ನೇಪಾಳದ ಪಶುಪತಿನಾಥನ ಸನ್ನಿಧಿಯಲ್ಲಿ ಶಿವರಾತ್ರಿ ಸಡಗರ
Recommended Video

ಇಂದು ಶಿವರಾತ್ರಿ. ಅದೆಷ್ಟು ಜನ್ಮದ ಪುಣ್ಯವೋ ಏನೋ, ನೇಪಾಳದ ಪಶುಪತಿನಾಥನ ಸನ್ನಿಧಾನದಲ್ಲಿದ್ದೇನೆ. ಕಣ್ಣು ಕಾಣುವಷ್ಟು ದೂರವೂ ಜನವೋ ಜನ. ಭೂತಾನ್, ಭಾರತ ಸೇರಿದಂತೆ ನಾನಾ ದೇಶಗಳ ಹಿಂದೂಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಇಲ್ಲಿ ಬಂದಿದ್ದಾರೆ. ನೀರು, ವೈದ್ಯಕೀಯ ತಂಡದ ನೇಮಕ ಸೇರಿದ ಹಾಗೆ ಸೊಗಸಾದ ವ್ಯವಸ್ಥೆ ಮಾಡಲಾಗಿದೆ.
ಪಶುಪತಿನಾಥ ದೇವಾಲಯಕ್ಕೆ ನಾಲ್ಕು ಬಾಗಿಲು ಇದೆ. ಇಲ್ಲಿನ ಶಿವಲಿಂಗಕ್ಕೆ ತತ್ಪುರುಷ, ಈಶಾನ, ಅರ್ಧನಾರೀಶ್ವರ, ಸದ್ಯೋಜಾತ ಹೀಗೆ ನಾಲ್ಕು ಮುಖಗಳಿವೆ. ಊರ್ಧ್ವ ಮುಖಕ್ಕೆ ವಾಮದೇವ ಅಂತ ಹೇಳುತ್ತಾರೆ. ಮೇಲ್ಮುಖದಲ್ಲಿ ಲಿಂಗಕ್ಕೆ ಗಂಧ ಹಚ್ಚಿ ಶ್ರೀಚಕ್ರವನ್ನು ಬಿಡಿಸುತ್ತಾರೆ. ಅದು ಇಲ್ಲಿನ ಪದ್ಧತಿ. ಇನ್ನು ಈ ದೇವಾಲಯದಲ್ಲಿ ಹಿಂದೂಯೇತರರಿಗೆ ಪ್ರವೇಶ ಇಲ್ಲ.
ಈ ದೇವಾಲಯದ ಪ್ರಧಾನ ಅರ್ಚಕರ ಆಯ್ಕೆ ಹೇಗೆ ಅಂದರೆ ಶಂಕರಚಾರ್ಯ ಪರಂಪರೆಯ, ದ್ರಾವಿಡ ಪುರೋಹಿತರು, ಕೃಷ್ಣ ಯಜುರ್ವೇದ ಅಧ್ಯಯನ ಮಾಡಿದವರಾಗಿರಬೇಕು. ಇಲ್ಲಿನ ಪ್ರಧಾನ ಪುರೋಹಿತರು ನಮ್ಮ ದಕ್ಷಿಣ ಭಾರತದವರು. ಇಲ್ಲಿ ಈ ಹಿಂದೆ ರಾಜರ ಆಡಳಿತ ಇರುವಾಗ ರಾಜರ ನಂತರದ ಸ್ಥಾನ ಇಲ್ಲಿನ ಪುರೋಹಿತರಿಗೆ ಇರುತ್ತಿತ್ತು.

ಈಗಲೂ ಈ ದೇವಾಲಯದ ಪುರೋಹಿತರಿಗೆ ವಿಶೇಷ ಗೌರವ ಇದ್ದೇ ಇದೆ. ಇವರ ರಕ್ಷಣೆಗಾಗಿಯೇ ನಾಲ್ಕೈದು ಮಂದಿ ಗನ್ ಮ್ಯಾನ್ ಗಳನ್ನು ನೇಮಿಸಿದ್ದಾರೆ. ಇನ್ನು ಶಿವರಾತ್ರಿಯಾದ್ದರಿಂದ ನಾಲ್ಕು ಯಾಮದ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಇಂದಿನ ಪುಣ್ಯಕಾಲದಲ್ಲಿ ಪಶುಪತಿನಾಥನ ಸನ್ನಿಧಿಯಲ್ಲಿ ಎಲ್ಲರಿಗೂ ಒಳಿತನ್ನು ಮಾಡಲು ಪ್ರಾರ್ಥನೆ ಮಾಡಿದ್ದೇನೆ.













Click it and Unblock the Notifications