ಹಾವಿನ ಹಬ್ಬದಂದು ಚೇಳಿನ ಜೊತೆ ಸರಸ

Devotees play with and pray Scorpio on Nagara Panchami in Yagdir
ರಾಜ್ಯಾದ್ಯಂತ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಭಕ್ತಾದಿಗಳು ಎಂದಿನಂತೆ ಮಣ್ಣಿನ ನಾಗಪ್ಪನನ್ನು ಮಾಡಿ ಹಾಲೆರೆಯುತ್ತಾರೆ. ನಾಗರಕಲ್ಲು, ಹುತ್ತಗಳಿಗೂ ಪೂಜೆ ಸಲ್ಲಿಸಿ ಹಾಲನ್ನು ಎರೆಯುತ್ತಾರೆ. ಸುಖ, ಸಂಪತ್ತು, ನೆಮ್ಮದಿ ನೀಡೆಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾರೆ. ಆದರೆ ಯಾದಗಿರಿಯಲ್ಲಿ ನಾಗರಪಂಚಮಿ ಆಚರಿಸುವ ರೀತಿ ಮಾತ್ರ ಸ್ವಲ್ಪ ಡಿಫ್‌ರೆಂಟ್.

ಹೌದು ಚೇಳೆಂದರೆ ಸಾಕು ಹೆದರಿ ಮಾರು ದೂರ ಹೋಗುತ್ತೀವಿ. ಆದರೆ ನಾಗರ ಪಂಚಮಿಯ ದಿನ ಪುಟ್ಟ ಪುಟ್ಟ ಮಕ್ಕಳು ಹಾಗೂ ಎಲ್ಲಾ ತರಹದ ವಯೋಮಾನದವರು ಸೇರಿ ಚೇಳು ಹಿಡಿಯುತ್ತಾರೆ. ಅದನ್ನು ನೋಡುವುದೇ ವಿಸ್ಮಯ. ಇದು ಇರುವುದು ಯಾದಗಿರಿ ಜಿಲ್ಲೆಯಿಂದ 25 ಕಿ.ಮೀ. ದೂರದಲ್ಲಿರುವ ಕಂದಕೂರ ಗ್ರಾಮ. ಈ ಗ್ರಾಮದಲ್ಲಿ ಸಾವಿರಾರು ಜನರು ಭಾಗವಹಿಸಿ ಚೇಳಿನ ಜೊತೆ ಸರಸವಾಡುತ್ತಾರೆ!

ಕಂದಕುರ ಗ್ರಾಮಸ್ಥರಿಗೆ ನಾಗರ ಪಂಚಮಿ ದೊಡ್ಡ ಹಬ್ಬ. ಗ್ರಾಮದಲ್ಲಿ ಎಲ್ಲ ಜನರು ತಮ್ಮ ತಮ್ಮ ಮನೆಯನ್ನು ಸ್ವಚ್ಛಮಾಡಿ ಮನೆಯ ಮುಂದೆ ರಂಗುರಂಗಿನ ರಂಗೊಲಿ ಹಾಕಿ ಊರನ್ನು ಸಿಂಗರಿಸುತ್ತಾರೆ. ಗ್ರಾಮದ ಮಧ್ಯ ಇರುವ ಪುಟ್ಟ ಗುಡ್ಡಕ್ಕೆ ಕುಟುಂಬ ಸಮೇತರಾಗಿ ತೆರಳಿ ಗ್ರಾಮದ ಶಕ್ತಿ ದೇವತೆ, ಚೇಳು ದೇವತೆ ಕೊಂಡಮಾಯಿ ವಿಗ್ರಹಕ್ಕೆ ಹಾಗೂ ಕಲ್ಲುನಾಗರದ ಜೊತೆಗೆ ಜೀವಂತ ಚೇಳಿಗೂ ಪೂಜೆ ಮಾಡುತ್ತಾರೆ. ತದನಂತರ ಮಕ್ಕಳು ಗುಡ್ಡದಲ್ಲಿ ಇರುವ ಕಲ್ಲುಗಳನ್ನು ಉರುಳಿಸಿ ಅದರ ಕೆಳಗೆ ಇರುವ ಚೇಳುಗಳನ್ನು ಹಿಡಿದು ಸಂಭ್ರಮಿಸುತ್ತಾರೆ.

ಬಂಗಾರದ ಬಣ್ಣ, ಕಂಪ್ಪು ಬಣ್ಣ, ಕಬ್ಬಿಣದ ಬಣ್ಣ, ಹೀಗೆ ಹಲವು ತರಹದ ಚೇಳುಗಳನ್ನು ಹಿಡಿದು ಮಕ್ಕಳು ಆಟವಾಡುತ್ತಾರೆ. ಯಾರಿಗೂ ಹೆದರಿಕೆ ಎಂಬುದೇ ಇರುವುದಿಲ್ಲ. ಪ್ರತಿ ವರ್ಷ ಇಲ್ಲಿ ನಾಗರ ಪಂಚಮಿಯಂದೇ ಜಾತ್ರೆ ನಡೆಯುತ್ತದೆ. ಜಾತ್ರೆಯ ದಿನ ಬೆಟ್ಟದ ಮೇಲೆ ಯಾವ ಕಲ್ಲನ್ನು ಸರಿಸಿದರೂ ಅದರ ಕೆಳಗೆ ಚೇಳು ಕಂಡು ಬರುವುದೇ ಈ ಕಂದಕೂರ ಜಾತ್ರೆಯ ವಿಶಿಷ್ಟತೆ.

50 ವರ್ಷಗಳಿಂದ ಆಚರಣೆ : ಪ್ರತಿ ವರ್ಷ ನಾಗರ ಪಂಚಮಿ ದಿನ ಕಂದಕೂರಲ್ಲಿ ಕೊಂಡಮಾಯಿ ಜಾತ್ರೆ ನಡೆಯುತ್ತದೆ. ಈ ಜಾತ್ರೆ ಈ ಭಾಗದಲ್ಲಿ ಹೆಸರುವಾಸಿ. ಜಾತ್ರೆ ಕಳೆದ ಐವತ್ತು ವರ್ಷಗಳ ಹಿಂದಿನಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಜಾತ್ರೆ ಸಂದರ್ಭದಲ್ಲಿ ಊರಲ್ಲಿ ಕಂಡಲ್ಲೆಲ್ಲ ಚೇಳುಗಳೇ ಚೇಳುಗಳು. ಊರಿನ ಪುಟ್ಟ ಬೆಟ್ಟದಲ್ಲಿ ಯಾವುದೇ ಕಲ್ಲನ್ನೆತ್ತಿ ನೋಡಿದರೂ ಅಲ್ಲಿ ಚೇಳು ಇರಲೇಬೇಕು. ಚೇಳುಗಳಿಗೆ ಎಷ್ಟೇ ಕೀಟಲೆ ಮಾಡಿದರೂ ಸುಮ್ಮನಿರುತ್ತವೆ. ಯಾರನ್ನೂ ಕಚ್ಚುವುದಿಲ್ಲ. ಕಚ್ಚಿದ ಉದಾಹರಣೆಯೂ ಇಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮಸ್ಥರು ಹೇಳುವರ ಪ್ರಕಾರ ಕೊಂಡಮಾಯಿ ಗುಡಿಯಲ್ಲಿ ಪೂಜೆ ಸಲ್ಲಿಸುವುದರಿಂದ ಚೇಳುಗಳು, ವಿಷಜಂತುಗಳು ಯಾರನ್ನೂ ಕಚ್ಚುವುದಿಲ್ಲ. ಅಷ್ಟೇ ಅಲ್ಲ ಗ್ರಾಮಕ್ಕೆ ದುಷ್ಟಜಂತುಗಳ ಕಾಟ ಕೂಡ ಬರುವುದಿಲ್ಲ. ನಮ್ಮ ಗ್ರಾಮದಲ್ಲಿ ಯಾವುದೇ ಸಂದರ್ಭದಲ್ಲಿ ಯಾರೂ ಚೇಳುಗಳನ್ನು ಕೊಲ್ಲುವುದಿಲ್ಲ, ಚೇಳುಗಳನ್ನು ಭಕ್ತಿ-ಭಯದಿಂದ ಕಾಣುತ್ತೇವೆ ಅತ್ತಾರೆ ಗ್ರಾಮಸ್ಥರು.

ಈ ಕೊಂಡಮಾಯಿ ದರ್ಶನ ಪಡೆಯಲು ಸುತ್ತಲಿನ ಗ್ರಾಮದ ಜನರು, ಪಕ್ಕದ ರಾಜ್ಯ ಆಂಧ್ರಪ್ರದೇಶ ಇನಿತರ ರಾಜ್ಯಗಳಿಂದ ಸಾವಿರಾರು ಜನರು ಈ ಜಾತ್ರೆಗೆ ಆಗಮಿಸುತ್ತಾರೆ. ಪ್ರತಿ ವರ್ಷ ಜಾತ್ರೆಗೆ ಜನಸಂಖ್ಯೆ ಹೆಚ್ಚುತ್ತಲೆ ಇದೆ. ಇಂಥ ವಿಶಿಷ್ಟಮಯ ಪ್ರದೇಶವನ್ನು ಸದಾನಂದ ಗೌಡರ ಹೊಸ ಸರಕಾರ ಪ್ರವಾಸಯೋಗ್ಯ ಪ್ರದೇಶವೆಂದು ಘೋಷಿಸಬೇಕು. ಅಲ್ಲಿ ವಸತಿ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿ ಹೆಚ್ಚೆಚ್ಚು ಪ್ರವಾಸಿಗರನ್ನು ಸೆಳೆಯಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+