ತನ್ನಿರೆ ಹಾಲ ತನಿಯೆರೆಯೋಣ, ತಾಯ ಹಾಲ ಋಣ
ಹುತ್ತಕ್ಕೆ ಹಾಲೆರೆಯುವ ಸಂಪ್ರದಾಯ ಮತ್ತು ಸಂಭ್ರಮ
ಹುತ್ತಕ್ಕೆ ಶ್ರಾವಣದಲ್ಲಿ ಹಾಲೆರೆಯುವ ಬಗ್ಗೆ ಒಂದು ಚಿಂತನೆ ಇದೆ. ಇದು ಎಷ್ಟು ನಿಜ. ಎಷ್ಟು ಸುಳ್ಳು ಎಂಬುದು ನಮಗೂ ಗೊತ್ತಿಲ್ಲ. ಆದರೆ ಆ ಚಿಂತನಾ ಲಹರಿ ನಿಮಗೂ ಗೊತ್ತಿರಲಿ. ಗೊತ್ತಿದ್ದರೆ ನೆನಪಿಸುತ್ತಿದ್ದಾರೆ ಅಂದುಕೊಳ್ಳಿ.
ಹಾವುಗಳು ಎಂದೂ ಹುತ್ತ ಕಟ್ಟುವುದಿಲ್ಲ. ಗೆದ್ದಲುಗಳು ಕಟ್ಟುವ ಹುತ್ತದಲ್ಲಿ ಹೊಕ್ಕು ಅವು ವಾಸ ಮಾಡುತ್ತವೆ. ಗೆದ್ದಲುಗಳು ತಮ್ಮ ಬಾಯಿಯಿಂದ ಒಸರುವ ರಸದ ನೆರವು ಪಡೆದು, ಭೂಮಿಯ ಒಳಗಿನಿಂದ ಮಣ್ಣನ್ನು ಹೊರತೆಗೆದು ಹುತ್ತವನ್ನು ಕಟ್ಟುತ್ತವೆ. ಈ ಹುತ್ತ ನಯವಾದ ಮಣ್ಣಿನಿಂದ ಮಾಡಿದ್ದು. ಮಳೆ ಬಂದರೂ ಈ ಹುತ್ತ ಕರಗುವುದಿಲ್ಲ. ಹುತ್ತದ ಒಳಗೆ ಕೂಡ ಭೂಮಿ ನಯವಾದ ಮಣ್ಣಿನಿಂದ ಕೂಡಿದ್ದು, ಸಮತಟ್ಟಾಗಿರುತ್ತದೆ. ಇದರಲ್ಲಿ ಕಸವಾಗಲೀ, ಕಲ್ಲಾಗಲೀ ಇರುವುದಿಲ್ಲ.
ಶ್ರಾವಣದ ಚಂದ್ರಮನ ರಶ್ಮಿಗಳು ಹಾವುಗಳಲ್ಲೂ ಕಾಮೋದ್ರೇಕ ಉಂಟು ಮಾಡುತ್ತವೆ. ಹಾವುಗಳು ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಕಾಲವೂ ಇದಂತೆ. ಈ ಲೈಂಗಿಕ ಕ್ರಿಯೆಗೆ ಮುನ್ನ ಹೆಣ್ಣು ಹಾವುಗಳಿಗೆ ಋತುಸ್ರಾವವಾಗುತ್ತದಂತೆ. ಇದಕ್ಕೆ ರಿಪ್ರೊಡಕ್ಟೀವ್ ಸೈಕಲ್ ಎನ್ನುತ್ತಾರೆ. ಈ ಸಮಯದಲ್ಲಿ ಹಾವುಗಳು ಹುತ್ತದಲ್ಲಿ ಸುತ್ತಾಡುವಾಗ ದ್ರವಿಸುವ ರಜಸ್ಸು ಭೂಮಿಯ ಮಣ್ಣನ್ನು ಸೇರುತ್ತವೆ. ಇವು ಹುತ್ತವನ್ನು ಹೊಕ್ಕುವಾಗ ಹುತ್ತದ ನಯವಾದ ಮಣ್ಣು ಈ ರಜಸ್ಸನ್ನು ಹೀರಿಕೊಳ್ಳುತ್ತದೆ.
ಅದೇ ರೀತಿ ಈ ಸಮಯದಲ್ಲಿ ಸ್ಖಲನವಾಗುವ ಗಂಡು ಹಾವಿನ ವೀರ್ಯವೂ ಹುತ್ತದ ಮಣ್ಣಿನಲ್ಲಿ ಸೇರ್ಪಡೆಯಾಗುತ್ತದಂತೆ. ಈ ರೀತಿಯ ದ್ರವ ಬೆರೆತ ಹುತ್ತದ ಮಣ್ಣಿಗೆ ಹೆಂಗಸರು ಹಾಲು ಹಾಕಿದಾಗ ಅಂದರೆ ತನಿ ಎರೆದಾಗ, ಆ ಹುತ್ತದ ಮಣ್ಣಿನಿಂದ ಸುಮಧುರ ಹಾಗೂ ಸುಗಂಧಯುಕ್ತವಾದ ವಾಯು ಹೊರಹೊಮ್ಮುತ್ತದೆ. ಇದು ಹೆಣ್ಣಿನ ಭಾವನೆಗಳನ್ನು ಕೆರಳಿಸುವುದೇ ಅಲ್ಲದೆ, ರಿಪ್ರೊಡಕ್ಟಿವ್ ಆರ್ಗನ್ಸ್ಗಳ ಮೇಲೂ ಪರಿಣಾಮ ಬೀರುತ್ತದಂತೆ. ಚಂದ್ರ ಪ್ರಭಾವವೂ ಇರುವ ಕಾರಣ, ಇದರಿಂದ ಗರ್ಭಧಾರಣೆಗೆ ಸಹಕಾರಿಯಾಗುತ್ತದಂತೆ. ಅದಕ್ಕಾಗಿ ಈ ಪಂಚಮಿಯಲ್ಲಿ ಹುತ್ತಕ್ಕೆ ತನಿ ಎರೆಯಬೇಕು ಎನ್ನುತ್ತಾರೆ ಹಿಂದೂ ಜ್ಯೋತಿಷಿಗಳು ಹಾಗೂ ಧಾರ್ಮಿಕರು.
ಈ ಬಗ್ಗೆ ನಿಮಗೇನಾದರೂ ಖಚಿತ ವೈಜ್ಞಾನಿಕ ಮಾಹಿತಿ ಇದ್ದರೆ ನಮಗೆ ಬರೆದು ತಿಳಿಸಿ, ಅಥವಾ ಇದೆಲ್ಲ ಬೊಗಳೆ ಎನಿಸಿದರೂ ಅದನ್ನೂ ಬರೆದು ತಿಳಿಸಿ.
ಹುತ್ತಕ್ಕೆ ಹಾಲೆರೆಯುವ ಬಗ್ಗೆ ಮತ್ತೊಂದು ಕಾರಣ ಇದೆ. ಹಾವುಗಳು ಇಲಿಗಳನ್ನು ತಿನ್ನುತ್ತವೆ ಎನ್ನುವುದು ನಿಮಗೂ ಗೊತ್ತಲ್ಲ. ಸಾಮಾನ್ಯವಾಗಿ ಜ್ಯೇಷ್ಠ - ಆಷಾಢ ಬಿತ್ತನೆಯ ತಿಂಗಳು. ಶ್ರಾವಣದ ಆರಂಭದ ಹೊತ್ತಿಗೆ ಅವು ಪೈರಾಗಿ ತೊನೆದಾಡುತ್ತಿರುತ್ತವೆ. ಈ ಪೈರನ್ನು ಗದ್ದೆಯ - ಹೊಲ ಇಲಿಗಳು ತಿಂದು ರೈತನಿಗೆ ಭಾರಿ ಹಾನಿ ಉಂಟು ಮಾಡುತ್ತವೆ. ಆದ ಕಾರಣ ಹುತ್ತಕ್ಕೆ ಹಾಲು ಎರೆಯುವುದರಿಂದ ಹಾವುಗಳು ಹೊರ ಬಂದು ಇಲಿಗಳನ್ನು ತಿನ್ನುತ್ತವೆ ಎನ್ನುತ್ತಾರೆ. ಮತ್ತೊಂದು ಕಾರಣ ಏನನ್ನುತ್ತದೆ ಗೊತ್ತೆ. ಇಲಿಗಳನ್ನು ತಿಂದು ರೈತನಿಗೆ ಉಪಕಾರ ಮಾಡುವ ರೈತನಿಗೆ ಹಾಲೆರೆಯುವ ಮೂಲಕ ಕೃತಜ್ಞತೆ ಅರ್ಪಿಸಲಾಗುತ್ತದಂತೆ.
ನಾಗರ ಪಂಚಮಿ ಅಣ್ಣ - ತಂಗಿಯರ ಹಬ್ಬ. ಅಂದು ಸೋದರ - ಸೋದರಿಯರು ಹೊಟ್ಟೆ ತಣ್ಣಗಿರಲಿ, ಬೆನ್ನು ತಣ್ಣಗಿರಲಿ ಎಂದು ಹೇಳಿ ಹುತ್ತಕ್ಕೆ ಎರೆದ ಹಾಲನ್ನು ಸೋದರರ ಹೊಕ್ಕಳಿಗೂ, ಬೆನ್ನಿಗೂ ಹಚ್ಚಿ ಶುಭ ಕೋರುತ್ತಾರೆ. ಮದುವೆಯಾಗಿ ತವರಿನಿಂದ ಹೋದ ಸೋದರಿಗೆ ತಮ್ಮ ಸೋದರರನ್ನು ವರ್ಷಕ್ಕೊಮ್ಮೆಯಾದರೂ ನೋಡುವ ಅವಕಾಶ ಸಿಗಲಿ ಎಂಬ ಕಾರಣದಿಂದ ಈ ಧಾರ್ಮಿಕ ವಿಧಿ ಮಾಡಲಾಗಿದೆ ಎಂಬುದು ಒಂದು ತರ್ಕ. ಹಿಂದೆ ಬಸ್ಸು - ಕಾರುಗಳ ಸೌಕರ್ಯ ಇರಲಿಲ್ಲ. ದೂರ ದೂರದ ಊರಿಗೆ ಮದುವೆ ಮಾಡಿಕೊಟ್ಟ ಸೋದರಿಯ ನೋಡಲು ನಡೆದೇ ಹೋಗ ಬೇಕಾದ ಕಾಲ ಅದಾಗಿತ್ತು. ಆದ ಕಾರಣ ಶಾಸ್ತ್ರದ ಕಟ್ಟಳೆಯಿಂದಲಾದರೂ, ಹೊಲ ಗದ್ದೆಯಲ್ಲಿ ದುಡಿದು ದಣಿದ ಸೋದರ, ಮಳೆನಿಂತ ಈ ಶ್ರಾವಣದಲ್ಲಿ ಸೋದರಿಯನ್ನು ನೋಡಲಿ ಎಂದು ಈ ಕಟ್ಟಳೆ ಮಾಡಲಾಗಿದೆಯಂತೆ.