ಬೆಂಗಳೂರಿಗರ ಬೆನ್ನು ಬಿದ್ದ ವರುಣ; ಮಳೆಗೆ ಕರುನಾಡ ಮಂದಿ ಹೈರಾಣ!
ಬೆಂಗಳೂರು, ಜುಲೈ 16: ಸಿಲಿಕಾನ್ ಸಿಟಿ ಜನರಿಗೆ ಮಳೆರಾಯ ಬಿಟ್ಟು ಬಿಟ್ಟು ದರ್ಶನ ಭಾಗ್ಯ ನೀಡುತ್ತಿದ್ದಾನೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣದ ಮಧ್ಯೆ ಆಗಾಗ ಮಳೆ ಸುರಿಯುತ್ತಿದ್ದು, ಜನರು ಮನೆಗಳಿಂದ ಹೊರ ಬರುವುದಕ್ಕೆ ಹೆದರುವಂತಾಗಿದೆ.
ರಾಜ್ಯ ರಾಜಧಾನಿಯಲ್ಲಿ ಶನಿವಾರ ಬೆಳಗ್ಗೆಯಿಂದಲೂ ಮಳೆಯ ಕಾಟ ಶುರುವಾಗಿದೆ. ಕೆಲವು ಪ್ರದೇಶಗಳಲ್ಲಿ ಮಳೆ ತುಂತುರು ರೀತಿಯಲ್ಲಿ ಸುರಿಯುತ್ತಿದ್ದರೆ, ಕೆಲವು ಕಡೆಗಳಲ್ಲಿ ವರುಣ ದೇವ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಬೆಂಗಳೂರು ಹೊರತಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಆಟ ಜೋರಾಗಿದೆ.
ದೆಹಲಿಯಲ್ಲಿ ತೀವ್ರ ಮಳೆ: ಹಲವು ಪ್ರದೇಶಗಳು ಜಲಾವೃತ
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತಿಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಅದೇ ರೀತಿ ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ಮಳೆ ಜೋರಾಗಿದೆ. ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ, ಕೊಪ್ಪಳ ಮತ್ತು ಹಾವೇರಿ ಜಿಲ್ಲೆಗಳಲ್ಲೂ ವರುಣದೇವ ರೌದ್ರನರ್ತನ ತೋರಿದ್ದಾನೆ.
ಕರುನಾಡಿನಲ್ಲಿ ಜುಲೈ 18ರವರೆಗೂ ವರುಣನದ್ದೇ ಖೇಲ್
ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ನೈಋತ್ಯ ಮುಂಗಾರು ಚುರುಕಾಗಿದೆ. ಈ ಹಿನ್ನೆಲೆ ಕರಾವಳಿ ಬಹುತೇಕ ಕಡೆ ಹಾಗೂ ಒಳನಾಡಿನ ಹಲವು ಕಡೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಜುಲೈ 18ರವರೆಗೂ ಮಳೆ ಮುಂದುವರಿಯಲಿದೆ. ಇದರ ಹೊರತಾಗಿ ರಾಜ್ಯದ ಹವಾಮಾನದಲ್ಲಿ ಯಾವುದೇ ರೀತಿಯ ಗಮನಾರ್ಹ ಬದಲಾವಣೆಗಳಿಲ್ಲ ಎಂದು ಭಾರತೀಯ ಹವಾಮಾನ (IMD) ಇಲಾಖೆ ಮುನ್ಸೂಚನೆ ನೀಡಿದೆ.
ಸಿಲಿಕಾನ್ ಸಿಟಿಯಲ್ಲಿ ಹೇಗಿದೆ ಕ್ಲೈಮೇಟ್?
ಮಳೆಯ ಕೋಪಕ್ಕೆ ಸಿಲಿಕಾನ್ ಸಿಟಿ ಜನರು ಕೂಡ ಮೆತ್ತಗಾಗಿ ಹೋಗಿದ್ದಾರೆ. ಹನಿ ಹನಿ ಮಳೆಯ ಹನಿಯ ಮಧ್ಯೆ ತಣ್ಣಗೆ ಬೀಸುವ ಗಾಳಿಯು ಜನರನ್ನು ಮನೆಗಳಿಂದ ಹೊರ ಬಾರದಂತೆ ಮಾಡಿ ಬಿಟ್ಟಿದೆ. ಶನಿವಾರ ಬೆಳಗ್ಗೆಯಿಂದಲೂ ನಗರದಲ್ಲಿ ಮೋಡ ಕವಿದ ವಾತಾವರಣವಿದೆ. ಆಗಾಗ ಮಳೆಯೂ ಸುರಿಯುತ್ತಿದ್ದು, ಗರಿಷ್ಠ ತಾಪಮಾಣ 27 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಆಗಿದೆ. ಮುಂದಿನ 48 ಗಂಟೆಗಳವರೆಗೂ ಬೆಂಗಳೂರಿನಲ್ಲಿ ಇದೇ ರೀತಿ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂದಿನ 24 ಮತ್ತು 48 ಗಂಟೆಗಳಲ್ಲಿ ವಾತಾವರಣ ಹೇಗೆ?
ಕರ್ನಾಟಕದ ಕರಾವಳಿ ಭಾಗದಲ್ಲಿರುವ ಎಲ್ಲಾ ಜಿಲ್ಲೆಗಳಲ್ಲೂ ಮಳೆಯು ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ, ಉತ್ತರ ಕನ್ನಡ ಮತ್ತು ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಗಳ ಒಂದೆರೆಡು ಕಡೆಗಳಲ್ಲಿ ಅತಿಹೆಚ್ಚು ಮಳೆೆಯಾಗುವ ಸಾಧ್ಯತೆಯಿದೆ. ಇನ್ನು, ಮುಂದಿನ 48 ಗಂಟೆಗಳಲ್ಲಿ ಕರಾವಳಿ ಎಲ್ಲಾ ಜಿಲ್ಲೆಗಳು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ, ಉತ್ತರ ಕನ್ನಡ ಮತ್ತು ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರಗಿ ಜಿಲ್ಲೆಗಳ ಒಂದೆರೆಡು ಕಡೆಗಳಲ್ಲಿ ಮಳೆಯಾಗಿಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ
ಕರ್ನಾಟಕದ ಕರಾವಳಿ ತೀರ ಮಂಗಳೂರಿನಿಂದ ಕಾರವಾರದವರೆಗೂ ಜುಲೈ 17ರ ರಾತ್ರಿ 11.30ರ ತನಕ 3.5 ರಿಂದ 3.8 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಏಳುವ ನಿರೀಕ್ಷೆಯಿದೆ. ಈ ಅಲೆಗಳ ಪ್ರಸ್ತುತ ವೇಗ 43 ರಿಂದ 54 ಕಿಲೋ ಮೀಟರ್ ಆಗಿದೆ. ಇದರ ಜೊತೆಗೆ ಕರಾವಳಿಯಲ್ಲಿ ಬಿರುಗಾಳಿಯ ವೇಗ ಪ್ರತಿ ಗಂಟೆಗೆ 40 ರಿಂದ 50 ಕಿಲೋ ಮೀಟರ್ ಆಗಿದ್ದು, ಅದು 60 ಕಿ.ಮೀ ತಲುಪುವ ಭೀತಿಯೂ ಇದೆ. ಹೀಗಾಗಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.