುನ್ಸೂಚನೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಗಸ್ಟ್ 26ರವರೆಗೆ ಹಗುರದಿಂದ ಸಾಧಾರಣ ಮಳೆ ಮುಂದುವರಿಯಲಿದೆ. ಕಳೆದ ಕೆಲವು ದಿನಗಳಿಂದ ತಣ್ಣಗಾಗಿದ್ದ ವರುಣ ಮತ್ತೆ ಅಬ್ಬರಿಸುತ್ತಿದ್ದಾನೆ. ಬುಧವಾರ ನಗರದ ವಿವಿಧೆಡೆ ಉತ್ತಮ ಮಳೆ ಆಗಿದೆ. ಕೆಲವು ಬಡಾವಣೆಗಳಲ್ಲಿ ಜಿಟಿ ಜಿಟಿ ರೂಪದಲ್ಲಿ ತಡರಾತ್ರಿವರೆಗೆ ಮಳೆ ಮುಂದುವರಿದಿದೆ. ಇದೇ ರೀತಿ ಮುಂದಿನ ಎರಡು ದಿನ ಮಳೆ ಆಗಬಹುದು. ಈ ಅವಧಿಯಲ್ಲಿ ತಾಪಮಾನದಲ್ಲಿ ಇಳಿಕೆ ಕಂಡು ಬರಲಿದ್ದು, ಎಲ್ಲೆಡೆ ಚಳಿ ವಾತಾವರಣ ನಿರ್ಮಾಣವಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಮಾಹಿತಿ ನೀಡಿದೆ.

ಕರ್ನಾಟಕದ ಮುಖ್ಯ ಜಿಲ್ಲೆಗಳ ಉಷ್ಣಾಂಶ ವಿವರ
ಬೆಂಗಳೂರಿನಲ್ಲಿ 26 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 70, ಗಾಳಿಯ ವೇಗ ಗಂಟೆಗೆ 34 ಕಿ.ಮೀ. ದಾಖಲಾಗಿದೆ. ಇನ್ನು ಬಾಗಲಕೋಟೆ 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 60 ತೇವಾಂಶ, ರಾಯಚೂರು 31 ಡಿಗ್ರಿ ಸೆಲ್ಸಿಯಸ್ ಗರಿಷ್ಠ, 62 ರಷ್ಟು ತೇವಾಂಶ, ಚಿತ್ರದುರ್ಗ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇದ್ದು, 81 ರಷ್ಟು ತೇವಾಂಶ ಇದೆ. ಕಲಬುರಗಿ 32 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 64 ರಷ್ಟು ತೇವಾಂಶ ಇದೆ, ಇನ್ನು ಚಿಕ್ಕಮಗಳೂರು 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ, 75ರಷ್ಟು ತೇವಾಂಶ ಇದೆ.
ಕರಾವಳಿ ಜಿಲ್ಲೆಯಾದ ಮಂಗಳೂರಿನಲ್ಲಿ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 80 ತೇವಾಂಶ ಇದ್ದರೆ ಶಿವಮೊಗ್ಗ 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 75 ತೇವಾಂಶ ಇದೆ. ಮೈಸೂರು 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 71 ತೇವಾಂಶ ಹಾಗೂ ಬಳ್ಳಾರಿ 31ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 60 ತೇವಾಂಶ ಕಂಡು ಬಂದಿದೆ.












Click it and Unblock the Notifications