ಶಿವರಾತ್ರಿ ವಿಶೇಷ, ಕ್ಷೇತ್ರ ಪ್ರದಕ್ಷಿಣೆ: 1,300 ವರ್ಷಗಳ ಇತಿಹಾಸದ ಇನ್ನ ಮಹಾಲಿಂಗೇಶ್ವರ ದೇವಾಲಯ
ಹಲವು ಪುರಾಣ ಪ್ರಸಿದ್ದ ದೇವಾಲಯಗಳನ್ನು ಹೊಂದಿರುವ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲೊಂದು ಇನ್ನ ಮುದ್ದಾಣು ಮಹಾಲಿಂಗೇಶ್ವರ ದೇವಾಲಯ.
ಪ್ರಕೃತಿ ಮಡಿಲಿನಲ್ಲಿ ಜುಳುಜುಳು ಹರಿಯುವ ಶಾಂಭವಿ ನದಿ ತೀರದಲ್ಲಿರುವ ಈ ಕ್ಷೇತ್ರ, ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಬರುತ್ತದೆ. ಕ್ಷೇತ್ರದಲ್ಲಿ ಸ್ಥಾಪಿತನಾಗಿರುವ ಮಹಾಲಿಂಗೇಶ್ವರ ದೇವರು, ಭಾರ್ಗವ ಗೋತ್ರದವರಿಗೆ ಕುಲದೇವರು.
ಈ ದೇವಾಲಯದ ಆಸುಪಾಸು ಸುಮಾರು 11 ಶಿವನ ದೇವಾಲಯಗಳಿವೆ. ಶ್ರೀಕ್ಷೇತ್ರದ ಪ್ರಮುಖ ಆರಾಧ್ಯ ದೇವರು ಮಹಾಲಿಂಗೇಶ್ವರ ಮತ್ತು ಮಹಾಗಣಪತಿ. ಈ ಕ್ಷೇತ್ರ ಮತ್ತು ಇಲ್ಲಿಂದ ಐದಾರು ಕಿಲೋಮೀಟರ್ ದೂರದಲ್ಲಿರುವ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಾಲಯವೂ ಭಾರ್ಗವ ಗೋತ್ರದವರಿಗೆ ಕುಲದೇವರು ಎಂದು ಆರಾಧಿಸಲ್ಪಡುತ್ತದೆ.

ಕ್ಷೇತ್ರದ ಇತಿಹಾಸ: ಭಾರ್ಗವ ಮುನಿಗಳು ಇಲ್ಲಿಗೆ ಸಮೀಪದ ಬೆಟ್ಟದಲ್ಲಿ ಶಿವನನ್ನು ಧ್ಯಾನಿಸುತ್ತಾ ಅಘೋರ ತಪಸ್ಸನ್ನು ನಡೆಸುತ್ತಿದ್ದಾಗ, ಭಾರ್ಗವ ಮುನಿಗಳಿಗೆ ಶಿವ ದೇವರು ಪ್ರತ್ಯಕ್ಷನಾಗುತ್ತಾನೆ. ಬೇಕಾದ ವರವನ್ನು ಕೇಳೆಂದು ಭಾರ್ಗವ ಮುನಿಗಳಿಗೆ ಶಿವ ಹೇಳಿದಾಗ, ಈ ಕ್ಷೇತ್ರದಲ್ಲಿ ಬಂದು ನೆಲೆಸುವಂತೆ ಮುನಿಗಳು ಶಿವ ದೇವರನ್ನು ಪ್ರಾರ್ಥಿಸುತ್ತಾರೆ.
ಭಾರ್ಗವ ಮುನಿಗಳ ಬೇಡಿಕೆಯನ್ನು ಒಪ್ಪಿದ ಶಿವ ಈ ಕ್ಷೇತ್ರದಲ್ಲಿ ನೆಲೆಸಿದ ಎನ್ನುವುದು ಪ್ರತೀತಿ. 1,300 ವರ್ಷಗಳ ಇತಿಹಾಸವಿರುವ ಈ ದೇವಾಲಯದಲ್ಲಿ ದಿನ ಮೂರು ಹೊತ್ತು ಪೂಜೆ ಸಲ್ಲುತ್ತದೆ. ತುಳುನಾಡಿನ ಭಾಷೆಯಲ್ಲಿ ದಿನದ ಮೂರು ಹೊತ್ತು ಪೂಜೆ ಸಲ್ಲುವ ದೇವಾಲಯಕ್ಕೆ "ಮಹಾತೋಭಾರ" ದೇವಾಲಯವೆಂದು ಕರೆಯಲಾಗುತ್ತದೆ. ಇನ್ನ ಕ್ಷೇತ್ರದಲ್ಲಿ ಪ್ರಮುಖ ಭೂತಾರಾಧನೆ 'ವಾರಾಹಿ ಪಂಜುರ್ಲಿಗೆ' ನಡೆಯುತ್ತದೆ.
ಮಹಾಶಿವರಾತ್ರಿಯಂದ ಮೂರು ಆಯಾಮದ ಪೂಜೆ, ಕಾರ್ತಿಕ ಮಾಸದಲ್ಲಿ ಲಕ್ಷದೀಪೋತ್ಸವ ಮತ್ತು ವಾರ್ಷಿಕ ರಥೋತ್ಸವ ವಿಜೃಂಭಣೆಯಿಂದ ಇಲ್ಲಿ ನಡೆಯುತ್ತದೆ.

ಕ್ಷೇತ್ರಕ್ಕೆ ತಲುಪುವುದು ಹೇಗೆ? ಮಂಗಳೂರುನಿಂದ ಉಡುಪಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಡುಬಿದ್ರೆ ಎನ್ನುವ ಸ್ಥಳದಲ್ಲಿ ಇಳಿಯಬೇಕು. ಅಲ್ಲಿಂದ ಕಾರ್ಕಳಕ್ಕೆ ಹೋಗುವ ಬೈಪಾಸ್ ನಲ್ಲಿ ಎಂಟು ಕಿ.ಮೀ ದೂರ ಕ್ರಮಿಸಿದ ನಂತರ, ಬಲಕ್ಕೆ ಮೂರು ಕಿ.ಮೀ ಒಳಗೆ ಹೋಗಬೇಕು (ಬಲಕ್ಕೆ ತಿರುಗುವಾಗ ದೇವಾಲಯದ ಸ್ವಾಗತ ಗೋಪುರವನ್ನು ಕಾಣಬಹುದು).
ವಿಳಾಸ:
ಇನ್ನ ಮುದ್ದಾಣು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ,
ಶ್ರೀಕ್ಷೇತ್ರ ಇನ್ನ, ಕಾರ್ಕಳ ತಾಲೂಕು,
ಉಡುಪಿ ಜಿಲ್ಲೆ - 576 146
ದೂರವಾಣಿ : +91 97413 05501












Click it and Unblock the Notifications