ಸರ್ವರಿಗೂ ಒಳಿತುಂಟು ಮಾಡಲಿ ಈ ಸಂಭ್ರಮದ ಸಂಕ್ರಾಂತಿ
Recommended Video

ಇಂದಿನ ಜಗತ್ತಿನಲ್ಲಿ ನಿಜವಾದ ಸ್ನೇಹ ಪ್ರೀತಿಯ ಕೊರತೆಯು ಎದ್ದು ಕಾಣುತ್ತಿದೆ. ಸಂಬಂಧಗಳಲ್ಲಿ ಆತ್ಮೀಯತೆ ದೂರವಾಗಿದೆ. ಮೊಬೈಲ್ ಗಳಲ್ಲಿ ಮಾತನಾಡುವವರು ಪಕ್ಕದಲ್ಲಿ ಕುಳಿತವರ ಜೊತೆಗೆ ಮಾತನಾಡುವುದು ಕಡಿಮೆ ಆಗಿದೆ. ಫೇಸ್ಬುಕ್ ಮತ್ತು ವಾಟ್ಸಾಪ್ಗಳಲ್ಲಿ ತಲ್ಲಿನರಾಗಿರುವವರು ಕಥೆ-ಕಾದಂಬರಿ, ಕವನಗಳು ಹಾಗೂ ಸಾಹಿತ್ಯದ ಅಧ್ಯಯನ ಮಾಡುತ್ತಿಲ್ಲ.
ಟಿವಿ ಪರದೆಯ ಮೇಲೆ ಬರುವ ನೆಚ್ಚಿನ ಕಾರ್ಯಕ್ರಮಕ್ಕೆ ಹೆಚ್ಚಿನ ಸಮಯ ನೀಡಲಾಗುತ್ತದೆಯೇ ಹೊರತು, ಮನೆಗೆ ಬಂದ ಅತಿಥಿಗಳೊಂದಿಗೆ ಪ್ರೀತಿಯಿಂದ ಮಾತನಾಡಲು ಸಮಯವಿರುವುದಿಲ್ಲ. ಈ ದೃಶ್ಯಗಳು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಕಂಡು ಬರುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಹೋಗಲಾಡಿಸಲು ನಮ್ಮಲ್ಲಿ ಆಧ್ಯಾತ್ಮಿಕ ಕ್ರಾಂತಿ ಆಗಬೇಕು. ಸೂರ್ಯ ತನ್ನ ದಿಕ್ಕು ಬದಲಾಯಿಸಿದಾಗ ದಕ್ಷಿಣಾಯಣ ಮುಗಿದು, ಉತ್ತರಾಯಣ ಪ್ರಾರಂಭವಾಗುತ್ತದೆ. ಚಳಿಯು ಸಹ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಅನೇಕ ರೀತಿಯ ಪರಿವರ್ತನೆಗಳು ಪ್ರಕೃತಿಯಲ್ಲಿ ಕಂಡುಬರುತ್ತವೆ.
ಇದು ಒಂದು ಕ್ರಾಂತಿಯೇ ಸರಿ. ಬಣ್ಣಗಳಲ್ಲಿ ಆಗಿರುವ ಅನೇಕ ಕ್ರಾಂತಿಗಳನ್ನು ನಾವು ವರ್ತಮಾನ ಜಗತ್ತಿನಲ್ಲಿ ಕಾಣಬಹುದು. ಪೆಟ್ರೋಲಿಯಮ್ ಪದಾರ್ಥಗಳ ಕ್ರಾಂತಿಗೆ ಕಪ್ಪು ಕ್ರಾಂತಿ, ಮತ್ಸ ಉತ್ಪನ್ನಗಳಿಗೆ ನೀಲಿ ಕ್ರಾಂತಿ, ಕೋಕೋ ಮತ್ತು ಚರ್ಮಗಳ ಕ್ರಾಂತಿಗೆ ಕಂದು ಕ್ರಾಂತಿ, ಸೆಣಬು ಹಾಗೂ ಸರ್ವ ಪ್ರಕಾರದ ತೋಟಗಾರಿಕಾ ಉತ್ಪನ್ನಗಳಿಗೆ ಸ್ವರ್ಣ ಕ್ರಾಂತಿ, ಕೃಷಿಯ ಬೆಳವಣಿಗೆಗೆ ಹಸಿರು ಕ್ರಾಂತಿ, ರಸಗೊಬ್ಬರಕ್ಕೆ ಬೂದು ಕ್ರಾಂತಿ, ಈರುಳ್ಳಿ ಮತ್ತು ಸೀಗಡಿಗಳಿಗೆ ಕ್ರಾಂತಿಗೆ ಗುಲಾಬಿ ಕ್ರಾಂತಿ, ಮಾಂಸ ಮತ್ತು ಟಮೋಟೋ ಉತ್ಪನಗಳಿಗೆ ಕೆಂಪು ಕ್ರಾಂತಿ, ಆಲೂಗಡ್ಡೆ ಮತ್ತು ಹತ್ತಿಗೆ ಬೆಳ್ಳಿ ಕ್ರಾಂತಿ, ಹೈನುಗಾರಿಕೆಯ ಕ್ರಾಂತಿಗೆ ಶ್ವೇತ ಕ್ರಾಂತಿ, ಎಣ್ಣೆಕಾಳುಗಳ ಅಭಿವೃದ್ಧಿಗೆ ಹಳದಿ ಕ್ರಾಂತಿ ಎಂದು ಕರೆಯುತ್ತಾರೆ.
ಅದೇ ರೀತಿ ಕಲಾತ್ಮಕ ಕ್ರಾಂತಿ, ಬೋರ್ಜಿಯಸ್ ಕ್ರಾಂತಿ, ರಾಸಾಯನಿಕ ಕ್ರಾಂತಿ, ಅರಿವಿನ ಕ್ರಾಂತಿ, ವಾಣಿಜ್ಯ ಕ್ರಾಂತಿ, ಕಮ್ಯುನಿಸ್ಟ್ ಕ್ರಾಂತಿ, ಗ್ರಾಹಕ ಕ್ರಾಂತಿ, ಪಾಕಶಾಲೆಯ ಕ್ರಾಂತಿ, ಡೆಮಾಕ್ರಟಿಕ ಕ್ರಾಂತಿ, ಡಿಜಿಟಲ್ ಕ್ರಾಂತಿ, ಡಿಜಿಟಲ್ ಧ್ವನಿ ಕ್ರಾಂತಿ, ರಾಜತಾಂತ್ರಿಕ ಕ್ರಾಂತಿ, ಪರಿಸರ ಕ್ರಾಂತಿ, ಹಣಕಾಸಿನ ಕ್ರಾಂತಿ,ಕೈಗಾರಿಕಾ ಕ್ರಾಂತಿ, ಎರಡನೇ ಕೈಗಾರಿಕಾ ಕ್ರಾಂತಿ, ಪ್ರಯಾಸಕರ ಕ್ರಾಂತಿ, ಕೀನೆಸ್ನ ಕ್ರಾಂತಿ, ಜ್ಞಾನ ಕ್ರಾಂತಿ, ಮಾರುಕಟ್ಟೆ ಕ್ರಾಂತಿ, ಮೈಕ್ರೋಚಿಪ್ ಕ್ರಾಂತಿ, ಮೈಕ್ರೋ ಕಂಪ್ಯೂಟರ್ ಕ್ರಾಂತಿ, ಸೇನಾ ಕ್ರಾಂತಿ, ಮಿಮಿಯೋ ಕ್ರಾಂತಿ, ಖನಿಜ ಕ್ರಾಂತಿ, ಶಾಶ್ವತ ಕ್ರಾಂತಿ, ರಾಜಕೀಯ ಕ್ರಾಂತಿ, ಬೆಲೆ ಕ್ರಾಂತಿ, ಕಾರ್ಮಿಕ ಕ್ರಾಂತಿ, ಪರಿಮಾಣಾತ್ಮಕ ಕ್ರಾಂತಿ, ತಾಂತ್ರಿಕ ಕ್ರಾಂತಿ, ಸಾಮಾಜಿಕ ಡೇಟಾ ಕ್ರಾಂತಿ, ಸಮಾಜ ಕ್ರಾಂತಿ, ಟ್ರಿಪಲ್ ಕ್ರಾಂತಿ, ಟ್ವಿಟ್ಟರ್ ಕ್ರಾಂತಿ, ನಗರ ಕ್ರಾಂತಿ, ವಿಶ್ವ ಕ್ರಾಂತಿ, ಮುಂತಾದವು ಇವೆ. ಆಧ್ಯಾತ್ಮಿಕ ಹಿನ್ನೆಲೆ ಹೊಂದಿರುವ ಮೌಲ್ಯಾಧಾರಿತ ಮಾನವನ ಉನ್ನತಿಯೇ ಎಲ್ಲಾ ಕ್ರಾಂತಿಗಳಿಗೆ, ಮೂಲವಾಗಿರಬೇಕು.

ಇತರ ರಾಜ್ಯಗಳಲ್ಲಿ ಸಂಕ್ರಾಂತಿ ಸೊಬಗು
ಭಾರತದಲ್ಲಿ ಆಚರಿಸುವ ಅನೇಕ ಹಬ್ಬಗಳಲ್ಲಿ 'ಸಂಕ್ರಾಂತಿ' ಗೆ ತನ್ನದೇ ಆದ ವಿಶೇಷತೆ ಮತ್ತು ಆಧ್ಯಾತ್ಮಿಕ ಹಿನ್ನಲೆ ಇದೆ. ಈ ಹಬ್ಬವು ಪ್ರತಿ ವರ್ಷ ಜನವರಿ ಮಾಸದ 14 ಅಥವಾ 15ನೇ ತಾರೀಖಿನಂದು ಬರುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಗೋವ, ಸಿಕ್ಕಿಂ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಓರಿಸ್ಸಾ, ಉತ್ತರಪ್ರದೇಶ, ಉತ್ತರಾಂಚಲ, ಪಶ್ಚಿಮ ಬಂಗಾಳದಲ್ಲಿ 'ಮಕರ ಸಂಕ್ರಾಂತಿ' ಅಥವಾ 'ಸಂಕ್ರಾಂತಿ' ಎಂದು; ತಮಿಳುನಾಡಿನಲ್ಲಿ 'ಪೊಂಗಲ್'(ಹೊಸ ವರ್ಷದ ಹಬ್ಬ) ಎಂದು; ರಾಜಸ್ಥಾನ, ಗುಜರಾತ್ ನಲ್ಲಿ 'ಉತ್ತರಾಯಣ' ಎಂದು; ಹರಿಯಾಣ, ಉತ್ತರ ಪ್ರದೇಶ, ದೆಹಲಿ, ಪಂಜಾಬ್ನಲ್ಲಿ'ಮಾಘಿ' ಎಂದು; ಅಸ್ಸಾಂನಲ್ಲಿ 'ಮಾಘ ಬಿಹು;' ಕಾಶ್ಮೀರದಲ್ಲಿ 'ಶಿಶುರ ಸೇಂಕ್ರಾತ'; ಶಬರಿಮಲೈ ಬೆಟ್ಟದಲ್ಲಿ'ಮಕರ ವಿಲಕ್ಕು'; ಎಂದು ಸಂಕ್ರಾಂತಿ ಹಬ್ಬವನ್ನು ಭಾರತಾದ್ಯಂತ ಆಚರಿಸಲಾಗುತ್ತದೆ. ನೇಪಾಳದಲ್ಲಿ 'ಮಾಘಿ', ಬರ್ಮಾದಲ್ಲಿ 'ಥಿಂಗ್ಯಾನ'; ಕಾಂಬೋಡಿಯಾದಲ್ಲಿ 'ಮೊಹಸಂಗ್ರನ', ಥೈಲ್ಯಾಂಡ್ ನಲ್ಲಿ 'ಸಂಗ್ರಾನ' ಎಂದು ಇತರ ದೇಶಗಳಲ್ಲಿ ಆಚರಿಸುತ್ತಾರೆ.

ಉತ್ತರಾಯಣ ಪರ್ವಕಾಲ
ಈ ಹಬ್ಬದ ಮೊದಲನೆಯ ದಿನವನ್ನು 'ಭೋಗಿ' ಎರಡನೇ ದಿನವನ್ನು 'ಕರಿ' ಎಂದು ಹೇಳಲಾಗುತ್ತದೆ. ಸೂರ್ಯನು ಕರ್ಕರಾಶಿಯಿಂದ ಮಕರರಾಶಿಗೆ ಪ್ರವೇಶಿಸುವ ದಿನವೇ 'ಮಕರ ಸಂಕ್ರಾಂತಿ'. ಭೋಗಿ ಹಬ್ಬದಂದು ಋತುರಾಜ ಇಂದ್ರನನ್ನು ಪೂಜಿಸಿದರೆ ಸಂಕ್ರಾಂತಿಯಂದು ಸೂರ್ಯನನ್ನು ಪೂಜಿಸಲಾಗುತ್ತದೆ. ಮಕರ ಸಂಕ್ರಾಂತಿಯು ದೇವತೆಗಳ ದಿನದ ಆರಂಭವಾಗಿದೆ. ಉತ್ತರಾಯಣವೆಂದರೆ ದೇವಾಯಣ, ದಕ್ಷಿಣಾಯಣವೆಂದರೆ ಪಿತ್ರಾಯಣ. ಭಗೀರಥನ ಪ್ರಯತ್ನದಿಂದ ಗಂಗೆ ಧರೆಗೆ ಬಂದು ಸಾಗರ ಮಹಾರಾಜನ 60,000 ಮಕ್ಕಳಿಗೆ ಮುಕ್ತಿಯನ್ನು ನೀಡಿರುವ ದಿನವು ಇದೇ ಆಗಿದೆ. ಆದ್ದರಿಂದ ಗಂಗಾ ಸಾಗರ ಮೇಳವು ನಡೆಯುತ್ತದೆ. ಇದೇ ದಿನದಂದು ಮಹಾಭಾರತದ ಇಚ್ಛಾ ಮರಣಿ ಭೀಷ್ಮ ಪಿತಾಮಹನು ದೇಹ ತ್ಯಜಿಸಿದನೆಂದು ಹೇಳಲಾಗುತ್ತದೆ. ರಾಜಸ್ಥಾನ ಮತ್ತು ಗುಜರಾತ್ ಗಳಲ್ಲಿ ವಿಶೇಷವಾಗಿ ಈ ಹಬ್ಬದಂದು ಗಾಳಿಪಟ ಉತ್ಸವ ನಡೆಯತ್ತದೆ.

ಒಳಿತುಂಟು ಮಾಡುವ ಸಂಕ್ರಾಂತಿ ಪುರುಷ
ಭೋಗಿ ಹಬ್ಬದಂದು ಸಜ್ಜೆ ರೊಟ್ಟಿ, ಬದನೆಕಾಯಿ ಪಲ್ಲೆಯನ್ನು ವಿಶೇಷವಾಗಿ ಮಾಡಲಾಗುತ್ತದೆ. ಸಂಕ್ರಾಂತಿಯ ದಿನದಂದು ಎಳ್ಳು-ಬೆಲ್ಲದಿಂದವನ್ನು ಸೇವಿಸುವ ಪದ್ಧತಿಯಿದೆ. ಕಬ್ಬು, ಎಳ್ಳು, ಬೆಲ್ಲ, ಸಜ್ಜೆ, ಗೆಜ್ಜರಿ, ಕಡಲೆ ಮುಂತಾದ ಆಹಾರ ಪದಾರ್ಥಗಳ ಸೇವನೆಯು ಚಳಿಗಾಲದಲ್ಲಿ ದೈಹಿಕ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಅಂದು ವಿಶೇಷವಾಗಿ ನದಿ, ಕೆರೆ, ಅಥವಾ ಹಳ್ಳಗಳಲ್ಲಿ ಸ್ನಾನವನ್ನು ಮಾಡುತ್ತಾರೆ, ಪುಣ್ಯಕ್ಷೇತ್ರಕ್ಕೆ ಹೋಗುತ್ತಾರೆ, ದಾನ ಧರ್ಮವನ್ನು ಮಾಡಿದಾಗ 'ಸಂಕ್ರಾಂತಿ ಪುರುಷ' ಒಳ್ಳೆಯ ಫಲವನ್ನು ನೀಡುವನು ಎಂದು ನಂಬುತ್ತಾರೆ. ಸಂಕ್ರಾಂತಿಯ ದಿನ ಪರಸ್ಪರ ಭೇಟಿಯಾಗಿ ಎಳ್ಳು-ಬೆಲ್ಲವನ್ನು ಕೊಟ್ಟು, ಒಳ್ಳೆಯದನ್ನೇ ಮಾತನಾಡಿ ಎಂದು ಹೇಳುತ್ತಾರೆ. ಆಧುನಿಕ ಜಗತ್ತಿನಲ್ಲಿ ಎಳ್ಳು ಬೆಲ್ಲದ ಸ್ಥಾನವನ್ನು ಸಕ್ಕರೆ ಪಾಕದಿಂದ ತಯಾರಿಸಿದ ಕುಸರೆಳ್ಳು' ಪಡೆದುಕೊಂಡಿದೆ.

ನಾವು ಆತ್ಮಜ್ಯೋತಿಯ ಮಕ್ಕಳು
ಭಾರತೀಯ ಹಬ್ಬಗಳಲ್ಲಿ ಜಾತಿ, ಮತ, ವರ್ಣ ಭಾಷಾ-ಭೇದ ಮತ್ತು ಇತರೆ ಭೇದ-ಭಾವಗಳನ್ನು ಮರೆತು ಸ್ನೇಹ, ಪ್ರೀತಿ, ಮಧುರತೆ ಮತ್ತು ಭ್ರಾತೃತ್ವದ ಭಾವನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಎಳ್ಳು ಸ್ನೇಹ ಮತ್ತು ಪ್ರೀತಿಯ ಸಂಕೇತವಾಗಿದೆ; ಬೆಲ್ಲ ಮಧುರತೆಯ ಪ್ರತೀಕವಾಗಿದೆ. ನಮ್ಮಲ್ಲಿ ಪ್ರೀತಿ, ಸ್ನೇಹ ಬೆಳೆಯಬೇಕೆಂದರೆ, ನಾವು ನಮ್ಮ ದೇಹದ ಧರ್ಮಗಳನ್ನು ಮರೆತು, ವಿಶ್ವಕ್ಕೆ ಒಡೆಯನಾಗಿರುವ ಒಬ್ಬ ನಿರಾಕಾರ ಭಗವಂತನಿಗೆ ನಾವೆಲ್ಲರೂ ಮಕ್ಕಳು ಎಂದು ತಿಳಿದುಕೊಳ್ಳಬೇಕು. ಆ ಭಗವಂತನನ್ನೇ ಅಲ್ಲಾ, ಖುದಾ, ಗಾಡ್, ಈಶ್ವರನೆಂದು ಕರೆಯುತ್ತಾರೆ. ನಾವು ಅವನ ಸಂತಾನರು. ನಾವು ಆತ್ಮಜ್ಯೋತಿಗಳಿಗೆ ಯಾವುದೇ ಜಾತಿಯಿಲ್ಲ, ಆ ಪರಂಜ್ಯೋತಿ ಪರಮಾತ್ಮನಿಗೆ ನಾವೆಲ್ಲಾ ಆತ್ಮಜ್ಯೋತಿಗಳು ಮಕ್ಕಳಾಗಿದ್ದೇವೆ.

ಸರ್ವೇ ಜನಾಃ ಸುಖಿನೋ ಭವಂತು
ನಾವೆಲ್ಲರೂ ಆತ್ಮ ಜ್ಯೋತಿಗಳೆಂದು ತಿಳಿದು ವ್ಯವಹರಿಸಬೇಕಾಗಿದೆ. ಬಸವಣ್ಣನವರು ಹೇಳಿದಂತೆ ಇವನಾರವ ಇವನಾರವ ಎಂದೆಣಿಸದಿರಯ್ಯ, ಇವನಮ್ಮವ ಇವನಮ್ಮವ' ಎನ್ನುವಂತೆ ಸರ್ವರನ್ನು ಪ್ರೀತಿಯಿಂದ ಕಾಣಬೇಕಾಗಿದೆ. ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕಯ್ಯ, ಎಂಬಂತೆ ನಮ್ಮ ಮಾತುಗಳು ಮುತ್ತಿನಂತೆ ಸ್ಪಷ್ಟ, ಮಿತ ಹಾಗೂ ಮಧುರವಾಗಿರಬೇಕು, 'ಕಳಬೇಡ ಕೊಲಬೇಡ ಹುಸಿಯು ನುಡಿಯಲು ಬೇಡ' ಎಂಬಂತೆ ನಮ್ಮ ಆಚಾರ-ವಿಚಾರವಿರಬೇಕು. ಆದ್ದರಿಂದಲೇ ಹಿಂದಿ ಭಾಷೆಯಲ್ಲಿ ಗೂಡ್ ನಹಿ ದೋ, ಲೆಕಿನ್ ಗೂಡ್ ಜೈಸಾ ಮೀಠಾ ತೊ ಬೋಲೋ' ಎಂದು ಹೇಳಲಾಗುತ್ತದೆ. ಅಂದರೆ ಬೆಲ್ಲವನ್ನು ಕೊಡದಿದ್ದರೂ ಚಿಂತೆಯಿಲ್ಲ, ಬೆಲ್ಲದಂತೆ ಸಿಹಿ ಮಾತನಾಡಿ' ಎಂದು ಹೇಳುತ್ತಾರೆ. ಮಹಾರಾಷ್ಟ್ರದಲ್ಲಿ ಇದೇ ರೀತಿ ಎಳ್ಳು ಮತ್ತು ಸಕ್ಕರೆ ಕುಸುರಿಕಾಳನ್ನು ಹಂಚುವಾಗ 'ತಿಳ್ಗುಳ್ ಘ್ಯಾ ಆಣಿ ಗೋಡ್ ಗೋಡ್ ಬೋಲಾ' ಎಂದು ಹೇಳುತ್ತಾರೆ. ನಮ್ಮಲ್ಲಿ ವಸುಧೈವ ಕುಟುಂಬಕಂ' ಎಂಬ ಭಾವನೆ ಜಾಗೃತವಾದಾಗ ಮಾತ್ರ ಸ್ನೇಹ ಪ್ರೀತಿಯು ಸಹಜವಾಗಿ ಬೆಳೆಯುತ್ತದೆ. ಆತ್ಮಿಕ ಭಾವನೆಯಿಂದ ಪರಸ್ಪರರಲ್ಲಿ ಮಧುರತೆ ಕಂಡು ಬರುತ್ತದೆ. ಆಗ ಮಾತ್ರ ನಮ್ಮಲ್ಲಿ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಕ್ರಾಂತಿ ಉಂಟಾಗುತ್ತದೆ. ಬನ್ನಿ ಈ ರೀತಿ ನಾವು ಎಲ್ಲರೂ ಅರ್ಥಗರ್ಭಿತವಾದ ಸಂಕ್ರಾಂತಿ ಹಬ್ಬವನ್ನು ಆಚರಿಸೋಣ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications