ವಾಲೆಟ್ ನಲ್ಲಿದ್ದ 9 ಕೋಟಿ ಮೌಲ್ಯದ ಬಿಟ್ ಕಾಯಿನ್ ಮಾಯ
ಬೆಂಗಳೂರು, ಜನವರಿ 30: ಡ್ರಗ್ ಜಾಲದಲ್ಲಿ ಸಿಲುಕಿರುವ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಸಿಸಿಬಿ ಪೊಲೀಸರಿಗೆ ಮಂಗ ಮಾಡಿದ್ದಾನೆ ! ಸಿಸಿಬಿ ಪೊಲೀಸರ ಅತಿ ಆತುರದ ನಿರ್ಧಾರ ಇದೀಗ ಅವರನ್ನೇ ಸಂಕಷ್ಟಕ್ಕೆ ದೂಡಿದೆ. ಹ್ಯಾಕರ್ ಶ್ರೀಕಿ ವಿವಿಧ ಖಾತೆಗಳಿಂದ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದ 9 ಕೋಟಿ ಮೌಲ್ಯದ ಬಿಟ್ ಕಾಯಿನ್ ಮಾಯವಾಗಿದೆ. ಸತತ ಒಂದು ವಾರದಿಂದ ಬಿಟ್ ಕಾಯಿನ್ ರೀಕವರಿ ಮಾಡುವ ಪೊಲೀಸರ ಪ್ರಯತ್ನ ವಿಫಲವಾಗಿದ್ದು, ಇನ್ಸ್ಪೆಕ್ಟರ್ ಗಳ ವಿರುದ್ಧ ಶಿಸ್ತು ಕ್ರಮದ ಅಸ್ತ್ರ ಪ್ರಯೋಗವಾಗುವ ಸಾಧ್ಯತೆಯಿದೆ.
ಸ್ಯಾಂಡಲ್ ವುಡ್ ಡ್ರಗ್ ಜಾಲ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಜಯನಗರದ ನಿವಾಸಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ವಿಚಾರಣೆ ವೇಳೆ ಕೆಲ ಸ್ಫೋಟಕ ಮಾಹಿತಿ ಬಾಯಿ ಬಿಟ್ಟಿದ್ದ. ಆತ ನೀಡಿದ ಮಾಹಿತಿ ಮೇರೆಗೆ ಪೋಕರ್ ಮತ್ತು ಬಿಟ್ ಕಾಯಿನ್ ಜಾಲ ತಾಣಗಳನ್ನು ಹ್ಯಾಕ್ ಮಾಡಿ ಸುಮಾರು 9 ಕೋಟಿ ಮೌಲ್ಯದ ಬಿಟ್ ಕಾಯಿನ್ ಇರುವ ಮಾಹಿತಿಯನ್ನು ಸಿಸಿಬಿ ಪೊಲೀಸರು ಬಯಲಿಗೆ ಎಳೆದಿದ್ದರು. ಅಷ್ಟೂ ಹಣವನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾಗಿ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೀಡಿದ್ದರು. ಆದರೆ , ಸಿಸಿಬಿ ಪೊಲೀಸರ ಎಡವಟ್ಟಿನಿಂದಲೋ ಅಥವಾ ಶ್ರೀಕಿಯ ಜತೆ ಸಿಸಿಬಿ ಪೊಲೀಸರು ಶಾಮೀಲಾದರೋ ಗೊತ್ತಿಲ್ಲ. ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದ 9 ಕೋಟಿ ಮೌಲ್ಯದ ಬಿಟ್ ಕಾಯಿನ್ ನಾಪತ್ತೆಯಾಗಿದೆ ! ಇದು ಸಿಸಿಬಿ ಅಧಿಕಾರಿ ವರ್ಗದಲ್ಲಿ ಭಾರೀ ಸಂಚಲನ ವುಂಟು ಮಾಡಿದೆ.
ಹ್ಯಾಕರ್ ಶ್ರೀಕಿ ಆಶೀರ್ವಾದ : ರೈಸ್ ಮಿಲ್ ನಡೆಸುತ್ತಿದ್ದವ ರಾತ್ರೋ ರಾತ್ರಿ ಮಿಲೇನಿಯರ್ ಆಗಿಬಿಟ್ಟ !
ಎದೆ ತಟ್ಟಿಕೊಂಡಿದ್ದ ಸಿಸಿಬಿ:
ದೇಶದಲ್ಲಿ ಇದೇ ಪ್ರಥಮ ಬಾರಿಗೆ ಅಪರಾಧ ಪ್ರಕರಣವೊಂದರಲ್ಲಿ ಈ ಪ್ರಮಾಣದ ಬಿಟ್ ಕಾಯಿನ್ ಯಾರೂ ಜಪ್ತಿ ಮಾಡಿರಲಿಲ್ಲ. ಸಿಸಿಬಿಯ ಮೂವರು ಅಧಿಕಾರಿಗಳು ಸೇರಿ ಹ್ಯಾಕರ್ ಶ್ರೀಕಿಯಿಂದ ಸುಮಾರು 9 ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ವಶಪಡಿಸಿಕೊಂಡಿದ್ದರು. ಇದು ರಾಷ್ಟ್ರ ಪಟ್ಟದ ಸುದ್ದಿಯಾಗಿತ್ತು. ಜ. 15 ರಂದು ಶ್ರೀಕಿಯಿಂದ 9 ಕೋಟಿ ರೂಪಾಯಿ ಬಿಟ್ ಕಾಯಿನ್ ರೀಕವರಿ ಮಾಡಿದ್ದರು. ಆದರೆ, ರೀಕವರಿ ಮಾಡಿದ ಬಿಟ್ ಕಾಯಿನ್ ಹ್ಯಾಕರ್ ಶ್ರೀಕಿಯ ವ್ಯಾಲೆಟ್ ಗೆ ಬಂದಿತ್ತು. ಈ ಕುರಿತ ಅಧಿಕೃತ ಪ್ರಕಟಣೆ ನೀಡಿ ಸಿಸಿಬಿ ಪೊಲೀಸರು ಬಿಗ್ ರೀಕವರಿ ಎಂದು ಎದೆ ತಟ್ಟಿಕೊಂಡಿದ್ದರು. ಆದರೆ, ಈಗ ಆಗಿರುವ ಬದಲಾವಣೆಯಿಂದ ಎದೆ ತಟ್ಟಿಕೊಂಡ ಸಿಸಿಬಿ ಪೊಲೀಸರೇ ತಿಣುಕಾಡುವಂತಾಗಿದೆ !
9 ಕೋಟಿ ಮಂಗಮಾಯ:
ಹ್ಯಾಕರ್ ಶ್ರೀಕಿ ವಾಲೆಟ್ ಗೆ 9 ಕೋಟಿ ರೂಪಾಯಿ ರೀಕವರಿ ಮಾಡಿದ್ದ ಸಿಸಿಬಿ ಪೊಲೀಸ್ ಅಧಿಕಾರಿಗಳ ಕಾರ್ಯ ಶೈಲಿಯನ್ನು ಪ್ರಶಂಸಿಸಿದ್ದರು.
ರೀಕವರಿಯಾದ ಎರಡನೇ ದಿನಕ್ಕೆ ಶ್ರೀಕಿ ವ್ಯಾಲೆಟ್ ನಲ್ಲಿದ್ದ 9 ಕೋಟಿ ರೂಪಾಯಿ ಬಿಟ್ ಕಾಯಿನ್ ಮಾಯವಾಗಿದೆ. ಒಂದು ಶ್ರೀಕಿಯೇ ಸಿಸಿಬಿ ಪೊಲೀಸರಿಗೆ ಮಂಗ ಮಾಡಿದನೋ ಗೊತ್ತಿಲ್ಲ. ಇಲ್ಲವೇ ಸಿಸಿಬಿ ಪೊಲೀಸರು ಶ್ರೀಕಿ ಜತೆ ಸೇರಿ ಆಟವಾಡಿದರೂ ಗೊತ್ತಿಲ್ಲ. ರೀಕವರಿ ಮಾಡುವಾಗ ರಾಮನ ಲೆಕ್ಕ ತೋರಿಸಿದ್ದ ಸಿಸಿಬಿ ಪೊಲೀಸರು ಇದೀಗ ಕೃಷ್ಣನ ಲೆಕ್ಕ ಕೊಡೋಕೆ ಆರಂಭಿಸಿದ್ದಾರೆ. ಶ್ರೀಕಿಯ ವ್ಯಾಲೆಟ್ ಗೆ ಬಂದಿದ್ದ ಎರಡೇ ದಿನಕ್ಕೆ ಅಷ್ಟು ಮೊತ್ತ ಖಾಲಿಯಾಗಿರುವ ಸಂಗತಿ ಗೊತ್ತಾಗಿದೆ.
ಉಗುಳು ನುಂಗಲಾರದ ಸ್ಥಿತಿ:
ಇಂಟರ್ ನ್ಯಾಷನಲ್ ಹ್ಯಾಖರ್ ಶ್ರೀಕಿಯ ವಾಲೆಟ್ ನಲ್ಲಿ 9 ಕೋಟಿ ಮೌಲ್ಯದ ಬಿಟ್ ಕಾಯಿನ್ ಇದೆ ಎಂದರೆ ಅದಕ್ಕೆ ಸಿಸಿಬಿ ಹಿರಿಯ ಅಧಿಕಾರಿಗಳು ಭಾರತೀಯ ರಿಸರ್ವ ಬ್ಯಾಂಕ್ ಗಮನಕ್ಕೆ ತರಬೇಕು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೂ ವಿಷಯ ಮುಟ್ಟಿಸಬೇಕು. ಈ ಹಣವನ್ನು ಜಪ್ತಿ ಮಾಡುವ ಬಗ್ಗೆ ಇರುವ ನಿಯಮಗಳನ್ನು ಪಾಲಿಸಬೇಕು. ಇದ್ಯಾವುದನ್ನೂ ಸಿಸಿಬಿ ಪೊಲೀಸರು ಪಾಲಿಸಿಲ್ಲ. ಸಿಸಿಬಿ ಹಿರಿಯ ಪೊಲೀಸ್ ಅಧಿಕಾರಿಗಳಾದರೂ ಈ ಬಗ್ಗೆ ಎಚ್ಚರಿಕೆ ಹೆಜ್ಜೆ ಇಡಬೇಕಿತ್ತು. ಆದರೆ, ನಮ್ಮದೇ ತನಿಖೆ ಎಂದು ಯಾವ ನಿಯಮವನ್ನು ಪಾಲಿಸದೇ ಇದೀಗ ಇಂಗು ತಿಂದ ಮಂಗನಂತಾಗಿದ್ದಾರೆ. ಶ್ರೀಕಿ ವ್ಯಾಲೆಟ್ ಗೆ 9 ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ತರಿಸಿ ಜಪ್ತಿ ಮಾಡಲು ಬಳಕೆ ಮಾಡಿರುವುದು ಸರ್ಕಾರಿ ಕಂಪ್ಯೂಟರ್ ಗಳೇ ಆಗಿದ್ದಲ್ಲಿ, ಅದನ್ನು ರೀಕವರಿಸಿ ಮಾಡಿಸಿದ ಪೊಲೀಸರಿಗೆ ಭವಿಷ್ಯದಲ್ಲಿ ಸಂಕಷ್ಟ ಎದುರಾದರೂ ಅಚ್ಚರಿ ಪಡಬೇಕಿಲ್ಲ ಎಂದು ಸೈಬರ್ ತಜ್ಞರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಟ್ ಕಾಯಿನ್ ಜಪ್ತಿ ಮಾಡುವುದಿದ್ದಲ್ಲಿ ಅದನ್ನು ಆರ್ಬಿಐ ಮಾರ್ಗದರ್ಶನ ಪಡೆಯಬೇಕಿತ್ತು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಖುಷಿಯಿಂದ 9 ಕೋಟಿ ಜಪ್ತಿ ಮಾಡಿದ್ದ ಸಿಸಿಬಿ ಪೊಲೀಸರದ್ದು ಉಗುಳು ನುಂಗಲಾರದ ಸ್ಥಿತಿ ಎದುರಿಸುವಂತಾಗಿದೆ.
ಡೆಡ್ ಲೈನ್ :
ಹ್ಯಾಕರ್ ಶ್ರೀಕೃಷ್ಣ ಖಾತೆಯಿಂದ ಕಣ್ಮರೆಯಾಗಿರುವ 9 ಕೋಟಿ ರೂಪಾಯಿ ಹದಿನೈದು ದಿನದಲ್ಲಿ ರೀಕವರಿ ಮಾಡುವಂತೆ ಸಿಸಿಬಿ ವರಿಷ್ಠಾಧಿಕಾರಿಗಳು ತನಿಖೆ ನಡೆಸಿದ್ದ ಪೊಲೀಸ್ ಇನ್ಸ್ಪೆಕ್ಟರ್ ಗಳಿಗೆ ಡೆಡ್ ಲೈನ್ ನಿಗದಿ ಮಾಡಿದ್ದಾರೆ. ಈಗಾಗಲೇ ಒಂದು ವಾರ ಮುಗಿದಿದ್ದು, ಬರುವ ಯಾವ ನಿರೀಕ್ಷೆಯೂ ಯಿಲ್ಲ. ಹೀಗಾಗಿ ಸಿಸಿಬಿ ಪೊಲೀಸರು ಮತ್ತು ಶ್ರೀಕಿ ಶಾಮೀಲಾಗಿಯೇ ಈ ಕೃತ್ಯ ಎಸಗಿದರೇ ಎಂಬ ಅನುಮಾನ ವ್ಯಕ್ತವಾಗಿದೆ. ಅಥವಾ ಸರ್ಕಾರಿ ಕಂಪ್ಯೂಟರ್ ಗಳನ್ನು ಶ್ರೀಕಿ ಕೈಗೆ ಕೊಟ್ಟು ಆತನಿಂದಲೇ ರೀಕವರಿ ಮಾಡಿಸಿದ್ದೇ ಆದಲ್ಲಿ, ಬಹುಶಃ ರೀಕವರಿ ಮಾಡಿದ ಶ್ರೀಕಿಯೇ ಬಿಟ್ ಕಾಯಿನ್ ಕಾಲಮಿತಿಯಲ್ಲಿ ಬೇರೆ ಖಾತೆಗೆ ವರ್ಗಾವಣೆಯಾಗುವಂತೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಆದರೆ ಡೆಡ್ ಲೈನ್ ಮುಗಿಯುತ್ತಿರುವುದು ಸಿಸಿಬಿ ತನಿಖಾಧಿಕಾರಿಗಳ ಪಾಲಿಗೆ ನುಂಗುಲಾರದ ಬಿಸಿ ತುಪ್ಪವಾಗಿದೆ. ತನಿಖೆಯಲ್ಲಿ ರೀಕವರಿ ತೋರಿಸಿ ನ್ಯಾಯಾಲಯಕ್ಕೆ ಅದರ ವಿವರ ಸಲ್ಲಿಸಬೇಕು. ಇಲ್ಲದಿದ್ದರೆ ಸಂಕಷ್ಟ ಎದುರಾದೀತು.
ಹ್ಯಾಕರ್ ಶ್ರೀಕಿ ಸರ್ಕಾರಿ ಟೆಂಡರ್ ಗಳ ನೂರಾರು ಕೋಟಿ ಎಂಎಡಿ ಮೊತ್ತವನ್ನೇ ಎಗರಿಸಿದ್ದಾನೆ. ರಾಗಿ ಮಿಲ್ ಮಾಲೀಕರನ ಜತೆ ಬಿಟ್ ಕಾಯಿನ್ ಎಕ್ಸ್ ಚೇಂಜ್ ಮಾಡಿಸಿ ಶ್ರೀಮಂತನಾಗಿದ್ದಾನೆ. ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಶ್ರೀಕೃಷ್ಣನನ್ನು ವಿಚಾರಣೆ ನಡೆಸಿದಲ್ಲಿ ಆತ ಈವರೆಗೂ ಎಷ್ಟೆಲ್ಲಾ ಪ್ರಕರಣಗಳಲ್ಲಿ ಸರ್ಕಾರಿ ಹಣ ಎಗರಿಸಿದ್ದಾನೆ ಎಂಬುದನ್ನು ಸಿಸಿಬಿ ಪೊಲೀಸರು ಬಯಲಿಗೆ ಎಳೆಯಬಹುದಿತ್ತು. ಆದರೆ, ತನಿಖಾ ಹಾದಿಯಲ್ಲಿ ಸಿಸಿಬಿ ಪೊಲೀಸರು ಎಡವಿದರೇ ಎಂಬ ಅನುಮಾನ ಕಾಡತೊಡಗಿದೆ.