ಕೊರೊನಾವೈರಸ್ನಿಂದ ಮೃತಪಟ್ಟವರ ಕುಟುಂಬಸ್ಥರು ಪರಿಹಾರ ಪಡೆಯುವ ವಿಧಾನ
ಬೆಂಗಳೂರು, ಅಕ್ಟೋಬರ್ 11: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ ಸಾವಿರ ಸಾವಿರವಿದೆ. ಸಿಲಿಕಾನ್ ಸಿಟಿಯೊಂದರಲ್ಲೇ 16,000ಕ್ಕೂ ಹೆಚ್ಚು ಮಂದಿ ಕೊವಿಡ್-19 ಸೋಂಕಿನಿಂದ ಸಾವಿನ ಮನೆ ಸೇರಿದ್ದಾರೆ.
ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಮನೆಯ ಆಧಾರಸ್ತಂಭವಾಗಿದ್ದ ಮನೆ ಯಜಮಾನನನ್ನು ಕಳೆದುಕೊಂಡು ಅನಾಥ ಸ್ಥಿತಿಗೆ ತಲುಪಿವೆ. ಅಸಹಾಯಕ ಹಾಗೂ ನಿರ್ಗತಿಕ ಪರಿಸ್ಥಿತಿ ಎದುರಿಸುತ್ತಿರುವ ಕುಟುಂಬಗಳ ನೆರವಿಗೆ ರಾಜ್ಯ ಸರ್ಕಾರ ಪರಿಹಾರ ನೀಡುತ್ತಿದೆ.
ಬೆಂಗಳೂರಿನಲ್ಲಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟವರ ಕುಟುಂಬವು ಸರ್ಕಾರದ ಪರಿಹಾರವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಕಾರ್ಯವಿಧಾನವನ್ನು ಘೋಷಿಸಿದೆ. ಕೋವಿಡ್ -19ನಿಂದ ಮೃತಪಟ್ಟ ಸಂತ್ರಸ್ತ ಕುಟುಂಬದ ಉತ್ತರಾಧಿಕಾರಿಗೆ ಕಾನೂನುಬದ್ಧವಾಗಿ ಪರಿಹಾರವನ್ನು ನೀಡಲಾಗುವುದು ಎಂದು ಪಾಲಿಕೆ ಹೇಳಿದೆ. ಈ ಪರಿಹಾರದ ಹಣವನ್ನು ಪಡೆದುಕೊಳ್ಳಲು ಯಾವ ಕಾರ್ಯವಿಧಾನವನ್ನು ಅನುಸರಿಸಬೇಕು ಎಂಬುದರ ಕುರಿತು ಒಂದು ವಿಸ್ತೃತ ಮಾಹಿತಿ ಇಲ್ಲಿದೆ ಓದಿ.

ಪರಿಹಾರದ ಹಣ ನೇರವಾಗಿ ಫಲಾನುಭವಿ ಖಾತೆಗೆ
ಕರ್ನಾಟಕ ಸರ್ಕಾರವು ಈ ಮೊದಲು ರಾಜ್ಯ ವಿಪತ್ತು ಪರಿಹಾರ ನಿಧಿಯ (ಎಸ್ಡಿಆರ್ಎಫ್) ಅಡಿಯಲ್ಲಿ ಕೊವಿಡ್ -19 ಸಂತ್ರಸ್ತರ ಕಾನೂನುಬದ್ಧ ವಾರಸುದಾರರಿಗೆ 50,000 ರೂ ಪರಿಹಾರವನ್ನು ಘೋಷಿಸಿತ್ತು. ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಕುಟುಂಬಗಳು ಸಂಧ್ಯಾ ಸುರಕ್ಷಾ ಯೋಜನೆಯಡಿ ಹೆಚ್ಚುವರಿಯಾಗಿ 1 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೇರ ಬ್ಯಾಂಕ್ ವರ್ಗಾವಣೆ (ಡಿಬಿಟಿ) ಮೂಲಕ ಪರಿಹಾರವನ್ನು ನೀಡಲಾಗುವುದು.

ವಾರ್ಡ್ ವ್ಯಾಪ್ತಿಯ ಕಂದಾಯ ಅಧಿಕಾರಿಗೆ ಅರ್ಜಿ ಸಲ್ಲಿಸುವುದು
ನಾಗರಿಕ ಸಂಸ್ಥೆಯ ವ್ಯಾಪ್ತಿಯಲ್ಲಿ ಅರ್ಹರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಬಿಬಿಎಂಪಿ ಸೆಪ್ಟೆಂಬರ್ 30ರಂದು ಘೋಷಿಸಿತು. ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ಗಳಲ್ಲಿ ಕಾನೂನುಬದ್ಧ ಉತ್ತರಾಧಿಕಾರಿ ಬಿಬಿಎಂಪಿ ವಾರ್ಡ್ ಕಂದಾಯ ಅಧಿಕಾರಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬೇಕು.

ಪರಿಹಾರ ಅರ್ಜಿ ಭರ್ತಿ ಹಾಗೂ ದಾಖಲೆ ಮಾಹಿತಿ
ಕೊರೊನಾವೈರಸ್ ನಿಂದ ಪ್ರಾಣಬಿಟ್ಟ ಸಂತ್ರಸ್ತ ಕುಟುಂಬದ ಉತ್ತರಾಧಿಕಾರಿಯು ಸಲ್ಲಿಸುವ ಅರ್ಜಿಯಲ್ಲಿ ಹಲವು ವಿಷಯಗಳನ್ನು ಭರ್ತಿ ಮಾಡುವುದರ ಜೊತೆಗೆ ಪೂರಕ ದಾಖಲೆಗಳನ್ನು ಲಗತ್ತಿಸಬೇಕು. ಅರ್ಜಿಯಲ್ಲಿ ಕೊವಿಡ್-19 ಸಂತ್ರಸ್ತರ ಹೆಸರು, ವಿಳಾಸ, ಮೃತರ ಆಧಾರ್ ಕಾರ್ಡ್ ಸಂಖ್ಯೆ, ಪರೀಕ್ಷೆ ದಿನಾಂಕ, ಮೃತ ವ್ಯಕ್ತಿಯ ಬಿಯು ಸಂಖ್ಯೆ, ಸಾವಿನ ದಿನಾಂಕ, ಸಾವಿನ ಕಾರಣದ ಜೊತೆಗೆ ಇತರೆ ವಿಷಯಗಳನ್ನು ಭರ್ತಿ ಮಾಡಬೇಕು. ಇದರ ಜೊತೆಗೆ ಮೃತ ವ್ಯಕ್ತಿಯ ಹುಟ್ಟಿದ ದಿನಾಂಕ / ವಯಸ್ಸಿನ ದಾಖಲೆ, ಪಡಿತರ ಚೀಟಿ ಸಂಖ್ಯೆ, ಮರಣ ಪ್ರಮಾಣಪತ್ರದ ಸಂಖ್ಯೆ ಮತ್ತು ದಿನಾಂಕವನ್ನು ನಮೂದಿಸಬೇಕು.

ಅರ್ಜಿದಾರರು ಸಲ್ಲಿಸಬೇಕಾದ ಹೆಚ್ಚುವರಿ ದಾಖಲೆಗಳೇನು?
ಇದರ ಜೊತೆಗೆ ಅರ್ಜಿದಾರರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ, ಮೃತರೊಂದಿಗಿನ ಸಂಬಂಧ, ಬ್ಯಾಂಕ್ ಹೆಸರು, ಖಾತೆ ಸಂಖ್ಯೆ ಮತ್ತು ಬ್ಯಾಂಕ್ IFSC ಕೋಡ್ ಅನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕು. ಹೆಚ್ಚುವರಿಯಾಗಿ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿರಬೇಕು. ಆ ದಾಖಲೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು:
* ಕೊವಿಡ್ -19 ಧನಾತ್ಮಕ ಫಲಿತಾಂಶದೊಂದಿಗೆ ಮೃತಪಟ್ಟ ರೋಗಿಯ ಬಿಯು ಸಂಖ್ಯೆ
* ಆಸ್ಪತ್ರೆಯಿಂದ ಮರಣ ಪ್ರಮಾಣಪತ್ರ ಅಥವಾ ಸಾವಿನ ಸಾರಾಂಶ
* ಮೃತರ ಗುರುತಿನ ಚೀಟಿ
* ಮೃತರು ಮತ್ತು ಅರ್ಜಿದಾರರ ಬಿಪಿಎಲ್ ಕಾರ್ಡ್ (ಸಂಧ್ಯಾ ಸುರಕ್ಷಾ ಯೋಜನೆ ಪರಿಹಾರಕ್ಕೆ ಅನ್ವಯಿಸಿದರೆ)
* ಅರ್ಜಿದಾರರ ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ಪ್ರತಿ ಮತ್ತು ಅರ್ಜಿದಾರರ ಬ್ಯಾಂಕ್/ಅಂಚೆ ಕಚೇರಿ ಪುಸ್ತಕ
* ಸ್ವಯಂ ಘೋಷಣೆಯ ಪತ್ರ












Click it and Unblock the Notifications